ಬದಲಾದ ನನ್ನೂರು… ಬಯಲಾದ ನಾನು.

November 22, 2008 at 6:21 am | In ಕನವರಿಕೆ | 17 Comments
Tags:

ಊರಿಗೆ ಹೋಗ್ಬೇಕು…
ಹಾಗಂದಕೂಡಲೆ, ಸಂಭ್ರಮ ಮತ್ತು ವಿಷಾದಗಳೆರಡೂ ನನ್ನ ಆವರಿಸ್ಕೊಂಡು ಬಿಡುತ್ತೆ. ಎಷ್ಟೋ ಬಾರಿ ಊರಿಗೆ ಹೋಗಬೇಕಾದಾಗಲೆಲ್ಲ ಏನಾದರೊಂದು ನೆವ ತೆಗೆದು ಅದನ್ನ ತಪ್ಪಿಸಿಕೊಂಡು ಕುಂತಿದ್ದೂ ಇದೆ. ಇದೆಂಥ ಪಲಾಯನವೋ.. ಗೊತ್ತಾಗದೆ ಸುಮ್ಮನುಳಿದಿದ್ದೇನೆ.

ನಾನ್ಯಾಕೆ ಚೇತನಾ ಹೆಸರಿನ ಜೊತೆ ತೀರ್ಥಹಳ್ಳಿಯನ್ನ ಅಂಟಿಸ್ಕೊಂಡೆ? ಚೇತನಾ ಬೆಂಗಳೂರು ಅನ್ನುವ ಹೆಸರು ಅಷ್ಟೇನೂ ಆಕರ್ಷಕವಾಗಿ ಕಾಣುವುದಿಲ್ಲವೆಂದೇ? ತೀರ್ಥಹಳ್ಳಿಯೆಂಬ ಹೆಸರಿಂದಲಾದರೂ ಒಂದಷ್ಟು ಜನ ನನ್ನ ಗಮನಿಸಲೆಂದೇ? ಅಥವಾ, ಹಳೆಯ ಐಡೆಂಟಿಟಿ ಕಳಚಲೆಂದು ಅಂದುಕೊಂಡರೂ, ನಾನು ಪೂರ್ತಿ ಕಳೆದುಹೋಗಿಬಿಡಬಾರದೆಂಬ ಎಚ್ಚರಿಕೆಯಿಂದಲೇ? ಇವನ್ನೆಲ್ಲ ಯೋಚಿಸುತ್ತ ಇದ್ದರೆ ನನ್ನೆದುರು ನನ್ನ ನಿಜಬಣ್ಣ ಬಯಲಾಗಿಬಿಡುವ ಭಯಕ್ಕೆ ಯೋಚಿಸದೆ ಇದ್ದೇನೆ. ಈ ಸಂಗತಿ ತಲೆ ಹೊಕ್ಕಾಗಲೆಲ್ಲ, ಲಿಂಕ್ ಲೆಸ್ಸಾಗಿ ತೀರ್ಥಹಳ್ಳಿ ಈಗ ಹಳೆಯ ನನ್ನ ಊರಾಗಿ ಉಳಿಯದಿರುವುದನ್ನೂ, ನಾನೂ ಬದಲಾಗಿರುವುದನ್ನೂ ತಾಳೆ ಹಾಕುತ್ತ, ಸಮಜಾಯಿಷಿಗಳಲ್ಲಿ ಖುಷಿಪಡುತ್ತೇನೆ.

