ಚೇತನಾ…. ಅನಿಕೇತನ!
August 25, 2008 at 6:17 am | In ಕನವರಿಕೆ | 20 CommentsTags: ಅನಿಕೇತನ, ಚೇತನಾ, ಮನೆ
ಅದ್ಯಾವ ಘಳಿಗೇಲಿ ಬ್ಲಾಗೋದುಗ ಮಹಾಶಯರೊಬ್ಬರು ‘ಆಗು ನೀ ಅನಿಕೇತನ’ ಅಂತ ಹಾರೈಸಿದ್ರೋ, ಕಾಕತಾಳೀಯವೆನ್ನುವ ಹಾಗೆ ಮೇಲಿನ ಮನೆ ಆಂಟಿ ಕೂಡ ಬೆಳಗಾಗೆದ್ದು “ಪೂಜೀಸಾಲೆನ್ನಿಂದ ವರವೇ ಶ್ರೀ ಗವ್ರೀ ನಿನ್ನಯ ಚರಣಗಳಾ… ಓ ನನ್ನ ಚೇತನಾ, ಆಗು ನೀ ಅನಿಕೇತನಾ… ಹೂವ್ವೂ… ಚೆಲುವೆಲ್ಲಾ ನಂದೆಂದಿತೂ…” ಅಂತ ರಿಮಿಕ್ಸ್ ಹಾಡಲು ಶುರುವಿಟ್ಟರು. ದಿನಾಬೆಳಗೂ ಅವರ ಆರ್ಕೆಸ್ಟ್ರ್ಆ ಕೇಳೀ ಕೇಳೀ, ಅದಿಲ್ಲದೆ ಊಟ ನಿದ್ದೆ ಸೇರದೆ ಪುಷ್ಪಕವಿಮಾನದ ಕಮಲ್ ಹಾಸನ್ ಸ್ಥಿತಿ ತಲುಪಿದ್ದ ನನಗೆ ಈ … ಅನಿಕೇತನ… ಎಲ್ಲಿಂದ ಬಂದು ಸೇರ್ಕೊಳ್ತು ಅಂತ ಗಾಬರಿಯಾಗಿದ್ದಂತೂ ಹೌದು. ಕಳೆದೆರಡು ವಾರದಿಂದ ಹೊಸಿಲ ಮುಂದೆ ಚಪ್ಪಲಿ ಬಿಡ್ಬೇಡ, ಸಂಜೆ ಒಂದ್ ದೀಪಾನಾದ್ರೂ ಹಚ್ಚು… ಇತ್ಯಾದಿ ವರಾತ ತೆಗೆದಿದ್ದ ಓನರಾಂಟಿ ಇಂಡೈರೆಕ್ಟಾಗಿ “ಎಲೈ ಚೇತನಾ, ಮನೆ ಬಿಟ್ಟು ಹೋಗು… ಮನೆ ಇಲ್ಲದವಳಾಗು” ಅಂತ ಹೇಳ್ತಿದಾರೇನೋ ಅನ್ನುವ ಗುಮಾನಿ ಕೂಡ ಬಂದ್ಬಿಡ್ತು.
ಸರಿ. ಇನ್ ಹೀಗೇ ಸುಮ್ನೆ ಕುಂತ್ರಾಗಲ್ಲ ಅಂದ್ಕೊಂಡು ಮನೆ ಹುಡುಕೋಕೆ ಶುರುವಿಟ್ಟೆ. ಅದಕ್ಕೆ ಸರಿಯಾಗಿ, ಅದೇನೋ ವರ ಮಹಾ ಲಕ್ಷ್ಮಿ ಪೂಜೆ ದಿನ ಸಂಜೆ ನಾನು ಕಸ ಗುಡಿಸಿದೆ ಅನ್ನೋದೊಂದು ಅಂತಾರಾಷ್ಟ್ರೀಯ ಮಟ್ಟದ ಪ್ರಮಾದವಾಗಿ ಸುತ್ತ ನಾಲ್ಕು ಮನೆ ಹೆಂಗಸರು ಜಗಲಿಯಲ್ಲಿ ಕುಂತು ಸುದೀರ್ಘ ಸಮಾಲೋಚನೆ ಮಾಡೋ ಮಟ್ಟಕ್ಕೆ ಬೆಳೆದುಬಿಟ್ಟಿತ್ತು. ಇದ್ಯಾಕೋ ಕೆಲಸ ಕೆಡ್ತಲ್ಲ ಅಂತ ನಾನು ತಲೆ ಕೆಡಿಸ್ಕೊಂಡು ಕುಂತೆ.

