ಅಂವ, ‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!
September 20, 2008 at 7:24 am | In ಕಡ ತಂದಿದ್ದು... | 11 CommentsTags: ಗಂಡಸ್ರ ಗೋಳು!
ಇದೊಬ್ಬ ಗೆಳೆಯ ಬರೆದಿದ್ದು. ಇಂಥದ್ದು ಬಹಳ ಬರೆದಿದಾನೆ. ಅದೆಲ್ಲ ಗಂಡಸ್ರ ಗೋಳಂತೆ. ಹಾಗಂದಿದಾನೆ. ನಿಮಗೂ ನನ್ ಬ್ಲಾಗಲ್ಲಿ ಹೆಂಗಸರ ಸುಖದುಃಖ ಓದಿಯೋದಿ ಬೇಜಾರ್ ಬಂದಿರಬಹುದಲ್ವ? ಅದಕ್ಕೆ ಇದನ್ನ ಇಲ್ಲಿ ಹಾಕ್ತಿದೇನೆ. ಮುಂದೆಯೂ ರೆಗ್ಯುಲರ್ರಾಗಿ ಹಾಕುವ ಇರಾದೆ ಇದೆ. ಆಗಲಾದ್ರೂ ನೀವು ನಂಗೆ ಕೊಟ್ಟಿರುವ ‘ಬಿರುದು- ಬಾವಲಿ’ಗಳನ್ನ ವಾಪಸ್ ತೊಗೊಳ್ತೀರೇನೋ ಅನ್ನುವ ದೂರದ ಆಸೆ ನಂದು!
~
ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ ಯಾವಾಗ್ಲೂ ಅನುಮಾನ. ನೀನು ಇಂಟೆಲಿಜೆನ್ಸ್ ಗ್ರೂಪ್ನಲ್ಲಿರಬೇಕಿತ್ತು” ಅಂತ ಕಿಚಾಯಿಸ್ತಲೇ ಇರ್ತಿದ್ರು. ನಾನೂ ಸುಮ್ಮನಾಗಿಬಿಡ್ತಿದ್ದೆ.
ಮೊನ್ನೆ ಮಾತ್ರ ನನ್ನಿಂದ ಸುಮ್ಮನಿರಲಿಕ್ಕಾಗಲೇ ಇಲ್ಲ. ಘಟ್ಟದ ಕಡಿದಾದ ರಸ್ತೆಯಲ್ಲಿ ನಮ್ಮ ಗಾಡಿ ದಾಟುವಾಗ ರಾತ್ರಿ ಒಂದೂವರೆ. ಜೊತೆಗಿದ್ದವರಿಗೆಲ್ಲ ಕಂಠಮಟ್ಟ ನಿದ್ದೆ, ಅಷ್ಟೇ ಎಣ್ಣೆ. ‘ ರಾತ್ರಿ ಎಲ್ರೂ ಮಲಗಿಬಿಡಬೇಡ್ರೋ, ಡ್ರೈವರ್ರೂ ತಾಚಿ ಮಾಡಿಬಿಡ್ತಾನೆ! ಆಮೇಲೆ, ಬೆಳಗ್ಗೆ ಶೂಟಿಂಗೂ ಇಲ್ಲ… ಷರಟಿಂಗೂ ಇಲ್ಲ!!’ ಅಂದಿದ್ರು ಪ್ರೊಡ್ಯೂಸರ್ರು. ಅದಕ್ಕೇ, ಘಟ್ಟದ ಬೋರು ಬೋರು ರಸ್ತೇಲೂ ಡ್ರೈವರ್ ಮಹೇಶಂಗೆ ಸಾಥ್ ಕೊಡೋದಕ್ಕೆ ನಾನು ಗಂಟು ಬಿದ್ದಿದ್ದೆ.

ಮೊಬೈಲ್ ರಿಂಗಾಯ್ತು. ಸರಿಯಲ್ಲದ ಹೊತ್ನಲ್ಲಿ ಹೆಂಡ್ತಿ ಕರೆ ಮಾಡೋಲ್ಲ. ಎಲ್ರೂ ಮಲಗಿರೋ ಹೊತ್ತು, ಕರರಕರೆ ಮಾಡೋದು ಸೆಟ್ ಅಪ್ ಗಳೇ! ಮಹೇಶನತ್ತ ತಿರುಗಿದೆ. ಅವನ ಕಂಗಳಲ್ಲಿ ಮುಚ್ಚಿಡಲೆತ್ನಿಸುವ ಭಯಾನಕ ಅಸಹನೆ. ನೀವೆಣಿಸೋ ಅಂಥಾದ್ದೇನಿಲ್ಲ ಬಿಡಿ! ಅನ್ನುವ ಭಾವ. ಆಮೇಲೆ ಭಾಳ ಹೊತ್ತು ಗಾಡಿ ಓಡಿಸ್ಲಿಲ್ಲ. ಸ್ವಲ್ಪ ದೂರದಲ್ಲೇ ಕಾರಿಂದ ಇಳಿದು, ಬದಿಗೆ ಬಂದು ನಿಂತ. ಪಾಪಿ! ಸಿಗರೇಟೂ ಸೇದದವನು!! ನಾನೇ ಒಂದು ದಮ್ ಎಳೆದು, ಅವನ ನಗುವಿನ ಹಿಂದಿದ್ದ ಅಳುವನ್ನ ಕೆಣಕಿದೆ. ಮಹೇಶ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ.
ಮನೆಗೆಲಸಕ್ಕೆ ಬರತಿದ್ದ ತಾಯಮ್ಮನ ಮುದ್ದಾದ ಮಗಳು ಚಂದ್ರಿಯ ಬಗ್ಗೆ ಹೇಳಿದ. ಅವಳೊಡನೆ ತಾನು ನೋಡಿದ ಒಂದೇ ಒಂದು ಸಿನೆಮಾ ಬಗ್ಗೆ ಹೇಳಿದ. ಕೊನೆಗೆ, ಅಮ್ಮ ಸಾಯುವಾಗ ಅಣ್ಣನ ಮಗಳನ್ನೇ ಮದುವೆಯಾಗೋದಾಗಿ ಮಾತು ತೊಗೊಂಡಿದ್ದು, ಅಮ್ಮ ಹೇಳಿದಾಳೆ ಅಂತ ಹಳ್ಳಕ್ಕೆ ಬೀಳ್ಬೇಡ ಅಂತ ತಮ್ಮ ಹೇಳಿದ್ದು, ಚಂದ್ರಿಯ ಕ್ಷಮೆ ಕೇಳಿ ಮಾವನ ಮಗಳಿಗೆ ತಾಳಿ ಕಟ್ಟಿದ್ದು, ಎಲ್ಲವನ್ನೂ ಹೇಳಿಕೊಂಡ. ಅವತ್ತು ಚಂದ್ರಿಯ ಕಂಗಳು ನಿಗಿನಿಗಿ ಕೆಂಡವಾಗಿದ್ದನ್ನ ನೆನಸ್ಕೊಂಡ.
ಎಲ್ಲ ಸರಿ ಹೋಯ್ತಲ್ಲ? ಮತ್ಯಾಕ್ ನೋವು? ಅಂದಿದ್ದಕ್ಕೆ, ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ.
