ನಡೆಯುತ್ತಲೇ ನಿಂತವರು, ನಿಂತೂ ನಡೆವವರು….

ನದಿ
ಹರೀತಿದೀನಿ ಅಂದುಕೊಳ್ಳತ್ತೆ
ಉಹು… ಅದು,
ಉಗಮ – ಅಂತಗಳ ನಡುವೆ ನಿಂತಿದೆ.
ನಾವು
ಬಾಳುವೆ ನಡೆಸ್ತಿದೀವಿ ಅಂದುಕೊಳ್ತೀವಿ.
ತಾವೋ ಹೇಳುತ್ತೆ, ‘ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.’
ಬಾಳು,
ಹುಟ್ಟು – ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ.
~
ಅಹಂಕಾರ ಇರೋವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ?
ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು ಕರೆದೊಯ್ಯುವಲ್ಲಿಗೆ ತೇಲಿ ಬರುತ್ತೆ. ಎಲ್ಲಿಂದಲೋ ಕೊಚ್ಚಿಬಂದು, ಮತ್ತೆಲ್ಲೋ ಸೇರಿ, ಯಾರಿಗೋ ಉಪಯೋಗವಾಗುತ್ತೆ, ಉರುವಲಾಗುತ್ತೆ.
ಕಣ್ಣೆದುರೊಂದು ಚಿತ್ರವಿಟ್ಟುಕೊಂಡು, ಟೇಪು ಕಟ್ಟಿದ ಗುರಿಯಿಟ್ಟುಕೊಂಡು ಓಡಿ ಗೆಲ್ಲೋದು ನಿಜಕ್ಕೂ ಸಾಧನೆಯಾ? ಹರಿವನ್ನು ಸೆಣೆಸಿ ಗೆದ್ದು ವಾಪಸು ದಡಕ್ಕೇ ಮರಳೋದು?
ಅಥವಾ
ಹರಿವಿನೊಟ್ಟಿಗೆ ಬಂದು ಅನೂಹ್ಯ ತಿರುವು ಕಂಡು, ಮೂಲದ ಗುರುತೇ ಮರೆತು ಮತ್ತೆಲ್ಲೋ ಸಾರ್ಥಕಗೊಳ್ಳೋ ಸಾಹಸ ಇದೆಯಲ್ಲ, ಅದು ಸಾಧನೆಯಾ?
ನಿಜವಾದ ಸವಾಲು ಯಾವುದು ಹಾಗಾದರೆ?
~

ಬುದ್ಧ ಅಂಗುಲೀಮಾಲನ್ನ ನೋಡೋಕೆ ಹೋಗ್ತಾನೆ. ಅಂಗುಲೀಮಾಲ ನಿಂತಲ್ಲೇ ಕಣ್ಣು ಕೀಲಿಸಿ ನೋಡ್ತಾನೆ. ಎಲಾಎಲಾ! ನನ್ನಂಥ ನನ್ನ ಹತ್ತಿರ ಬರ್ತಿರುವ ಇಂವ ಯಾರಪ್ಪಾ!? ‘ಏಯ್! ನಿಲ್ಲು ಅಲ್ಲೇ…’ ಅವನ ಅಬ್ಬರ.
ಬುದ್ಧನಿಗೆ ನಗು. ‘ನಾನು ನಿಂತು ಯಾವುದೋ ಕಾಲವಾಗಿದೆ… ನಡೀತಾ ಇರೋನು ನೀನು!’
ಅಂಗುಲೀಮಾಲನಿಗೀಗ ಖಾತ್ರಿ. ‘ತಲೆ ನೆಟ್ಟಗಿರುವ ಯಾವನೂ ಇತ್ತ ಬರಲಾರ. ಇವನ ಮಾತು ಕೇಳಿದರೆ  ಇಂವ ಹುಚ್ಚ ಅನ್ನೋದು ನಿಜ!’
ಬುದ್ಧ ನಡೀತಲೇ ಇದ್ದ. ನಡೆದು ನಡೆದು ಹತ್ತಿರ ಬಂದ.
ಬುದ್ಧನ ಹೊರಗು ನಡೀತಿತ್ತು. ತಾನು ಹುಟ್ಟು ಸಾವಿನ ನಡುವೆ ನಿಂತವನು ಅನ್ನೋ ಅರಿವು ಬುದ್ಧನ ಒಳಗಿಗಿತ್ತು.
ಅಂಗುಲೀಮಾಲನ ದೇಹ ನಿಂತಲ್ಲೇ ಇತ್ತು. ಅವನ ಒಳಗಿಗೆ ಸಾವಿರ ಕಾಲಿನ ಚಲನೆ. ತಾನೇನೋ ಮಾಡಲಿಕ್ಕಿದೆ… ಮಾಡೇಬಿಡುವೆ ಅನ್ನುವ ಛಲ. ತನ್ನ ಮೂಲಗುಣವಲ್ಲದ ಕ್ರೌರ್ಯವನ್ನ ಆವಾಹಿಸಿಕೊಂಡು, ಹರಿವಿನ ಎದುರು ಈಜುವ ಸಾಹಸ.
ಇಷ್ಟೇ…
ನಿಲ್ಲಬಲ್ಲವನು ಬುದ್ಧ. ನಡೆಯುತ್ತಲೇ ಇರುವವನು ಅಂಗುಲೀಮಾಲ.
~
ತಾವೋ ಸಾಧ್ಯವಿರುವ ಅತಿ ದೊಡ್ಡ ಬಂಡಾಯ.
ತಾವೋ ಸಾಧ್ಯವಿರುವ ಅತ್ಯುನ್ನತ ಶರಣಾಗತಿ.
ಸುಮ್ಮನಿರುವುದು ಕಷ್ಟ. ಪ್ರತಿಕ್ರಿಯೆ ಸಾಮಾನ್ಯ. ಕಾಲಕ್ಕೆ ತಲೆಯನ್ನೂ ಬೆಲೆಯನ್ನೂ ಕೊಟ್ಟು ಸುಮ್ಮನಿರುವುದನ್ನೆ ಉತ್ತರವಾಗಿಸಿದರೆ, ಅದಕ್ಕಿಂತ ದೊಡ್ಡ ಇದಿರೇಟು ಯಾವುದಿದ್ದೀತು?
ಹಾಗೆ ಕಾಲಕ್ಕೆ ತಲೆಯನ್ನೂ ಬೆಲೆಯನ್ನೂ ಕೊಟ್ಟು ಸುಮ್ಮನಾಗುವುದಿದೆಯಲ್ಲ, ಅದಕ್ಕಿಂತ ದೊಡ್ಡ ಸಮರ್ಪಣೆ ಯಾವುದಿದ್ದೀತು?
~
ನನಗೇನೇ, ವಿ.ಸೂ: ಇವೆಲ್ಲ ಅರ್ಥವಾದರಷ್ಟೆ ಸಾಲದು. ಮಾತಲ್ಲಿ ಹೇಳೋದು ಜಾಣತನದ ಪ್ರದರ್ಶನ. ಅನುಸರಿಸಿದಾಗಲಷ್ಟೆ ಅರ್ಥೈಸಿಕೊಂಡಿರೋದು ಖಾತ್ರಿಯಾಗೋದು. ಯಾವುದೇ ಸಂಗತಿಯಾದರೂ ಅಷ್ಟೇ. ನಾವು ಕಂಡುಕೊಂಡರಷ್ಟೆ ಅದು ನಿಜವಾಗೋದು.

ಹೂವಿನ ಕಣಿವೆಗೆ ಮುಳ್ಳಿನ ಹಾದಿ

ಅವಳು ಹೊಕ್ಕುಳ ಹೂವಿಲ್ಲದ ಹುಡುಗಿ.
ನಿಜಕ್ಕೂಅವಳಿಗೆ ಹೊಕ್ಕುಳಿಲ್ಲ. ಹಾಗಂದ ಮೇಲೆ ಅವಳು ಹುಟ್ಟಿಬಂದವಳಲ್ಲ. ಅವಳು ಇರುವವಳು. ಯಾವತ್ತಿಗೂ…
ಅವಳು ಕನಸಿಂದ ಧಿಗ್ಗನೆ ಎದ್ದುಬಂದಳು. ಉಷ್ಣ ಇದೆ ಎಂದಾದರೆ ಅಲ್ಲಿ ಜ್ವಾಲೆ ಹೊತ್ತಿಕೊಂಡಿರಲೇಬೇಕು ತಾನೆ? ತಾನು ‘ಉಷ್ಣ’ ಇದ್ದೀನಿ. ಎಲ್ಲಿ ನನ್ನ ಜ್ವಾಲೆ? ಕನಸುಗಳಲ್ಲಿ ತಬ್ಬಿಹಿಡಿಯುವ ಆ ಗಂಡು ಬೆಂಕಿ…? ಎನ್ನುತ್ತ ಅಲೆಮಾರಿಯಾದಳು.
ಕೊನೆಗೂ ಅವಳಿಗೆ ಆ ಬೆಂಕಿ ಸಿಕ್ಕಿದ್ದು ಹಿಮಬೆಟ್ಟದ ಮೇಲೆ, ಲೂಟಿಕೋರರ ನಾಯಕನ ಕಣ್ಣುಗಳಲ್ಲಿ. ಅವನ ಹೆಸರೂ ಅದೇನೇ- ಹಿಂದಿಯಲ್ಲಿ, ಜಲನ್!
ಜಲನ್ ಮತ್ತವನ ತಂಡದ ಎಲ್ಲರೂ ತಮ್ಮತಮ್ಮ ಊರುಗಳಿಂದ ಹೊರಹಾಕಲ್ಪಟ್ಟವರು. ಅವರದು ಬರೀ ಕೊಳ್ಳೆ ಹೊಡೆಯೋ ಕೆಲಸವಲ್ಲ. ಅವರು ಮತ್ತೇನೋ ಮಾಡಲಿಕ್ಕಿದೆ. ಹಾಗಂತ ಅವನ ಮಾತಿನೊಂದು ಸಾಲು ಸುಳಿವುಕೊಟ್ಟು ಸುಮ್ಮನಾಗುತ್ತೆ.
ಅವರ ತಂಡಕ್ಕೆ ಬಂದು ಸೇರುವ ಹೊಕ್ಕುಳಿಲ್ಲದ ಹುಡುಗಿ ಜಲನ್ ನಿಗೆ, ‘ನೀನೇ ನನ್ನ ಕನಸಲ್ಲಿ ಬರ್ತಿದ್ದವನು, ನನ್ನ ಕರೆದ್ಕೊಂಡು ಹೋಗು’ ಅಂತಾಳೆ. `ನಾನು ನಿನಗೆ ಉಪಯೋಗವಾಗ್ತೀನಿ’ ಅಂತಲೂ ಹೇಳ್ತಾಳೆ. ಅಂವ ಮೊದಲ ರಾತ್ರಿ ಹಾಗೆ ‘ಉಪಯೋಗಿಸ್ಕೊಳ್ತಾನೆ’ ಕೂಡಾ. ಮಾರನೆ ಬೆಳಗ್ಗೆ ಒಂದು ಕುದುರೆ, ಸ್ವಲ್ಪ ಸಾಮಗ್ರಿ ಕೊಟ್ಟು ಜಾಗ ಖಾಲಿ ಮಾಡು ಅನ್ನುತ್ತಾನೆ ಗಂಡಸು. ಮೊದಲು ನಿರಾಕರಿಸುವ ಅವಳು, ತಂಡದ ಮಿಕ್ಕೆಲ್ಲರ ಮಾತು ಚುಚ್ಚಿ ಹೊರಟು ನಿಲ್ತಾಳೆ. ಅದಕ್ಕೆ ಮುಂಚೆ ಜಲನ್ ನ ಕಿವಿಯಲ್ಲಿ ‘ನಿನ್ನೆ ರಾತ್ರಿಗೆ ಮೊದಲು ನಾನು ಕನ್ನೆಯಾಗಿದ್ದೆ’ ಅಂತ ಪಿಸುಗುಟ್ಟುತಾಳೆ. ಅವನು ಆ ನಿಜದ ಸವಿ ಅನುಭವಿಸ್ತ ಇರುವಾಗಲೇ ಅವಳು ಕುದುರೆಯೇರಿ ನಾಲ್ಕು ಹೆಜ್ಜೆ… ಅಂವ ಅವಳನ್ನ ಹಿಂಬಾಲಿಸಿ ತಡೀತಾನೆ. ಇದರ ಮುಂದೆ, ಆ ಲೂಟಿಕೋರರ ತಂಡದಲ್ಲೊಂದು ಹೆಣ್ಣಿನ ಸೇರ್ಪಡೆಯಾಗತ್ತೆ.
ಉಷ್ಣಾ ಅವಳ ಹೆಸರು. ಹೇಳಿದಂತೆ, ಜಲನ್ ನ ತಂಡಕ್ಕೂ ಉಪಯೋಗಕ್ಕೆ ಬರ್ತಾಳೆ, ಅವರಿಗೆ ಕೊಳ್ಳೆಯ ಬೇರೆಬೇರೆ ದಾರಿ ತೋರಿಸೋ ಮೂಲಕ.
ರೂಢಿಯೆನ್ನುವ ಹಾಗೆ, ಹಕ್ಕೆನ್ನುವ ಹಾಗೆ, ಪ್ರತಿ ರಾತ್ರಿ ಬಂದು ಅವಳ ತೊಡೆ ಸರಿಸುತ್ತಿದ್ದ ಜಲನ್, ಅವತ್ತೊಂದು ರಾತ್ರಿ ಹಾಗೆಯೇ ಮಗ್ಗುಲಾಗುತ್ತಾನೆ. ನನಗಿದು ಬೇಡ. ನಾನು ನಿನ್ನನ್ನ ಕಣ್ತುಂಬಿಕೊಳ್ಬೇಕು ಅನ್ನುತ್ತಾನೆ. ಕಾಮಕ್ಕಿಂತ ಮುಖ್ಯ- ಪ್ರೇಮ ಬೇಕು! (ಜಗತ್ತಿನೆಲ್ಲ ಹೆಣ್ಣುಗಳ ಪಾಲಿಗೆ ಗಂಡು ಹೇಳುವ ಇದಕ್ಕಿಂತ ಮಧುರವಾದ ಮಾತು ಇದ್ದೀತೆ!?)
ಅವಳ ಮೈಯುದ್ದಕ್ಕೆ ಆಡುವಾಗ ಅವನಿಗೆ ಅಚ್ಚರಿ. ಅರೆ! ನಿನಗೆ ಹೊಕ್ಕಳೇ ಇಲ್ಲ!! ಹೊಕ್ಕಳಿಲ್ಲದೆ ನೀನು ಹೇಗೆ ಹುಟ್ಟಿಕೊಂಡೆ? ನಿನ್ನಮ್ಮನ ಹೊಟ್ಟೇಲಾದರೂ ಹೇಗೆ ಉಳಿದಿದ್ದೆ!?
~
ಅವನೊಬ್ಬ ಉರಿಮನದ ಯುವಕ.
ಅವನೊಳಗೆ ತಂಪೆನ್ನುವುದೇ ಇಲ್ಲ. ಏನೋ ಒಂದು ದಳ್ಳುರಿ ಹೊತ್ತಿಕೊಂಡು ಬದುಕನ್ನೆಲ್ಲ ಬಾಧಿಸುತ್ತಿದೆ. ಅದಕ್ಕೇ ಅವನ ಕಣ್ಣೊಳಗೆ ಪ್ರೇಮವಿಲ್ಲ.
ಅವನಿಗೆ ಕೊಳ್ಳೆ ಹೊಡೆಯೋದೇ ಕೆಲಸ. ಕೊಡಲು ಏನೂ ಇಲ್ಲ ಅನ್ನುತ್ತಾನೆ ಒಬ್ಬ ಮುದುಕ. ನೀನೇನು ಕೆಲಸ ಮಾಡ್ತೀ? ಅನ್ನುವ ಪ್ರಶ್ನೆಗೆ ‘ನಾನೊಬ್ಬ ಗಾಯಕ’ ಅನ್ನೋ ಉತ್ತರ. ಆ ಗೌಜಿಯಲ್ಲೂ ಗಾಬರಿಯಲ್ಲೂ ‘ಹಾಗಾದರೆ ಹಾಡೀಗ’ ಅನ್ನುತ್ತ ಬೆದರಿಸುತ್ತಾನೆ ಜಲನ್. ಅವನಿಗೆ ಕರುಣೆ ಅಂದರೇನೆಂದೇ ಗೊತ್ತಿಲ್ಲ.
ಇವನ ಓಟದ ದಾರಿಗೆ ತಿರುವಾಗಿ ಬರುತ್ತಾಳೆ ಉಷ್ಣಾ. ಒಂದು ಘಟನೆಯ ನಂತರ ಅವನು ತಂಡದಿಂದ ಬೇರೆಯಾಗುತ್ತಾನೆ. ಉಷ್ಣಾ ಮತ್ತು ಅವನು- ಇಬ್ಬರೇ ಜತೆಯಾಗುತ್ತಾರೆ. ಅವಳಿಗೆ ಅವನನ್ನ ‘ಹೂವಿನ ಕಣಿವೆ’ಗೆ ಕರೆದೊಯ್ಯುವ ಹಂಬಲ. ಬದುಕಂದರೇನು ಗೊತ್ತಾ? ಗೊತ್ತಾಗಬೇಕಂದರೆ ಒಮ್ಮೆ ಪ್ರೀತಿಸಿ ನೋಡು- ಅನ್ನುವ ಹಾಡಿನ ಪಾಠ.
ಆದರೆ ಹೂವಿನ ಕಣಿವೆ ದಿಕ್ಕಿನ ದಾರಿಯುದ್ದಕ್ಕೆ ಮುಳ್ಳಿನ ಚಾಪೆ. ಯೇತಿಯ ಅಡ್ಡಿ. ಯೇತಿ ಕರ್ಮಾಕರ್ಮಗಳ ಫಲದ ನಿಯಾಮಕನಂತೆ. ನೈತಿಕತೆಯ ಕಾವಲುಗಾರನಂತೆ. ಯೇತಿಯ ಸೈನಿಕರು ಬೆನ್ನಟ್ಟಿದಾಗ ಜಲನ್- ಉಷ್ಣಾ ಬೇರೆಯಾಗುತ್ತಾರೆ. ಬೌದ್ಧ ಭಿಕ್ಷುಗಳ ಸುಪರ್ದಿಯಲ್ಲಿ ಜಲನ್ ಚಿಕಿತ್ಸೆ ಪಡೆದು ಏಳುವ ಹೊತ್ತಿಗೆ ಉಷ್ಣಾ ಅವನನ್ನ ಹುಡುಕಿಕೊಳ್ತಾಳೆ. ಈ ಹೊತ್ತಿಗೆ ಬೌದ್ಧ ವಿಹಾರದಲ್ಲಿ ಅವನಿಗೆ ‘ಮೌನ ಕಣಿವೆ’ಯ ವಿಷಯ ಗೊತ್ತಾಗಿರುತ್ತೆ. ಹೂವಿನ ಕಣಿವೆಗೆ ಮುನ್ನ ಅಲ್ಲಿಗೆ ಹೋಗಿ ನಿತ್ಯತೆಯ ಮದ್ದು ಕುಡಿಯೋಣ ಅನ್ನುತ್ತಾನೆ ಜಲನ್. ಉಷ್ಣಾಗೆ ಇಷ್ಟವಾಗದಿದ್ದರೂ ಪ್ರೇಮಿಗಾಗಿ ಜತೆಯಾಗುತ್ತಾಳೆ. ಸಾಧಕನ ಗುಹೆ ಹೊಕ್ಕು ನಿತ್ಯತೆಯ ಗುಟುಕುಗಳಿರುವ ನಾಳವನ್ನ ಲಪಟಾಯಿಸುತ್ತಾರೆ. ಅವಳಿಗೆ ಕುಡಿಸಿ, ತಾನೂ ಕುಡೀತಾನೆ. ಆ ರಾತ್ರಿ ಅವರದ್ದು ಜೀವಮಾನದ ಅದ್ಭುತ ನಿದ್ದೆ.
ಬೆಳಗ್ಗೆ ಏಳುವ ಹೊತ್ತಿಗೆ ಅವರ ಸುತ್ತ ಬಂದೂಕು ಹಿಡಿದ ಮಂದಿ, ಜತೆಗೆ ಯೇತಿ. ಬೆದರದ ಜಲನ್, ಉಷ್ಣಾಳ ಕೈಗೆ ಪಿಸ್ತೂಲು ಕೊಟ್ಟು ಗುಂಡಿಕ್ಕು ಅನ್ನುತ್ತಾನೆ. ಆ ಗುಂಡಿಗೆ ಅಂವ ಸಾಯೋದಿಲ್ಲ. ಔಷಧದ ಮೇಲಿನ ನಂಬಿಕೆಯಿಂದ ತಾನೂ ಅವಳಿಗೆ ಗುಂಡಿಕ್ಕುತ್ತಾನೆ. ನಿಯತಿಯ ಕರಾಮತ್ತು! ಅವಳು ಸಾಯುತ್ತಾಳೆ.
‘ನಾನು ನಿನ್ನನ್ನ ಕೊಲ್ಲಲು ಬರಲಿಲ್ಲ. ನಿನ್ನ ಶಿಕ್ಷಿಸಲು ಬಂದಿದ್ದೆ. ಈಗ ಇದಕ್ಕಿಂತ ದೊಡ್ಡ ಶಿಕ್ಷೆ ನಿನಗೆ ಯಾವುದಿದ್ದೀತು?’ ಅನ್ನುವ ಯೇತಿ, ಹೆಜ್ಜೆಗೊಂದು ಹೊದಿಕೆ ಕಳಚುತ್ತ ಬೆತ್ತಲಾಗಿ ನಡೆಯುತ್ತಾನೆ, ಕೆಲಸ ಮುಗಿಸಿದವನಂತೆ.
ಉಷ್ಣಾಳ ದೇಹ ಸುಟ್ಟು ನಡೀತಾನೆ ಜಲನ್. ಉಷ್ಣ ಇಲ್ಲದ ಜ್ವಾಲೆ ತಣ್ಣಗೆ ತಾನೆ? ಜಲನ್ ಕೂಡಾ ಈಗ ಹಾಗೇನೆ.
~