ಮನೆ ಹುಡುಕ್ಬೇಕು ಅಂದ್ರೆ ಈ ಬೆಂಗ್ಳೂರಲ್ಲಿ ‘ಕಾರ್ಯವಾಸಿ ಕತ್ತೆ ಕಾಲು’ ಕಟ್ಬೇಕು (ನಾನು ಬ್ರೋಕರ್ ಗಳನ್ನ ಕತ್ತೆ ಅಂದೆ ಅಂತ ಸೀರಿಯಸ್ಸಾಗಿ ಅಂದ್ಕೋಬೇಡಿ ಪ್ಲೀಸ್…) ಅಲ್ವಾ? ನಾನೂ ಕಟ್ದೆ. ಆ ಪುಣ್ಯಾತ್ಮ ಸ್ಲಮ್ಮಿಂದ ಹಿಡಿದು ಕೊಟ್ಟಿಗೆವರೆಗೂ ( ಅಯ್ಯೋ! ಸಾಮಾಜಿಕ ಅಂತೆಲ್ಲ ಸೀರಿಯಸ್ ಕಮೆಂಟ್ಸ್ ಬೇಡ ಪ್ಲೀಸ್!) ನಲವತ್ ಸಾವ್ರ ಅಡ್ವಾನ್ಸ್, ಮೂರೂ ವರೆ ಬಾಡ್ಗೆ ಅಂತ ಹಲ್ಕಿರೀತ ಓಡಾಡಿಸ್ದ.
ಇನ್ನಿವನ ಸಾವಾಸ ಬೇಡ ಅಂತ ಡಿಸೈಡ್ ಮಾಡ್ಕೊಂಡು ‘ಟು ಲೆಟ್’ ಬೋರ್ಡ್ ಇದ್ದ ಮನೆಗಳ್ಗೆ ಎಡತಾಕತೊಡಗಿದೆ. ಒಂದ್ ವಮ್ಮ ಎಷ್ಟ್ ಜನ ಇರ್ತೀರಿ? ಅಂತು. ‘ಒಬ್ಳೇ’ ಅಂದಿದ್ಕೆ, ಬ್ಯಾಚುಲರ್ರಾ? ಒಂಟಿ ಹೆಣ್ಮಕ್ಳಿಗೆ ಮನೆ ಕೊಡಲ್ಲ ಅಂತ ಓಡಿಸಿಬಿಡ್ತು. ಮತ್ತೊಂದ್ಕಡೆ ‘ನಂಗೆ ಮದ್ವೆ ಆಗಿದೆ, ವರ್ಷಕ್ಕೊಮ್ಮೆ ಮಗು ಬರಬಹುದು, ಆಗೀಗ ಅಣ್ಣ ತಮ್ಮಂದಿರು ಬರ್ತಿರ್ತಾರೆ ಅಂತೆಲ್ಲ ಪ್ರವರ ಒಪ್ಪಿಸ್ದೆ. ಆ ಪುಣ್ಯಾತ್ಗಿತ್ತಿ, ‘ಮದ್ವೆ ಆಗಿ ಎಷ್ಟ್ ವರ್ಷ ಆಯ್ತು? ಒಬ್ಳೇ ಯಾಕಿದಿ? ಬರೋರು ಅಣ್ಣಾ ತಮ್ಮಾನೇ ಆಗಿರ್ತಾರೆ ಅಂತ ಏನ್ ಗ್ಯಾರೆಂಟಿ?’ ಅಂತೆಲ್ಲ ರೇಜಿಗೆ ಹುಟ್ಟಿಸಿಬಿಡ್ತು. ಅವತ್ಯಾಕೋ ಸಹಿಸ್ಲಿಕ್ಕೇ ಆಗ್ಲಿಲ್ಲ ನನ್ ಕೈಲಿ. ನಿಂತಲ್ಲೇ ಒಳಗಿಂದ ಅಳು ಒತ್ತರಿಸ್ಕೊಂಡು ಬರೋದೊಂದು ಬಾಕಿ.
