ಸಹಬ್ಲಾಗಿಗರ ಬಾಲ ಲೀಲೆ

May 16, 2008 at 2:23 pm | In Uncategorized | 4 Comments

 ನನ್ನ ಬಾಲ್ಯಕಾಲದ ಒಂದಷ್ಟು ತಪ್ಪು ತಿಳುವಳಿಕೆಗಳನ್ನು ಪಟ್ಟಿ ಮಾಡಿದ್ದೇ ಒಂದಕ್ಕಿಂತ ಒಂದು ಸ್ವಾರಸ್ಯಕರವಾದ ಸಂಗತಿಗಳನ್ನು ಸಹಬ್ಲಾಗಿಗರು ಹಂಚಿಕೊಳ್ಳತೊಡಗಿದರು. ಅವೆಲ್ಲವೂ ಕಮೆಂಟ್ ಬಾಕ್ಸಿನಲ್ಲಿ ಕೂಡುವುದಕ್ಕಿಂತ ಇಲ್ಲಿ, ಹೀಗೇ ಚೆನ್ನ ಅನಿಸಿತು. ಅದಕ್ಕೇ….

೧.ಆಲದ ಮರಗಳಲ್ಲಿ ಪ್ರೇತ ಇರುತ್ತೆ

೨.ಬೆಂಗಳೂರಿನಲ್ಲಿರೋರೆಲ್ಲ ಭಾರೀ ಶ್ರೀಮಂತರು.

೩.ಬೆಳ್ಳಕ್ಕಿ ನೋಡಿದ್ರೆ ಹೊಸ ಬಟ್ಟೆ ಸಿಗುತ್ತೆ.

೪.ಸುಮಾರು ಏಣಿ ಹತ್ತಿ ಹೋದ್ರೆ ಆಕಾಶ ಮುಟ್ಟಬಹುದು….. ಹೀಗೆ ಹಲವಾರು. ~  ಮನಸ್ವಿನಿ

ಹೌದು ನಾವು ಚಿಕ್ಕವರಿದ್ದಾಗ ಇಂತಹ ಸಂಗತಿಗಳೇ ಹೆಚ್ಚು ಚರ್ಚೆಯಾಗುತ್ತಿದ್ದವು.
ನಿಮ್ಮ ಮಾತಿನೊಂದಿಗೆ ಇವೂ ಸೇರಿಸಿಕೊಳ್ಳಿ..
೧. ಅಮ್ಮನನ್ನು ಕಾಗೆ ಮುಟ್ಟಿದರೆ ತಿಂಗಳ ರಜಾ..
೨.ಪುಸ್ತಕದೆಡೆಯಲ್ಲಿ ಕಾಸರಕನ ಮರದ ಸೊಪ್ಪು ಇರಿಸಿದರೆ ಶಾಲೆಯಲ್ಲಿ ಪೆಟ್ಟು ಇಲ್ಲ…
೩.ಕಲ್ಲುಗಳನ್ನು ಹಿಡಿದುಕೊಂಡು ಹೋದರೆ ಭೂತಗಳ ಕಾಟವಿಲ್ಲ..
೪.ಒಂಟಿ ಬ್ರಾಹ್ಮಣನನ್ನು ನೋಡಿದರೆ ಹಾಳು..  ~ ಮಹೇಶ್

I studied my 4th standard at Theerthahalli. I had a army cap (given by some relative) and a bottu on my forehead! One day, a foreign lady stopped me while i was on my way to school and kissed me. It is a moment which I still cherish. I just remembered this while reading your article.
I had thought, in my childhood that only my AJJI prepares Dosas which would have numerous holes. You may believe it or not, but this was my firm belief until I saw a similar dosa in another house in my native village.
Childhood memories are like a dream now. They haunt me more than any night dreams. I can never take them back, I can never share it with others… such a treasure of experiences….
Thanks for making me a bit nostalgic. ~ ಬೇಳೂರು ಸುದರ್ಶನ                                    