                                   img_1906

ನನ್ನೂರು ಬದಲಾಗಿದೆ… ಎಲ್ಲ ಊರುಗಳ ಹಾಗೇ… ವಿಶೇಷವೇನಿಲ್ಲ. ಹುಡುಗರೆಲ್ಲ ಖಾಲಿಯಾಗಿ, ಹುಡುಗಿಯರೆಲ್ಲ ಮದುವೆಯಾಗಿ, ಹೊಸ ಪೀಳಿಗೆ ಸ್ಕೂಲು ಕಾಲೇಜಿನ ಹಾದಿ ಸವೆಸುತ್ತಾ ಊರುಬಿಡುವ ಹೊಂಚಿನಲ್ಲಿ ಕರಗುತ್ತಿದೆ. ನನ್ನಪ್ಪ ಅಮ್ಮನಂಥವರು ಮನೆ ಮಾರಿ ಮಕ್ಕಳ ಜತೆಯಿರಲು ಬೆಂಗಳೂರಿಗೆ ಬಂದುಬಿಡುತ್ತೇವೆ ಅಂತ ಹೇಳುತ್ತಲೇ, ಊರು ಬಿಟ್ಟು ಬರಲಾಗದ ಸಂಕಟದಲ್ಲಿ ಕಾಲಯಾಪನೆ ಮಾಡುತ್ತ ಉಳಿದಿದ್ದಾರೆ.
ಮುಂಚಿನಂತೆ ಊರಲ್ಲಿ ಈಗ ಬಡವರ ಸಂಖ್ಯೆ ಹೆಚ್ಚೇನಿಲ್ಲ. ಭಿಕ್ಷುಕರಂತೂ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಊರಿನವರಿಗೆ ಅಚ್ಚುಮೆಚ್ಚಿನವನಾಗಿದ್ದ ಹುಚ್ಚುಪಾಂಡು, ಹುಚ್ಚು ಬಿಟ್ಟು ಸರಿಯಾದ ಸ್ವಲ್ಪ ವರ್ಷದಲ್ಲೇ ಸತ್ತುಹೋಗಿಯಾಗಿದೆ. ಯಾವುದೋ ಊರಿನವರು ಬಿಟ್ಟು ಹೋಗಿದ್ದ ಹುಚ್ಚಿಯೊಬ್ಬಳನ್ನ ಆಗೊಂದಷ್ಟು ಜನ ರೇಪು ಮಾಡಿದ ಮೇಲೆ, ಹುಚ್ಚಿಯರೂ ಇಲ್ಲವಾಗಿದ್ದಾರೆ.
ಹಸುಗಳ ಸಂಖ್ಯೆ ಕಡಿಮೆಯಾಗಿದೆ. ಕತ್ತೆಗಳು ತೀರ್ಥಹಳ್ಳಿಯಲ್ಲಿ ಯಾವತ್ತೂ ಇರಲಿಲ್ಲ! ಹಂದಿಗಳನ್ನಂತೂ ತೀರ್ಥಳ್ಳಿಯ ಬೀದಿಗಳಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲ.
ಮನೆ ಹಿತ್ತಿಲಲ್ಲಿ ಬುಟ್ಟಿಯಲ್ಲಿ ಬೆಚ್ಚಗೆ ಕೂತ ಕೋಳಿಗಳನ್ನು ನಾವೀಗ ಕಾಣಲಾರೆವು. ಮೆಟ್ಟಿಲ ತುದಿಯಲ್ಲಿ ಬಾಲ ಆಡಿಸುತ್ತ ಕೂತ ನಾಯಿಯನ್ನೂ…

ಊರಲ್ಲೀಗ ಗಂಧದ ಮರಗಳು ಉಳಿದಿಲ್ಲ. ದಬ್ಬೆ ಬೇಲಿಗಳಿಲ್ಲ. ಹೊಸತಾಗಿ ಯಾರೂ ಹೆಂಚಿನ ಮನೆಗಳನ್ನ ಕಟ್ಟುತ್ತಿಲ್ಲ. ಮನೆಯೆದುರು ಕೈತೋಟಕ್ಕೆ ಜಾಗ ಖಾಲಿ ಬಿಡುತ್ತಿಲ್ಲ. ಗದ್ದೆಗಳೆಲ್ಲ ಸೈಟುಗಳಾಗಿ, ಮನೆಗಳಾಗಿ, ಮಳಿಗೆಗಳಾಗಿ ಮಲಗಿವೆ. ಇಷ್ಟಾದರೂ ಹುಡುಗರಿಗೆ ಊರಲ್ಲೇ ಇದ್ದುಕೊಂಡು ಮಾಡಲು ಕೆಲಸವಿಲ್ಲ. ಇದ್ದು, ಮಾಡಿದರೂ ಆ ಹುಡುಗರಿಗೆ ಅಷ್ಟೇನೂ ಮನ್ನಣೆಯಿಲ್ಲ. ನನ್ನ ಸ್ಕೂಲು- ಕಾಲೇಜಿನ ದಾರಿ, ಆಟವಾಡಿದ ಗ್ರೌಂಡು, ಮೊದಲ ಪ್ರೇಮ ಪತ್ರ ಇಸ್ಕೊಂಡ ಜಾಗ…, ಮೊದಲ ನಾಚಿಕೆಯ ಸಾಕ್ಷಿ… ಯಾವುದೂ ಇದ್ದ ಹಾಗೆ ಇಲ್ಲ!

