ಮೂವತ್ತರ ಹೊಸ್ತಿಲಲ್ಲಿ, ಮೂರು ಚಡಪಡಿಕೆಗಳು…
May 16, 2009 at 1:13 pm | In ಕನವರಿಕೆ | 15 Comments~1~
ಇದೀಗ ಮಧ್ಯಾಹ್ನದ ತಿರುವು
ಹೊತ್ತು ಕಂತುವುದು ಬೇಗ.
ತಲೆಯಲ್ಲಿ ಬೆಳ್ಳಿ
ಮೂಡುವ ಘಳಿಗೆಯೆ ಸಂಜೆ.
ಒಂಟಿ ನಡಿಗೆಯ ದಾರಿ,
ಎಂದೆಂದೂ ಮುಗಿಯದ ದೂರ…
ಓ ದೇವರೇ!
ತಿರುವಿನ ಕೊನೆಯಲ್ಲೇ
ಈ ಊರು ಮುಗಿದುಬಿಡಲಿ!!
~2~
ಸೂರ್ಯನ ಕಾವು ಕುಡಿದುಬಿಡಬೇಕು.
ಮತ್ತೀಗ ಸಂಜೆ
ನರಸತ್ತ ತಣ್ಣನೆ ಚಂದ್ರ-
ನೆನಪು ಬಗೆವ ಗೋರಿಕಲ್ಲು.
ಈಗಲೇ ಬೆವರುತ್ತ ಮಲಗಿಬಿಡಬೇಕು.
ಚಳಿಯಲ್ಲಿ ಒಬ್ಬಂಟಿ,
ನಿದ್ರೆ ಕಳಕೊಳ್ಳುವುದು ಬಹಳ ಇದೆ…
ಚಿಂತೆಗಳನೆಲ್ಲ ಆ ದಿನಕ್ಕೆ
ತೆಗೆದಿರಿಸಬೇಕು.
~ 3 ~
ಯಾರೋ ಹೇಳಿ ಹೋಗಿದಾರೆ-
ಮುಸ್ಸಂಜೆ ಹೊತ್ತು
ಬೆಳಕೂ ಇಲ್ಲ, ಕತ್ತಲೂ ಅಲ್ಲ…
ಜೋಪಾನ ಕಣೇ!
ಇನ್ನೀಗ ಸರಸರನೆ,
ಕನಸುಗಳ ಗುಡಿಸಿ
ತಿಪ್ಪೆಗೆಸೆಯಬೇಕು.
ನಗುವನೆಲ್ಲ ಕಟ್ಟಿ
ಗಂಟು ಹಾಕಬೇಕು.
ನಿಲುವಿಗೆ ಗಾಂಭೀರ್ಯದ ಬಣ್ಣ,
ಮಾತಿಗೆ ಹೆಣಭಾರದ ತೂಕ!
ಸಂಜೆಗೆ ಮುನ್ನ,
ಮುಖವಾಡ ರೆಡಿಯಾಗಿರಬೇಕು.
15 Comments »
RSS feed for comments on this post. TrackBack URI
Leave a comment
Blog at WordPress.com. | Theme: Pool by Borja Fernandez.
Entries and comments feeds.
ಅಕ್ಕಾ,
ಕವನ ಸೊಗಸಾಗಿದೆ. ಆದರೆ ಇಷ್ಟೆಲ್ಲಾ ತಯಾರಿ ಬೇಕಾ ಮನಸ್ಸಿಗೆ ಅನ್ನುವುದು ನನ್ನನ್ನು ಕಾಡುತ್ತಿರುವ ಪ್ರಶ್ನೆ, ಮುಖವಾಡ ಬೇಡ ಅನ್ಸುತ್ತಕ್ಕ, ಮುಖವಾಡ ಧರಿಸಿ ಬಿಟ್ಟರೆ ನಮಗೂ ಅವರಿಗೂ ವ್ಯತ್ಯಾಸ ಗೊತ್ತಾಗಲಿಕ್ಕಿಲ್ಲ ಅಲ್ವ…
Comment by Rajesh Manjunath — May 16, 2009 #
ಬೇಡ ಬೇಡ,
ಇದ್ದ ಹಾಗೆಯೇ ಇದ್ದರೆ ಸಾಕು. ಮುಖವಾಡವೇನೂ ಬೇಡ. ಇದ್ದುದರಲ್ಲಿ ಸಂಭ್ರಮಿಸಬೇಕು. ಇಪ್ಪತ್ತೇಳಕ್ಕೇ ವೃದ್ಧಾಪ್ಯ ಆರಂಭವಾಗುತ್ತದೆ ಎಂಬುದು ಸಂಶೋಧಕರ ಮಾತು.
ಕನಸುಗಳನ್ನೆಲ್ಲಾ ತಿಪ್ಪೆಗೆಸೆಯೋದಂತೂ ಖಂಡಿತಾ ಬೇಡ. ಅದನ್ನೆಲ್ಲಾ ಅರುವತ್ತಾಗುವಾಗ ಯೋಚಿಸಿದರೆ ಸಾಕು.