೧. ಹುಣಿಸೇ ಮರದಲ್ಲಿ ಭೂತ-ಪ್ರೇತಗಳಿರತ್ವೆ.
೨. ಅಮ್ಮನ ಹೊಕ್ಕುಳಿಂದ ಮಗು ಹೊರಗೆ ಬರತ್ತೆ.
೩. ಹುಡುಗಿಯರು ಮರ ಹತ್ತಿದ್ರೆ, ಸೈಕಲ್ ಹೊಡೆದ್ರೆ ಮಕ್ಕಳಾಗೋಲ್ಲ.
೪. ಪ್ರೇತಗಳ ಕಾಲು ಹಿಮ್ಮುಖವಾಗಿರತ್ತೆ.
೫. ಬೆಳ್ಳಕ್ಕಿ ನೋಡಿದ್ರೆ ಅದೃಷ್ಟ ( ಗುಡ್ ಲಕ್).
೬. ಕೇರೆ ಹಾವಿನ ಬಾಲ ತಲೆಗೂದಲಿಗೆ ಮುಟ್ಟಿಸ್ಕೊಂಡ್ರೆ ಕೂದಲು ಊಊಊಊದ್ದ ಬೆಳಿಯತ್ತೆ.
೭. ಬಡವರು ಸಾಧು ವ್ಯಕ್ತಿಗಳು ಸ್ನೇಹಜೀವಿಗಳು, ಶ್ರೀಮಂತರು ಜೋರು, ಸಿಡುಕರು (ಪಿಕ್ಚರ್ ಪ್ರಭಾವ).
೮. ಸಿಡುಬಿನ ಕಲೆ ಮುಖದವರೆಲ್ಲ ಸಿಡುಕರು. ಅದಕ್ಕೇ ಅವ್ರ ಮುಖದಲ್ಲಿ ಕಲೆ.
೯. ಗಾಡ್ ಪ್ರಾಮಿಸ್ ಹಾಕಿ ಪ್ರಾಮಿಸ್ಸಿಗೆ ತಪ್ಪಿದ್ರೆ ಅಮ್ಮ-ಅಪ್ಪ-ನಾವು ಮೂವರೂ ಸತ್ತು ಹೋಗ್ತೀವಿ.
೧೦. ಉದ್ದ ಬಾಲವಿರುವ ಹಸುವಿನ ಬಾಲದ ಕೂದಲನ್ನು ತಲೆಗೆ ಮುಟ್ಟಿಸಿಕೊಂಡ್ರೆ ನಮ್ಮ ಕೂದಲೂ ಅಷ್ಟೇ ಉದ್ದ ಬೆಳಿಯತ್ತೆ…. ಇನ್ನೂ ಸುಮಾರಿವೆ. ಸದ್ಯಕ್ಕೆ ಇಷ್ಟೇ ನೆನಪಾಗಿದ್ದು.  ~ ಸುಪ್ತದೀಪ್ತಿ

ಕರಿ ಇರುವೆ ಅಂಗೈ ಇಂದ ಮೊಳಕೈ ವರೆಗೆ ಸರಾಗವಾಗಿ ಹತ್ತಿಕೊಂಡು ಹೋದರೆ Exam Pass!!!!!!  ~ Prasad

೧. ಕಾಗೆ ಅಥವಾ ಬೀದಿ ನಾಯಿ ಮುಟ್ಟಿಸಿಕೊಂಡರೆ ಹೆಂಗಸರು ಹೊರಗಾಗ್ತಾರೆ.
೨. ಮದುವೆ ಆದ್ರೆ ಸಾಕು, ಮಕ್ಕಳಾಗ್ತವೆ. )
೩. ಮಗು ಹೊರಬರೋದು ಅಮ್ಮನ ಹೊಕ್ಕಳಿಂದ.
೪. ಒಳ್ಳೆಯ ದೆವ್ವಗಳೂ ಇರ್ತವೆ ( ಚಂದಮಾಮ ಪರಿಣಾಮ )
೫. ಬೆಳ್ಳಕ್ಕಿಗಳು ಹಾರೋಗುವಾಗ ಬೆರಳು ತೋರಿಸಿದರೆ ಉಗುರಿನ ಮೇಲೆ ಬಿಳಿಕಲೆಗಳು ಮೂಡ್ತವೆ.

