ತಿನ್ನಬಾರದ ಹಣ್ಣು ತಿಂದಿದೇವೆ ನಾವು

(ಓಶೋ ನಿಷೇಧಿತ ಹಣ್ಣಿನ ಬಗ್ಗೆ ಕೊಡೋ ವ್ಯಾಖ್ಯೆ ಅದ್ಭುತ. ಅವರದನ್ನ ತಿಳಿವಿನ ಹಣ್ನು ಅನ್ನುತ್ತಾರೆ. ಅದನ್ನ ತಿಂದಾಗ ಆಡಮ್- ಈವರಿಗೆ ತಮ್ಮ ಹುಟ್ಟಿನ ಉದ್ದೇಶ ಗೊತ್ತಾಯ್ತು, ಸ್ವತಂತ್ರರಾಗಿ ಬದುಕು ಕಟ್ಟಿಕೊಂಡರು ಅನ್ನುತ್ತಾರೆ ಓಶೋ. ಅದನ್ನ ಓದುತ್ತ ನನ್ನೊಳಗಿನ ಅವರಂಥದೇ ತಲೆತಿರುಕತನ ಜಾಗೃತವಾಗಿ ಈ ಕವಿತೆ…. ಥರದ್ದು…)

ಬಾಯಿ ಒರೆಸಿಕೋ
ನೀರು ಕುಡಿದುಬಿಡು
ರುಚಿ ನಾಲಗೆಯಗಲಿ
ತೊಲಗಿಹೋಯ್ತೋ ನೋಡು.
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಮೊದಲಿಂದಲೂ ಹಾಗೇನೇ
ದೇವರೆಂಬ ಅಪ್ಪ
ತೋಟದಲಿ ಗಿಡ ನೆಟ್ಟು
ಹೂಬಿಟ್ಟು ಹಣ್ಣಿಟ್ಟು
ತಿನ್ನಬೇಡಿರೆಂದ.
ಆಗಿಂದಲು ಹಿಗೇನೇ
ತಿನ್ನಬಾರದ ಹಣ್ಣು
ತಿಂದಿದೇವೆ ನಾವು.

ಪಾಪವೆಂದರೆ ಅಷ್ಟೇನೆ
ಅಪ್ಪನ ಮಾತು ಮುರಿಯೋದು
ಅದಕ್ಕವನು ಉರಿಯೋದು
ಪಾಪವೆಂದರೆ ಅಷ್ಟೇನೆ
ಚಿನ್ನವಾದರು ಪಂಜರ
ಹೊರೆಯೆಂದು ಅರಿಯೋದು.
ತಿನ್ನಬಾರದ ಹಣ್ಣನ್ನೆ
ಪಟ್ಟು ಹಿಡಿದು ತಿನ್ನೋದು.

ಅಪ್ಪನಹಂಕಾರ ಹಣ್ಣು
ತಿಳಿವ ತಿರುಳು ಮರದಲಿಟ್ಟ
ಗುಟ್ಟು ಹೇಳೋ ಹಾವು ಬಿಟ್ಟ
ತನ್ನ ಮಾತು ಮೀರೋದಿಲ್ಲ
ಶಾಪ ಭಯವ ದಾಟೋದಿಲ್ಲ
ಅನ್ನೋ ನೆಚ್ಚಿಕೆಯವನ ಮೀಸೆಗೆ
ಮಣ್ಣು ಮುಟ್ಟಿಸಿ ನೆಲವ ಮೆಟ್ಟಿ
ಗೆದ್ದಿದೇವೆ ನಾವು.
ತಿನ್ನಬಾರದ ತಿಳಿವ ಹಣ್ಣು
ಮರಳಿ ಮತ್ತೆ ಕದ್ದು ಕದ್ದು
ತಿಂದಿದೇವೆ ನಾವು.