ಕವನ ಓದಿ ಭಯ ಆಯ್ತು.
Comment by Avinash — May 18, 2009 #
nice
Comment by ವಿಜಯರಾಜ್ ಕನ್ನಂತ — May 18, 2009 #
ಪ್ರಿಯ ಚೇತ್ಸ್!!!
ನಾನೀಗ ನಲವತ್ತರ ಹೊಸ್ತಿಲಲ್ಲಿ. ಹಾಗಾದರೆ ನಾನೇನು ಮಾಡಲಿ.have so much to look forward to. it feels great to be on the threshold of forty
ಕವಿತೆ ತುಂಬಾ meaningful aagide.
take care
ಎಮ್. ಎಸ್.
Comment by malathi S — May 19, 2009 #
ಚೇತನಾವರೆ,
ನಿಮ್ಮ ಮೂರು ಚಡಪಡಿಕೆಗಳು ಇಷ್ಟವಾದವು.
ಅದರಲ್ಲೂ ಈ ಸಾಲುಗಳು ತುಂಬಾ ಇಷ್ಟವಾದವು.
“ಯಾರೋ ಹೇಳಿ ಹೋಗಿದಾರೆ-
ಮುಸ್ಸಂಜೆ ಹೊತ್ತು
ಬೆಳಕೂ ಇಲ್ಲ, ಕತ್ತಲೂ ಅಲ್ಲ…
ಜೋಪಾನ ಕಣೇ!”
Comment by ಉದಯ್ ಇಟಗಿ — May 19, 2009 #
ಇನ್ನೀಗ ಸರಸರನೆ,
ಕನಸುಗಳ ಗುಡಿಸಿ
ತಿಪ್ಪೆಗೆಸೆಯಬೇಕು.
ನಗುವನೆಲ್ಲ ಕಟ್ಟಿ
ಗಂಟು ಹಾಕಬೇಕು.
ನಿಲುವಿಗೆ ಗಾಂಭೀರ್ಯದ ಬಣ್ಣ,
ಮಾತಿಗೆ ಹೆಣಭಾರದ ತೂಕ!
ಸಂಜೆಗೆ ಮುನ್ನ,
ಮುಖವಾಡ ರೆಡಿಯಾಗಿರಬೇಕು.
E saalugalu tumba kadisitu kanri, nijavada matugalu ivu.
Comment by guru — May 20, 2009 #
Nice poem.
Comment by preethi — May 20, 2009 #
ಮೂವತ್ತರ ಹೊಸಿಲೆಂದರೆ ಇನ್ನೂ ಮಟಮಟ ೧೨ರ ಮಧ್ಯಾಹ್ನ. ದುಡಿಯುವುದಕ್ಕಿನ್ನೂ ಅರ್ಧ ದಿನಕ್ಕೂ ಹೆಚ್ಚು ಸಮಯವಿದೆ. ಆಸೆಯಿಂದ ಕಟ್ಟಿತಂದ ಬುತ್ತಿ ತಿನ್ನುವುದಕ್ಕಿದೆ. ದುಡಿದಿದ್ದೆಲ್ಲಾ ಮುಗಿದ ಮೇಲೆ ಸಂಜೆಯ ತಂಪಿನಲ್ಲಿ ದಣಿವಾರಿಸಿಕೊಳ್ಳುತ್ತಾ ಹಳೆಯ ನೆನಪನ್ನು ಸವಿಯಬೇಕಿದೆ. ಚಡಪಡಿಕೆಯ ಅಗತ್ಯವಿಲ್ಲ. ಇದು ಕನಸು ನನಸಾಗಿಸಿಕೊಳ್ಳುವ ಸಮಯ.
ಯಾವುದೋ ನೊಂದ ಘಳಿಗೆಯಲಿ ಬರೆದ ಕವನವಿರಬೇಕು. ಸೊಗಸಾಗಿದೆ.
Comment by Rajani — May 21, 2009 #
ಸುಮ್ಮನೆ ಹೇಳುತ್ತಿಲ್ಲ.
ನಿಜವಾಗಲೂ ಚಡಪಡಿಕೆಯೂ ಸುಖ ನೀಡಿತು. ನನಗೆ ಬಹಳ ಸೂಕ್ಷ್ಮಎನಿಸಿದ ವಾಸ್ತವ..ಮಾತಿಗೆ ಹೆಣಭಾರದ ತೂಕ !