೬. ಗಾಡಿಗಳ ನಂಬರ್ ಗಳಲ್ಲಿ ಒಂದೇ ಸಂಖ್ಯೆ ಒಂದಕ್ಕಿಂತ ಜಾಸ್ತಿ ಇದ್ದುದನ್ನು (೫೫ , ೩೩೩ ಈ ತರ) ಕಂಡರೆ ಜೊತೆಗಿದ್ದವರಿಗೆ ಆ ಸಂಖ್ಯೆ ಹೇಳುತ್ತಾ ನಿಧಾನಕ್ಕೆ ಕೈಯಿಂದ ಎರಡುಸಲ ಗುದ್ದಿದರೆ ಅವತ್ತಿನ ದಿನ ಸ್ವೀಟ್ ಸಿಗುತ್ತದೆ ) (ದಿನಾ ಗುದ್ದುತ್ತಿದ್ವಿ, ಸ್ವೀಟ್ ಸಿಕ್ಕಿದರೆ ಅದು ಗುದ್ದಿದ್ದಕ್ಕೇ ಸಿಕ್ಕಿದ್ದು ಅಂತ ಖುಷಿ ಪಡ್ತಿದ್ವಿ)
೭. ಕೆಲವು ಬಿಕ್ಷುಕರು (ಹೆಚ್ಚಾಗಿ ಬಿಳಿಗಡ್ಡ ಇರೋ ಮುದುಕರು) ಮಾಟಗಾರರು. ಅವರ ಹತ್ತಿರ ವಶೀಕರಣದ ಪುಡಿ ಇರತ್ತೆ. ನಮ್ಮ ಮೇಲೆ ಅದನ್ನು ಹಾಕಿ ಅವರ ಜೊತೆಗೇ ಕರೆದುಕೊಂಡು ಹೋಗಿಬಿಡ್ತಾರೆ.  ~ ವಿಕಾಸ ಹೆಗ್ಡೆ