ಒಂದು ಹಳೆ ಕವಿತೆ, ಹೊಸ ಸಮಜಾಯಿಷಿ ಜತೆ

ಭಾನುವಾರ ಕಳೀಬೇಕಲ್ಲ, ಎಂಥದೋ ತರಲೆ ಕೆಲಸ ಹಚ್ಚಿಕೊಂದು ಬುಕ್‌ಶೆಲ್ಫಿನ ಗ್ರಾಚಾರ ಬಿಡಿಸ್ತಿದ್ದೆ. ಅಕಸ್ಮಾತ್ ನನ್ನ ಹಳೆ ಡೈರಿಗಳು ಸಿಕ್ಕಾಕಿಕೊಂಡವು.
ಈ ಹಳೆ ಡೈರಿಗಳು ಮಜಾ ಇರ್ತವೆ. ಅರ್ಧ ಬರೆದ ಕಥೆ ಥರದ್ದು, ಕವಿತೆ ಥರದ್ದು, ಯಾರನ್ನೋ ನೆನೆದು ಬಯ್ದುಕೊಂಡ ‘ಈಡಿಯಟ್’, ಒಂದು ಹೂವಿನ ಚಿತ್ರ, ನೀಟಾಗಿ ಶ್ರದ್ಧೆಯಿಂದ ಬರೆದ ಒಂದು ಹೆಸರು, ಹೀಗೆಲ್ಲ.
ಹಾಗೆ ಅವು ಸಿಕ್ಕಿದ್ದೇ ಸಿಕ್ಕಿದ್ದು, ಸಂಜೆಯ ತನಕ ಪುಟಗಳನ್ನ ತಿರುವಿ ಹಾಕುವುದಾಯ್ತು. ಆ ನನ್ನ ಗುಜರಿ ನಿಧಿಯಲ್ಲಿ ಸಿಕ್ಕ ಕಟ್ಲರಿಗಳು ಒಂದೆರಡಲ್ಲ. ಅವುಗಳ ಜತೆ ಈ ಕೆಳಗಿನ ಒಂದು ಅರ್ಥವಾಗದ ಕವಿತೆಯೂ.
ನಾನ್ಯಾತಕ್ಕೆ ಇದನ್ನ ಬರೆದೆ, ಎಂತ ಯೋಚಿಸ್ಕೊಂಡು ಬರೆದೆ, ಅಂತ ಚೂರೂ ನೆನಪಾಗ್ತಿಲ್ಲ. ಇದೊಂಥರಾ ಖುಷಿಖುಷಿಯಾಗಿ, ಹಗುರಹಗುರವಾಗಿ ತನ್ನಷ್ತಕ್ಕೆ ತಾನಿರುವ ಹಾಗೆ ಅನಿಸ್ತು. ಚೆಂದ ಇದೆಯೋ ಇಲ್ಲೋ ಅದು ಬೇರೆ ಮಾತು. ಒಂಥರಾ ಸಿಹಿಯಾಗಿದೆ ಅಂತ ನನಗೇನೆ ಖುಷಿಯಾಯ್ತು. ನನ್ನ ಯಾವತ್ತಿನ ಗೋಳಾಟ, ಕಹಿಗಳಿಗಿಂತ ಬೇರೆಯಾಗಿ…
ಆ ಕವಿತೆಯೀಗ ಇಲ್ಲಿ, ನನಗೆ ನಾನೇ ಸಮಾಧಾನಪಟ್ಟುಕೊಳ್ಳಲು….
(ನೀವು ಅಕಸ್ಮಾತ್ ಇದನ್ನ ಓದಿದರೆ ಸೀರಿಯಸ್ಸಾಗಿ ತಗೊಳ್ಬೇಡಿ ಪ್ಲೀಸ್!)

ಅಶ್ವಯುಜದ ಸಂಜೆ

ಅಶ್ವಯುಜದ ಸಂಜೆ
ಗಾಳಿಗೆ ಗೊತ್ತಾಗಿದೆ
ಮಾಸ ಮುಗಿಯುತ್ತಿರುವುದು
ಬೀಸುತ್ತಿದೆ ತಣ್ಣಗೆ
ಮೈಯೊಳಗೆ ಕುದುರೆ ದೌಡು
ಧಡಬಡಾ ಬೇಡ ಬೇಡ
ಕಂಪನಕ್ಕೆ ಅಡಗುದಾಣವಿದಲ್ಲ.

ಅಶ್ವಯುಜದ ಸಂಜೆ
ಆಗಸಕ್ಕೆ ಗೊತ್ತಾಗಿದೆ
ಇರುಳಿನ್ನು ದೀರ್ಘ
ಯಾವತ್ತೂ ಮುಗಿಯದೆನ್ನುವಂತೆ
ಮಾವುಹೂಗಳ ಬಾಣಗಳು
ಅವನಲ್ಲಿ ದಾಸ್ತಾನಿದೆ
ವಸಂತಕ್ಕೇನೀಗ ಕಾಯಬೇಕಿಲ್ಲ.

ಅಶ್ವಯುಜದ ಸಂಜೆ
ಕೂಟ ಹೂಡುವ ಮಾತು
ಚೌಕ ಮನೆಗಳ ಲೆಕ್ಕ
ಸಜ್ಜೆಮನೆ ಸಜ್ಜಾಗುತಿದೆ
ರಾತ್ರಿ ಕಳೆದರೆ ಕಾರ್ತೀಕ,
ಕಾತರಿಸಿ ಕುಂತವರ
ಕಣ್ಣಲ್ಲಿ ದೀಪಸಾಲು.

ಒಂದು ಊ………..ದ್ದ ನೆ ಪದ್ಯ

ಸುಮಾರು ಒಂದೂ ವರೆ ವರ್ಷದ ನಂತರ ಊರಿಗೆ ಹೊರಟಿದೀನಿ. ಪ್ರತಿ ಗ್ಯಾಪಿನಲ್ಲೂ 
ಮತ್ತಷ್ಟು ದೂರಾಗುವಂಥ ಏನಾದರೂ ನಡೆದಿದ್ದಿದೆ, ಈ ಬಾರಿಯೂ ಹಾಗೇ ಆಗಿದೆ. 
ಇನ್ನು, ಮುಂದಿನ ಸಾರ್ತಿ ಅನ್ನೋದು ಇರ್ತದೋ ಇಲ್ಲವೋ! 
ಇರಲಿ, ಊರ ನೆನಪಲ್ಲಿ ಬರೆದಿದ್ದ ಕವಿತೆಯೊಂದು, 
ಇಲ್ಲೀಗ- ಊರಿಗೆ ಹೊರಟಿರುವ ನೆವದಲ್ಲಿ...
 