Pan Nalin

ಅಲ್ಲಿಂದ ಮುಂದೆ ನೂರಾ ಅರವತ್ತಕ್ಕೂ ಹೆಚ್ಚು ವರ್ಷಗಳ ಓಟ. ಒಂದಿಡೀ ಶತಮಾನವನ್ನ ಜೀವಿಸಿ ಕಳೀತಾನೆ ಜಲನ್. ಅದು ಔಷಧದ ವರ. ಈ ಕಾಲದ ಗತಿಯನ್ನ ನಿರ್ದೇಶಕ ಪಾನ್ ನಳಿನ್ ಅದ್ಭುತವಾಗಿ ನಿರೂಪಿಸಿದ್ದಾರೆ. ಬರೀ ಪಾದಗಳ ಚಲನೆಯನ್ನೆ ತೋರಿಸುವ ಮೂಲಕ.
ಭಾರತದ ಹಿಮಶ್ರೇಣಿಯಿಂದ ಜಲನ್ ನಡೆದು ಸೇರೋದು ಜಪಾನಿಗೆ. ಅದೂ 21ನೆ ಶತಮಾನದ ಆಧುನಿಕ ದೇಶಕ್ಕೆ. ಅವನೀಗ ಡಾ.ಜಲನ್ ಒತ್ಸಲ್. ಸಾವಿನ ವೈದ್ಯ. ಸ್ವತಃ ಸಾಯಲಾರದ ಜಲನ್, ಸಾವು ಬಯಸುವವರಿಗೆ ಮದ್ದು ನೀಡಿ, ನೆಮ್ಮದಿಯಿಂದ ಸಾಯಲು ಸಹಕರಿಸ್ತಾನೆ. ಅದರಿಂದಲೇ ಅವನ ಸುತ್ತ ಗದ್ದಲ, ಪ್ರತಿಭಟನೆಯ ಗಲಾಟೆ.
ಇಂಥದೇ ಗದ್ದಲವೊಂದು ಟೀವಿಯಲ್ಲಿ ಬಿತ್ತರವಾಗುವಾಗ ನೋಡುತ್ತಾಳೆ ಒಬ್ಬಳು ಗಾಯಕಿ. ಹಾಡು ನಿಲ್ಲಿಸಿ, ಪೊಲೀಸರಿಂದ ಬಿಡಿಸಿ ಅವನನ್ನ ಕರೆದೊಯ್ದು ರೈಲು ಹತ್ತಿಸ್ತಾಳೆ,
ಅವನು ಇಳಿದು ಬರುತ್ತಾನೆ.
ಯಾಕಂದರೆ ಅವಳು ಉಷ್ಣಾ. ತನ್ನ ಪ್ರೀತಿಗಾಗಿ ಮತ್ತೆ ಬಂದಿರುವ ಉಷ್ಣಾ!
~
ಇಲ್ಲಿಗೆ ಸಿನೆಮಾ ಮುಗಿಯೋದಿಲ್ಲ. ಒಂದು ಅನೂಹ್ಯ ಸಂಗತಿಯೊಂದಿಗೆ ಅದು ಒಂದಷ್ಟು ಯೋಚನೆಗೆ ಶುರುವಾತು ಮಾಡಿಕೊಟ್ಟುಹೋಗುತ್ತದೆ. ಆ ಕೊನೆಯ ಘಟನೆ, ಕೊನೆಯಲ್ಲಿ ಯೇತಿ ಹೇಳುವ ಪರಮನಿಜವಾದ- ಈ ವರೆಗೆ ಮತ್ತೆಮತ್ತೆ ಕೇಳುತ್ತಲೇ ಇರುವ ಮಾತು- ಈ ಎರಡು ಸೇರಿ, ಇಡಿಯ ಸಿನೆಮಾ ನಮ್ಮನ್ನ ಕಲಕುವ ಹಾಗೆ ಮಾಡುತ್ತವೆ. ಕ್ಲೈಮಾಕ್ಸ್ ಹೇಳೋದಿಲ್ಲ… ಸಿನೆಮಾ ಮಿಸ್ ಮಾಡ್ಕೊಳ್ಬೇಡಿ!
~
ಒಟ್ಟಾರೆ ಇಷ್ಟೇ-
ಹೊಕ್ಕುಳಿಲ್ಲದ ಹುಡುಗಿಗೆ ಹುಟ್ಟಿಲ್ಲ- ಸಾವಿಲ್ಲ.
ಸತ್ತಂತೆ ಕಂಡರೆ- ಅದು ಜ್ವಾಲೆಯನ್ನ ನಂದಿಸೋಕೆ ಮಾತ್ರ.
ಎಲ್ಲಿಂದಲೋ ಶುರುವಾದ ಬದುಕು ಎಲ್ಲಿಯೋ ಮುಗೀಬಹುದು. ಕಗ್ಗಾಡಿನ ಲೂಟಿಕೋರರ ನಡುವಿಂದ, ಆಧುನಿಕ ನಗರದ ನಡುಬೀದಿಯಲ್ಲೂ.
ಯಾವಾಗಲೋ ಶುರುವಾದ ಕತೆ ಯಾವಾಗ ಬೇಕಾದರೂ ಮುಗೀಬಹುದು. ಅಥವಾ ಚಿರಕಾಲ ಮುಂದುವರೀಬಹುದು. ನಮ್ಮ ಪಾತ್ರಕ್ಕೆ ನಾವೆಷ್ಟು ಅಂಟಿಕೊಂಡಿರ್ತೀವಿ ಅನ್ನೋದರ ಮೇಲೆ ಅದರ ನಿರ್ಧಾರ. ನಾವೆಂಬ ದೇಹಕ್ಕೆ ಅಂಟಿಕೊಳ್ಳೊತನಕ ಕರ್ಮ ಸುತ್ತಿಕೊಂಡಿರುತ್ತೆ. ಕರ್ಮ ಸುತ್ತಿಕೊಳ್ಳೋತನಕ ಮತ್ತೆ ಹುಟ್ಟು- ಮತ್ತೆ ಸಾವಿನ ಕತೆ ನಡೀತಲೇ ಇರತ್ತೆ.
ಈ ಹುಟ್ಟು ಸಾವುಗಳ ನಡುವೆ ನಿತ್ಯರಾಗಿ ಉಳಿಯೋ ಹಂಬಲ, ಭ್ರಮೆ. ಹೋರಾಟ, ಪ್ರೇಮ.
ಕೊನೆಗೆ- ಎಲ್ಲವನ್ನೂ ಕಳಕೊಳ್ಳುವುದೆ ಎಲ್ಲವನ್ನೂ ಪಡೆಯುವ ಸುಲಭ ಮಾರ್ಗ ಅನ್ನುವ ಸವಿತಿಳಿವು.
- ಇದು ನನ್ನ ಗ್ರಹಿಕಗೆ ನಿಲುಕಿದಂತೆ, ಒಂದು ಪ್ರ’ಬುದ್ಧ’ ಸಿನೆಮಾ.
~
ಹೇಳಲು ಮರೆಯಬಾರದ್ದು…
ನಿರ್ದೇಶಕ: ಪಾನ್ ನಳಿನ್. (ಈತನಿಗೆ 5 ಸ್ಟಾರ್ ಗಳು. ಸಂಸಾರ ಸಿನೆಮಾದ ನಂತರ ಇದು ಈತನ ಎರಡನೇ ಸಿನೆಮಾ. ಸರಿಯಾಗಿ ಗಮನಿಸಿದರೆ ಈತ ಅಸೀಮ ಸಾಧ್ಯತೆಗಳ ನಿರ್ದೇಶಕ. ಸ್ವತಃ ಸಿನೆಮಾ ಸ್ಕ್ರಿಪ್ಟ್ ಬರೆದಿರುವ ಈತ ಎಂಥಾ ಪರ್ಫೆಕ್ಷನಿಸ್ಟ್ ಅನ್ನೋದು ಸಿನೆಮಾ ನೋಡಿದರೆ ಗೊತ್ತಾಗತ್ತೆ.)
ಹಿಂದಿ ಸಂಭಾಷಣೆ: ಅನುರಾಗ್ ಕಶ್ಯಪ್- ಫುಲ್ ಮಾರ್ಕ್ಸ್. (ಭಾಷೆ: ಹಿಂದಿ, ಕೊನೆಕೊನೆಗೆ ಜಪಾನೀಸ್- ಇಂಗ್ಲಿಷ್)

ನಟವರ್ಗ: ಮಿಲಿಂದ್ ಸೋಮನ್- ಆವರೇಜ್. ಮೈಲೆನ್ ಝಂಪನೋಯ್ ಎಕ್ಸಲೆಂಟ್. ನಾಸಿರುದ್ದಿನ್ ಷಾ- ಸೂಪರ್.