೧. ಕೆಂಬೂತ (ಕೆಂಪಿ ಬಣ್ಣದ ಒಂದು ಹಕ್ಕಿ) ಕಂಡರೆ ಅವತ್ತು ಸ್ವೀಟ್ ಸಿಗತ್ತೆ (ನಂಗಂತೂ ಸುಮಾರ್ ಸಲ ಸಿಕ್ಕಿದ್ ಹೌದು!).
೨. ಚಾಕ್ಲೇಟ್ ಅಕಸ್ಮಾತಾಗಿ ನುಂಗಿಹೋದ್ರೆ ತಲೆ ಮೇಲಿಂದ ಗಿಡ ಹುಟ್ಟುತ್ತೆ! (ಹಾಗಂತ ಎದುರಿಗಿರೋರು ಹೇಳಿದಾಗ ಹೆದ್ರಿಕೆ ಆಗ್ತಿತ್ತಾದ್ರೂ ಗಿಡ ಹುಟ್ಟಿ ಅದ್ರಲ್ಲಿ ಸಿಕ್ಕಾಪಟ್ಟೆ ಚಾಕ್ಲೇಟೇ ಬಿಡತ್ತೆ ಅಂತಾದ್ರೆ ‘ಹುಟ್ಲಿ ಬಿಡು’ ಅಂದ್ಕೊಂಡು ಖುಶಿ ಪಟ್ಟಿದ್ದೂ ಇದೆ!)
೩. ಗುಡುಗು-ಮಿಂಚು-ಸಿಡ್ಲು ಯಾಕೆ ಬರತ್ತೆ ಅಂದ್ರೆ ಆಕಾಶದಲ್ಲಿ ಯಾರೋ ಬುಲ್ಲೆಟ್ ಬೈಕು ಸ್ಪೀಡಾಗಿ ಬಿಡ್ತಿರ್ತಾರೆ. (ಜಾತ್ರೆಯಲ್ಲಿ ಬಾವಿಯಲ್ಲಿ ಬೈಕು ಹೊಡೆಯೋದು ನೋಡಿದ ಪರಿಣಾಮ; ಅಲ್ದೇ ನಂಗೆ ಗುಡುಗು-ಸಿಡ್ಲು ಅಂದ್ರೆ ತುಂಬಾ ಭಯ ಇತ್ತಾದ್ರಿಂದ ಅದನ್ನ ಹೋಗಲಾಡಿಸ್ಲಿಕ್ಕಾಗಿ ಅಪ್ಪ ಹೇಳ್ತಿದ್ದ ಸಮಾಧಾನ.)
೪. ಡಾಕ್ಟ್ರು ಮನೆಗೆ ಹೋದ್ರೆ ಇಂಜೆಕ್ಷನ್ ಕೊಡ್ತಾರೆ, ಮೇಷ್ಟು ಮನೆಗ್ ಹೋದ್ರೆ ಹೊಡೀತಾರೆ, ಪೋಲೀಸ್ರಂತೂ ಹಿಡ್ಕಂಡ್ ಹೋಗಿ ಜೈಲಿಗ್ ಹಾಕಿ ಬೂಟ್ ಕಾಲಲ್ ಒದೀತಾರೆ. (ನಮ್ಮೂರ್ ಡಾಕ್ಟ್ರು ಮನೆಗೆ ಹೋಗಲಿಕ್ಕೆ ನಾನು ತಪ್ಪಿಸಿಕೊಳ್ಳುತಿದ್ದುದು ಇದೇ ಕಾರಣಕ್ಕೆ!)
೫. ಬಸ್ ಡ್ರೈವರುಗಳಿಗಿಂತ ಜಾಣರು, ನಿಪುಣರು, ಸಾಹಸಿಗಳು, ಒಳ್ಳೆಯವರು ಮತ್ತಿನ್ಯಾರೂ ಇಲ್ಲ. ಹಾರನ್ನಲ್ಲೇ ಸಂಗೀತ ಹರಿಸೋದೇನು, ಮಕ್ಕಳಿಗೆ ಕೈ ಮಾಡೋದೇನು, ಸ್ಪೀ…ಡಾಗಿ ಓಡ್ಸೋದೇನು, ಗೇರ್ ಹಾಕೋದೇನು, ಬೀಡಿ ಸೇದ್ತಾನೇ ಸ್ಟಿಯರಿಂಗ್ ತಿರಗ್ಸೋದೇನು.. ಆಹ್! (ನಾನಂತೂ ಡ್ರೈವರೇ ಆಗ್ಬೇಕು ಅಂದ್ಕೊಂಡಿದ್ದೆ.)