ನನ್ನೂರ ತಿರುವುಗಳು

ಬಹಳ ದಿನವಾಯ್ತು ಊರಕಡೆ ಕಾಲಿಟ್ಟು
ಅಲ್ಲವೇನೋ ತಮ್ಮಾ?
ಬರುವೆಯಾ ಹೊಡೆದು ಬರೋಣ ಒಂದು ರೌಂಡು...
ಮರೆತುಬಿಟ್ಟಿದೀಯೆ!
ದಾರಿ ತೋರುವೆ ನಡಿ,
ಬಿಟ್ಟುಬಂದ ಮನೆಯವರೆಗೂ.

ಬಸ್ಸಿಳಿದು ಎಡಕ್ಕೆ, ಅಲ್ಲಿಲ್ಲ ವೀರಗಲ್ಲು
ಅದೀಗ ಎಸ್ಟೀಡಿ ಬೂತಿನ ಮೂರನೆ ಮೆಟ್ಟಿಲು.
ಬಲಕ್ಕೆ ತಿರುಗಿದರೆ ಆಟೋ ಸ್ಟ್ಯಾಂಡು-
ಸೋಫಾ ಸೆಟ್ಟಂಥ ಸೀಟು,
ಸ್ಟೀರಿಯೋದಲ್ಲಿ ಹೊಸ ಹಿಂದಿ ಹಾಡು.
ಉಂಡಾಡಿ ಹುಡುಗ ಬರಲೊಲ್ಲೆ ಅಂದನಾ?

ನಡಿ....
ನಾಲ್ಕೈದು ಹೆಜ್ಜೆ ಮುಂದೆ ಅರಳೀ ಕಟ್ಟೆಯ ತಿರುವು.
ಅದಲ್ಲವೆ ಸಂಡಾಸುಗುಟ್ಟಿನ ಮನೆ?
ಅದೇ, ಬೋರಿಯೊಬ್ಬಳು ಹೊಸ ಸಂಡಾಸು ಹೊಕ್ಕು
ಕೊಲೆಯಾಗಿಹೋದ ಮನೆ?
ಮಜಾ ಗೊತ್ತ,
ಅದರ ಪಾಯಿಖಾನೆಗಳೀಗ ಉಪವಾಸ ಬಿದ್ದಿವೆ.
ಬೀಗವಿಟ್ಟ ಒಡೆಯರೆಲ್ಲ ರಾಜಕಾರಣ ಸೇರಿದಾರೆ...

ಅಲ್ಲಿ ತಿರುಗುವುದು ಬೇಡ ಬಿಡು
ಅದು ಕೇರಿ ದೂರವಿಟ್ಟಿದ್ದ
ಗೆಜ್ಜೆ ಹೆಂಗಸಿನ ಮನೆ.
ಅವಳು ಸತ್ತೀಗ ಊರ ಸೂಳೆಮಕ್ಕಳು
ಆಸ್ತಿಗೆ ಕಚ್ಚಾಡುತಿರುವರು.

ಅಶೋಕ ಪಿಲ್ಲರ್ ಬಳಿಯ
ತರಕಾರಿ ಅಂಗಡಿ ಈಗಿಲ್ಲವೋ
ಅವರಿಬ್ಬರ ಮದುವೆಗೆ-
ಹೊತ್ತುರಿದ ಅಂಗಡಿ, ಸುಟ್ಟ ಲಾರಿಗಳ ಬೆಂಕಿಯೇ
ಹೋಮಕುಂಡ.
ಊರು ಬಿಟ್ಟು, ಮಕ್ಕಳು ಮಾಡಿಕೊಂಡು
ಅರಾಮಿದಾರೆ ಮಹರಾಯಾ ಅವರು,
ಬೆಂಕಿಯಿನ್ನೂ ಉರೀತಲೇ ಇದೆ
ತುಪ್ಪ ಸುರಿಯುವರಂತೆ
ಖುರ್ಚಿ ಕನಸಿನ ಜನರು.

ಪಾನಿ ಪೂರಿ ಅಂಗಡಿ, ಸೋಮಾರಿ ಕಟ್ಟೆಗಳೀಗ
ಖಾಲಿಖಾಲಿ.
ಮೀಸೆ ಚಿಗುರೊಡೆದ ಮರುಘಳಿಗೆ
ಊರು ಬಿಡತೊಡಗಿದಾರಲ್ಲ ಹುಡುಗರು
ಥೇಟು ನಿನ್ನ ಹಾಗೆ!?
ಕಣ್ ಚೆಲ್ಲಿದುದ್ದಕ್ಕೂ ಜೀವ ಜೋತುಬಿಟ್ಟ
ನಡು ಹರೆಯದ ಅಪ್ಪ, ಅಮ್ಮ....
ದಯೆಬೇಡವೋ, ಸುಮ್ಮನಿರು
ಕಂಡವರ ಕೂಲಿಂಗ್ ಗ್ಲಾಸಿಗೆ ಕರುಬಿ
ಹೊರದಬ್ಬಿದರಲ್ಲವೆ ಮಕ್ಕಳನ್ನ?
ಕಪ್ಪು ಕನ್ನಡಕದ ಹಿಂದಿನ
ಸೋತ ಕಣ್ಣುಗಳು
ಅವರಿಗೆ ಕಾಣುವುದಿಲ್ಲ ಯಾವತ್ತೂ

