ಕೊಳಲ ತರಂಗ
ಕೊಳದ ತರಂಗ
ಸೆಳೆತಕೆ ಸಿಕ್ಕ ರಾಧೆ
ಯಂತರಂಗ
ಕ ಲ ಕಿ
ರಾಡಿ
~
ಕಣ್ಣಾ
ಒಳಗಿದ್ದು ಕಾಡಬೇಡ
ವಿಶ್ವರೂಪಿ
ನಿನ್ನಗಲ ಎತ್ತರಕೆ
ಸಾಲದಿದು ಪುಟ್ಟ ಹೃದಯ.
ತುಣುಕು ಮಾತಿಗೆ
ತುಂಬುವುದು
ನಗೆ ಮಿಂಚಿಗೆ
ಸುಳ್ಳು ಪ್ರೀತಿಗೂ
ತುಂಬುವುದು
ನೆನಪಿಗೂ
ವಿರಹಕೂ
ಸಾವಿರ ಬಾಳ ಫಲಗರೆವ
ಒಂದು ಧನ್ಯ ನೋಟಕೂ
~
ಮಧು ತೀರಿದ;
ರವಿ ತೆರಳಿದ…
ಮಧು ತೀರಿದ, ರವಿ ತೆರಳಿದ
ಹೊತ್ತೀಗ
ದುಂಬಿಗೆ ಧ್ಯಾನದ ಸಮಯ
ಮುದುಡದೆ ವಿಧಿಯೇ
ಕಮಲಕೆ?
ರಾಧೆಗೆ?
~ ~ ~
ಸೆಪ್ಟೆಂಬರ್ 15ಕ್ಕೆ ರಾಧಾಷ್ಟಮಿ…. ಕೃಷ್ಣಂಗೆ ಮಾತ್ರ ಅಲ್ಲ, ರಾಧೆಗೂ ಒಂದು ಹುಟ್ಟಿದ ದಿನ ಇದೆ. ಮತ್ತು ಕೆಲವರು, ಬಹಳಾಗಿ ಉತ್ತರದ ಜನರು ಅದನ್ನ ಹಬ್ಬವಾಗಿ ಆಚರಿಸ್ತಾರೆ.
ನನಗೆ ರಾಧೆಯದೊಂದು ವ್ಯಸನ. ಯಾವಾಗಲೂ ಕಾಡುತ್ತಿರುವ ಪಾತ್ರ ಅವಳು. ಪ್ರೇಯಸಿ, ಗೊಲ್ಲತಿ, ಹೆಂಡತಿ…
ಏನಂದರೆ, ಕೃಷ್ಣನ ಬಗ್ಗೇನೇ ಅಂತ ಹೇಳಲಾಗಿರೋ ಇಡೀ ಭಾಗವತದಲ್ಲಿ ಅವಳ ಹೆಸರಿಲ್ಲ! ಬರೆದ ಜಾಣರ ರಾಜಕಾರಣಗಳೇನಿದ್ದವೋ? ಇರುವ ಕಥೆ ಅಂದರೆ, ಶುಕದೇವನಿಗೆ ರಾಧೆಯ ಹೆಸರು ಹೇಳಿದರೆ ಭಾವ ಸಮಾಧಿಗೇರುತಿತ್ತು. ಪರೀಕ್ಷಿತ ಸತ್ತ ಹಾವನ್ನ ಶಮೀಕರ ಕೊರಳಿಗೆ ಹಾಕಿದ್ದರ ಹಿಂದೆ ನೂರು ಸಮಜಾಯಿಷಿ ಇದೆ. ಆ ಋಷಿಯ ಮಗ ಶೃಂಗಿ ಅವನಿಗೆ ಒಂದು ವಾರದಲ್ಲಿ ಹಾವು ಕಡಿದು ಸಾಯ್ತೀ ಅಂತ ಶಪಿಸಿದ್ದಕ್ಕೂ ಅಷ್ಟೇ ನಿಮಿತ್ತ ಕಾರಣಗಳಿವೆ. ಹಾಗೆ ವಾರದ ಗಡುವು ಪಡೆದ ಪರೀಕ್ಷಿತ ಪುರಾಣಪುಣ್ಯಕಥೇಲಿ ಕಾಲ ಕಳೆಯೋಣ ಅಂತ ಇದ್ದಾಗ ಶುಕ ಭಾಗವತ ವಾಚನ ಮಾಡ್ತಾನೆ. ಅಷ್ಟೇ ದಿನಗಳಲ್ಲಿ ರಾಧೆ ಹೆಸರು ಹೇಳಿ ಮೂರ್ಛೆ ತಪ್ಪುತ್ತ ಉಳಿದರೆ ಪೂರ್ತಿ ಪುರಾಣ ಹೇಳಿಮುಗಿಸೋಕಾಗೋಲ್ಲ ಎಂದು ರಾಧೆ ಹೆಸರನ್ನೆಲ್ಲ ನುಂಗಿಕೊಳ್ತಾನೆ…. ಶುಕಮುನಿಗೆ ರಾಧೆ ಬಗ್ಗೆ ಅಷ್ಟೊಂದು ಗೌರವ, ಭಕ್ತಿ… etc

ಇಷ್ಟಾಗಿ ಭಾಗವತದಲ್ಲೂ 9:22ರಲ್ಲಿ ‘ಅನಯಾರಾಧಿತೋ ನೂನಮ್ ಭಗವಾನ್ ಹರಿರೀಶ್ವರಃ’ ಶ್ಲೋಕ ಕೋಟ್ ಮಾಡಿ ಇಲ್ಲಿ ಬರೋ ‘ರಾಧಿ’ಯೇ ರಾಧಾ ಅನ್ನುತ್ತಾರೆ. ಅದಕ್ಕೆಲ್ಲ ಸಂಸ್ಕೃತ ವ್ಯಾಕರಣ ಹಾಕಿ ಕೂಡಿ ಕಳೀಬೇಕು ತರ್ಕವೇ ಬದುಕಾದವರು.
ನನ್ನ ಪಾಲಿಗಂತೂ ರಾಧೆ ಬುದ್ಧಿಕೋಶದಲ್ಲಿಲ್ಲ, ಮನೋಕೋಶದ ತುಂಬ ತುಂಬಿಕೊಂಡಿದಾಳೆ. ಅವಳ ಹೆಸರೆತ್ತಿಕೊಂಡು ಎಷ್ಟು ಬರೆದರೂ ಏನು ಬರೆದರೂ ತೃಪ್ತಿಯಾಗದು. ನನ್ನೆಲ್ಲ ಕಸಿವಿಸಿಗೂ ಹೆಸರಾಗಬಲ್ಲ ರಾಧೆಯ ನೆವದಲ್ಲಿ ನಾನು ಹಗುರಾಗುತ್ತ ನಡೆಯಬಹುದಲ್ಲ!
~
‘ದುಂಬಿಗೆ ಧ್ಯಾನದ ಸಮಯ’ ಅಂಥಹ ರಾಧೆ ನೆವದ ಕವಿತೆಗಳಲ್ಲಿ ಒಂದು. ಕೃಷ್ಣನ ಜೀವಂತಿಕೆಯ ಸಾರವೇ ಆಗಿದ್ದ ರಾಧೆ ಯಾವತ್ತೂ ಪತ್ರಿಕಾಗೋಷ್ಠಿ ಕರೆದು ಜಾಹೀರು ಮಾಡಲಿಲ್ಲ. ತನ್ನ ಪಾಡಿಗೆ ತಾನುಳಿದೂ ಇವತ್ತು ನಮ್ಮೆಲ್ಲರಿಗೆ ಗೊತ್ತಿರುವಳು ರಾಧೆ.
ನನಗೂ ರಾಧೆಯೇ ಆಗಿಬಿಡುವಾಸೆ.
ಅಂದಹಾಗೆ, ‘ಕಣ್ಣ’ ಅಂದರೆ ಕೃಷ್ಣನಿಗೆ ರಾಧೆ ಮಾತ್ರ ಕರೆಯುತ್ತಿದ್ದ ಹೆಸರು. ಅದು ಕೃಷ್ಣಾವತಾರ ಸರಣಿ ಬರೆದ ಮುನ್ಶಿಯವರಿಗೆ ಮಾತ್ರ ಗೊತ್ತಿತ್ತು!