೬. ಕಾಲು ತೊಳೆಯುವಾಗ ಹಿಮ್ಮಡಕ್ಕೆ ನೀರು ಹಾಕಿಕೊಳ್ಳದಿದ್ದರೆ ತಕ್ಷಣ ದೆವ್ವ (ಶನಿ?) ಹಿಡ್ಕೊಳತ್ತೆ. (ಅಬ್ಬ!)
೭. ‘ಹರೀಶಿವ ಮೃತ್ಯುಂಜಯ’ ಅಂತ ಹೇಳ್ಕೊಂಡು ಮಲ್ಗಿದ್ರೆ ರಾತ್ರಿ ಕೆಟ್ಟ ಕನಸು ಬೀಳಲ್ಲ. (ಸವಿಗನಸುಗಳನ್ನ ತಡೀಲಿಕ್ಕೆ ಯಾವ ಮಂತ್ರವೂ ಇಲ್ಲ, ಬಚಾವ್!)
೮. ಬಯಲಲ್ಲಿ ಮಲ್ಕೊಂಡಾಗ ಹಕ್ಕಿ ನಮ್ಮ ಮೇಲೆ ಅಡ್ಡ ಹಾರಿ ಹೋದ್ರೆ ಸತ್ ಹೋಗ್ತೀವಿ. (ನಾನು ನಮ್ಮೂರ ಹುಡುಗಿಯೊಬ್ಬಳಿಗೆ ಹಾಗೆ ಹೆದರಿಸೀ…ಅಯ್ಯೋ ಬೇಡ ರಾದ್ಧಾಂತ!)
೯. ನಾಣ್ಯಗಳನ್ನ ಹುಗಿದಿಟ್ರೆ ಅದು ಡಬ್ಬಲ್ ಆಗತ್ತೆ! (ಪ್ರಯೋಗ ಮಾಡ್ದೇ ಬಿಡ್ತೀವಾ? ಮನೆಯಿಂದ ಇಪ್ಪತ್ ಪೈಸ, ನಾಲ್ಕಾಣೆ ನಾಣ್ಯಗಳನ್ನ ತಗೊಂಡ್ ಹೋಗಿ ಹುಗಿದ್ವಿ. ನಮಗಿಂತ ಸ್ವಲ್ಪ ದೊಡ್ಡವನಿದ್ದ ಫ್ರೆಂಡೊಬ್ನು ಮರುದಿನ ನಾವು ಹೋಗಿ ನೋಡೋದ್ರೊಳಗೆ ಮತ್ತೊಂದೆರಡು ನಾಣ್ಯಗಳನ್ನ ಅದ್ರೊಳಗೆ ಸೇರಿಸಿ ಇಟ್ಟಿದ್ದ. ನಾಣ್ಯ ಜಾಸ್ತಿ ಆದದ್ದು ನೋಡಿ ನಮಗೆ ಹಬ್ಬ! ಆಮೇಲೆ ಅವನ್ ಮನೇಲಿ ಬೈದೂ, ನಮಗೆ ಗೊತ್ತಾಗೀ….)
೧೦. ವಿಮಾನ ಮೇಲೆ ಹೋಗುವಾಗ ಬಂಗಾರಪ್ಪ (ನಮ್ದು ಸೊರಬ ತಾಲೂಕು!) ಏನಾದ್ರೂ ಅದ್ರಲ್ಲಿ ಇದ್ರೆ ದುಡ್ಡಿರೋ ಸೂಟ್‍ಕೇಸ್ ಕೆಳಗಡೆ ಬಿಸಾಕೋ ಛಾನ್ಸಸ್ ಇರತ್ತೆ! ಆದ್ರಿಂದ, ಪ್ರತಿ ವಿಮಾನದ ಸದ್ದಾದಾಗ್ಲೂ ಹೊರ್ಗಡೆ ಬಂದು ನೋಡ್ಬೇಕು! ~ ಸುಶ್ರುತ ದೊಡ್ಡೇರಿ