ಹಾಗಂತ
ಜೇಡದ ಬೀಡಲ್ಲವೋ ನಮ್ಮೂರು.
ಟೀವೀಲಿ ಬಂತಲ್ಲ, ಮೈಮೇಲಿನ ದೇವರು?
ಲಕ್ಕು ಖುಲಾಯಿಸಿತಾಗ
ಲಾಡ್ಜಿನವರಿಗೆ, ಬಾರಿನವರಿಗೆ,
ಟ್ಯಾಕ್ಸಿಯವರಿಗೆ, ಗೂಡಂಗಡಿಗೆ.
ವಾರಕ್ಕೊಂದು ಕೆಂಪು ದೀಪದ ಪುಢಾರಿ ಕಾರು,
ಹೊಸಹುಡುಗಿಯರೂ ಚೆಂದವುಟ್ಟು
ಖುಷಿಯಾಗಿರುವರು.

ಏನು? ಗಂಧದ ದಂಧೆಯಾ
ಮಳ್ಳಾ !!
ಅಳಿದುಳಿದ ಕಾಡಲ್ಲೀಗ ಗಾಂಜಾ ಹುಲುಸು.
ಅಡಗಿ ಕುಂತ ಕೆಂಪು ಹುಡುಗರು
ಉಣುಗು ಹಿಸುಕುತ್ತ ರಕ್ತ ಕ್ರಾಂತಿ ಮಾಡುತಿಹರು;
ಅಡಿಕೆ ಚೊಗರಿನ ಪೊಗರಿಳಿದು
ಒಡೆಯರ ಕೈಕಾಲಲ್ಲೂ ಕೆಸರು...

ಚಕ್ರ ಉರುಳಿದೆ ಅಲ್ಲವಾ?
ಉರುಳುರುಳಿ ಮಾಯ ಶಾಂತಿ ಚಕ್ರ
ತುದಿಮೊದಲ ಬಣ್ಣಗಳ ನಡುವೆ
ಬಿಳಿಯುಳಿದಿದೆ ಚೂರುಪಾರು.
ಇತ್ತೀಚೆಗೆ ನಮ್ಮೂರ ಸುದ್ದಿ
ದೇಶದಲ್ಲೂ ದೊಡ್ಡ ಗುಲ್ಲು...

ಅರೆರೆ! ದಾರಿ ತಪ್ಪಿದೆವಾ?
ಮಸೀದಿ ಬಳಸಿ ಶಾಲೆ ಹಾದು ಬರಬೇಕಿತ್ತು.

ನಾವು ಬಿದ್ದೆದ್ದ ಮೈದಾನದ ಮೈತುಂಬ
ಇನ್ನಷ್ಟು ರೂಮು, ಮತ್ತಷ್ಟು ಮಕ್ಕಳು.

ಬಿಡು,
ಕಲೀಗು ಹೇಳಿದ್ದ-
ಅವನೂರ ದಾರಿಯೂ ಹೀಹೀಗೇ ಇದೆಯಂತೆ,
ಪ್ರತಿ ತಿರುವಿನ ಕಥೆಗಳೂ.

ಇನ್ನೀಗ ನೇರ, ಗದ್ದೆದಾರಿಗುಂಟ ನಡೆ.
ಗದ್ದೆಯಿಲ್ಲ, ಸರಿ. ದಾರಿಗುಂಟ ನಡೆ...

ಓಹ್! ಎಷ್ಟೊಂದು ಮಾಡು,
ಎಲ್ಲಿ ನಮ್ಮ ಮನೆ?
ಅದೋ, ಹಸಿರು ಡಿಸ್ಟೆಂಪರ್ರು
ಮಂಗಳೂರು ಹೆಂಚು.
ಗೋಡೆ ಮೇಲೆ ಕರಿಹಲಗೆಯಲ್ಲಿ
ಬೇರೆ ಯಾರಪ್ಪನದೋ ಹೆಸರು!

ನೀರ ನೆರೆ ರೆಪ್ಪೆ ನೂಕಿ ಬಂತೇನು?
ಬಿಡು ಕಣ್ಣು.
ಸಮಯ ಸಿಕ್ಕಾಗ ಬಾ ಮತ್ತೆ,
ಹರಟೋಣ ಹಳತು, ಹೊಸತು.
ಎದೆಗಟ್ಟಿಯಿದ್ದರೆ ಹಾಗೇ
ಹೊಡೆದುಬರೋಣ ಊರುದ್ದಕ್ಕೆ
ಮತ್ತೆ ಮತ್ತೊಂದು ರೌಂಡು...

ಅಪ್ಪನ ಮುಖ

‘ಮಗೂ ಶ್ವೇತಕೇತೂ’
ಅಪ್ಪನ ಪ್ರಶ್ನೆಗೆ ಮಗನ ಮೌನ
ಲೋಟದಲ್ಲಿ ನೀರು
ನೀರಲ್ಲಿ ಉಪ್ಪು
ಕರಗಿ, ತಿಳಿವು ಮೂಡಿ
ಹರಿಯಿತು ಬೆಪ್ಪು
 
ಕಾಲಗಟ್ಟಲೆ ಕುಂತು
ಕಲಿಯಲಾಗದ ಪಾಠಕೆ
ಕಳಿಸಿದನೇಕೋ ತಂದೆ?
ಕಲಿತು ಬಂದ ಗರ್ವ
ಮುರಿದನೇಕೋ ತಂದೆ?
 
