ಸುಮ್ನೇ ಹಿಂಗೆ ನಾನು ಇಷ್ಟೂ ದಿನ ಏನೆಲ್ಲ ಸಾಹಸ ಮಾಡಿಕೊಂಡಿದೇನೆ ಅಂತ ಓ ನನ್ನ ಚೇತನಾ- ಭಾಗ 1 ನ್ನ ನೋಡ್ತಾ ಇದ್ದೆ. ಭಾಗ ಒಂದು ಅಂದರೆ, ನಾನು ಮೊದಲೊಂದಷ್ಟು ದಿನ ಬ್ಲಾಗಿಸಿ ಡಿಲೀಟ್ ಮಾಡಿದ ಪಾರ್ಟು. ಅದರಲ್ಲಿ ಇದು ಸಿಕ್ತು… ಅದೇ ಈ ಕೆಳಗಿನ ‘ಕನ್ಫೆಶನ್ನು’! ಬರಕೊಂಡವರು ಮರೆತಿದ್ದರೆ, ಓದಿ ಮಜಾ ತೊಗೊಳ್ಳಲಿ ಅಂತ…
“ಈಗ ಅದನ್ನೆಲ್ಲ ನೆನೆಸಿಕೊಂಡ್ರೆ ಮಜಾ ಅನ್ನಿಸತ್ತೆ. ಚಿಕ್ಕಂದಿನ ಮೂಢ ಅನ್ನಲಾಗದ ಆ ಮುಗ್ಧ ನಂಬಿಕೆಗಳು ಈಗ ಅದೆಷ್ಟು ಕ್ಷುಲ್ಲಕವಾಗಿ ಕಂಡು ನಗು ತರಿಸುತ್ತೆ ಗೊತ್ತಾ? ಅಂಥದೊಂದಷ್ಟು ಹೀಗೆ ನೆನಪಾದವು. ಅವನ್ನ ಪಟ್ಟಿ ಮಾಡಲಾ? ಅಥವಾ ಹಾಗೆ ಬರೆದುಕೊಳ್ಳುತ್ತಾ ಹೋಗಲಾ? ಊಹೂಂ… ಪಟ್ಟಿ ಮಾಡಿ ಸುಮ್ಮನಾಗೋದೇ ಒಳ್ಳೇದು. ಆದ್ರೆ ಕೆಲವಕ್ಕೆ ಕ್ಲಾರಿಫಿಕೇಶನ್ನು ಕೊಡ್ತೀನಿ ಆಗಬಹುದಾ?” – ಅನ್ನೋ ಪೀಠಿಕೆ ಜತೆ ಇಷ್ಟುದ್ದ ಪಟ್ಟಿ ಹಾಕಿಕೊಂಡಾಗ ಬ್ಲಾಗ್ಗೆಳೆಯರು ತಮ್ಮ ತಮ್ಮ ತುಂಟ ನಂಬಿಕೆಗಳನ್ನ (ಬಾಲ್ಯಕಾಲದ್ದು… ಗುಟ್ಟಾಗಿ ಇವತ್ತಿನದೂ!) ಹಂಚ್ಕೊಂಡಿದ್ದರು… ಅವೆಲ್ಲ ಹಾಹಾಗೇ, ಈಗ ಮತ್ತೊಮ್ಮೆ… !!
೧.ಆಲದ ಮರಗಳಲ್ಲಿ ಪ್ರೇತ ಇರುತ್ತೆ
೨.ಬೆಂಗಳೂರಿನಲ್ಲಿರೋರೆಲ್ಲ ಭಾರೀ ಶ್ರೀಮಂತರು.
೩.ಬೆಳ್ಳಕ್ಕಿ ನೋಡಿದ್ರೆ ಹೊಸ ಬಟ್ಟೆ ಸಿಗುತ್ತೆ.
೪.ಸುಮಾರು ಏಣಿ ಹತ್ತಿ ಹೋದ್ರೆ ಆಕಾಶ ಮುಟ್ಟಬಹುದು….. ಹೀಗೆ ಹಲವಾರು. ~ ಮನಸ್ವಿನಿ
ಹೌದು ನಾವು ಚಿಕ್ಕವರಿದ್ದಾಗ ಇಂತಹ ಸಂಗತಿಗಳೇ ಹೆಚ್ಚು ಚರ್ಚೆಯಾಗುತ್ತಿದ್ದವು.