ವಿದ್ರೋಹದ ನವಿರಲ್ಲಿ ಉತ್ಸವದ ನೆನಪು

‘ನಿನಗೆ ನನ್ ಬಗ್ಗೆ ಕೋಪ ಬರೋದಿಲ್ವಾ?’
ತನ್ನನ್ನ ಒಡಹುಟ್ಟಿದ ಅಕ್ಕನ ಹಾಗೆ ಆದರಿಸ್ತಾ ಮನೆಯಲ್ಲಿಟ್ಟುಕೊಂಡಿದ್ದ ಅದಿತಿಯನ್ನ ನೋಡಿ ವಸಂತಸೇನೆಗೆ ಅಶ್ಚರ್ಯ. ಅದು ಹೇಗಾದ್ರೂ ಒಬ್ಬ ಹೆಂಡತಿ ತನ್ನ ಗಂಡನ ಪ್ರೇಯಸೀನ ಸಹಿಸ್ಕೊಳ್ಳಬಲ್ಲಳು?
‘ಕೋಪಾನಾ? ಖಂಡಿತಾ ಇಲ್ಲ. ಇನ್ನೂ ಹೇಳಬೇಕಂದ್ರೆ, ನೀವು ಅವರ ಬದುಕಿನಲ್ಲಿ ಬಂದಿರೋದ್ರಿಂದ ನನಗೆ ಮತ್ತಷ್ಟು ಒಳ್ಳೇದೇ ಆಗಿದೆ’ ಅವಳು ತುಸುವೇ ನಾಚಿ ಕಿಲಗುಟ್ಟುತ್ತಾಳೆ.
ವಸಂತಸೇನೆಯ ಹುಬ್ಬು ಮೇಲೇರುತ್ತದೆ. ‘ಯಾಕೆ? ಹೇಗೆ ಹಾಗೆ!?’
‘ಅವರು… ಈಗೀಗ ನನ್ನ ತುಂಬಾ ಪ್ರೀತಿಸ್ತಾರೆ. ಅವರ ವರಸೆಗಳೂ ಬದಲಾಗಿವೆ!’ ಅದಿತಿ ಪೂರಾ ನಾಚಿ ಕೆಂಪಡರಿಹೋಗಿದ್ದಾಳೆ. ನಿಲುವಿನಲ್ಲಿ ಪ್ರಣಯದ ಘಮ ತೂರಿ ಬರುತ್ತಿದೆ.
ಅದಿತಿಯ ಇಂಥ ಉತ್ತರಕ್ಕೆ ವಸಂತಸೇನಾ ಹೇಗೆ ಪ್ರತಿಕ್ರಿಯಿಸಿದ್ದಳೋ? ರೇಖಾಳ ಮುಖಭಾವ ನೆನಪಾಗುತ್ತಿಲ್ಲ. ಅನುರಾಧಾ ಪಟೇಲಳ ಬಟ್ಟಲು ಕಂಗಳ ನೋಟ ನೆಲಕ್ಕೆ ತೂಗು ಬೀಳುತ್ತ ಜೋಕಾಲಿಯಾಡಿದ್ದು ನೆನಪಿದೆ. ಇಡಿಯ ‘ಉತ್ಸವ್’ ಸಿನೆಮಾದಲ್ಲಿ ನೆನಪಿಡಬೇಕಾದ ನೂರು ಸಂಗತಿಗಳಿದ್ದದ್ದು ನಿಜ. ಆ ನನ್ನ ಬಾಲ್ಯಕ್ಕೆ ತಟ್ಟಿ ನಿಂತುಬಿಟ್ಟಿದ್ದು ಈ ಒಂದು ಸನ್ನಿವೇಶವೇ ಯಾಕೋ!?
ಇದರ ಜತೆಗೆ ನೆನಪಿರೋ ಮತ್ತೊಂದೇ ಒಂದು ತುಣುಕು, ಕೊನೆಯಲ್ಲಿ ಒಂಟಿಗಳಾಗುವ ವಸಂತ ಸೇನಾ ತಾನು ಅಲ್ಲೀತನಕ ನಿರಾಕರಿಸ್ತಾ ಬಂದಿದ್ದ ಸಂಸ್ಥಾನಕ(?)ನಿಗೆ ಬಾಗಿಲು ತೆರೆಯೋದು. ಈ ದೃಶ್ಯ ಕಣ್ಕಟ್ಟಿದರೆ, ಅದು ಮತ್ತೊಂದೇ ಕಥೆಗೆ ಎಳೆಯಾಗುತ್ತೆ.
ಭಾಸ ‘ಚಾರುದತ್ತ’ವೆಂಬ ನಾಟಕ ಬರೆದ. ಆಮೇಲಿನ ಶೂದ್ರಕನೂ ಅದೇ ಎಳೆಯಿಟ್ಟುಕೊಂಡು ‘ಮೃಚ್ಛಕಟಿಕ’ ಬರೆದ. ಕಾರ್ನಾಡರು ಅವೆರಡನ್ನೂ ಹದವಾಗಿ ಸೇರಿಸಿ ‘ಉತ್ಸವ್’ ಸಿನಿಮಾ ಮಾಡಿದರು. ಚಾರುದತ್ತನೆಂಬ ಸಂಗೀತಗಾರ, ಅದಿತಿ ಎಂಬ ಅವನ ಹೆಂಡತಿ, ವಸಂತಸೇನೆಯೆಂಬ- ಆಸ್ಥಾನ ನರ್ತಕಿಯೂ ಆಗಿದ್ದ ಸುಂದರಿ ಅವನ ಪ್ರೇಯಸಿ. ಸಿನೆಮಾದ ತಿರುಳು- ಹರಹುಗಳೆಲ್ಲ ಬೇರೆಯೇ ಇವೆ. ನನ್ನ ಪಾಲಿಗೆ ಮಾತ್ರ ಉತ್ಸವ್ ಸಿನೆಮಾ, ವಸಂತಸೇನೆ- ಅದಿತಿಯರ ಸಂಭಾಷಣೆಯೇ.
~
ಜೋಗಿ ಒಂದುಕಡೆ ಬರೆದಿದ್ದರು, ವಂಚಿಸುವ ಹೆಂಡತಿ, ಗಂಡನ ಜತೆ ಹೆಚ್ಚು ಪ್ರೀತಿಯಿಂದ ನಡೆದುಕೊಳ್ತಾಳೆ ಅನ್ನುವ ಅರ್ಥದ ಸಾಲುಗಳನ್ನ. ಅದನ್ನ ಓದಿದಾಗ ನೆನಪಾಗಿದ್ದು ಚಾರುದತ್ತನೇ. ವಂಚನೆಗೆ ಗಂಡು ಹೆಣ್ಣು ಅನ್ನೋದಿಲ್ಲ. ಡಿಆರ್ ಬರೆದಿದ್ದರಂತೆ ಶರ್ಮರ ಪುಸ್ತಕದ ಮುನ್ನುಡಿಯಲ್ಲಿ-’ರಮ್ಯ ಉಲ್ಲಂಘನೆಗಳನ್ನ ಮಾಡದಷ್ಟು ಅರಸಿಕನೇನಲ್ಲ ಇವನು’ ಅಂತ. ಹಾಗೆ… ಕೆಲವೊಂದು ರಮ್ಯ ಉಲ್ಲಂಘನೆಗಳು ಗಂಡು- ಹೆಣ್ಣುಗಳ ನಡತೆಯಲ್ಲಿ ಕಾಣುತ್ತವೆ. ಉಹು… ಬಚ್ಚಿಟ್ಟುಕೊಂಡಿರ್ತವೆ. ಚಾರುದತ್ತನ ಪ್ರೇಮವೂ ಅಂಥದೊಂದು ಉಲ್ಲಂಘನೆಯೇ ಆಗಿತ್ತು. ಅದಕ್ಕೇ ಅವನ ಹೆಂಡತಿ ಅದನ್ನ ಒಪ್ಪಿ-ಸಹಿಸ್ಕೊಳ್ಳಲು ಸಾಧ್ಯವಾಗಿತ್ತು ಅನ್ನಿಸುತ್ತೆ. ಈ ಕ್ಷಣದಲ್ಲೇ ನನಗೆ ಅನ್ನಿಸಿದ್ದು- ‘ವ್ಯಾಮೋಹವಾಗದ ವಿದ್ರೋಹ ಕೆಲವು ಸಾರ್ತಿ ಒಳ್ಲೆಯದನ್ನೇ ಮಾಡುತ್ತೆ’ ಅಂತ. ಅದಿತಿಯ ದಾಂಪತ್ಯ ಪ್ರಣಯ ರಂಗೇರಿದ್ದು ಒಳ್ಳೆಯದೇ ಅಲ್ಲವೆ? ಜತೆಗೆ, ತಾನು ಎಷ್ಟೆಂದರೂ ಅವನ ಹೆಂಡತಿ ಅನ್ನುವ ಹೆಚ್ಚುಗಾರಿಕೆಯ ಹೆಮ್ಮೆ ಅವಳಿಗೆ. ಆ ಹೆಚ್ಚುಗಾರಿಕೆ ಪದರಗಟ್ಟುವಂತಾಗಿದ್ದು ವಸಂತ ಸೇನೆಯ ಬರುವಿಕೆಯಿಂದಲೇ ಅಲ್ಲವೆ?
ಆದರೆ, ಅವಳ ಹೆಮ್ಮೆಯಿಂದ ವಸಂತಸೇನೆಗಾದ ಅನುಭವ… ಓಹ್, ನನಗೆ ಆ ಪಾತ್ರವನ್ನ ಮಾಡಿದ್ದ ರೇಖಾಳ ಪ್ರತಿಕ್ರಿಯೆ ನೆನಪಾಗ್ತಿಲ್ಲ. ಕಾರ್ನಾಡರ ಮನಸಲ್ಲಿ ಏನಿತ್ತೋ, ಅದು ಹಾಗೇ ಹೊಮ್ಮಿರುತ್ತೆ ಅಂತ ಗೊತ್ತು. ಭಾಸನಾಗಲೀ ಶೂದ್ರಕನಾಗಲೀ ಯಾವ ಮಾತು ಕೊಟ್ಟಿದ್ದರು ಅವಳಿಗೆ? ಕುತೂಹಲ… ಅದಕ್ಕಿಂತ, ಸ್ವತಃ ವಸಂತಸೇನೆಯೇ ಇದ್ದು,ಈ ಮಾತು ನಡೆದಿದ್ದರೆ ಅವಳ ಮುಖದಲ್ಲಿ ಯಾವ ಬಣ್ಣ ಇರುತ್ತಿತ್ತು!? ಯೋಚನೆ…
~
ಗೆಳತಿಯೊಬ್ಬಳು ಅಂತಃಪುರದಲ್ಲಿ (ಅದೊಂದು ನಮ್ಮ ಹೆಣ್ಹೆಣ್ಣು ಮಕ್ಕಳ ಫೇಸ್ ಬುಕ್ ತಾಣ) ಕೇಳ್ತಾಳೆ, ‘ಮದ್ವೆಯಾದ ಮೇಲೂ ಹೆಣ್ಮಕ್ಕಳಿಗೆ ಕ್ರಶ್ ಆಗತ್ತಾ?’ ಎಷ್ಟು ಜನ ತೆರೆಯಾಚೆಗೂ ಪ್ರಾಮಾಣಿಕರಾಗಿರ್ತಾರೋ? ಎಲ್ಲಾ ಸಲವೂ ಅಂಥ ಪ್ರಾಮಾಣಿಕತೆ ಒಳ್ಳೇದಲ್ಲ ಅನ್ನೋದು ನಿಜ- ಅದು ಬೇರೆ ಮಾತು.
ಆದರೆ ಈ ಪ್ರಶ್ನೆ ತಟ್ಟಿಹಾರಿಸೋ ಅಂಥದ್ದಲ್ಲ. ಹೌದು, ಕ್ರಶ್ ಆಗೋದಕ್ಕೆ ಮದುವೆಗೆ ಮುಂಚೆ- ನಂತರ ಅನ್ನೋ ಯಾವ ಅಂತರವೂ ಇರೋದಿಲ್ಲ. ಅದು ಯಾರ ಬಗೆಗಾದರೂ ಉಂಟಾಗಬಹುದು. ಅದೊಂದು ರಮ್ಯ ಉಲ್ಲಂಘನೆ (ಕಾಪಿ ಡೀಆರ್). ಅದೊಂದು ನಿರುಪದ್ರವಿ ವಿದ್ರೋಹ. ಕ್ರಶ್ ಬಗ್ಗೆ ಯಾವ ವ್ಯಾಮೋಹವೂ ಇರೋದಿಲ್ಲ. ಅದೊಂದು ಕನಸಿನ ಲೋಕವಷ್ಟೆ. ಮೆಚ್ಚುಗೆಯ ಮಾಯಕ. ಆದರೆ ಈ ಕ್ರಶ್ ಬಗ್ಗೆ ಚಿಕ್ಕದೊಂದು ಗಿಲ್ಟ್ ಹುಟ್ಟಿಕೊಳ್ಳದೆ ಇರಲಾರದು. ಆ ಗಿಲ್ಟ್ ಅನ್ನು ಮೀರಲಿಕ್ಕೇನೆ ಸಂಗಾತಿಯ ಮೇಲಿನ ಕಾಳಜಿ ಹೆಚ್ಚಾಗೋದು,ಪ್ರೀತಿ ಮತ್ತಷ್ಟು ಉಕ್ಕಿ ಹರಿಯೋದು. ಅದಕ್ಕೇ ಹೇಳಿದ್ದು, ಇಂಥಾ ವಿದ್ರೋಹದಿಂದ ಕೆಲವು ಸಾರ್ತಿ ಒಳ್ಳೇದೇ ಅಗತ್ತೆ ಅಂತ. ಜೋಗಿಯ ಮಾತು ಲಿಂಗಾತೀತವಾದರೆ- ಇಲ್ಲಿ ಖಂಡಿತ ಸಲ್ಲುತ್ತೆ.
~
ಕೊನೆ ಮಾತು: ಹಾಗಂತ ಒತ್ತಾಯದಿಂದ ವಿದ್ರೋಹವನ್ನೋ (ರಮ್ಯ) ಉಲ್ಲಂಘನೆಯನ್ನೋ ಮಾಡಬೇಕೆಂದಿಲ್ಲ! ಎಲ್ಲ ಗಂಡಂದಿರೂ ಚಾರುದತ್ತನಂತೆ, ಹೆಂಡತಿಯರು ಅದಿತಿಯಂತೆ ಇರೋದಿಲ್ಲ. ಹಾಗೇನೇ ವಸಂತಸೇನೆಯಂತೆ ಪ್ರೇಯಸಿಯರು ಕೂಡಾ….

ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….

‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ.
‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು.
~
ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು…
ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ ದಾರಿಯಾಗೋದು. ಬಂಧುಗಳ ಕಿವಿಮಾತು ಹೇಳೋಲ್ವೇ, ‘ಆಗಾಗ ಜಗಳಾಡ್ತ ಇದ್ರೇನೇ ಪ್ರೀತಿ ಎಷ್ಟಿದೆ ಅಂತ ಗೊತ್ತಾಗೋದು’ ಅಂತ!
ಪ್ರೀತಿಯ ಸಾಬೀತಿಗೆ ಶುರುವಾಗುವ ಜಗಳ ರೂಢಿಯಾಗಿಬಿಟ್ಟರೆ ಕಷ್ಟ. ಕೈಮೀರಿ ಹೋದರೆ ತುಂಬಾನೇ ಕಷ್ಟ.
~
ಅನ್ನಿಸುತ್ತೆ, ‘ನಿನ್ನ ಬಿಟ್ಟಿರಲಾರೆ ಕಣೋ’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರ ಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ!
ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!?
~
ಅದಕ್ಕೇ, ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ,
ಅಂಟಿಕೊಂಡಿಲ್ಲದ, ಬಿಡಲಾಗದ
ಚೆಂದದೊಂದು ಸಂಬಂಧ ಅವನೊಡನೆ ಸಾಧ್ಯವಾಗಬೇಕು.
ಆಗಲಾದರೂ ಅವನೂ ಒಬ್ಬ ಹಾದಿಹೋಕನಂತೆ, ಜೊತೆಯಾತ್ರಿಯಂತೆ, ಎಲ್ಲರಂತೆ ಅನ್ನಿಸುತ್ತ ಕೊನೆತನಕ ಜತೆ ನಡೆಯಬಹುದು.
ಅಥವಾ ಎಲ್ಲರನ್ನು ಅವನಂತೆ ಭಾವಿಸ್ತಾ, ಹರಿವಿನಲ್ಲಿ ಒಂದಾಗಿ ಕ್ಷಣಕ್ಷಣದ ತುದಿಯನ್ನ ಮುಟ್ಟುತ್ತ ಇರಬಹುದು.

ಅವನ ಕಣ್ಣಲ್ಲಿ ನಗುವಿದೆ, ನನ್ನ ಕಾಲಲ್ಲಿ ಕಣ್ಣಿದೆ…

ನನ್ನ ಇತ್ತೀಚಿನ ಬರಹದ ಲಿಂಕ್ ಇಲ್ಲಿದೆ, ಐರಾವತಿ ಬ್ಲಾಗಿನಲ್ಲಿ.