ಅಪ್ಪಂದಿರ ಹಿರಿಮೆಯಿದು
ಬಹುಶಃ
ಕಳಿಸುವುದು
ಕೆದಕುವುದು
ಕಲಿಸುವುದು
~
‘ಹೊಸ ನೀರಿಗೆ
ಹೊಸ ಮಣ್ಣಿಗೆ
ಕಳಿತ ರುಚಿ ಬೇರೆ’
ಮರೆತವರ ಮಾತು-
ಇಂದಿನ ಹಣ್ಣು
ಹಿಂದಿನ ಹಣ್ಣಿಗಿಂತ ಕಳಪೆ!
 
ಬೇವು ಸಸಿಗೆ ಕಸಿಕಟ್ಟಿ
ಕಹಿ ತೆಗೆವ ಕಾಲವಿದು
ಹಾಡುತಿರುವರು ಇನ್ನೂ
ಬೇವಿನ ಬೀಜವ ಬಿತ್ತಿ…
ಬಿತ್ತಿದರೇನು,
ಕಟ್ಟಬಾರದೆ ಬೆಲ್ಲದ ಕಟ್ಟೆ?
ಸವಿಯಾಗಬಾರದೆ ಬಾಳು?

ಅವರಿಗದೇ ಆತ್ಮರತಿ
ತಮ್ಮ ಕಾಲದ ಚಂದ
ತಮ್ಮ ತಿಳಿವಿನ ಹೆಮ್ಮೆ
ಗರಿಗಟ್ಟಿ ನೆಲಬಿಟ್ಟು
ಬಡಾಯಿ ಬಾನಲ್ಲಿ
ರೆಕ್ಕೆಯುದುರಿದ ಹಕ್ಕಿ
~
ಸವಿಯಬೇಕು ಅಪ್ಪ
ಹಿರಿತನದ ಹಿರಿಮೆ
ಅದಕೆಂದೇ
ಕಳಿಸುವನು
ಕೆದಕುವನು
ಕಲಿಸುತಲೇ ಇರುವನು
ಬೇವ ಕಹಿ ತೆಗೆವೆನಂದರೆ
‘ರೂಢಿ ಕೆಡಿಸುವ ಕೇಡಿ’ ಅನುವನು
ಒಂದಾನೊಂದು ಕಾಲಕಂಟಿ
ಹೊಸ ಸುಖವ ಹೊಸಕುವನು

ಎಂದೆಲ್ಲ ಪಿಟಿಗುಡುವಾಗ
ನೀರು ಹರಿದು ಐವತ್ತು ಮಳೆಗಾಲ,
ಕನ್ನಡಿಯ ಬಿಂಬಕ್ಕೆ ಅಪ್ಪನ ಮುಖ.

‘ಮಿಂಚುಹುಳು’- ಹನಿಗೊಂಚಲು (ಕೆಟ್ಟ ಟೈಟಲ್!)

ನಂಗೆ ಮಿಂಚುಳ ತುಂಬಾ ಇಷ್ಟ. ಚಿಕ್ಕವಳಿರುವಾಗ ತಮ್ಮನೊಟ್ಟಿಗೆ ಅವನ್ನ ಹಿಡಿದು ಮೈಮೇಲೆ ಬಿಟ್ಟುಕೊಳೋದೊಮ್ದು ಆಟವಾಗಿತ್ತು. ಗೊತ್ತಾ!? ನಮ್ಮ ಸಂಬಂಧಿಕರೊಬ್ಬರ ಮದ್ವೆ ಹಳ್ಳೀಲಾಗಿತ್ತು. ರಾತ್ರಿ ವರಪೂಜೆ ಹೊತ್ತಿಗೆ ಕರೆಂಟ್ ಹೊರ್ಟೋಯ್ತು. ಅಲ್ಲಿ ದೇವಸ್ಥಾನದ ದಬ್ಬೆ ಬೇಲಿ ಉದ್ದಕ್ಕೂ ಗೊಂಚಲುಗೊಂಚಲು ಬೆಳಕು! ಅವು ಮಿಂಚುಹುಳು!! ಆ ನೋಟ ಕಟ್ಟಿಕೊಟ್ಟ ಅನುಭಾವ (ಭಾ- ಸ್ಪೆಲಿಂಗ್ ಮಿಸ್ಟೇಕ್ ಅಲ್ಲ)ವನ್ನ ಮರೆಯೋದು ಹೇಗೆ? ಅದನ್ನ ನೆನೆಸ್ಕೊಂಡ್ರೆ ಈಗ್ಲೂ ಅಷ್ಟೇ ಪ್ರಮಾಣದಲ್ಲಿ ರೋಮಗಳು ಎದ್ದೇಳ್ತವೆ. ಹಾಗೆ ಎದ್ದ ಘಳಿಗೆಯಲ್ಲಿ ಹುಟ್ಟಿದ ಕೆಲವು ಮಿಣುಕುಗಳು……

~1~

ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.
~2~

ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ
~3~

ಅಗೋ!
ಬೆಳಕಿನ ಹನಿಗೆ
ರೆಕ್ಕೆ ಮೂಡಿದೆ
~4~

ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.