ನಿಮ್ಮ ಮಾತಿನೊಂದಿಗೆ ಇವೂ ಸೇರಿಸಿಕೊಳ್ಳಿ..
೧. ಅಮ್ಮನನ್ನು ಕಾಗೆ ಮುಟ್ಟಿದರೆ ತಿಂಗಳ ರಜಾ..
೨.ಪುಸ್ತಕದೆಡೆಯಲ್ಲಿ ಕಾಸರಕನ ಮರದ ಸೊಪ್ಪು ಇರಿಸಿದರೆ ಶಾಲೆಯಲ್ಲಿ ಪೆಟ್ಟು ಇಲ್ಲ…
೩.ಕಲ್ಲುಗಳನ್ನು ಹಿಡಿದುಕೊಂಡು ಹೋದರೆ ಭೂತಗಳ ಕಾಟವಿಲ್ಲ..
೪.ಒಂಟಿ ಬ್ರಾಹ್ಮಣನನ್ನು ನೋಡಿದರೆ ಹಾಳು.. ~ ಮಹೇಶ್
I studied my 4th standard at Theerthahalli. I had a army cap (given by some relative) and a bottu on my forehead! One day, a foreign lady stopped me while i was on my way to school and kissed me. It is a moment which I still cherish. I just remembered this while reading your article.
I had thought, in my childhood that only my AJJI prepares Dosas which would have numerous holes. You may believe it or not, but this was my firm belief until I saw a similar dosa in another house in my native village.
Childhood memories are like a dream now. They haunt me more than any night dreams. I can never take them back, I can never share it with others… such a treasure of experiences….
Thanks for making me a bit nostalgic. ~ ಬೇಳೂರು ಸುದರ್ಶನ
೧. ಹುಣಿಸೇ ಮರದಲ್ಲಿ ಭೂತ-ಪ್ರೇತಗಳಿರತ್ವೆ.
೨. ಅಮ್ಮನ ಹೊಕ್ಕುಳಿಂದ ಮಗು ಹೊರಗೆ ಬರತ್ತೆ.
೩. ಹುಡುಗಿಯರು ಮರ ಹತ್ತಿದ್ರೆ, ಸೈಕಲ್ ಹೊಡೆದ್ರೆ ಮಕ್ಕಳಾಗೋಲ್ಲ.
೪. ಪ್ರೇತಗಳ ಕಾಲು ಹಿಮ್ಮುಖವಾಗಿರತ್ತೆ.
೫. ಬೆಳ್ಳಕ್ಕಿ ನೋಡಿದ್ರೆ ಅದೃಷ್ಟ ( ಗುಡ್ ಲಕ್).
೬. ಕೇರೆ ಹಾವಿನ ಬಾಲ ತಲೆಗೂದಲಿಗೆ ಮುಟ್ಟಿಸ್ಕೊಂಡ್ರೆ ಕೂದಲು ಊಊಊಊದ್ದ ಬೆಳಿಯತ್ತೆ.
೭. ಬಡವರು ಸಾಧು ವ್ಯಕ್ತಿಗಳು ಸ್ನೇಹಜೀವಿಗಳು, ಶ್ರೀಮಂತರು ಜೋರು, ಸಿಡುಕರು (ಪಿಕ್ಚರ್ ಪ್ರಭಾವ).
೮. ಸಿಡುಬಿನ ಕಲೆ ಮುಖದವರೆಲ್ಲ ಸಿಡುಕರು. ಅದಕ್ಕೇ ಅವ್ರ ಮುಖದಲ್ಲಿ ಕಲೆ.
೯. ಗಾಡ್ ಪ್ರಾಮಿಸ್ ಹಾಕಿ ಪ್ರಾಮಿಸ್ಸಿಗೆ ತಪ್ಪಿದ್ರೆ ಅಮ್ಮ-ಅಪ್ಪ-ನಾವು ಮೂವರೂ ಸತ್ತು ಹೋಗ್ತೀವಿ.