ನಿಮ್ಗೆ ಓದಿ ಅಂತ ರಿಕ್ವೆಸ್ಟ್ ಮಾಡ್ಕೊಳ್ಳೊದು ಯಾಕೆ ಗೊತ್ತಾ? ನಿಮ್ಮಗಳ ಪ್ರತಿಕ್ರಿಯೆಯಿಂದ ಮತ್ತಷ್ಟೊ ತಿದ್ದಿಕೊಳ್ಬಹುದು, ಬರಹದಲ್ಲಿ ಸುಧಾರಣೆ ಮಾಡ್ಕೊಳ್ಬಹುದು ಅಂತ. ನೀವ್ಯಾರೂ ಕ್ರಿಟಿಸೈಸ್ ಮಾಡೋದೇ ಇಲ್ಲ :-(

 

ಬ್ಯಾಕ್ ಟು ಬ್ಯಾಕ್ ಬೊಗಳೋ ಕಥೆಗಳು

ಸುಮ್ಮನೆ ಮೈ ಮೇಲೆ ಇರುವೆ ಬಿಟ್ಕೊಳ್ಳೋ ನನ್ನತನದ ವ್ಯರ್ಥ ಪ್ರಲಾಪ ಅರಿವಾದ ಹೊತ್ತಲ್ಲಿ ಒಂದರ ಹಿಂದೆ ಮತ್ತೊಂದು ನೆನಪಾದ ಕಥೆಗಳಿವು. ಅಥವಾ ಈ ಕಥೆಗಳು ನೆನಪಾದ ಬೆನ್ನಲ್ಲೇ ನನ್ನ ರೀತಿಯ ವ್ಯರ್ಥತೆ ಅರಿವಿಗೆ ಬಂತು ಅನ್ನಲೂಬಹುದು. ತಾವೋ ಹೇಳುತ್ತೆ, ಸುಮ್ಮನಿರು. ಪ್ರತಿಯೊಂದೂ ತನ್ನ ಪಾಡಿಗೆ ನಡೆಯುತ್ತೆ. ಹಾಗಂತ ನೀನು ನಿಜವಾಗ್ಲೂ ಸುಮ್ಮನಿರಬೇಕು ಮತ್ತೆ! ಕಾಲದ ಹರಿವಿಗೆ ನಿನ್ನ ಸಂಪೂರ್ಣವಾಗಿ ಕೊಟ್ಟುಕೋಬೇಕು ಮತ್ತೆ!

~ ಕಥೆ ೧ ~
ಅದೊಂದು ಬೀದಿ ನಾಯಿ.
ಅದು ತನ್ನದೇ ಅಂತ ಅಂದುಕೊಂಡಿರುವ ಬೀದಿಯ ಮೂಲೆಯೊಂದರಲ್ಲಿ ಮುದುಡಿಕೊಂಡು ಮಲಗಿರುತ್ತೆ. ಯಾರಾದರೂ ಅಪರಿಚಿತ ದಾರಿಹೋಕ ಹಾದು ಹೋದರೆ ವೀರಾವೇಶದಿಂದ ತನ್ನ ನಾಲ್ಕೂ ಕಾಲುಗಳನ್ನೂರಿ ನಿಂತು ತಲೆ ಎತ್ತರಿಸ್ಕೊಂಡು “ಊ…………………ಅವ್….ವವ್ವವೌ…..” ಅಂತ ಬೊಬ್ಬೆ ಹೊಡೆಯುತ್ತೆ.
ಬೀದಿ ಜನ ಬಾಗಿಲ ಸಂದಿ ಇಂದ ಹಣಕಿಯೋ ಕಿಟಕಿಯಾಚೆ ಕಣ್ತೂರಿಯೋ ನೋಡಿ ಬಯ್ದುಕೊಳ್ತಾರೆ, “ಛೆ! ಇದೆಲ್ಲೀ ಪ್ರಾರಬ್ಧ!!” ಆದರೆ ಅವರ ಹಣಕುತಲೆಗಳನ್ನ ಕಂಡು ನಾಯಿ ಅಂದುಕೊಳ್ಳುತ್ತೆ, “ಓಹೋ, ನನ್ನ ಬೀದಿ ಕಾಯೋ ಕೆಲಸ ಇವರಿಗೆ ಮೆಚ್ಚುಗೆಯಾಗಿದೆ!” ಗಡಿಯರದ ಮುರಿದ ಲೋಲಕದ ಹಾಗೆ ಬಾಲವನ್ನೊಮ್ಮೆ ಬೀಸಿ ಮತ್ತೆ ಮುದುಡಿ ಮಲಗಿಬಿಡುತ್ತೆ, ಬೆಳಗ್ಗೆ ಅವರೆಲ್ಲರ ಮನೆಗಳಿಂದ ಹೊರಬೀಳಬಹುದಾದ ತಂಗಳಿನ ಕನಸು ಕಾಣುತ್ತಾ.
ಆ ನಾಯಿಗೆ ಯಾರೂ ಹೇಳಿಲ್ಲ, ನೀನು ಈ ಬೀದಿಯನ್ನ ಕಾಯಬೇಕಂತ. ಆದರೂ ತಾನು ಸುಮ್ಮಸುಮ್ಮನೆ ಆ ಹೊಣೆಯನ್ನ ನೆತ್ತಿಗೇರಿಸಿಕೊಂಡಿದೆ. ಯಾರಿಗೂ ಬೇಕಿಲ್ಲ, ಆದರೂ ತನ್ನ ಕರ್ತವ್ಯ ಇದು ಅಂದುಕೊಂಡಿದೆ.
ಬೇಕು, ಬೇಡ; ಹೊತ್ತು, ಗೊತ್ತುಗಳಿಲ್ಲದ ಆ ಅಷಡ್ಡಾಳ ನಾಯಿ ಇನ್ನೂ ಕೂಗ್ತಲೇ ಇದೆ.

~ ಕಥೆ ೨ ~
ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ.
ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?”
ಪಾಪ ಕತ್ತೆ, ಎಷ್ಟಂದರೂ ಕತ್ತೆ. ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಬಡಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ.
ಕಳ್ಳಗಿಳ್ಳ ಬಂದಿದ್ರೆ ನಾಯಿ ಕೂಗಬೇಕಿತ್ತು. ಈ ಅಪರಾತ್ರೀಲಿ ಕತ್ತೆ ಯಾಕೆ ಬಡಕೊಳ್ತಿದೆ ಅಂತ ಸಿಟ್ಟೇ ಬಂದುಬಿಡತ್ತೆ. ಸೀದಾ ಎದ್ದುಬಂದು ಕತ್ತೆಯನ್ನ ಮನಸಾರೆ ಬಡಿದು, ಹೋಗಿ ಬಿದ್ದುಕೊಳ್ತಾನೆ.
ಕತ್ತೆ ಮತ್ತೆ ಮತ್ತೆ ಕತ್ತೆಯಾಗ್ತಲೇ ಇರುತ್ತೆ.

~
ಬಹಳ ಚಿಕ್ಕವಳಿರುವಾಗ ಓದಿದ್ದ ಈ ಕಥೆಗಳ ಆಕರ ನೆನಪಿಲ್ಲ. ಈ ಎರಡನೆಯದ್ದು ಹಿತೋಪದೇಶ ಕಾಮಿಕ್ ಬುಕ್ಕಲ್ಲಿ ಓದಿದ್ದು ಅಂತ ನೆನಪು.
ಓದಿದ್ದು ಹಾಹಾಗೇ ನೆನಪಿದ್ದರೂ ಅನುಸರಿಸುವ ಗೋಜಿಗೆ ಹೋಗಿದ್ದೆನಾ?  ಬೊಗಳುವ ಕರ್ತವ್ಯ ಯಾ ಜವಾಬ್ದಾರಿ ನನ್ನದು ಅನ್ನೋ ಹುಂಬ ನಂಬುಗೆಯಲ್ಲಿ…. ಮಾಡಬೇಕಾದವರು ತಮ್ಮ ಕರ್ತವ್ಯ ಮಾಡದೆ ಸುಮ್ಮಗಿರೋದ್ರಿಂದ ನಾನು ಮಾಡೋದು ಧರ್ಮ ಅನ್ನುವ ಪೊಳ್ಳು ಹೆಚ್ಚುಗಾರಿಕೆಯಲ್ಲಿ….
ನನ್ನದೇ ಮೂರ್ಖತನದ ವೇಳೆಯಲ್ಲಿ ಎದ್ದುನಿಂತ ಪ್ರಶ್ನೆಯಿದು. ಕೆಲವು ಸಲ ನಮಗೆ ಥಿಯರಿ ಗೊತ್ತಿರತ್ತೆ. ಅದರ ಸಾಕ್ಷಾತ್ಕಾರ ಆಗೋದು ಮಾತ್ರ ಯಾವುದೋ ಅನೂಹ್ಯ ಹೊತ್ತಿನಲ್ಲಿ.
ಈಗ ಅನುಭವಕ್ಕೆ ಬಂದಿದೆ ಅಂತ ನಂಬಿಕೊಂಡಿದ್ದೀನಿ. ಅನುಭವದ ತಿಳಿವು ಗಟ್ಟಿಯಾಗಿ ಉಳಿಯುತ್ತೆ ಅಂದುಕೊಂಡಿದ್ದೀನಿ.

ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು!