~5~

ನಕ್ಷತ್ರಗಳಿಗೆ
ಮಣ್ಣ ಮೋಹ,
ಶಾಪಕ್ಕೆ ಹುಳುವಾದವು
~6~

ಕತ್ತಲಲ್ಲಿ
ಸೂರ್ಯನ ಕಣ್ಣೀರು,
ಮೈದಳೆಯಿತು
ಮಿಂಚುಹುಳು.
~7~

ಬೆನ್ನಲ್ಲಿ ಬೆಳಕು,
ಮಿಂಚುಹುಳು
ದಾರಿತಪ್ಪುತ್ತಿದೆ.

‘ರಾಧಾಷ್ಟಮಿ’ ಹೊತ್ತಲ್ಲಿ ‘ದುಂಬಿಗೆ ಧ್ಯಾನದ ಸಮಯ….’

ಕೊಳಲ ತರಂಗ
ಕೊಳದ ತರಂಗ
ಸೆಳೆತಕೆ ಸಿಕ್ಕ ರಾಧೆ
ಯಂತರಂಗ
ಕ ಲ ಕಿ
ರಾಡಿ
~
ಕಣ್ಣಾ
ಒಳಗಿದ್ದು ಕಾಡಬೇಡ
ವಿಶ್ವರೂಪಿ
ನಿನ್ನಗಲ ಎತ್ತರಕೆ
ಸಾಲದಿದು ಪುಟ್ಟ ಹೃದಯ.
ತುಣುಕು ಮಾತಿಗೆ
ತುಂಬುವುದು
ನಗೆ ಮಿಂಚಿಗೆ
ಸುಳ್ಳು ಪ್ರೀತಿಗೂ
ತುಂಬುವುದು
ನೆನಪಿಗೂ
ವಿರಹಕೂ
ಸಾವಿರ ಬಾಳ ಫಲಗರೆವ
ಒಂದು ಧನ್ಯ ನೋಟಕೂ
~
ಮಧು ತೀರಿದ;
ರವಿ ತೆರಳಿದ…

ಮಧು ತೀರಿದ, ರವಿ ತೆರಳಿದ
ಹೊತ್ತೀಗ
ದುಂಬಿಗೆ ಧ್ಯಾನದ ಸಮಯ
ಮುದುಡದೆ ವಿಧಿಯೇ
ಕಮಲಕೆ?
ರಾಧೆಗೆ?

~ ~ ~

ಸೆಪ್ಟೆಂಬರ್ 15ಕ್ಕೆ ರಾಧಾಷ್ಟಮಿ…. ಕೃಷ್ಣಂಗೆ ಮಾತ್ರ ಅಲ್ಲ, ರಾಧೆಗೂ ಒಂದು ಹುಟ್ಟಿದ ದಿನ ಇದೆ. ಮತ್ತು ಕೆಲವರು, ಬಹಳಾಗಿ ಉತ್ತರದ ಜನರು ಅದನ್ನ ಹಬ್ಬವಾಗಿ ಆಚರಿಸ್ತಾರೆ.

ನನಗೆ ರಾಧೆಯದೊಂದು ವ್ಯಸನ. ಯಾವಾಗಲೂ ಕಾಡುತ್ತಿರುವ ಪಾತ್ರ ಅವಳು. ಪ್ರೇಯಸಿ, ಗೊಲ್ಲತಿ, ಹೆಂಡತಿ…

ಏನಂದರೆ, ಕೃಷ್ಣನ ಬಗ್ಗೇನೇ ಅಂತ ಹೇಳಲಾಗಿರೋ ಇಡೀ ಭಾಗವತದಲ್ಲಿ ಅವಳ ಹೆಸರಿಲ್ಲ! ಬರೆದ ಜಾಣರ ರಾಜಕಾರಣಗಳೇನಿದ್ದವೋ? ಇರುವ ಕಥೆ ಅಂದರೆ, ಶುಕದೇವನಿಗೆ ರಾಧೆಯ ಹೆಸರು ಹೇಳಿದರೆ ಭಾವ ಸಮಾಧಿಗೇರುತಿತ್ತು. ಪರೀಕ್ಷಿತ ಸತ್ತ ಹಾವನ್ನ ಶಮೀಕರ ಕೊರಳಿಗೆ ಹಾಕಿದ್ದರ ಹಿಂದೆ ನೂರು ಸಮಜಾಯಿಷಿ ಇದೆ. ಆ ಋಷಿಯ ಮಗ ಶೃಂಗಿ ಅವನಿಗೆ ಒಂದು ವಾರದಲ್ಲಿ ಹಾವು ಕಡಿದು ಸಾಯ್ತೀ ಅಂತ ಶಪಿಸಿದ್ದಕ್ಕೂ ಅಷ್ಟೇ ನಿಮಿತ್ತ ಕಾರಣಗಳಿವೆ. ಹಾಗೆ ವಾರದ ಗಡುವು ಪಡೆದ ಪರೀಕ್ಷಿತ ಪುರಾಣಪುಣ್ಯಕಥೇಲಿ ಕಾಲ ಕಳೆಯೋಣ ಅಂತ ಇದ್ದಾಗ ಶುಕ ಭಾಗವತ ವಾಚನ ಮಾಡ್ತಾನೆ. ಅಷ್ಟೇ ದಿನಗಳಲ್ಲಿ ರಾಧೆ ಹೆಸರು ಹೇಳಿ ಮೂರ್ಛೆ ತಪ್ಪುತ್ತ ಉಳಿದರೆ ಪೂರ್ತಿ ಪುರಾಣ ಹೇಳಿಮುಗಿಸೋಕಾಗೋಲ್ಲ ಎಂದು ರಾಧೆ ಹೆಸರನ್ನೆಲ್ಲ ನುಂಗಿಕೊಳ್ತಾನೆ…. ಶುಕಮುನಿಗೆ ರಾಧೆ ಬಗ್ಗೆ ಅಷ್ಟೊಂದು ಗೌರವ, ಭಕ್ತಿ… etc