ನರಿಯ ಮುಖ ನೋಡಿದ್ರೆ ಒಳ್ಳೆಯದಾಗುತ್ತೆ..(ಹೆಚ್ಚಿನ ಬಾರಿ ನರಿಯ ಹಿಂಭಾಗವೆ ಕಾಣೋದ್ರಿಂದ ಇರ್ಬೇಕು!! ;) )  ~ ಶಂಕರ್
 

ಬಾಲ್ಯ ಕಾಲದ ಕೆಲವು ತಪ್ಪು ತಿಳುವಳಿಕೆಗಳು…

May 15, 2008 at 10:56 am | In ನಿಮ್ಮೊಂದಿಗೆ | 5 Comments

 

ಈಗ ಅದನ್ನೆಲ್ಲ ನೆನೆಸಿಕೊಂಡ್ರೆ ಮಜಾ ಅನ್ನಿಸತ್ತೆ. ಚಿಕ್ಕಂದಿನ ಮೂಢ ಅನ್ನಲಾಗದ ಆ ಮುಗ್ಧ ನಂಬಿಕೆಗಳು ಈಗ ಅದೆಷ್ಟು ಕ್ಷುಲ್ಲಕವಾಗಿ ಕಂಡು ನಗು ತರಿಸುತ್ತೆ ಗೊತ್ತಾ? ಅಂಥದೊಂದಷ್ಟು ಹೀಗೆ ನೆನಪಾದವು. ಅವನ್ನ ಪಟ್ಟಿ ಮಾಡಲಾ? ಅಥವಾ ಹಾಗೆ ಬರೆದುಕೊಳ್ಳುತ್ತಾ ಹೋಗಲಾ? ಊಹೂಂ… ಪಟ್ಟಿ ಮಾಡಿ ಸುಮ್ಮನಾಗೋದೇ ಒಳ್ಳೇದು. ಆದ್ರೆ ಕೆಲವಕ್ಕೆ ಕ್ಲಾರಿಫಿಕೇಶನ್ನು ಕೊಡ್ತೀನಿ ಆಗಬಹುದಾ?

೧. ಅಮ್ಮ ವಾಂತಿಮಾಡಿದಾಗ ಮಗು ಹೊಟ್ಟೆಯಿಂದ ಹೊರಬರುತ್ತೆ

೨. ದೇವ್ರಿಗೆ ಕಣ್ಣೇ ಇರೋದಿಲ್ಲ. (ಆಗಾಗ ಅಮ್ಮ ಹಾಗನ್ನುತ್ತಿದ್ದರಿಂದ ಬಹಳ ಕಾಲ ಹಾಗಂತ ನಾನೂ ತಮ್ಮನೂ ನಂಬಿಕೊಂಡುಬಿಟ್ಟೆದ್ದೆವು!)

೩. ಭೂತಗಳು ಅಂದ್ರೆ ಹೆಣ್ಣು. ಗಂಡುಗಳೆಲ್ಲ ಪಿಶಾಚಿಗಳು! (ಸಾವಧಾನವಾಗಿ ಅರ್ಥೈಸಿಕೊಳ್ಳಿ ;) )

೪. ಹಿಮ್ಮಡಿಗೆ ಭಾರ ಹಾಕಿ ರೌಂಡಗೆ ಸುತ್ತಿದ್ರೆ ಸ್ಕೂಲಿನ ಹಸು ಸತ್ತು ಹೋಗತ್ತೆ

೫. ಮದರ್ ಪ್ರಾಮಿಸ್’ ಹಾಕಿದ್ರೆ ಅಮ್ಮ ಸತ್ತುಹೋಗ್ತಾಳೆ. (ಪ್ರವೀಣ ಅನ್ನುವ ಗೆಳೆಯ ಅಮ್ಮನ ಮೇಲೆ ಸಿಟ್ಕೊಂಡು ಸಿಕ್ಕವರಿಗೆಲ್ಲ ‘ಮದರ್ ಪ್ರಾಮಿಸ್ ಹಾಕಿದ್ದ! ಈಗ ಅಮ್ಮ ಮಗ ಸುಖವಾಗಿದಾರೆ, ಊರಲ್ಲಿ)

೬. ಡಿಕ್ಕಿ ಹೊಡ್ಕೊಂಡ್ರೆ ಜಗಳ ಆಗತ್ತೆ.