ನನ್ಮಗ ಬೆಳಗ್ಗಿಂದ ಪುಸ್ತಕ ಹಿಡಿದು ತನ್ನ ಪಾಡಿಗೆ ತಾನು ಓದ್ಕೊಳ್ಳತೊಡಗಿದ್ದ. ನನಗಾಗಲೇ ಸಣ್ಣಗೆ ಅನುಮಾನ ಶುರುವಾಗಿತ್ತು. ಏನೂ ಲಾಭವಿಲ್ಲದೆ ಅಂವ ಹಂಗೆಲ್ಲ ಅಜ್ಜಿ ಹತ್ರ ಬೈಸ್ಕೊಳ್ಳದೆ ಪುಸ್ತಕ ಹಿಡಿಯೋ ಜನ ಅಲ್ಲ.
ಮಧ್ಯಾಹ್ನ ಒಂದು- ಒಂದೂವರೆ ಅನ್ನೋ ಹೊತ್ತಿಗೆ ನನ್ನ ಅನುಮಾನ ನಿಜವಾಯ್ತು. ಮಾವ- ಅಳಿಯನ ಮ್ಯಾಚ್ ಫಿಕ್ಸಿಂಗ್ ನಡೆದು, ಇಂವ ಅವನ ಹತ್ತಿರ ಮ್ಯಾಚ್ ಆನ್ ಲೈನ್ ಮ್ಯಾಚ್ ನೋಡಬಹುದಾದ ಲಿಂಕ್ ಗುರುತು ಮಾಡಿಟ್ಟುಕೊಂಡಿದ್ದ. `ಬೇರೆ ಆಗಿದ್ದಿದ್ರೆ ಗ್ಯಾರಂಟಿ ನೋಡ್ತಿರ್ಲಿಲ್ಲ ಮುನ್ನೀ, ಇದು ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಲ್ವಾ…. ಅದಕ್ಕೆ…’ ಅಂತ ರಾಗ ಎಳೆದು, ಮಸ್ಕಾ ಹೊಡೆದ. ಸರಿ, ಇವನೊಬ್ಬ ಕಡಿಮೆ ಇದ್ದ ಅಂದ್ಕೊಂಡು, `ಎಲ್ಲಾ ಪ್ರಶ್ನೆ ಉತ್ರ ಒಪ್ಸಿದಾನೆ’ ಅನ್ನುವ ನನ್ನಮ್ಮನ ಶಿಫಾರಸಿನ ಮೇಲೆ ನಾನು ಸುಮ್ಮಗಾಗಬೇಕಾಯ್ತು.
~
ಕ್ರಿಕೆಟ್! ಮೊನ್ನೆ ಸಚಿನ್ನನ ನೂರನೇ ನೂರು ದಾಖಲೆ ಆದಾಗಿಂದ ಅದರ ಮಾತು ಮತ್ತೆ ಜೋರಾಗಿದೆ. ಅಥವಾ ನಾನು ಆ ಬಗೆಗಿನ ಮಾತುಗಳಿಗೆ ಕಿವಿ ತೆರೆದುಕೊಳ್ತಿದ್ದೀನಿ.
ಅದ್ಯಾಕೋ ನಂಗೆ ಮೊದಲಿಂದ್ಲೂ ಈ ಆಟಗಳು ದೂರ ದೂರ. ಹಾಗಂತ ನಾ ಏನೂ ಗೂಬೆ ಮರಿ ಹಾಗಿ ಮನೇಲಿ ಕೂರ್ತಿದ್ದವಳಲ್ಲ. ಚಿಕ್ಕವಳಿದ್ದಾಗ ಹುಡುಗರೊಟ್ಟಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹತ್ವಾರರ ಹಿತ್ತಲಿಂದ ಕಂಚಿ ಕಾಯಿ ಕದಿಯೋದು, ಕಲರ್ ಬಾಯಮ್ಮನ ಅಮಟೆ ಮರವನ್ನ ಧ್ವಂಸ ಮಾಡೋದು ಇತ್ಯಾದಿ ಸಾಹಸಗಳಲ್ಲಿ ಮುಳುಗಿರುತ್ತಿದ್ದವಳು. ಜತೆಗೆ ಸುಬ್ಬ ಸೂರಿಯೊಟ್ಟಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ‘ಕೊಲ್ಲೂರ್ ಬೆಂಗ್ಳೂರ್’ ಬಸ್ ಆಟ, ಗಾಳಿಪಟ, ಕೊಡ ದಬಾಕಿಕೊಂಡು ಈಜು ಕಲಿಯೋದು ಇತ್ಯಾದಿ ಮಂಗ ವಿದ್ಯೆಗಳನ್ನೂ ಎಗ್ಗಿಲ್ಲದೆ ನಡೆಸ್ತಿದ್ದವಳು. ನನ್ನಪ್ಪ ‘ಏನಮ್ಮ, ಶಟಲ್ ಕಾಕ್ ಗಿಟಲ್ ಕಾಕ್ ಆಡೋದ್ ಬಿಟ್ಟು, ಹೀಗೆ ಹುಡುಗರ ಜತೆ ಸುತ್ತುತೀಯಲ್ಲ’ ಅಂತ ಬಯ್ದು, ಬುದ್ಧಿ ಹೇಳಿದ್ದೆಲ್ಲ ನೀರಲ್ಲಿ ಹೋಮವಾಗ್ತಿತ್ತು. ಇಂಥಾ ಜಿಗಿಯುವ ಜೀವಕೋಶಗಳನ್ನ ಮೈತುಂಬ ಹೊತ್ತುಕೊಂಡಿದ್ದ ನಾನು ಮೂರಾರು ಗಂಟೆಗಳ ಕಾಲ ಟೀವಿ ಮುಂದೆ ಕುಂತು ‘ಸೋಮಾರಿಗಳ ಆಟ’ ನೋಡೋಕಾದರೂ ಹೇಗೆ ಸಾಧ್ಯವಿತ್ತು ಹೇಳಿ!? (ಬಿಡ್ತು… ಬಿಡ್ತು… ಬಿಡ್ತು… ಕ್ಷಮಿಸ್ಬಿಡಿ)
ಆದರೂ ನಾನೊಂದು ಸಲ ಕ್ರಿಕೆಟ್ ನೋಡಿಬಿಟ್ಟಿದ್ದೆ. ಅದು ಕೂಡಾ ಪೂರಾ ಮ್ಯಾಚು. ಬಹುಶಃ ನಾನು ಹತ್ತೋ ಹನ್ನೊಂದೋ ಕ್ಲಾಸಿನವಳು ಆಗ. ವಲ್ಡ್ ಕಪ್ ನಡೀತಿತ್ತು, ಇಂಡಿಯಾ ಪಾಕಿಸ್ತಾನ ಮ್ಯಾಚು ಬಿದ್ದಿತ್ತು. ಒಂಥರಾ ಯುದ್ಧ ಘೋಷಣೆಯಾದಂಥ ವಾತಾವರಣ. ಮೂರು ದಿನದಿಂದ ಅಣ್ಣಂದಿರು, ಕ್ಲಾಸ್ ಮೇಟ್ ಗಳು ಅದರ ಬಗ್ಗೆಯೇ ಮಾತಾಡೀ ಮಾತಾಡೀ ಈ ಮ್ಯಾಚ್ ನೋಡದವರು ದೇಶ ದ್ರೋಹಿಗಳು ಅನ್ನುವಂಥ ಭಾವ ಬಿತ್ತಿಬಿಟ್ಟಿದ್ರು. ಅದೇನು ಪುಣ್ಯವೋ, ನಾನು ಅವತ್ತಿಡೀ ಕುಂತು ನೋಡಿದ್ದ ಮ್ಯಾಚಲ್ಲಿ ಭಾರತ ಗೆದ್ದುಬಿಟ್ಟಿತ್ತು! ಖುಷಿಯಾದ ನನ್ನ ಕಸಿನ್, `ಗಾತಿ, ಇನ್ಮೇಲೆ ಭಾರತ- ಪಾಕಿಸ್ತಾನ ಮ್ಯಾಚ್ ಇದ್ದಾಗೆಲ್ಲ ನೀನು ನೋಡು ಆಯ್ತಾ? ಆಗ ನಾವು ಗೆಲ್ತೀವಿ’ ಅಂದು, ಹತ್ತು ರೂಪಾಯಿನ ಡೈರಿಮಿಲ್ಕ್ ಕೊಡಿಸಿದ್ದ. ಭಾರತವನ್ನ ಗೆಲ್ಲಿಸಲಿಕ್ಕೆ ನೋಡ್ತೀನೋ ಇಲ್ವೋ, ಡೈರಿ ಮಿಲ್ಕಿಗೋಸ್ಕರವಾದ್ರೂ ನಾ ತಪ್ಸೋದಿಲ್ಲ ಅಂತ ಅವನಿಗೆ ಮಾತು ಕೊಟ್ಟು ನಾನು `ದೊಡ್ಡ ಜನ’ ಆಗಿಬಿಟ್ಟಿದ್ದೆ!!
~
ಈವತ್ತು ಇದೆಲ್ಲ ನೆನಪಾಗಿದ್ದು ನನ್ಮಗನ ದೆಸೆಯಿಂದ.
ಅಂವ ಮ್ಯಾಚ್ ನೋಡ್ತಿದ್ನಾ, ಆಯಾ ಓವರಿನ ಸುಖ ದುಃಖಗಳನ್ನ ಹಂಚ್ಕೊಳ್ಳೋಕೆ ಅವಂಗೊಂದು ಕಿವಿ ಬೇಕಾಗಿತ್ತು. ಮೊನ್ನೆಮೊನ್ನೆ ಇನ್ನೂ ಆಫೀಸಲ್ಲಿ ಗೆಳೆಯರೊಬ್ಬರು ನಡೆಸಿದ ಕ್ರಿಕೆಟ್ ಕ್ವಿಜ್ಜಲ್ಲಿ ‘ಸ್ಟಂಪ್ ಅಂದ್ರೆ ಕಾಲಿಗೆ ಕಟ್ಕೊಳ್ತಾರಲ್ಲ, ಅದು…’ ಅಂದು ಕ್ಲೀನ್ ಬೋಲ್ಡ್ ಆಗಿದ್ದ ನನ್ನ ಕಥೆ ಅವಂಗೆ ಗೊತ್ತಿತ್ತು. ಅದಕ್ಕಾಗಿ ನನ್ನನ್ನ ಲೆಕ್ಕಕ್ಕೇ ಇಡದೆ ಹೊತ್ತು ಹೊತ್ತಿಗೂ ಹುಷಾರಿಲ್ಲದೆ ರೂಮಲ್ಲಿ ಮಲಗಿದ್ದ ನನ್ನಮ್ಮನ ಬಳಿಗೋಡಿ ‘ಅಜ್ಜೀ… ಪಾಕಿಸ್ತಾನ ಮುನ್ನೂರ್ ದಾಟ್ತು…’ ‘ಅಜ್ಜೀ…. ಸಚಿನ್ ಸೂಪ್ಪರು…’ ಅಂತೆಲ್ಲ ಕಮೆಂಟರಿ ಕೊಡ್ತಾ ಇದ್ದ. ಅಮ್ಮನೂ ಕೈಲೇನೂ ಸಾಗದೆ ಇದ್ದರೂ ಅವನಿಗೆ ಹೂಂ ಗುಟ್ಟುತ್ತ ಆ ಖುಷಿಯಲ್ಲೆ ಹುಷಾರಾಗುತ್ತ ಇದ್ದಳು.
ಈ ನಡುವೆ ಅಮ್ಮನ ಕ್ರಿಕೆಟ್ ಪ್ರೇಮವನ್ನ ಹೇಳಿಬಿಟ್ಟರೆ ಒಳ್ಳೇದು.
ನನ್ನಮ್ಮನಿಗೆ ಕ್ರಿಕೆಟ್ ಅಂದ್ರೆ ವಿಪರೀತ ಗೀಳು. 1984ರಲ್ಲಿ ನಮ್ಮನೆಗೆ ಈಸಿ ಟೀವಿ ತಂದಾಗಿನಿಂದ ಅಂಟಿಕೊಂಡಿದ್ದ ಈ ಸಂಭ್ರಮ ಈ ದಿನದ ತನಕವೂ ಅಷ್ಟೇ ತೀವ್ರತೆ ಉಳಿಸ್ಕೊಂಡಿದೆ. ಈ ಗವಾಸ್ಕರ್, ಶ್ರೀಕಾಂತ್, ಬಿನ್ನಿ, ಕಪಿಲ್, ಮನೋಜ್ ಪ್ರಭಾಕರ್, ಶ್ರೀನಾಥ್, ವೆಂಕಿ (!?), ಸಿದ್ದು, ರವಿ ಶಾಸ್ತ್ರಿ ಇತ್ಯಾದಿ ಹೆಸರುಗಳನ್ನೆಲ್ಲ ನಾನು ಮೊದಲು ಕೇಳಿದ್ದು ಅವಳ ಬಾಯಿಂದಲೇ.
ಗವಾಸ್ಕರನನ್ನ ಕುಳ್ಳ ಅಂತಲೂ ರವಿಯನ್ನ, ಮನೋಜನನ್ನ ಸ್ಮಾರ್ಟ್ ಅಂತಲೂ ಕಮೆಂಟ್ ಮಾಡಿಕೊಂಡು ನೋಡ್ತಿದ್ದ ಅಮ್ಮನಿಗೆ ಕ್ರಿಕೆಟ್ ನೂರಕ್ಕೆ ನೂರು ಅರ್ಥವಾಗಿತ್ತು ಅನ್ನೋದರ ಬಗ್ಗೆ ನಂಗೆ ಈಗಲೂ ಗುಮಾನಿ ಇದೆ. ಅವಳಿಗೆ ಗವಾಸ್ಕರ್ ಮೇಲೆ ಜಾಸ್ತಿ ಪ್ರೀತಿ. ಅವನ ಅಗಾಲ ಹ್ಯಾಟು ಇಷ್ಟ.
ರವಿ ಶಾಸ್ತ್ರಿಗೆ ಅಮೃತಾ ಸಿಂಗ್ ಕೈಕೊಟ್ಟಾಗ ಅಮ್ಮನಿಗೆ ಹೇಗೋ ಗೊತ್ತಾಗಿಬಿಟ್ಟು ಅವಳಿಗೆ ಹಿಡಿ ಶಾಪ ಹಾಕಿದ್ದಳು. ಅಜರುದ್ದೀನನ ಮ್ಯಾಚ್ ಫಿಕ್ಸಿಂಗ್ ಗಿಂತ ಬಿಜಲಾನಿ ಜತೆಗಿನ ಅಫೇರೇ ಹೆಚ್ಚು ಮುಖ್ಯವಾಗಿತ್ತು ಅವಳಿಗೆ. ಗವಾಸ್ಕರ್ ಮೌಸಮಿ ಚಟರ್ಜಿ ಅನ್ನುವ ಅಂದಿನ ಚೆಂದದ ಹೀರೋಇನ್ ಳ ಪ್ರಪೋಸಲ್ ಅನ್ನು ತಿರಸ್ಕರಿಸಿದಾಗಲಂತೂ ‘ಎಂಥಾ ಸಜ್ಜನ… ಅವಳಂಥಾ ಸ್ಟಾರನ್ನೆ ಬೇಡ ಅಂದುಬಿಟ್ಟ…’ ಅಂತ ಸಡಗರದಿಂದ ಕೊಂಡಾಡಿದ್ದಳು.
ಹೀಗೆ ನಮ್ಮ ಸ್ಕೂಲ್ ದಿನಗಳ ಕಾಲದಲ್ಲಿ ಗಂಟೆಗಟ್ಟಲೆ ಉಗುರು ಕಚ್ಚುತ್ತ ಕ್ರಿಕೆಟ್ ನೋಡ್ತಿದ್ದ, ಕ್ರಿಕೆಟರ್ ಗಳ ಬದುಕಿನ ವಿವರಗಳನ್ನ ಚಾಚೂ ತಪ್ಪದೆ ಕಲೆ ಹಾಕ್ತಿದ್ದ ಅಮ್ಮ, ಆಮೇಲೆ ಉಗುರು ಕಚ್ಚೋದು ಬಿಟ್ಟರೂ ಆ ಆಸಕ್ತಿಗಳನ್ನ ಬಿಟ್ಟಿರಲಿಲ್ಲ.
ಇಂಥಾ ಅಮ್ಮ ಇವತ್ತು ಸಂಜೆತನಕ ಸುಮ್ಮನಿದ್ದು, ಮೊಮ್ಮಗನ ಮೈಕಡಿತ ನೋಡಲಾಗದೆ ಎದ್ದುಬಂದು ಕೂತಳು, ಭಾರತದ ಬ್ಯಾಟಿಂಗ್ ಅಂದುಕೊಂಡು. ಸಚಿನ್ನನ ಬಹುಶಃ 94ನೆಯ 50ನ್ನು ನೋಡಿ ಖುಷಿಯಾದಳು. ವಿರಾಟನ ಬ್ಯಾಟಿಂಗಲ್ಲಿ ಮೈಮರೆತಳು.
ಕೊನೆಗೆ ಮೆಡಿಸನ್ನಿಗೆ ನಿದ್ದೆ ತೂಗಿ ಬಂದು ಮಲಗಲು ಹೊರಟಾಗ, ‘ಪಾಪ, ಆ ಮಗು ಪಕ್ಕ ಕೂತು ನೋಡಬಾರ್ದೇನೆ? ಒಂದೇ ನೋಡ್ತಿದೆ ಮುಂಡೇದು’ ಅಂತ ಕಿವಿಯೊಂದು ಹಿಂಡದೆ, ಹೆಚ್ಚೂಕಡಿಮೆ ಗದರುವ ದನಿಯಲ್ಲಿ ಆದೇಶ ಕೊಟ್ಟಳು.
ನನಗೂ ಚೂರು ಕುತೂಹಲ ಕೆರಳಿದಂತಾಗಿ ಮಗನ ಪಕ್ಕ ಕುಂತರೆ…. ಸಚಿನ್ ಔಟಾಗಿಬಿಡಬೇಕಾ!?
ತಗೋ, ಶುರು… ಸ್ವಲ್ಪ ಹೊತ್ತಿಗೇ ಮತ್ತೊಬ್ಬನೂ ಔಟಾದ. ಕಡಿಮೆ ಬಾಲಿಗೆ ಜಾಸ್ತಿ ರನ್ ಬೇಕಿತ್ತು. ನಾನು ಸೆಖೆ ಅಂತ ಚಿಕ್ಕ ಬ್ರೇಕ್ ತಗೊಂಡು (ಒಳ ಕಾರಣ-ಆಟ ನೋಡಲು ಬೋರಾಗಿ) ಹೊರಗೆ ಹೋದೆ. ಹಾಗೆ ಹೋದ ಐದು ನಿಮಿಷದಲ್ಲೆ ಎರಡ್ಮೂರು ಫೋರು, ಒಂದು ಸಿಕ್ಸು…
ಆಹ್! ಅಷ್ಟು ಹೊತ್ತೂ ಆಕಾಶ ಹೊತ್ತ ಹಾಗೆ ಕುಂತಿದ್ದ ನನ್ನ ಮಗ ಕುಣೀತಾ ಓಡಿ ಬಂದ. ಕೆನ್ನೆಗೊಂದು ಮುತ್ತು ಕೊಟ್ಟು, ‘ಮುನ್ನೀ, ನೀನು ಇಲ್ಲೇ ಕೂತಿರು ಆಯ್ತಾ? ನೀನು ಒಳಗ್ ಬಂದ್ರೆ ಔಟಾಗ್ತಾರೆ. ನೀನು ಹೊರಗಿದ್ರೆ ಫೋರು, ಸಿಕ್ಸು…’ ಅಂತ ಹಲ್ಲು ಕಿರಿದ.
ನನಗೆ ಗಲಿಬಿಲಿಯಾಗಿಹೋಯ್ತು! ಸುಧಾರಿಸ್ಕೊಳ್ಳಲು ಸುಮಾರು ಹೊತ್ತೇ ಬೇಕಾಯ್ತು. ಏನೋ ಹೇಳತ್ತೆ ಮಳ್ಳು ಮಗು ಅಂದುಕೊಂಡು ಒಳಬಂದರೆ, ಮೂತಿ ಉದ್ದ ಮಾಡ್ಕೊಂಡು, ‘ಪ್ಲೀಸ್… ಕಣೇ….’ ಅಂತ ಅಂಗಲಾಚಿದ.
ಮಗನ ಕೋರಿಕೆ (ಅರ್ಥಾತ್ ಆದೇಶ)ಯಂತೆ ಆಟ ಮುಗಿಯೋತನಕ ತಣ್ಣಗೆ ಕೂತುಕೊಂಡೆ, ಹೊರಗೆ ನಾನೊಬ್ಬಳೇ.
ಒಳಗೆ ಅವನ ಕುಣಿದಾಟ, ಸುತ್ತ ಮುತ್ತ ಬೀದಿಗಳಿಂದ ಸಿಡಿದ ಪಟಾಕಿ ಸದ್ದು- ಮ್ಯಾಚ್ ಗೆದ್ದುಮುಗೀತು ಅನ್ನೋದನ್ನ ಸಾರಿ ಹೇಳಿದವು.
ನಾನೂ ನನ್ನ ಮಗನೂ, ಅವನ ಖುಷಿಯಲ್ಲಿ ಭಾಗೀದಾರಳಾಗಲು ಎದ್ದುಕುಳಿತ ಅಮ್ಮನೂ ಕೆಂಪನೆ ಕೋಕಮ್ ಜ್ಯೂಸ್ ಮಾಡ್ಕೊಂಡು ‘ಚಿಯರ್ಸ್’ ಹೇಳಿ ಕುಡಿದೆವು.
~
ಎಲ್ಲ ಮುಗಿದ ಮೇಲೆ, ಕ್ರಿಕೆಟ್ ಮತ್ತು ಹೆಣ್ಮಕ್ಕಳ ನಡುವಿನ ನನ್ನ ಅಬ್ಸರ್ವೇಷನ್ನು ಲೆಕ್ಕ ಹಾಕುತ್ತಾ ಕೂತೆ. ಆಗ ಸಿಕ್ಕಿದ್ದಿಷ್ಟು:
(ವಿ.ಸೂ: ಇಲ್ಲಿ ಯಾವುದನ್ನೂ ಜನರಲ್ ಆಗಿ ಹೇಳಿಲ್ಲ…)
* ನಮ್ಮ (ಹೆಣ್ಣುಮಕ್ಕಳ) ಪಾಲಿಗೆ ಇದೊಂದು ಗ್ಲಾಮ್ ಗೇಮ್
* ಕ್ರಿಕೆಟ್ ಅಂದ್ರೆ ಪ್ರಾಣ ಬಿಡುವಂತೆ ಆಡೋ ಹೆಣ್ಣುಮಕ್ಕಳೂ ಕೂಡಾ ಹೆಂಗಸರ ಕ್ರಿಕೆಟ್ಟನ್ನ ನೋಡೋದಿಲ್ಲ :-(
* ಹುಡುಗರಿಗೆ ಇಷ್ಟ ಅನ್ನೋ ಕಾರಣಕ್ಕೇ ಕ್ರಿಕೆಟ್ಟನ್ನ ಇಷ್ಟಪಡೋ ಹುಡುಗೀರು ಸಾಕಷ್ಟಿದ್ದಾರೆ
* ಜಾಹೀರಾತುಗಳಲ್ಲಿ ನಟರಷ್ಟೇ ಜನಪ್ರಿಯ ಈ ಕ್ರಿಕೆಟ್ ಹೀರೋಗಳು. ಅಂದ ಮೇಲೆ….
* ಯಾರಾದರೂ ಕ್ರಿಕೆಟರ್ ಬಗ್ಗೆ ಆತ ಯಾಕಿಷ್ಟ ಅಂತ ಹುಡುಗೀರನ್ನ ಕೇಳಿ ನೋಡಿ. ‘ಹೀ ಇಸ್ ಸೋ ಕೂಲ್’ ‘ವಾವ್! ಹ್ಯಾಂಡ್ ಸಮ್…’ ‘ವೆರಿ ಡೀಸೆಂಟ್’ ಅನ್ನುವ ಉತ್ತರಗಳೇ ಹೆಚ್ಚಿಗೆ ಸಿಗೋದು!!