ಇಷ್ಟಾಗಿ ಭಾಗವತದಲ್ಲೂ 9:22ರಲ್ಲಿ ‘ಅನಯಾರಾಧಿತೋ ನೂನಮ್ ಭಗವಾನ್ ಹರಿರೀಶ್ವರಃ’ ಶ್ಲೋಕ ಕೋಟ್ ಮಾಡಿ ಇಲ್ಲಿ ಬರೋ ‘ರಾಧಿ’ಯೇ ರಾಧಾ ಅನ್ನುತ್ತಾರೆ. ಅದಕ್ಕೆಲ್ಲ ಸಂಸ್ಕೃತ ವ್ಯಾಕರಣ ಹಾಕಿ ಕೂಡಿ ಕಳೀಬೇಕು ತರ್ಕವೇ ಬದುಕಾದವರು.

ನನ್ನ ಪಾಲಿಗಂತೂ ರಾಧೆ ಬುದ್ಧಿಕೋಶದಲ್ಲಿಲ್ಲ, ಮನೋಕೋಶದ ತುಂಬ ತುಂಬಿಕೊಂಡಿದಾಳೆ.  ಅವಳ ಹೆಸರೆತ್ತಿಕೊಂಡು ಎಷ್ಟು ಬರೆದರೂ ಏನು ಬರೆದರೂ ತೃಪ್ತಿಯಾಗದು. ನನ್ನೆಲ್ಲ ಕಸಿವಿಸಿಗೂ ಹೆಸರಾಗಬಲ್ಲ ರಾಧೆಯ ನೆವದಲ್ಲಿ ನಾನು ಹಗುರಾಗುತ್ತ ನಡೆಯಬಹುದಲ್ಲ!

~

‘ದುಂಬಿಗೆ ಧ್ಯಾನದ ಸಮಯ’ ಅಂಥಹ ರಾಧೆ ನೆವದ ಕವಿತೆಗಳಲ್ಲಿ ಒಂದು. ಕೃಷ್ಣನ ಜೀವಂತಿಕೆಯ ಸಾರವೇ ಆಗಿದ್ದ ರಾಧೆ ಯಾವತ್ತೂ ಪತ್ರಿಕಾಗೋಷ್ಠಿ ಕರೆದು ಜಾಹೀರು ಮಾಡಲಿಲ್ಲ. ತನ್ನ ಪಾಡಿಗೆ ತಾನುಳಿದೂ ಇವತ್ತು ನಮ್ಮೆಲ್ಲರಿಗೆ ಗೊತ್ತಿರುವಳು ರಾಧೆ.

ನನಗೂ ರಾಧೆಯೇ ಆಗಿಬಿಡುವಾಸೆ.

ಅಂದಹಾಗೆ, ‘ಕಣ್ಣ’ ಅಂದರೆ ಕೃಷ್ಣನಿಗೆ ರಾಧೆ ಮಾತ್ರ ಕರೆಯುತ್ತಿದ್ದ ಹೆಸರು. ಅದು ಕೃಷ್ಣಾವತಾರ ಸರಣಿ ಬರೆದ ಮುನ್ಶಿಯವರಿಗೆ ಮಾತ್ರ ಗೊತ್ತಿತ್ತು!

ಕಾಳಿದಾಸನ ಮೀನು

ನೀರಲ್ಲಿ ಕಳಚಿತ್ತು ನೆನಪಿನುಂಗುರ

ದೂರ್ವಾಸನ ಶಾಪವಂತೆ

ನಿಜ,

ಕಳೆದ ಕಥೆ ಮಾತ್ರ

ಕಾಳಿದಾಸ ಕರಾಮತ್ತು

ನುಂಗಿತ್ತು ಮೀನು

ಕಥೆ ಬೆಳೆಸಲು

ಅರೆದು ಸೇರಿಸಿದ ಮಸಾಲೆ,

ಕಾವ್ಯ ರುಚಿ

ರಸಿಕರೆದೆ ಹರುಷ

ನಾಟಕದ ಶಾಕುಂತಲೆ

ಕಣ್ಣೀರು ಬೆರೆತ ನದಿ ಸೇರಿ

ಸಾಗರದುಪ್ಪು ಜಾಸ್ತಿ.