೧೦. ಉದ್ದ ಬಾಲವಿರುವ ಹಸುವಿನ ಬಾಲದ ಕೂದಲನ್ನು ತಲೆಗೆ ಮುಟ್ಟಿಸಿಕೊಂಡ್ರೆ ನಮ್ಮ ಕೂದಲೂ ಅಷ್ಟೇ ಉದ್ದ ಬೆಳಿಯತ್ತೆ…. ಇನ್ನೂ ಸುಮಾರಿವೆ. ಸದ್ಯಕ್ಕೆ ಇಷ್ಟೇ ನೆನಪಾಗಿದ್ದು. ~ ಸುಪ್ತದೀಪ್ತಿ
ಕರಿ ಇರುವೆ ಅಂಗೈ ಇಂದ ಮೊಳಕೈ ವರೆಗೆ ಸರಾಗವಾಗಿ ಹತ್ತಿಕೊಂಡು ಹೋದರೆ Exam Pass!!!!!! ~ Prasad
೧. ಕಾಗೆ ಅಥವಾ ಬೀದಿ ನಾಯಿ ಮುಟ್ಟಿಸಿಕೊಂಡರೆ ಹೆಂಗಸರು ಹೊರಗಾಗ್ತಾರೆ.
೨. ಮದುವೆ ಆದ್ರೆ ಸಾಕು, ಮಕ್ಕಳಾಗ್ತವೆ.
೩. ಮಗು ಹೊರಬರೋದು ಅಮ್ಮನ ಹೊಕ್ಕಳಿಂದ.
೪. ಒಳ್ಳೆಯ ದೆವ್ವಗಳೂ ಇರ್ತವೆ ( ಚಂದಮಾಮ ಪರಿಣಾಮ )
೫. ಬೆಳ್ಳಕ್ಕಿಗಳು ಹಾರೋಗುವಾಗ ಬೆರಳು ತೋರಿಸಿದರೆ ಉಗುರಿನ ಮೇಲೆ ಬಿಳಿಕಲೆಗಳು ಮೂಡ್ತವೆ.
೬. ಗಾಡಿಗಳ ನಂಬರ್ ಗಳಲ್ಲಿ ಒಂದೇ ಸಂಖ್ಯೆ ಒಂದಕ್ಕಿಂತ ಜಾಸ್ತಿ ಇದ್ದುದನ್ನು (೫೫ , ೩೩೩ ಈ ತರ) ಕಂಡರೆ ಜೊತೆಗಿದ್ದವರಿಗೆ ಆ ಸಂಖ್ಯೆ ಹೇಳುತ್ತಾ ನಿಧಾನಕ್ಕೆ ಕೈಯಿಂದ ಎರಡುಸಲ ಗುದ್ದಿದರೆ ಅವತ್ತಿನ ದಿನ ಸ್ವೀಟ್ ಸಿಗುತ್ತದೆ (ದಿನಾ ಗುದ್ದುತ್ತಿದ್ವಿ, ಸ್ವೀಟ್ ಸಿಕ್ಕಿದರೆ ಅದು ಗುದ್ದಿದ್ದಕ್ಕೇ ಸಿಕ್ಕಿದ್ದು ಅಂತ ಖುಷಿ ಪಡ್ತಿದ್ವಿ)
೭. ಕೆಲವು ಬಿಕ್ಷುಕರು (ಹೆಚ್ಚಾಗಿ ಬಿಳಿಗಡ್ಡ ಇರೋ ಮುದುಕರು) ಮಾಟಗಾರರು. ಅವರ ಹತ್ತಿರ ವಶೀಕರಣದ ಪುಡಿ ಇರತ್ತೆ. ನಮ್ಮ ಮೇಲೆ ಅದನ್ನು ಹಾಕಿ ಅವರ ಜೊತೆಗೇ ಕರೆದುಕೊಂಡು ಹೋಗಿಬಿಡ್ತಾರೆ. ~ ವಿಕಾಸ ಹೆಗ್ಡೆ
೧. ಕೆಂಬೂತ (ಕೆಂಪಿ ಬಣ್ಣದ ಒಂದು ಹಕ್ಕಿ) ಕಂಡರೆ ಅವತ್ತು ಸ್ವೀಟ್ ಸಿಗತ್ತೆ (ನಂಗಂತೂ ಸುಮಾರ್ ಸಲ ಸಿಕ್ಕಿದ್ ಹೌದು!).