ಧನ್ಯವಾದಗಳೊಂದಿಗೆ
ನಾವಡ
Comment by ನಾವಡ — May 21, 2009 #
ಚೇತನಾ ನಾ ಮುವ್ವತ್ತು ದಾಟಿ ನಲವತ್ತನ್ನು ಭೆಟ್ಟಿಯಾಗಿ ಮುಂದೆ ನಡೆದಿರುವೆ…ಆದರೂ ಮುವ್ವತ್ತರ ಆತಂಕ ಇನ್ನೂ ನೆನಪಾಗುತ್ತದೆ
ನಾವು ಬಹಳ concious ಇದ್ದೇವಿ ಅನಸ್ತದ…ನಿಮಗ ಟೈಮ್ ಇದ್ದಾಗ ಒಮ್ಮೆ usdesai.blogspot ಗೂ ಭೇಟಿ ಕೊಡ್ರಿ….
Comment by umesh desai — May 23, 2009 #
moovattara hostialalli onti thana ashtu kaadabeka?
ಎಂದೆಂದೂ ಮುಗಿಯದ ದೂರ…
ಓ ದೇವರೇ!
ತಿರುವಿನ ಕೊನೆಯಲ್ಲೇ
ಈ ಊರು ಮುಗಿದುಬಿಡಲಿ!!
e baduku endu mugiyada haadi, saagidashtu inneno aase thorisi munde seleyuva maaye.
baduku shuru aaguvude 25 ra nanthaa, innu saakashtu samaya ide, kattuva kansugalige jaagavu ide. novina samayavella gudisi moote kattidare aayithu.
ನಿಲುವಿಗೆ ಗಾಂಭೀರ್ಯದ ಬಣ್ಣ,
ಮಾತಿಗೆ ಹೆಣಭಾರದ ತೂಕ!
ಸಂಜೆಗೆ ಮುನ್ನ,
ಮುಖವಾಡ ರೆಡಿಯಾಗಿರಬೇಕು….
kavana sikkapatte kadisithu. nonda samayadalli baredidda?
Comment by Shastry — May 27, 2009 #
ನಾನು ಹಲವು ಬಾರಿ ಇನ್ನೊಬ್ಬರು ಚಡಪಡಿಸುವುದನ್ನು ನೋಡಿ ಚಿಂತಿಸಿದ್ದಿದೆ. ಅದರಲ್ಲೂ ಕಾರಣವಿಲ್ಲದೆ ಚಡಪಡಿಸುವ ಮಂದಿ ಕಂಡರೆ ನಗು ತಡೆಯಲಿಕ್ಕೆ ಆಗಲ್ಲ.
E ಚಡಪಡಿಕೆಗಳು ಇಷ್ಟವಾದವು…
Comment by Agnihothri — June 1, 2009 #
ಚಡಪಡಿಕೆ ಹಂಚಿಕೊಂಡ ಎಲ್ಲಾರ್ಗೂ ಥ್ಯಾಂಕ್ಸು.
ನಿಮ್ಮ ಪ್ರಶ್ನೆಗಳಿಗೆ ಉತ್ರ ತೋಚ್ತಾ ಇಲ್ಲ
ನೋಡೋಣ. ಮತ್ಯಾವಾಗ್ಲಾದ್ರೂ…
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
Comment by Chetana Teerthahalli — June 1, 2009 #
ಬದುಕಿನ ಸರಳ ರೇಖೆಯನ್ನು ಅರ್ಥಗರ್ಭಿತವಾಗಿ ಎಳೆದಿದ್ದೀರಿ…..ಅಷ್ಟಕ್ಕೂ…ಭಯ ಸಲ್ಲ…
ಬರುವುದೆಲ್ಲವೂ ಬರಲಿ. ಈ ಕಾಯವಿರುವುದೇ ಅನುಭವಿಸಲಲ್ಲವೇ…?
ಆದರೂ ಕೆಲವೊಮ್ಮೆ ಅನಿಸುವುದುಂಟು…”ಮಾತಿಗೆ ಹೆಣಭಾರದ ತೂಕ !” ಎಂದು…
ಮುಸ್ಸಂಜೆಯು ನಿತ್ಯ ಬದುಕಿನಲ್ಲಿನ ಒಂದು ಟ್ರ್ಯಾನ್ಸಿಶನ್ ಘಟ್ಟ. ಅದನ್ನು ತುಂಬಾ ಸೊಗಸಾಗಿ ಬರೆದಿದ್ದೀರಿ….
ಉತ್ತಮ ಕವಿತೆಗೆ ಧನ್ಯವಾದ…
ಹಾಂ….ಅಂದ ಹಾಗೆ…….ಹೊಸ್ತಿಲ ನೆನಪಿಸಿದ್ದಕ್ಕೆ….ಥ್ಯಾಂಕ್ಸ್.
– ಸಂತೋಷ್ ಅನಂತಪುರ
Comment by Santhosh Ananthapura — June 4, 2009 #
ಪರವಾಗಿಲ್ಲ್ವೇ! ತಮ್ಮಂತಹ ಚಿರಯೌವ್ವನಿಗರಿಗೂ ವಯಸ್ಸಾಗುತ್ತಿರುವುದರ ಅರಿವಾಗ್ತಿದೆಯಲ್ಲ್ವಾ?
Comment by praveen — September 14, 2009 #