ನಿನ್ನ ನೆನಪ ಮೈಮರೆವಲ್ಲಿ

ಯಾರ ಕಡೆಮಾಡಿದೆನೋ

ಉಂಗುರ ಕಳೆದಿದೆ.

ಶಾಪದ ಭಯ

ಕಾಳಿದಾಸನ ಮೀನೂ

ಉಪ್ಪು ಖಾರದಲಿ ಬೆಂದು

ರುಚಿಯಾಗಿದೆ.

ನನ್ನದೇ ಎದೆ ಬಗೆದು

ಪ್ರೇಮದುಂಗುರ ತೋರಲೇ

ವಿಮೋಚನೆಗೆ ?

ನಿಜಘಮದ ಕೇದಗೆ

ಶಿವನ ಮೂಲ ಹುಡುಕುತ್ತ
ಕೆಳಗೆ ವಿಷ್ಣು,
ಮೇಲೆ ಬ್ರಹ್ಮ
ನಡುವೆ ಗುಟ್ಟು ಬಿಚ್ಚಿಟ್ಟ
ಕೇದಗೆಗೆ
ಶಿವನ ತಲೆ ಸೋಕಬಾರದ ಶಾಪ-
ಕ್ಕೆ ಹುಟ್ಟಿದ ಹೆಣ್ಣು ನಾನು
ಹೊಟ್ಟೆಯಲ್ಲಿ
ಗುಟ್ಟು ಬಚ್ಚಿಡಲು ಬರುವುದಿಲ್ಲ

ಹಿತ್ತಿಲ ಬಾಗಿಲಾಚೆ
ಮಲ್ಲಿಗೆ, ಕನಕಾಂಬರ, ತುಂಬೆ
ಪೂಜೆಗೆ ಹತ್ತು ಹೂವು
ಹೆಣೆಯುತ್ತ ಕುಂತವರು
ಕೇದಗೆ ಸೋಂಕಿಗೆ
ಉರಿಯಾಗಿದ್ದಾರೆ
ಮೈ ಮುತ್ತಿದ ಘಮ
ಶಿವನ ಪೂಜೆಗೆ ಅಡ್ಡಿ
‘ಇದು ಬಿಳಿ ಮಲ್ಲಿಗೆಯದೆ’
ಅನ್ನುತ್ತ ಸುಳ್ಳಾಗುತ್ತಿದ್ದಾರೆ…

ಕೇದಗೆ ಇರುವಿನರಿವಿಗೆ
ಜಾಹೀರಾತು ಬೇಕಿಲ್ಲ,

ಎಲೆಹೂವ ಸೆಳೆತಕ್ಕೆ
ಭುಸುಗುಟ್ಟಿವೆ ಹಾವುಗಳೂ,
‘ಶಿವನ ಕೊರಳೊಳಗೆ
ಇಂಥ ಸುಖವಿಲ್ಲ!’

ನಾನು
ನಿಜಘಮದ ಕೇದಗೆ
ಯಾರ ತಲೆ ಕಲುಗಳ
ಚಾಕರಿಯ ಹಂಗೇಕೆ?

‘ಬಿಚ್ಚಿಟ್ಟಷ್ಟೂ ಹಗುರಾಗುತಾರೆ’
ಗರತಿಯರ ನುಡಿಮುತ್ತು.
ನಾನು ಬಿಚ್ಚಿಕೊಳ್ಳುತ್ತೇನೆ,
ಅರಳಿಕೊಂಡು
ಎದೆಭಾರ ಕಳೆಯುತ್ತೇನೆ.
ಗೊತ್ತು,
ಹಗುರಾಗುತ್ತೇನೆ
ನನ್ನೊಳಗೂ
ಮಾನವಂತರ ನೋಟಕ್ಕೂ…

ಚಿಂತೆಯಿಲ್ಲ.

ಮಾತಾಡೆನೆಂಬ ಮುನಿಸು ಮಂದಿಗೆ…

ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?

ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…

ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.

ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?

ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…

ಒಮ್ಮೊಮ್ಮೆ ಅನಿಸುತ್ತದೆ
ಸಾವನ್ನ ತಟ್ಟೆಯೊಳಗಿಟ್ಟು
ಚೂರು ಚೂರೆ ಹರಿದು ತಿನ್ನಬೇಕು
ನನಗೆ ಸಾವಿನ ಹಸಿವು…

ಅನಿಸುತ್ತದೆ
ಸಾವನ್ನ ತಬ್ಬಿ ಚುಂಬಿಸಬೇಕು
ತೋಳಲ್ಲಿ ಬಳಸಿ
ಇಂಚಿಂಚು ಕರಗುತ್ತ ಕಳೆದುಹೋಗಬೇಕು

ಒಲ್ಲದ ಮದುವೆಯಂತೆ ಇದು
ಕಟ್ಟಿಕೊಂಡ ಬದುಕು
ಅನಿಸುತ್ತದೆ,
ಕಳ್ಳಾಟವಾಡುತ್ತ
ಸಾವಿನೊಟ್ಟಿಗೆ
ಹಾದರಕ್ಕಿಳಿಯಬೇಕು…

ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.