೨. ಚಾಕ್ಲೇಟ್ ಅಕಸ್ಮಾತಾಗಿ ನುಂಗಿಹೋದ್ರೆ ತಲೆ ಮೇಲಿಂದ ಗಿಡ ಹುಟ್ಟುತ್ತೆ! (ಹಾಗಂತ ಎದುರಿಗಿರೋರು ಹೇಳಿದಾಗ ಹೆದ್ರಿಕೆ ಆಗ್ತಿತ್ತಾದ್ರೂ ಗಿಡ ಹುಟ್ಟಿ ಅದ್ರಲ್ಲಿ ಸಿಕ್ಕಾಪಟ್ಟೆ ಚಾಕ್ಲೇಟೇ ಬಿಡತ್ತೆ ಅಂತಾದ್ರೆ ‘ಹುಟ್ಲಿ ಬಿಡು’ ಅಂದ್ಕೊಂಡು ಖುಶಿ ಪಟ್ಟಿದ್ದೂ ಇದೆ!)
೩. ಗುಡುಗು-ಮಿಂಚು-ಸಿಡ್ಲು ಯಾಕೆ ಬರತ್ತೆ ಅಂದ್ರೆ ಆಕಾಶದಲ್ಲಿ ಯಾರೋ ಬುಲ್ಲೆಟ್ ಬೈಕು ಸ್ಪೀಡಾಗಿ ಬಿಡ್ತಿರ್ತಾರೆ. (ಜಾತ್ರೆಯಲ್ಲಿ ಬಾವಿಯಲ್ಲಿ ಬೈಕು ಹೊಡೆಯೋದು ನೋಡಿದ ಪರಿಣಾಮ; ಅಲ್ದೇ ನಂಗೆ ಗುಡುಗು-ಸಿಡ್ಲು ಅಂದ್ರೆ ತುಂಬಾ ಭಯ ಇತ್ತಾದ್ರಿಂದ ಅದನ್ನ ಹೋಗಲಾಡಿಸ್ಲಿಕ್ಕಾಗಿ ಅಪ್ಪ ಹೇಳ್ತಿದ್ದ ಸಮಾಧಾನ.)
೪. ಡಾಕ್ಟ್ರು ಮನೆಗೆ ಹೋದ್ರೆ ಇಂಜೆಕ್ಷನ್ ಕೊಡ್ತಾರೆ, ಮೇಷ್ಟು ಮನೆಗ್ ಹೋದ್ರೆ ಹೊಡೀತಾರೆ, ಪೋಲೀಸ್ರಂತೂ ಹಿಡ್ಕಂಡ್ ಹೋಗಿ ಜೈಲಿಗ್ ಹಾಕಿ ಬೂಟ್ ಕಾಲಲ್ ಒದೀತಾರೆ. (ನಮ್ಮೂರ್ ಡಾಕ್ಟ್ರು ಮನೆಗೆ ಹೋಗಲಿಕ್ಕೆ ನಾನು ತಪ್ಪಿಸಿಕೊಳ್ಳುತಿದ್ದುದು ಇದೇ ಕಾರಣಕ್ಕೆ!)
೫. ಬಸ್ ಡ್ರೈವರುಗಳಿಗಿಂತ ಜಾಣರು, ನಿಪುಣರು, ಸಾಹಸಿಗಳು, ಒಳ್ಳೆಯವರು ಮತ್ತಿನ್ಯಾರೂ ಇಲ್ಲ. ಹಾರನ್ನಲ್ಲೇ ಸಂಗೀತ ಹರಿಸೋದೇನು, ಮಕ್ಕಳಿಗೆ ಕೈ ಮಾಡೋದೇನು, ಸ್ಪೀ…ಡಾಗಿ ಓಡ್ಸೋದೇನು, ಗೇರ್ ಹಾಕೋದೇನು, ಬೀಡಿ ಸೇದ್ತಾನೇ ಸ್ಟಿಯರಿಂಗ್ ತಿರಗ್ಸೋದೇನು.. ಆಹ್! (ನಾನಂತೂ ಡ್ರೈವರೇ ಆಗ್ಬೇಕು ಅಂದ್ಕೊಂಡಿದ್ದೆ.)