ಊರ ಮಕ್ಕಳೀಗ ಕಾಲೇಜಿಗೆ ನಡೆದು ಹೋಗುವುದಿಲ್ಲ. ಸಂಕ ದಾಟುವುದು, ಗದ್ದೆಬೇಲಿ ಹಾರುವುದು… ಇವೆಲ್ಲ ಅವರಿಗೆ ಗೊತ್ತಿಲ್ಲ. ಹಳ್ಳಗಳಲ್ಲಿ ನೀರಿಲ್ಲ. ಮಾಗಿಯಲ್ಲೂ ಚಳಿಯಿಲ್ಲ. ಮಲೆನಾಡಿನ ಮಳೆ, ಹೇಗಿತ್ತೆಂದೇ ಮರೆತುಹೋಗಿದೆ. ಅಷ್ಟಾದರೂ ಅಲ್ಲೇ ಹುಟ್ಟಿ ಬೆಳೆದು ಜೀವನ ಮಾಡ್ತಿರುವ ಅಮ್ಮ, ‘ಕೇಡು ಮಳೆ, ಸುರೀತಲೇ ಇರತ್ತೆ’ ಅಂತ ಗೊಣಗೋದು ಬಿಟ್ಟಿಲ್ಲ.

ಹಾದಿಬದಿಗಳಲ್ಲಿ ಇದ್ದವಲ್ಲ, ಮಾಸ್ತಿಕಲ್ಲು- ವೀರಗಲ್ಲುಗಳು? ಅವೀಗ ಯಾರ ಮನೆಯ ಚಪ್ಪಡಿಗಳಾಗಿವೆಯೋ? ಶಿವಪ್ಪ ನಾಯಕನ ಕಾಲದ ಕಲ್ಲಿನ ಪುಟ್ಟಪುಟ್ಟ ದೇಗುಲಗಳೆಲ್ಲ ಸುತ್ತ ಸಿಮೆಂಟಿನ ಗೋಡೆ ಕಟ್ಟಿಸಿಕೊಂಡು ಬರೀ ಆಡಂಬರದ ವಸ್ತುಗಳಾಗಿಬಿಟ್ಟಿವೆ. ಆದರೂ, ಹುಡುಗಿಯರಿಗೆ ಲೈನು ಹೊಡೆಯಲು ಹುಡುಗರೀಗ ಅಲ್ಲಿಗೆ ಬರೋದಿಲ್ಲ. ಆಮೇಲೆ ಹುಡುಗೀರು ತಮ್ಮನ್ನ ‘ಗುಗ್ಗು’ ಅಂದ್ಕೊಂಡುಬಿಟ್ಟರೆ?

- ಹೀಗೆಲ್ಲ ಗೊಣಗಿಕೊಳ್ಳುತ್ತ, ಊರಿಗೆ ಹೋಗಲು ಇಷ್ಟವಿಲ್ಲದರ ನೆವಗಳು ಇವು ಎಂದು ನನ್ನನ್ನು ನಾನು ನಂಬಿಸ್ಕೊಳ್ಳುತ್ತ ಕುಳಿತಿದ್ದೆ. ಊರಿಗೊಂದು ಅವಕಾಶ ಕೊಟ್ಟರೆ, ನನ್ನ ‘ಇಲ್ಲ’ಗಳ ಪಟ್ಟಿಯಲ್ಲಿ ಏನೆಲ್ಲ ಹೇಳಬಹುದು? ಬದಲಾವಣೆಯನ್ನ ಹೇಗೆಲ್ಲ ಗುರುತಿಸಬಹುದು? ಚಿಂತೆಯಾಯ್ತು.

“ಊಹೂಂ… ನಾನು ಊರಿಗೆ ಹೋಗೋದಿಲ್ಲ!” ದಿಗಿಲಿನ ದಾರಿಯನ್ನೇ ಮುಚ್ಚಿಹಾಕಿದೆ.

Blog at WordPress.com. | Theme: Pool by Borja Fernandez.
Entries and comments feeds.