೭. ಸಾಬರ ಮನೇಲಿ ತಿಂದ್ರೆ ಜಾತಿ ಕೆಡತ್ತೆ (ಅಂತ ಅಧಿಕೃತವಾಗಿ ನಂಬಿದ್ರೂ ಪ್ರತೀ ರಂಜಾನಿನ ದಿನ ತಪ್ಪದೆ ಹಿತ್ತಲ ಸಾಹೇಬರ ಮನೆಯಲ್ಲಿ ಅಮ್ಮನ ಸಹಿತ ನಾವೆಲ್ರೂ ಶಾವಿಗೆ ಪಾಯಸ ಕುಡೀತಿದ್ವಪ್ಪ!) :)

೮. ಹಿಂದೂಗಳಂದ್ರೆ ಅನಾಗರಿಕರು. ಅವರಲ್ಲಿ ಓದಿದವ್ರು ಕಡಿಮೆ. ಅವ್ರು ಎಳೆ ಮಕ್ಕಳನ್ನ ಮೊಸಳೆಗೆಸೀತಾರೆ! ( ಶಾಲೆಯಲ್ಲಿ ಹೇಳಿಕೊಟ್ಟ ಪಾಠದ ಪರಿಣಾಮ. ಹಾಗಂತ ನನಗೆ ನಾನು ಹಿಂದೂ ಅಂತ ಗೊತ್ತಿರಲಿಲ್ಲ. ನಾವು ’ಸ್ಮಾರ್ತ’ರೆಂದುಕೊಂಡಿದ್ದೆ!) ;)

೯. ಬ್ರಾಹ್ಮಣ ಅಂದ್ರೆ ಜುಟ್ಟು ಬಿಟ್ಟೂ ಪೂಜೆ ಮಾಡುವ ಜಾತಿ. ನಾವು ಸ್ಮಾರ್ತರು, ಬ್ರಾಹ್ಮಣರಲ್ಲ! (ಹೇಗಿದೆ ನೋಡಿ! ಅಮ್ಮ ವೈಷ್ಣವರವಳು, ಅಪ್ಪ ಸ್ಮಾರ್ತ. ಅ ಕಿತ್ತಾಟ ಎಷ್ಟರ ಮಟ್ಟಿಗಿತ್ತಂದ್ರೆ, ಅವರು ಅಂತರ್ಜಾತೀಯ ಮದುವೆಯಾದ ಹಾಗೆ, ನಾವು ಕಲುಷಿತರೆನ್ನುವ ಹಾಗೆ! ಈ ಗಲಾಟೆಯಲ್ಲಿ ನಾನು ನಮ್ಮ ‘ಜಾತಿ’ಯೇ ಸ್ಮಾರ್ತ ಅಂದುಕೊಂಡಿದ್ದೆ!!

೧೦. ಬ್ರಿಟಿಷರು ಬಾರದಿದ್ರೆ ಭಾರತದಲ್ಲಿ ಕರೆಂಟೇ ಇರ್ತಿರಲಿಲ್ಲ! ರೋಡೂ ಇರ್ತಿರಲಿಲ್ಲ. ನೀರು, ನಲ್ಲಿ, ಅಯ್ಯಬ್ಬಾ!! ಭಯಾನಕ!! ಹೇಗೆ ಬದುಕಬೇಕಿತ್ತು ನಾವು!? (ಇದು ಕೂಡ ಪಾಠದ ಪರಿಣಾಮ)

೧೧. ಹುಡುಗನ ಪಕ್ಕ ಕುಂತು, ಅವನ ಹೆಗಲ ಮೇಲೆ ಕೈ ಹಾಕ್ಕೊಂಡು ಮಾತಾಡಿದ್ರೆ ಮಕ್ಕಳಾಗ್ತವೆ!