 

ಮಾರ್ಚ್ ಎಂಟು ಮತ್ತು ಏಳರಾಟ

ಈ ‘ಹೆಣ್ಣುದಿನ’ ನಂಗಿಷ್ಟ ಆಗೋದು ಎರಡು ಕಾರಣಕ್ಕೆ. ನಾನು ಹೆಣ್ಣು ಅನ್ನೋ ಹೆಮ್ಮೆಗೆ, ನಾನು ಬದುಕು ಕಟ್ಟಿಕೊಂಡ ದಿನ ಅನ್ನೋ ಖುಷಿಗೆ.
ಏಳು ವರ್ಷ ಹಿಂದಿನ ಮಾತು. ಮಾರ್ಚ್ 8ರ ರಾತ್ರಿ ತೀರ್ಥಹಳ್ಳಿಯನ್ನ ಕಣ್ತುಂಬಿಕೊಳ್ತಾ ಊರು ಬಿಟ್ಟಾಗ, ಇದು ಇಂಥಾ ದಿನ ಅಂತೇನೂ ಗೊತ್ತಿರಲಿಲ್ಲ. ಆಮೇಲೆ ತಿಳಿದುಕೊಂಡ ಹಾಗೆ, ಈ ದಿನವನ್ನ ಶುರು ಮಾಡಿದ್ದು ‘ದುಡಿಯೋ ಹೆಣ್ಣುಮಕ್ಕಳ ದಿನ’ ಅಂತಲಂತೆ. ಇದೇ ದಿನ ನಾನೂ ದುಡಿಯುವ ಹೆಣ್ಣಾಗಲು ಹೊರಟಿದ್ದು, ಅದು ಕೂಡಾ ಸೇರಿದ್ದ ಮನೆಮಂದಿಯ ಕಾಟ, ಆ ಜನಗಳ ಧೋರಣೆಗಳನ್ನ ತಣ್ಣಗೆ ತಿರಸ್ಕರಿಸಿ ಹೊರಟಿದ್ದು, ಹತ್ತಾರು ಆರೋಪಗಳು- ಸಮಾಜದ ಕಟ್ಟುಪಾಡಿನ ಹದಗಳನ್ನೂ ಮೀರಿ ಹೊಸ್ತಿಲು ದಾಟಿದ್ದು…. ಈ ಎಲ್ಲವೂ ಮಾರ್ಚ್ ಎಂಟರ ಜತೆ ತಳಕು ಹಾಕಿಕೊಂಡಿದ್ದು ಒಂದು ಪವಾಡ.
ಆರೂ ಮುಕ್ಕಾಲು ವರ್ಷಗಳ ಮೆಗಾ ಸೀರಿಯಲ್ ನಂಥ ಬದುಕು ಎಲ್ಲ ಬಣ್ಣಗಳನ್ನೂ ತೋರಿಸಿಬಿಟ್ಟಿತ್ತು. ಕನಸಿನ ಹಾಗೆ ಕೆಲಸ ಸಿಕ್ಕು ಬೆಂಗಳೂರಿನತ್ತ ಮುಖ ಮಾಡಿದ್ದೆ. ಅವತ್ತು ಶಿವರಾತ್ರಿ ಬೇರೆ. ಬಸ್ಸಲ್ಲಿ ನನಗೆ ಗಡದ್ದು ನಿದ್ದೆ. ಅದು ಬಂದಿದ್ದು ನಿರುಮ್ಮಳಕ್ಕೋ, ಭಯ ತಪ್ಪಿಸ್ಕೊಳ್ಳಲಿಕ್ಕೋ ಅಂತ ನೆನಪಾಗ್ತಾ ಇಲ್ಲ. ಮೊದಲ ಬೆಂಚಲ್ಲೇ ಕೂತು ನೋಟ್ಸಿನ ಬದಲು ಗೀಚುತ್ತಿದ್ದ ಕಥೆ ಕವಿತೆಗಳೇ ಈಗ ಕರೆದು ಕೆಲಸ ಕೊಡಿಸಿದ್ದವು. ಬಹುತೇಕ ಎಲ್ಲ ‘ಓಡಿ ಹೋದವರ’ ಹಾಗೆ ನನ್ನ ಪರ್ಸಲ್ಲಿ ಇದ್ದುದು ಆರುನೂರು ರುಪಾಯಿಗಳಷ್ಟೆ. ಅದು ಕೂಡಾ ಯಾವುದೋ ಅನುವಾದದಿಂದ ಸಿಕ್ಕಿದ್ದ ರೆಮ್ಯುನರೇಷನ್ನು.
~
ಜೀವಮಾನದಲ್ಲೆ ಮೊದಲ ಸಾರ್ತಿ ಅಷ್ಟು ದೂರದ ಪ್ರಯಾಣ ನಾನೊಬ್ಬಳೇ ಮಾಡಿದ್ದೆ. ಮೆಜಸ್ಟಿಕ್ ತಲುಪಿಕೊಂಡಾಗ ಅಕ್ಷರಶಃ ಅನಾಥೆ.*1 ನನ್ನ ಕರೆದೊಯ್ದು ಹಾಸ್ಟೆಲ್ ಮುಟ್ಟಿಸಬೇಕಿದ್ದ ಅಣ್ಣನ ಬಸ್ ಲೇಟಾಗಿತ್ತು. ಅವನು ಭಾಷಣ ಮಾಡೋಕೆ ಗುಲ್ಬರ್ಗಕ್ಕೋ ಬಿಜಾಪುರಕ್ಕೋ ಹೋಗಿದ್ದ ನೆನಪು. ಒಂದು ಗಂಟೆಗೂ ಹೆಚ್ಚು ಕಾಲ ಬೆಂಚೊಂದರ ಮೇಲೆ ಕಳೆದಿದ್ದೆ. ಅಣ್ಣನ ನಗುಮುಖ ನೋಡ್ತಿದ್ದ ಹಾಗೇ ಆಯಾಸ ನೆಗೆದುಬಿದ್ದು ಹೋಗಿತ್ತು. ಸ್ವಲ್ಪ ಹೊತ್ತಿನಲ್ಲೇ ನಾನು ಅವನ ಜತೆ ಸುಕೃಪಾ ಎದುರು ನಿಂತಿದ್ದೆ.
ಈಗ ನೆನೆಸ್ಕೊಂಡರೆ ಮಜಾ ಅನ್ನಿಸತ್ತೆ. ನನ್ನ ಬದುಕಲ್ಲಿ ಎಷ್ಟೆಲ್ಲ ಕಾಕತಾಳೀಯಗಳು!
ರಸ್ತೆಯ ಈ ತುದಿಯಿಂದ ಆ ತುದಿಗೆ ನಾಲ್ಕು ಸಾರ್ತಿ ದಾರಿ ತಪ್ಪುವ ನನಗೆ ಕೆಲಸದ ಜಾಗವೆಲ್ಲೋ, ಹಾಸ್ಟೆಲಿಂದ ದೂರವೆಷ್ಟೋ ಅನ್ನುವ ಆತಂಕ. ಆಗಿನ್ನೂ ಇಪ್ಪತ್ತಮೂರು ವರ್ಷ ದಾಟುತ್ತಿದ್ದ ನನಗಿಂತ ಚಿಕ್ಕ ವಯಸ್ಸಿನ ಅಣ್ಣನಿಗೂ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಮರಿಯಪ್ಪನ ಪಾಳ್ಯ ಅಂತ ಹುಡುಕಿಕೊಂಡು ಹೋದರೆ, ಅರ್ರೆ! ನಡೆಯೋಕೆ ಹೆಚ್ಚೆಂದರೆ ಹತ್ತು ನಿಮಿಷದ ದಾರಿ, ಗಾಯತ್ರಿ ನಗರದಿಂದ!!
~
ಒಂದು ದಿನ ರೆಸ್ಟ್ ಪಡೆದು, ಮಾರ್ಚ್ 10ರಿಂದ ನನ್ನ ದುಡಿಮೆ ಶುರುವಾಗಿತ್ತು. ಹಾಸ್ಟೆಲಿಂದ ಬಂಡಾಯವೆದ್ದು ಹುಡುಗಿಯರ ಜತೆ ಮನೆ ಮಾಡಿ, ಅವರೆಲ್ಲ ಮದುವೆಯಾದ ಮೇಲೆ ಒಬ್ಬಳೇ ಇರುತ್ತಾ- ಚೂರು ಚೆಂದದ ಮನೆ, ಚೂರು ದೊಡ್ಡ ಮನೆ; ಅಮ್ಮನ್ನ ಕರೆತಂದು, ಮಗನ್ನ ಕರೆಸ್ಕೊಂಡು ಮತ್ತಷ್ಟು ಸವಲತ್ತುಗಳ ಮತ್ತಷ್ಟು ದೊಡ್ಡ ಮನೆ… ಆಫೀಸಿಂದ ಮಿನಿಮಮ್ ದೂರ, ಹತ್ತು ರುಪಾಯಿ ಹೆಚ್ಚು… ದಿನಕ್ಕೆ ಒಟ್ಟು ಅರವತ್ತು ರುಪಾಯಿ ಅಂತರ… ಹೀಗೆ.
ಮೊದಲ ಕೆಲಸದ ಬಾಸ್ ರಗಳೆಗೆ ತಲೆಕೆಟ್ಟು ಬೇರೆ ಕೆಲಸ ಸೇರಿ; ಅದನ್ನೂ ಬಿಟ್ಟು ಮತ್ತೊಂದಕ್ಕೆ ಹಾರಿ; ಬೆಂಗಳೂರು ಸೇರಿದ 7 ವರ್ಷದಲ್ಲಿ ಈಗಿನದ್ದು 6ನೇ ಆಫೀಸು. ಉಹು… ಓಡಿದ್ದು ಸಾಕು ಅನ್ನಿಸ್ತಿದೆ. ಇಲ್ಲಿ ಒಂದಷ್ಟು ಕಾಲ ನಿಲ್ಲುವ ನಿರ್ಧಾರ.
~
ಹಹ್ಹ… ಇದನ್ನೆಲ್ಲ ಬರೀತಾ ಇದೇನು ನನ್ನ ಚರಮಗದ್ಯ ಬರೆದುಕೊಳ್ತಾ ಇದ್ದೀನಾ ಅನ್ನಿಸಿ ನಗು ಬರ್ತಾ ಇದೆ. ಆದರೂ ಇವತ್ತೇನೋ ಹುಕ್ಕಿ. ಎಲ್ಲವನ್ನೂ ಹೀಗೆ ಬರೆದುಕೊಂಡು ನನಗೆ ನಾನೆ ಓದಿಕೊಳ್ಳೋಕೆ. ಈ ನಡುವೆ ಒಂದಷ್ಟು ಪುಸ್ತಕ, ರಗಳೆ, ರೂಮರ್ರು…
ನನ್ನ ಪಾಡಿಗೆ ನಾನು ಹರಾ ಶಿವಾ ಇರುವಾಗ ಊರಲ್ಲಿ ನಾನು ಯಾರೊಟ್ಟಿಗೋ ಓಡಿ ಹೋದ, ಹುಚ್ಚಾಸ್ಪತ್ರೆಯಲ್ಲಿರುವ, ಸತ್ತೇಹೋಗುವ ಕೆಟ್ಟ ಕಾಯಿಲೆ ಬಂದಿದೆ ಅನ್ನುವ ಥರಾವರಿ ಗಾಸಿಪ್ಪುಗಳು, ಅವನ ಮನೆಯಿಂದ ಹುಟ್ಟಿಕೊಂಡು ಊರು ತುಂಬ ಮಾತಿನ ಮಕ್ಕಳು. ಅವಾದರೂ ಎಷ್ಟು ದಿನ? ಈ ಮಾತಿನ ಮಕ್ಕಳಿಗೆ ಸರಿಯಾದ ಪುಷ್ಟಿ ಸಿಕ್ಕದೆ ಅವೆಲ್ಲ ಸತ್ತೂ ಹೋಗಿದ್ದಾವೆ ಅಂದುಕೊಂಡಿದ್ದೀನಿ ನಾನು.
~
ಇವತ್ತು ಮಾರ್ಚ್ 8. ಮೊದಲೇ ಹೇಳಿದೆನಲ್ಲ. ನನಗೆ ಇದು ಎರಡು ಥರದಲ್ಲಿ ಮಹತ್ವದ ದಿನ. ಈ ಸಾರ್ತಿಯೇ ಯಾಕೆ ಇದೆಲ್ಲ ಅಂದ್ರೆ, ಈ ‘ಏಳು’ ಅನ್ನೋ ಸಂಖ್ಯೆ ನನ್ನ ಬದುಕಲ್ಲಿ ಸಾಕಷ್ಟು ಆಟ ಆಡಿದೆ (ಏಳರಾಟದ ಶನಿ ಥರ :-) ) ಇದು ನನ್ನ ನೆಮ್ಮದಿಯ ಬದುಕಿನ ಏಳನೇ ವರ್ಷದ ಸೆಲೆಬ್ರೇಷನ್ನು ಅಂದುಕೊಳ್ಬಹುದು. ಜೊತೆಗೆ, ನನ್ನ ‘ಆಲ್ ಮೆನ್ ಆರ್ ಬಾಸ್ಟರ್ಡ್ಸ್’ ನಂಬಿಕೆಯೂ ಬದಲಾಗಿದೆ. ನಾನು ಬದುಕಿದ್ದೀನಿ ಅಂದ್ರೆ ಅದಕ್ಕೆ ಯಾರು ಕಾರಣಾನೋ ಆ ಪುಣ್ಯಾತ್ಮ ನನ್ನ ಅಣ್ಣ ಚಕ್ರವರ್ತಿ ಇದ್ದಾನಲ್ಲ, ಅವನ ಒಡನಾಟದಲ್ಲಿದ್ದ ಮೇಲೂ ಹಾಗೆ ಜನರಲೈಸ್ ಮಾಡೋದು ಹೇಗೆ ಸಾಧ್ಯ? ಮತ್ತೆ ನನಗೆ ಮಗನೊಬ್ಬ. ಸಾಲದ್ದಕ್ಕೆ ನನಗೆ ಬ್ಲಾಗಿನಲ್ಲಿ, ಜೀಮೇಲು, ಫೇಸ್ ಬುಕ್ಕು, ಆಫೀಸು- ಎಲ್ಲ ಕಡೆ, ಬಹಳ ಕಡೆ ಅಸಂಖ್ಯಾತ ಅಣ್ಣ ತಮ್ಮಂದಿರು, ಗೆಳೆಯರು… ಅವರೆಲ್ಲರ ಪ್ರೀತಿ- ನಡವಳಿಕೆ ನೋಡಿದ ಮೇಲೂ…
ಹಾಗೇನೇ, ‘ರೂಹಿಲ್ಲದ ಕೇಡಿಲ್ಲದ’ ಅವನೆಂಬ ಅವನೊಬ್ಬ ಸಜೀವ ಸದೇಹ ಇರುವಾಗಲೂ…
ಮನಸ್ಸು ತಿಳಿಯಾಗದೆ ಇರೋಕೆ ಹೇಗೆ ಸಾಧ್ಯ?
~
ಕೊನೆಗೊಂದು ಕಥೆ ಹೇಳಿ ಮುಗಿಸೋಣ ಅಂತ….
ಒಂದು ಕಾರವಾನ್ ಒಂದೂರಿಂದ ಮತ್ತೊಂದೂರಿಗೆ ಮರಳುಗಾಡಲ್ಲಿ ಹೊಗ್ತಾ ಇರತ್ತೆ. ಮುಸ್ಸಂಜೆ ಆಗ್ತಿದ್ದ ಹಾಗೇ ಒಂದು ಕಡೆ ಬೀಡು ಬಿಡಬೇಕಾಗತ್ತೆ. ಅವರ ಬಳಿ 7 ಒಂಟೆಗಳಿವೆ. ಆದ್ರೆ, ಇರೋದು ಆರೇ ಗೂಟ, ಆರೇ ಹಗ್ಗ. ರಾತ್ರಿ ಒಂಟೆ ಏನಾದ್ರೂ ತಪ್ಪಿಸ್ಕೊಂಡ್ರೆ ದೇವರೇ ಗತಿ!
ಅಲ್ಲೇ ಒಂದ್ಕಡೆ ಒಬ್ಬ ಸಾಧು ಬಾಬಾ ಕೂತಿರ್ತಾನೆ. ಅವನ ಹತ್ರ ಅವರಲ್ಲೊಬ್ಬ ಹೋಗಿ ಕೇಳ್ತಾನೆ, ‘ಹಿಂಗಿಂಗಾಗಿದೆ, ಏನ್ಮಾಡೋದೀಗ?’
ಬಾಬಾ ಹೇಳ್ತಾನೆ, ‘ಆ ಏಳನೇ ಒಂಟೆಯ ಸುತ್ತ ಮುತ್ತ ಓಡಾಡಿ ಅದನ್ನ ಕಟ್ತಾ ಇರೋ ಹಾಗೆ ನಟನೆ ಮಾಡಿ ಸಾಕು’
ಹಂಗೇ ಮಾಡಿ ಮಲಗ್ತಾರೆ. ಬೆಳಗಾಗತ್ತೆ. ಸದ್ಯ! ಸುಳ್ಳು ಗೂಟದ ಒಂಟೆ ಪೆದ್ದರ ಹಾಗೆ ಮಲಕ್ಕೊಂಡೇ ಇದೆ!!
ಉಳಿದವನ್ನೆಲ್ಲ ಬಿಚ್ಚಿ, ಕಾರವಾನ್ ಹೊರಡಿಸ್ತಾರೆ. ಆದ್ರೆ, ಅರ್ರೆರ್ರೇ…. ಈ ಏಳನೆ ಒಂಟೆ ಜಪ್ಪಯ್ಯ ಅನ್ತಾ ಇಲ್ಲ! ಟುರ್… ಅಂದ್ರೂ ಇಲ್ಲ, ಹೋಯ್ ಅಂದ್ರೂ ಇಲ್ಲ… ಒಂದು ಹೆಜ್ಜೆ ಮುಂದೆ ಇಡೋದಿಲ್ಲ ಅಂತ ಮುಷ್ಕರ ಮಾಡ್ತಾ ನಿಂತುಬಿಟ್ಟಿದೆ…
ಈ ಜನರಲ್ಲೊಬ್ಬ ಸಾಧು ಬಾಬಾ ಏನೋ ಮೋಡಿ ಹಾಕಿದಾನೆ ಅಂತ ಅನುಮಾನ ಮಾಡಿ ಅವನ ಹತ್ರ ಹೋಗ್ತಾನೆ.
ಬಾಬಾ ಹೇಳ್ತಾನೆ, ‘ನೀವು ಕಟ್ಟೋ ಥರ ನಟಿಸಿದ್ರಿ ಸರಿ. ಬಿಚ್ಚೋ ಥರ ನಟಿಸಿದ್ರಾ? ಮೊದಲು ಆ ಕೆಲಸ ಮಾಡಿ…’
ಹಾಗೇ ಮಾಡಿದ ಮೇಲೆ ಒಂಟೆ ವಿಧೇಯವಾಗಿ ಹೊರಡತ್ತೆ.
ನೀತಿ: ನಾವು ಹೆಣ್ಮಕ್ಳು, ಒಂಟೆ ಥರ
(ಧೈರ್ಯವಂತರಷ್ಟೆ ಸುಳ್ಳು ಗೂಟವನ್ನ ಗುರುತಿಸ್ತಾರೆ)