ಒಂಟಿ ಹೆಣ್ಣುಮಕ್ಕಳಿಗೆ ಸಮಾಜ ಅದೆಷ್ಟು ಗೌರವ ಕೊಡತ್ತೆ ನೋಡಿ! ಇಷ್ಟ್ ದಿನ ಯಾರಾದ್ರೂ ಹೆಣ್ಮಕ್ಳು ಸುಯ್ ಸೈಡ್ ಮಾಡ್ಕೊಂಡ್ರೆ ಹೆಡಿಗಳು ಅಂತಿದ್ದೆ. ಪಾಪ. ಅವರಿಗೆ ಬದುಕು ಅದೆಷ್ಟ್ ಬೇಸರ ಬಂದಿರಬಹುದಲ್ಲ ಅನಿಸ್ತಿದೆ ಈಗ. ಇನ್ಮೇಲೆ ನಾನು ಹಾಗೆಲ್ಲ ಬೈಕೊಳೋಲ್ಲ! ( ಹೀಗಂದಾಗ ಅಣ್ಣ, ‘ಮನೆ ಸಿಗ್ಲಿಲ್ಲ ಅಂತ ನೀನೇನಾದ್ರೂ ಸಾಯೋ ಪ್ಲ್ಯಾನಲ್ ಇದ್ರೆ ಹೇಳ್ಬಿಡು ಮಾರಾಯ್ತಿ ಮೊದ್ಲೇ’ ಅಂತ ರೇಗ್ಸಿದ. ಇಲ್ಲಪ್ಪಾ! ನಂಗೆ ಅಷ್ಟೆಲ್ಲ ಧೈರ್ಯ ಇಲ್ಲ!!)
ಇಷ್ಟೆಲ್ಲಾ ಆಯ್ತಾ… ಈಗೇನ್ ಮಾಡೋದು ಅಂತ ಯೋಚ್ನೆ ಆಗ್ತಿದೆ ನಂಗೆ. ಅತ್ಲಾಗಿ ದಿನಾ ಸಂಜೆ ಸುಮ್ನೆ ದೇವ್ರೆದ್ರಿಗೆ ಒಂದ್ ದೀಪ ಹಚ್ಚಿಟ್ಟು ಜೋರು ಜೋರಾಗಿ ಹಾಡು ಹೇಳಲಾ? ಊದುಬತ್ತಿ ಕಟ್ಟು ಹಚ್ಚಿ ಅವರ ಮನೆ ಕಿಟಕಿಯೊಳಗೆ ಹೊಗೆ ತೂರಿಸಿ ನನ್ನ ಸಂಪ್ರದಾಯವಂತಿಕೆ ಸಾಬೀತುಪಡಿಸಲಾ? ಅಥವಾ, ಶುಕ್ರವಾರ ಪೂಜೆ ಮಾಡಿ ಅರಿಷಿಣ ಕುಂಕುಮಕ್ಕೆ ಕರೆದು ಮಸ್ಕಾ ಹೊಡೆಯಲಾ? ನಾನು ಈ ಮನೇಲೇ ಇದ್ಕೊಂಡ್ ಬಿಡ್ತೀನಿ ಅಂತ!?
- ಬಹುಶಃ ಬದುಕು, ಬಂಡೇಳುವತನಕ ಸುಲಭ. ಬಂಡೆದ್ದ ಮೇಲೆ ಕಷ್ಟ.
Blog at WordPress.com. | Theme: Pool by Borja Fernandez.
Entries and comments feeds.