೬. ಕಾಲು ತೊಳೆಯುವಾಗ ಹಿಮ್ಮಡಕ್ಕೆ ನೀರು ಹಾಕಿಕೊಳ್ಳದಿದ್ದರೆ ತಕ್ಷಣ ದೆವ್ವ (ಶನಿ?) ಹಿಡ್ಕೊಳತ್ತೆ. (ಅಬ್ಬ!)
೭. ‘ಹರೀಶಿವ ಮೃತ್ಯುಂಜಯ’ ಅಂತ ಹೇಳ್ಕೊಂಡು ಮಲ್ಗಿದ್ರೆ ರಾತ್ರಿ ಕೆಟ್ಟ ಕನಸು ಬೀಳಲ್ಲ. (ಸವಿಗನಸುಗಳನ್ನ ತಡೀಲಿಕ್ಕೆ ಯಾವ ಮಂತ್ರವೂ ಇಲ್ಲ, ಬಚಾವ್!)
೮. ಬಯಲಲ್ಲಿ ಮಲ್ಕೊಂಡಾಗ ಹಕ್ಕಿ ನಮ್ಮ ಮೇಲೆ ಅಡ್ಡ ಹಾರಿ ಹೋದ್ರೆ ಸತ್ ಹೋಗ್ತೀವಿ. (ನಾನು ನಮ್ಮೂರ ಹುಡುಗಿಯೊಬ್ಬಳಿಗೆ ಹಾಗೆ ಹೆದರಿಸೀ…ಅಯ್ಯೋ ಬೇಡ ರಾದ್ಧಾಂತ!)
೯. ನಾಣ್ಯಗಳನ್ನ ಹುಗಿದಿಟ್ರೆ ಅದು ಡಬ್ಬಲ್ ಆಗತ್ತೆ! (ಪ್ರಯೋಗ ಮಾಡ್ದೇ ಬಿಡ್ತೀವಾ? ಮನೆಯಿಂದ ಇಪ್ಪತ್ ಪೈಸ, ನಾಲ್ಕಾಣೆ ನಾಣ್ಯಗಳನ್ನ ತಗೊಂಡ್ ಹೋಗಿ ಹುಗಿದ್ವಿ. ನಮಗಿಂತ ಸ್ವಲ್ಪ ದೊಡ್ಡವನಿದ್ದ ಫ್ರೆಂಡೊಬ್ನು ಮರುದಿನ ನಾವು ಹೋಗಿ ನೋಡೋದ್ರೊಳಗೆ ಮತ್ತೊಂದೆರಡು ನಾಣ್ಯಗಳನ್ನ ಅದ್ರೊಳಗೆ ಸೇರಿಸಿ ಇಟ್ಟಿದ್ದ. ನಾಣ್ಯ ಜಾಸ್ತಿ ಆದದ್ದು ನೋಡಿ ನಮಗೆ ಹಬ್ಬ! ಆಮೇಲೆ ಅವನ್ ಮನೇಲಿ ಬೈದೂ, ನಮಗೆ ಗೊತ್ತಾಗೀ….)
೧೦. ವಿಮಾನ ಮೇಲೆ ಹೋಗುವಾಗ ಬಂಗಾರಪ್ಪ (ನಮ್ದು ಸೊರಬ ತಾಲೂಕು!) ಏನಾದ್ರೂ ಅದ್ರಲ್ಲಿ ಇದ್ರೆ ದುಡ್ಡಿರೋ ಸೂಟ್ಕೇಸ್ ಕೆಳಗಡೆ ಬಿಸಾಕೋ ಛಾನ್ಸಸ್ ಇರತ್ತೆ! ಆದ್ರಿಂದ, ಪ್ರತಿ ವಿಮಾನದ ಸದ್ದಾದಾಗ್ಲೂ ಹೊರ್ಗಡೆ ಬಂದು ನೋಡ್ಬೇಕು! ~ ಸುಶ್ರುತ ದೊಡ್ಡೇರಿ
ನರಿಯ ಮುಖ ನೋಡಿದ್ರೆ ಒಳ್ಳೆಯದಾಗುತ್ತೆ..(ಹೆಚ್ಚಿನ ಬಾರಿ ನರಿಯ ಹಿಂಭಾಗವೆ ಕಾಣೋದ್ರಿಂದ ಇರ್ಬೇಕು!! ) ~ ಶಂಕರ್