ಮೊದಲ ರಾತ್ರಿ ದಿವ್ಯ ರಾತ್ರಿ. ಆಸೆ- ಆಶೋತ್ತರಗಳ ಕಲಸುಮೇಲೋಗರ ಅದು. ಎಷ್ಟೋ ದಿನ ಅಮುಕಿಕೊಂಡಿದ್ದ ಕನಸು ಪೂರ್ಣವಾಗೋ ದಿನ. ಪೂರ್ ಮಹೇಶ! ಹಾಸಿಗೆ ಮೇಲೆ ಬಿಕ್ಕಿ ಬಿಕ್ಕಿ ಅಳುತ್ತ ಕೂತ ಹೆಂಡತಿ…. ಮುಟ್ಟಿದರೆ ಚೀರುತಿದ್ದವಳು. ಮಹೇಶ ಹೈರಾಣಾದ. ಮೊದಲ ರಾತ್ರಿ, ನೆಲದ ರಾತ್ರಿಯಾಯ್ತು. ಹಾಲು, ಸೇಬು, ಚೆಲ್ಲಾಪಿಲ್ಲಿಯಾದ ಹೂವಿನ ಹಾಸಿಗೆ, ಬೆಳಗಿನ ಜಾವದ ಮೈಮುರಿತ, ಎಲ್ಲವೂ ಕನಸಾಗಿಯೇ ಉಳಿಯಿತು.
ಅವನೂ ಕಾರಣ ಕೇಳಲಿಲ್ಲ. ಅವಳೂ ಹೇಳಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟವನು ಸಂಜೆ ವಾಪಸು ಬರತಿದ್ದ. ‘ ನೀರು ಕಾಯಿಸ್ಲಾ? ಆಕೆ ಕೇಳ್ತಿದ್ದಳು. ಆಕಾಶ ನೋಡುತ್ತ ಹುಂ ಗುಟ್ಟುತ್ತಿದ್ದ.
ಊಟ? ಕೇಳಿದರೆ, ‘ಊಹೂಂ’ ಅಂತಿದ್ದ. ಎಣಿಸಿಟ್ಟರೆ ನಾಲ್ಕೇ ಮಾತು.
ಕಾರಿನ ಮಿರರಿನಲ್ಲಿ ಕೈಕೈ ಹಿಡಿದು ಪಿಸುಗುಟ್ಟುವ ಜೋಡಿಗಳು! ಕಂಡಾಗೆಲ್ಲ ಮಹೇಶನ ಜೀವ ಝಲ್ಲೆನ್ನುತ್ತಿತ್ತು. ತನ್ನ ರೋಮ ನಿಮಿರಿ ನಿಲ್ಲಿಸುವ ಅವಳಿಲ್ಲದೇ ಖಿನ್ನನಾಗುತ್ತಿದ್ದ. ಬರೀ ಪ್ರಶ್ನೆಗಳು. ನಿದ್ರೆಗೆ ಜಾರುವುದೊಂದೇ ಉತ್ತರವೆನಿಸಿತು.
ಆಸ್ಪತ್ರೆಯ ಹಾಸಿಗೆ ಮೇಲೆ ಬಿದ್ದುಕೊಂಡವನಿಗೆ, ಅಸ್ಪಷ್ಟವಾಗಿ ಕೇಳ್ತಿತ್ತು. ಒಟ್ಟು ಮೂವತ್ತೆಂಟು ಮಾತ್ರೆಗಳು. ಬದುಕಿದ್ದೇ ಪುಣ್ಯ!
ಮನೇಲಿ ರಾದ್ಧಾಂತ. ನಾನು ಮೊದ್ಲೇ ಹೇಳಿರಲಿಲ್ವಾ? ಅಂದ ತಮ್ಮ. ಅತ್ತೆ- ಮಾವ ಮಗಳಿಗೆ ಬುದ್ಧಿವಾದ ಹೇಳಿದರು.
ಇವಳನ್ನ ಮದುವೆಯಾಗಿ ನಾನು ಷಂಡನಾದೆ. ನಾಲ್ಕು ವರ್ಷವಾದ್ರೂ ಒಂದು ಮಗುವಿಲ್ಲ. ಎಲ್ರೂ ಛೇಡಿಸ್ತಿದ್ದಾರೆ ಅಂದ. ಅವಳು ಎದ್ದಳು. ಅಷ್ಟೇ ತಾನೆ? ಬಾ ಮಲಗ್ತೀನಿ. ಮಗು ಕೊಟ್ ಬಿಡು ಅಂದ್ಲು. ಯಾರಿಗೆಷ್ಟು ಅರ್ಥವಾಯ್ತೋ? ಸಮಸ್ಯೆ ತೀರ್ತು ಅಂತ ಚೆನ್ನಾಗಿ ಉಂಡು ಹೊರಟ್ರು.