 

 

 

 

ಎ ಕಾಸ್ಮಿಕ್ ಜೋಕ್ ~ ಮತ್ತೊಂದು ಮಧ್ಯದ ಎಪಿಸೋಡ್

ಮಣಿ ಒಂದು ಮಧ್ಯಾಹ್ನ ನನ್ನನ್ನು ಊಟಕ್ಕೆ ಬರುವಂತೆ ಕರೆದಳು. ಏನೋ ಅಪರೂಪದ ತಿನಿಸು ಮಾಡಿದ್ದೀನಿ ಅಂತಲೂ ಹೇಳೀದಳು.
‘ಏನು ವಿಶೇಷ?’ ನಾನಂದೆ. ‘ಸಂತೋಷ ಪಡಲಿಕ್ಕೆ ನಿನಗೆ ಏನಾದರೂ ಕಾರಣ ಇರಲೇಬೇಕೇನು!?’ ಅಂದು ಬಾಯ್ಮುಚ್ಚಿಸಿದಳು.
ಮರುಘಳಿಗೆಯಲ್ಲಿ ನಾನು ಅವಳ ಮನೆ ಹೊಸ್ತಿಲು ತುಳಿದಿದ್ದೆ.
ಆದರೆ ಅಲ್ಲಿ ಬೇರೆಯೇ ಸ್ವಾಗತವಿತ್ತು.
ವಿಲಕ್ಷಣ ನೋಟದ, ತೆಳ್ಳಗಿನ, ಎತ್ತರದ ವ್ಯಕ್ತಿಯೊಬ್ಬ ಅಲ್ಲಿ ಕುಳಿತುಕೊಂಡಿದ್ದ. ಅವನ ದಟ್ಟ- ಗಾಢ- ನೀಳ ಕೂದಲು ಭುಜದವರೆಗೂ ಇಳಿಬಿದ್ದಿತ್ತು. ಅವನ ಉದ್ದನೆಯ ಮುಖದಲ್ಲಿನ ಕಣ್ಣುಗಳು ಶಾಂತಕೊಳದಂತೆ ಕುಳಿತಿದ್ದವು. ಮುಖದಲ್ಲಿ ಇದ್ದೂ ಇರದಂಥ ಚಿರಂತನ ಮಂದಹಾಸ. ಒಂದು ಸುದೀರ್ಘವಾದ ಉಲ್ಲಾಸದಾಯಕ ನಿದ್ರೆಯಿಂದ ಎಚ್ಚೆತ್ತು ಬಂದಂತೆ ಆತ ನಿರುಮ್ಮಳವಾಗಿ ಕಾಣುತ್ತಿದ್ದ. ಬೆನ್ನುಹುರಿಯನ್ನು ನೇರಗೊಳಿಸಿ ಕುಳಿತಿದ್ದ ಅವನ ಸುತ್ತ ಬೇರಾವ ಚಟುವಟಿಕೆಯೂ ಇರಲಿಲ್ಲ.
ಅವನು ತನ್ನ ಕೈಮುಂಚಾಚುತ್ತ ತನ್ನ ಪರಿಚಯ ಮಾಡಿಕೊಂಡ. ಲೇಡಿ ಡಾಕ್ಟರಳ ಕೈಗಳಂತೆ ಅವು ಮೃದುವಾಗಿಯೂ ಹಾಯೆನ್ನಿಸುವಂತೆಯೂ ಇದ್ದವು. ‘ಮೆದುವಾಗಿರುವವರೆಲ್ಲ ದುರ್ಬಲರೇನಲ್ಲ’ ಈ ಮಾತು ಇವನಂಥವನನ್ನು ನೋಡಿಯೇ ಹೇಳಿರಬೇಕು. ನಾನು ಸುಮ್ಮನೆ ಕುಳಿತುಕೊಂಡೆ. ಅಪರಿಚಿತರೊಡನೆ ಹೇಗೆ ಮುಂದುವರೆಯಬೇಕನ್ನೋದು ನನಗೆ ಇವತ್ತಿಗೂ ತಲೆಗೇರದ ಸಂಗತಿಯಾಗಿದೆ.
ಆ ಇಬ್ಬರು, ತಾವಾಗಿಯೇ ತೀರ ಕಡಿಮೆ ಮಾತನಾಡುವಂಥವರು. ‘ಏನೂ ಚಿಂತನೆಯನ್ನೆ ಇಟ್ಟುಕೊಳ್ಳದೆ ಉತ್ತಮ ಬದುಕು ಬಾಳಬೇಕು’ ಅನ್ನುವ ಹುಡುಗು ಯೋಚನೆಯ ನನ್ನ ಪಕ್ಕ ‘ಸರಳ ಬದುಕು, ಎತ್ತರದ ಚಿಂತನೆ’ ಇರಬೇಕೆನ್ನುವ ಮಣಿ ಕುಳಿತಿದ್ದಳು. ನಮ್ಮಿಬ್ಬರ ಎದುರಿಗೆ ‘ಸುಮ್ಮನೆ ಬದುಕೋದಷ್ಟೆ’ ಅನ್ನುವ ಯೋಚನೆಯ… ಉಹುಂ, ನಿರ್ಧಾರದ ಅವನು; ಜೀವನಪಾಠ ಕಲಿಸುವ ಚಿತ್ರಕಾರನಿದ್ದ.
ಮಣಿ ನಡುವಲ್ಲಿ ಎದ್ದು ಅಡುಗೆಮನೆಗೆ ಹೋದಳು. ನಾನು ಆ ವ್ಯಕ್ತಿಯನ್ನೆ ತುದಿಗಣ್ಣಲ್ಲಿ ಗಮನಿಸುತ್ತಾ ಯಾರಿರಬಹುದು ಅಂತ ಯೋಚಿಸುತ್ತಿದ್ದೆ. ನನ್ನನ್ನು ಓದಿಕೊಂಡವನಂತೆ ಆತ, ‘ಉಹು… ನಾನು ಸೈಕಿಯಾಟ್ರಿಸ್ಟ್ ಅಲ್ಲ. ಸಂನ್ಯಾಸಿ ಕೂಡ ಅಲ್ಲ…’ ಅಂದ. ದೃಢವಾದ, ಅಷ್ಟೇ ಮಧುರವಾದ ದನಿ.
ಅವೆರಡೂ ಅಲ್ಲದಿದ್ದ ಮೇಲೆ ಈತನಿಗೆ ನನ್ನ ಯೋಚನೆ ಗೊತ್ತಾಗಿದ್ದು ಹೇಗೆ? ನನಗೆ ಸೋಜಿಗವಾಯ್ತು. ಆತನ ತಲೆಯಿಂದ ಕಾಲಿನವರೆಗೆ ನೋಟ ಹರಿಸಿದೆ. ಅವನು ಹಸಿರು ಷರಟು, ಜೀನ್ಸ್ ತೊಟ್ಟಿದ್ದ. ಆದರೆ ಅವನ ಮುಖದಲ್ಲಿ ತಾನು ಈ ಲೋಕಕ್ಕೆ ಸೇರಿದವನಲ್ಲ ಎಂಬಂಥ ಭಾವವಿತ್ತು. ಇವನೂ ಮಣಿಯ ಹಾಗೇ ಇರುವ ಹುಚ್ಚನಿರಬೇಕು ಅಂದುಕೊಂಡೆ.
ಸದ್ಯ! ಮಣಿ ತಟ್ಟೆಗಳಲ್ಲಿ ಬಗೆಬಗೆಯ ತಿನಿಸುಗಳನ್ನಿಟ್ಟುಕೊಂಡು ಬಂದಳು. ನಾನು ಆ ಕ್ಷಣವೇ ಜಗತ್ತಿನೆಲ್ಲ ಯೋಚನೆಗಳನ್ನು ಪಕ್ಕಕ್ಕಿಟ್ಟು ಕೈಬಾಯಿಗಳಿಗೆ ಕೆಲಸ ಹಚ್ಚಿದೆ.
ಅವನು ತಿನ್ನುತ್ತಿದ್ದ ಬಗೆಯಲ್ಲೂ ಒಂದು ಮಾಧುರ್ಯವಿತ್ತು. ತಟ್ಟೆ ಖಾಲಿಯಾಗುವಷ್ಟೂ ಹೊತ್ತು ತಿನ್ನುವುದೇ ಆ ಗಳಿಗೆಯ ಏಕೈಕ ಘಟನೆಯೇನೋ ಅನ್ನುವಂತೆ ಅದನ್ನು ಆಸ್ವಾದಿಸುತ್ತಿದ್ದ. ಕಣ್ಣನ್ನು ಅರೆಮುಚ್ಚಿ ಸುದೀರ್ಘವಾಗಿ ಜಗಿಯುತ್ತಾ ಅದರ ಪ್ರತಿ ಕಣದ ಸ್ವಾದವನ್ನೂ ಸವಿಯುತ್ತಾ ತಿನ್ನುತ್ತಿದ್ದ.
ಮಣಿಯ ಸೂಚನೆಯಂತೆ ನಾನಾಗಿಯೇ ಮುಂದುವರೆದು ಅವನೊಟ್ಟಿಗೆ ಮಾತಾಡಿದೆ. ಆತ ನನ್ನನ್ನು ದೀರ್ಘಕಾಲದಿಂದ ಬಲ್ಲವನಂತೆ ವಿಶ್ವಾಸ ತೋರಿಸಿದ. ಅವನಲ್ಲಿ ಪ್ರೀತಿಯ ವಿನಾ ಬೇರೆ ಏನನ್ನೂ ನೋಡಲು ಸಾಧ್ಯವಿರಲಿಲ್ಲ. ಅಷ್ಟು ಪರಿಪೂರ್ಣವಾಗಿ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತಿದ್ದ. ನಾನು ಗಮನವಿಟ್ಟು ತಾಳೆ ಹಾಕಿದೆ. ಆತ ಮಣಿಯನ್ನು ಎಷ್ಟು ಹಾರ್ದಿಕವಾಗಿ ಮಾತಾಡಿಸುತ್ತಿದ್ದನೋ ನನ್ನ ಬಳಿಯೂ ಅಷ್ಟೇ ಪ್ರೇಮಪೂರ್ಣನಾಗಿ ಮಾತನಾಡುತ್ತಿದ್ದ. ಅಲ್ಲಿ ಗಂಡು ಹೆಣ್ಣೆಂಬ ಬೇಧ ಕೂಡ ಹಣಕುತ್ತಿರಲಿಲ್ಲ.
ಅವನು ಅದೆಷ್ಟು ತೆರೆದುಕೊಂಡಿದ್ದ ಎಂದರೆ, ಅವನನ್ನು ಓದುವುದು ಭಲೇ ಕಷ್ಟ ಅನ್ನಿಸುವಂತೆ ಇತ್ತು.
ಅವತ್ತು ಹಾಗೆ ಭೇಟಿಯಾಗಿದ್ದ ಅಪರೂಪದ ಮನುಷ್ಯನೇ ಕಿರಣ್.

ಎ ಕಾಸ್ಮಿಕ್ ಜೋಕ್ ~ 18!