ಅವತ್ತು ರಾತ್ರಿ… ಅದೇನು ಮೊದಲ ರಾತ್ರಿಯಲ್ಲ. ಅವನು ಮೊದಲೇ ಹಾಸಿಗೆ ಮೇಲೆ ಬಿದ್ದುಕೊಂಡ. ಅರ್ಧ ಮಂಚ ಆಕ್ರಮಿಸಿ. ಅವಳು, ಅವನ ಪಕ್ಕದಲ್ಲೇ ಬಿದ್ದುಕೊಂಡಳು. ಅವನಾಗಿಯೇ ಮುಟ್ಟಲಿಲ್ಲ. ಅವಳೇ ಕೆಣಕಿದಳು. ಮಗು ಬೇಕಂದ್ಯಲ್ಲಾ! ಕೊಡು ಬಾ!!
ಅದಕ್ಕೇ ಕಾಯ್ತಿದ್ದೋನಂತೆ, ಭೋರ್ಗರೆದ, ಬಸವಳಿದು ಬಿದ್ದ.
ನಾನು ಗಾಬರಿಯಾಗಿ ನಿಂತಿದ್ದೆ. ” ಸಾರ್… ಹೆಣವನ್ನೂ ಸಂಭೋಗಿಸಬಹುದು ಗೊತ್ತಾ? ” ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೆ. ” ನಾನು ಅವತ್ತು ಅದನ್ನೇ ಮಾಡಿದ್ದು.” ” ಯಾವ ಜನ್ಮದ ಪುಣ್ಯವೋ? ನನ್ನ ಶ್ರಮದ ಒಂದು ಕಣ ಅವಳ ಗರ್ಭ ಸೇರ್ತು. ನಾನೂ ಅಪ್ಪನಾದೆ! ಹೆರಿಗೆಯಾಗಿ ಈವತ್ತಿಗೆ ಹದಿನೈದು ದಿನ. ಏನಾದ್ರೂ ಬೇಕಿದ್ರೆ ಫೋನ್ ಮಾಡು ಕಳಿಸಿಕೊಡ್ತೀನಿ ಅಂದಿದ್ದೆ. ಒಣ ಜಂಭ ಬೇರೆ. ಯಾರೂ ಇಲ್ಲದ ಹೊತ್ನಲ್ಲಿ ಹೀಗೆ ಕಾಲ್ ಮಾಡ್ತಾಳೆ.”
“ಎಲ್ಲಾ ಚಂದ್ರಿಯ ಶಾಪ ಸಾರ್”.
ಸಿಗರೇಟು ಮುಗಿದು ತುಟಿ ಸುಟ್ಟಿತು.
ಮದುವೆ ಆಗ್ಬೇಕು ಸಾರ್. ಆಗ ಒಳಗಿನ ದುಃಖ ಕರಗಿಹೋಗತ್ತೆ. ನಗದೇ ಬೇರೆ ದಾರಿಯೇ ಇರೋಲ್ಲ! ಅಂದವನು ನಗು ನಗುತ್ತಲೇ ಗಾಡಿ ಹತ್ತಿದ. ನಾನೂ ಕೂಡಾ. ಆದ್ರೆ ಈಗ, ಮಲಗ್ಬೇಕಂದ್ರೂ ನಿದ್ದೆಯೇ ಬರಲಿಲ್ಲ. . . . .
- ಚಂದಿರ
Blog at WordPress.com. | Theme: Pool by Borja Fernandez.
Entries and comments feeds.