ಎ ಕಾಸ್ಮಿಕ್ ಜೋಕ್, ನಾನು ಸದ್ಯ ಅನುವಾದಿಸ್ತಿರೋ ಕಾದಂಬರಿ. ಇದರ ಭಾಗ 1 ಮತ್ತು 2 ಈಗಾಗಲೇ ಹಾಕಿದೀನಿ. ನಂತರದ 17 ಪೋಸ್ಟ್ ಗಳನ್ನು ಹಾರಿಸಿ 18ನೆಯದ್ದು ಇಲ್ಲಿದೆ :-)

ಕುಂಜಮ್ ಕುಂಜಮ್ ಮನುಷ್ಯನ ಉಪಕಾರ

ನಾನು ಪೂರ್ತಿಯಾಗಿ ಈ ಲೋಕಕ್ಕೆ ಮರಳಿದ್ದು ಜನರಲ್ ಬೋಗಿ ಹತ್ತಿಕೊಂಡ ಮೇಲೇನೇ. ದೇಹಕ್ಕೆ ಚಿಕ್ಕ ಚಲನೆಯೂ ಸಾಧ್ಯವಾಗದಷ್ಟು ಅದು ಕಿಕ್ಕಿರಿದು ತುಂಬಿಕೊಂಡಿತ್ತು. ಉಸಿರುಗಟ್ಟುವ ಪರಿಸ್ಥಿತಿ. ಟ್ರೈನ್ ನಿಧಾನಕ್ಕೆ ಓಡಲು ಶುರುಮಾಡಿ ವೇಗ ಪಡೆದುಕೊಳ್ಳುತ್ತಿತ್ತು. ನಾನು ಟಾಯ್ಲೆಟ್ ಬಾಗಿಲಿನ ಬಳಿ ಕಾಲೂರಲು ನೆಲೆ ಕಂಡುಕೊಳ್ಳಲು ಬಹಳ ಹೊತ್ತೇ ಹಿಡಿಯಿತು.  ಹಿಂದೆ ಮುಂದೆ ನಿಂತವರ ಉಸಿರಾಟದೆದೆಗಳ ಉಬ್ಬರ ಇಳಿತಗಳ ನಡುವೆ ನಾನು ಸ್ಯಾಂಡ್ ವಿಚ್ ನಂತಾಗಿಬಿಟ್ಟಿದ್ದೆ. ನನಗೆ ಮುಂಭಾಗದಿಂದ ಅಂಟಿಕೊಂಡವನು ಕುಡಿದು ಹುಳ್ಳಗಾಗಿದ್ದ. ಅವನ ಅಮಲಿನ ವಾಸನೆ ಸಹಿಸಲಾಗದಂತಿತ್ತು. ನನ್ನ ಕಣ್ಣೊಳಗೆ ಹಣಕುತ್ತಾ ಹಲ್ಲು ಕಿರಿದವನ ಅರ್ಧಬಾಯಿ ತಂಬಾಕಿನಿಂದ ಕರಗಿಹೋಗಿತ್ತು. ನಾನು ಹೆಚ್ಚುಹೊತ್ತು ಅಲ್ಲಿ ನಿಲ್ಲಲಾಗದೆ, ಸಿಕ್ಕ ಸಿಕ್ಕಲ್ಲಿ ಕಾಲು ತೂರಿಸುತ್ತ ಭೋಗಿಯ ಒಳಕಡೆಗೆ ಜಾಗ ಮಾಡಿಕೊಂಡೆ. ಆಗಲೇ ಕತ್ತಲು ಕಪ್ಪುಗಟ್ಟಿತ್ತು. ನಮ್ಮ ಬೋಗಿಯೊಳಗೆ ಯಾರೂ ಏನನ್ನೂ ಮಾರಲಿಕ್ಕೆ ಬರುವ ಧೈರ್ಯ ಮಾಡಿರಲಿಲ್ಲ.

ನನ್ನ ಹೊಟ್ಟೆ ಚುರುಗುಟ್ಟಲು ಶುರುವಿಟ್ಟ ಹೊತ್ತಲ್ಲೇ ಅಲ್ಲಿ ಸಣ್ಣಗೆ ಜಗಳ ಹುಟ್ಟಿಕೊಂಡಿತು. ಯಾರೋ ನಾಲ್ಕಾರು ಮಂದಿ ಜಾಗಕ್ಕಾಗಿ ಕೂಗಾಡುತ್ತಿದ್ದರು. ನಾನು ಕುತ್ತಿಗೆಯನ್ನು ಭುಜದ ಮೇಲೆ ವಾಲಿಸಿಕೊಂಡು ನನಗೆ ನಾನೆ ಆಸರೆಯಾಗಿ ನಿಂತುಕೊಂಡಿದ್ದೆ. ಒಂದು ಕಡೆಯಿಂದ ಪರಸ್ಪರ ಮುಖ ಮಾಡಿದ್ದ ಟಾಯ್ಲೆಟ್ಟುಗಳ ವಾಸನೆ. ಒಳಗಿನ ನಾನಾ ಥರದ ಜನಗಳ ಬೆವರು, ಹೆಂಡ ಮತ್ತಿತರ ಥರಾವರಿ ನಾತಗಳು. ಇವೆಲ್ಲದಕ್ಕೆ ನನ್ನನ್ನು ಹೊಂದಿಸಿಕೊಳ್ತಿರುವಾಗ ಹಿಂದೆ ನಿಂತಿದ್ದವನು ಮತ್ತೊಬ್ಬನ ಮೇಲೆ ಧಪ್ಪನೆ ಕೈಹಾಕುತ್ತಾ ‘ಏ… ಇದು ನಿನ್ನಪ್ಪನ ಟ್ರೈನಲ್ಲ ಬೇನ್ ಚೋತ್’ ಅಂತ ಕ್ಯಾಕರಿಸಿ ಉಗಿದ. ತಾನೇನೂ ಕಡಿಮೆ ಇಲ್ಲದಂತೆ ಬಯ್ಸಿಕೊಂಡ ಮತ್ತೊಬ್ಬ, ’ ನಾನೇ ನಿನ್ನಪ್ಪ, ಮಾದರ್ ಚೋತ್’ ಅನ್ನುತ್ತ ಮತ್ತೂ ಜೋರಾಗಿ ಉಗಿದ.

ಈ ಎಲ್ಲ ಕಾದಾಟಗಳಿಂದ ವಿಮುಖನಾಗುತ್ತ ನಾನು ಮತ್ತೆ ಭುಜದ ಮೇಲೆ ಕುತ್ತಿಗೆಯನ್ನ ವಾಲಿಸಿ ಯೋಚಿಸತೊಡಗಿದೆ, ‘ಕಿರಣ್ ಓಶೋಯಿಂದ ಕಲಿತಂತೆ, ಬದುಕೊಂದು ಪ್ರಯಾಣ. ಪ್ರಯಾಣವನ್ನೆ ಗುರಿಯಾಗಲು ಬಿಡಬೇಕು….’
~

ಪೂರಾ ಹನ್ನೆರಡು ಗಂಟೆ ನಿಂತುಕೊಂಡೇ ಪ್ರಯಾಣ ಸಾಗಿತ್ತು. ಅಂತೂ ಒಬ್ಬ ಪುಣ್ಯಾತ್ಮ ಒಂಚೂರು ಕುಂಡೆ ಸರಿಸಿ ಕೂತುಕೊಳ್ಳಲು ಜಾಗ ಕೊಟ್ಟ. ಅದಾಗಲೇ ಆ ಸೀಟಿನಲ್ಲಿ ಅರ್ಧ ಡಜನ್ ಪ್ರಯಾಣಿಕರು ಕೂತಿದ್ದರು. ಅವರೆಲ್ಲರಲ್ಲಿ ನಾನೇ ದಪ್ಪನೆಯವನಾಗಿದ್ದೆ.

ನನ್ನ ಕಾಲುಗಳು ಹೆಚ್ಚೂಕಡಿಮೆ ಸಂವೇದನೆಯನ್ನೆ ಕಳಕೊಂಡುಬಿಟ್ಟಿದ್ದವು. ಅದರತ್ತಲೇ ಗಮನ ಇಟ್ಟುಕೊಂಡರೆ ನೋವು ಹೋಗುವುದೇ ಇಲ್ಲ ಅನ್ನಿಸಿ ಜೊತೆಗಿನವರೊಟ್ಟಿಗೆ ಬೀಡಿ ಸೇದುತ್ತ, ಅವರು ಕೊಟ್ಟ ಪಾನ್ ಕ ಗೋಲಾ ತಿನ್ನುತ್ತ ಯೋಚನೆ ತಿರುಗಿಸಿಕೊಂಡೆ. ಅವರು ವಿಳ್ಳೆದೆಲೆ, ಅಡಿಕೆ ಪುಡಿ ಸುಣ್ಣ, ತಂಬಾಕು- ಹೀಗೆ ಏನೇನೋ ಎಡ ಅಂಗೈ ಮೇಲೆ ಹಾಕಿಕೊಂಡು ಬಲ ಹೆಬ್ಬೆಟ್ಟಿನಿಂದ ನುರಿದು ಚಿಕ್ಕಚಿಕ್ಕ ಉಂಡೆಗಳನ್ನು ಮಾಡುತ್ತಿದ್ದರು. ಅದನ್ನ ನೋಡುವುದೇ ಒಂದು ಚೆಂದವಾಗಿತ್ತು.

~

ಈಗ ಟ್ರೈನ್ ಗುಲ್ಬರ್ಗಾ ಜಂಕ್ಷನ್ ಅನ್ನು ಬಿಟ್ಟು ಹೊರಟಿತು. ನಾನು ಜೊತೆಗಿನವರ ಹರಟೆಗಳನ್ನು ಕೇಳುತ್ತ ಪ್ರಯಾಣದ ಬೇಸರ ಕಳೆದುಕೊಳ್ಳತೊಡಗಿದೆ. ಹೊಟ್ಟೆ ಹೊರೆದುಕೊಳ್ಳಲು ನಮ್ಮ ರಾಜ್ಯದ ಬೇರೆಬೇರೆ ಊರುಗಳಿಗೆ ಬಂದು ಸೇರಿಕೊಳ್ತಿದ್ದ ಉತ್ತರಭಾರತೀಯರಿಗೆ ತಮ್ಮ ಬಗ್ಗೆ ವಿಪರೀತ ಹೆಮ್ಮೆ ಇದ್ದಂತಿತ್ತು. ಅವರಲ್ಲೊಬ್ಬ ದಕ್ಷಿಣದವರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದ. ಅವನೆಲ್ಲಾ ಮಾತಿನ ಕೊನೆಗೆ “ಕುಂಜಮ್ ಕುಂಜಮ್” ಅನ್ನುತ್ತಾ ನಗಾಡುತ್ತಿದ್ದ. ಮಿಕ್ಕವರೂ ಅದಕ್ಕೆ ದನಿ ಸೇರಿಸುತ್ತಿದ್ದರು. ಅವರೆಲ್ಲ ಸೇರಿ ನನ್ನ ಕೆಣಕೋದಕ್ಕೆ ಪ್ರಯತ್ನಿಸ್ತಿದ್ದಾರೆಂದು ನನಗೆ ಗೊತ್ತಾಯ್ತು. ನಾನು ತಣ್ಣಗೆ ಅವರತ್ತ ನೋಡುತ್ತ, “ಅದು ಕೊಂಚಕೊಂಚ.. ಹಾಗಂದ್ರೆ ಸ್ವಲ್ಪ ಅಂತ ಅರ್ಥ. ಅದು ತಮಿಳು ಭಾಷೆ” ಅಂದೆ.

ನಮ್ಮ ರಾಜಕಾರಣಿಗಳು ಸೋದರತ್ವ, ಸೌಹಾರ್ದ ಅಂತೆಲ್ಲ ಯಾಕೆ ಬೊಂಬಡ ಬಜಾಯಿಸ್ತಾರೆ ಅಂತ ನನಗೆ ಚೂರು ಅರ್ಥವಾಗಿದ್ದು ಅವಾಗಲೇ. ಭ್ರಷ್ಟತೆ ಮತ್ತು ಬೇಧಭಾವಗಳೇ ನಮ್ಮ ದೇಶದಲ್ಲಿ “ವಿವಿಧತೆಯಲ್ಲಿ ಏಕತೆ” ಅನ್ನೋ ಹೆಸರಲ್ಲಿ ರಾರಾಜಿಸ್ತಿದೆ ಅಂತ ಅನ್ನಿಸಿತು. ಈ ಯೋಚನೆಯೊಟ್ಟಿಗೇ ನನ್ನ ಮನಸ್ಸು ಉತ್ತರ- ದಕ್ಷಿಣ, ದ್ವೇಷ ಅಸೂಯೆ ಅಂತೆಲ್ಲ ಸುತ್ತಾಡಿಬಂತು. ಅಲ್ಲಿನವರನ್ನ ಇಲ್ಲಿಯವರು ವಂಚಿಸಿದ್ರೆ, ಇಲ್ಲಿಯವರನ್ನ ಅವರು ಲೂಟಿ ಮಾಡ್ತಾರೆ. ಕೊನೆಗೂ ನಾವು ಏನು ಬಿತ್ತುತ್ತೇವೋ ಅದನ್ನೇ ಕೊಯ್ಲು ಮಾಡ್ತೇವೆ! ಹಾಗನ್ನಿಸಿ ನನ್ನ ಮೂಗನ್ನ ರಾಜಕಾರಣದಿಂದೀಚೆ ತೆಗೆದೆ. ಅದು ನನ್ನ ಆಸಕ್ತಿಯ ವಿಷಯವೇನೂ ಆಗಿರಲಿಲ್ಲ. ಸಾಲದ್ದಕ್ಕೆ ಹೊಟ್ಟೆಯೊಳಗೆ ಒದ್ದಾಟ ಹೆಚ್ಚುತ್ತಲೇ ಇತ್ತು.

ಸ್ವಲ್ಪ ಹೊತ್ತಿನಲ್ಲಿ ರೈಲು ಮಹಾರಾಷ್ಟ್ರದ ದೌಂಡ್ ಜಂಕ್ಷನ್ನಿನಲ್ಲಿ ನಿಂತಿತ್ತು. ನಾನು ಅಪ್ಪಟ ಮರಾಠಿ ತಿನಿಸು ವಡಾಪಾವ್ ಕೊಂಡುಕೊಂಡೆ. ಜೊತೆಗೊಂದಷ್ಟು ಬಾಳೆಹಣ್ಣು. ಒಟ್ಟು ೨೦ ರುಪಾಯಿ ಕೈಬಿಟ್ಟಿತ್ತು. ಈಗ ಪರ್ಸಿನಲ್ಲಿ ಉಳಿದಿದ್ದು ಇನ್ನೂರಾ ಎಂಭತ್ತು ರುಪಾಯಿ ಮಾತ್ರ.
ಆ ಕ್ಷಣದ ಸಂಪತ್ತಿನಂತಿದ್ದ ತಿನಿಸುಗಳನ್ನು ಒಂದು ಕೈಯಲ್ಲಿ ಸಂಭಾಳಿಸುತ್ತಲೇ ಮೆಲ್ಲಗೆ ಚಲಿಸುತ್ತ ಸೂಚನೆ ಕೊಡುತ್ತಿದ್ದ ರೈಲನ್ನು ಹತ್ತಿದೆ. ಮುಖ, ಕೈಗಳನ್ನಿರಲಿ, ಹಲ್ಲನ್ನು ಕೂಡ ಉಜ್ಜದೆ ಅವನ್ನು ತಿನ್ನತೊಡಗಿದ್ದೆ.  ಆದರೆ ನಾನು ಪ್ರಯಾಣಿಸುತ್ತಿದ್ದ ಗಬ್ಬು ನಾತದ ಬೋಗಿಯಲ್ಲಿ ಇಂಥಾ ಗಲೀಜುತನ ದೊಡ್ಡ ವಿಷಯವೇನೂ ಆಗಿರಲಿಲ್ಲ ಬಿಡಿ.
ನನ್ನ ಪಕ್ಕ ಕುಳಿತಿದ್ದ ಕುಂಜಮ್ ಕುಂಜಮ್ ಮನುಷ್ಯ ಕುಡಿಯಲು ನೀರು ಕೊಟ್ಟ. ಅದನ್ನು ಹೊಯ್ದುಕೊಳ್ಳುತ್ತಲೆ ಅವನ ಪ್ರಶ್ನೆಗಳಿಗೆ ಉತ್ತರಿಸಿದೆ. ನಾನು ಚಂಡೀಗಢಕ್ಕೆ ಹೋಗ್ತಿದ್ದೀನೆ ಅಂದಿದ್ದು ಕೇಳಿ,” ಹಾಗಾದರೆ ಒಳ್ಳೆಯದೆ ಆಯ್ತು, ನಾನು ಅಂಬಾಲಾಕ್ಕೆ ಹೋಗ್ತಾ ಇದ್ದೀನಿ, ಬಸ್ಸಿನಲ್ಲಿ ಇಬ್ಬರೂ ಒಟ್ಟಿಗೆ ಹೋಗೋಣ” ಅಂದ. ಸ್ಟೇಷನ್ನಿನಲ್ಲಿ ಇಳಿದಮೇಲೆ ಏನು ಮಾಡಬೇಕೆಂದು ಯೋಚನೆ ಮಾಡದಿದ್ದ ನನಗೆ ಬೆಳಕೇ ಹುಡುಕಿಬಂದ ಹಾಗೆ ಆಗಿತ್ತು. ನನ್ನ ಪ್ರಯಾಣ ಸುಗಮವಾಗ್ತಿದೆ ಅನ್ನಿಸಿ ನಿರಾಳವಾಯ್ತು.