೧೨. ಯಾರಾದರೂ ವಾಂತಿ ಮಾಡಿದರೆಂದರೆ, ಅವರಿಗೆ ‘ಮೂರು ತಿಂಗಳು’ ಅಂತ ಅರ್ಥ! (ಇದು ಪಿಚ್ಚರುಗಳ ಪರಿಣಾಮ. ನನ್ನ ಅತ್ತೆ ಮಗಳು ಪಿತ್ಥಕ್ಕೆ ವಾಂತಿ ಮಾಡಿದ್ದಾಗ ಅವಳು ಗರ್ಭಿಣಿ ಅಂತ ಸುದ್ದಿ ಹಬ್ಬಿಸಿ ಪೆಟ್ಟು ತಿಂದಿದ್ವಿ ನಾನೂ, ತಮ್ಮನೂ…)

೧೩. ಬಡವರೆಲ್ಲ ಕಪ್ಪಗಿರ್ತಾರೆ. ಶ್ರೀಮಂತರೆಲ್ಲ ಕಡ್ಡಾಯವಾಗಿ ಬೆಳ್ಳಗೇ ಇರ್ತಾರೆ.

೧೪. ಪೇಟೆಯವರೆಲ್ಲ ಬುದ್ಧಿವಂತರು. ಹಳ್ಳಿ ಜನ ದಡ್ಡರು.

೧೫. ಹಾವಿನ ಹಿಂದೆ ಹೋದ್ರೆ ನಿಧಿ ಸಿಗತ್ತೆ!

೧೬. ಧಡಿಯ ಕಪ್ಪೆ ಮೇಲೆ ಮಂತ್ರಾಕ್ಷತೆ ಕಾಳು ಹಾಕಿದ್ರೆ ಅದು ರಾಜಕುಮಾರನಾಗತ್ತೆ (ಆಗಿ ಮದುವೆಯಾಗತ್ತೆ ;) )

೧೭. ಅಮ್ಮ ಹುಟ್ಟಿದಾಗಿಂದ ಅಷ್ಟೇ ದೊಡ್ಡವಳಿದ್ದಾಳೆ.

೧೮. ಅಪ್ಪ ಅಮ್ಮ ಇಬ್ರೂ ಒಟ್ಗೇ ಹುಟ್ಟಿದ್ದು!

೧೯. ಕಾಂಗ್ರೆಸ್ಸಿಂದ ಕತ್ತೆ ನಿಂತ್ರೂ ಗೆಲ್ಲತ್ತೆ (ಅಮ್ಮ ಹಾಗಂತಿದ್ದಾಗ ಅಕ್ಶರಶಃ ಕತ್ತೆ ತಲೆ ಮೆಲೆ ಬಿಳಿ ಟೋಪಿ ಹಾಕಿ ಇಮ್ಯಾಜಿನ್ ಮಾಡ್ಕೊಂಡಿದ್ದೆ ನಾನು. ಈಗ್ಲೂ ಕಾಂಗ್ರೆಸ್ ಅಂದ್ರೆ ಅದು ನೆನಪಾಗತ್ತೆ.)

೨೦. ರೈತ, ಬ್ರಾಹ್ಮಣ, ಮಾಸ್ತರು- ಈ ಮೂವರು ದಟ್ಟ ದರಿದ್ರರು (ಕಥೆಗಳ ಪರಿಣಾಮ)

೨೧. ಎರಡು ಹುಬ್ಬುಗಳ ನಡುವೆ ಸಮಾ ಕೆರೆದುಕೊಂಡ್ರೆ ದೇವ್ರು ಕಾಣತ್ತೆ (ಅಂತ ಎಲ್ಲರ ಹಣೆಯೂ ಕೆರೆಸಿ ನಾನು ಮಾತ್ರ ಬಚಾವಾಗಿದ್ದೆ!)

೨೨. ಬುಕ್ಕಲ್ಲಿ ನವಿಲುಗರಿ ಇಟ್ರೆ ಅದು ಮರಿ ಹಾಕತ್ತೆ (ಹಾಗಂತ ನಂಬಿಕೊಳ್ಳಲು ಈಗಲೂ ಇಷ್ಟ)

೨೩. ಎಕ್ಸಾಮಿಗೆ ಕಪ್ಪು ಬಟ್ಟೆ ಹಾಕ್ಕೊಂಡು ಹೋದ್ರೆ ಫೇಲಾಗತ್ತೆ

೨೪. ಸುಳ್ಳು ಹೇಳಿದ್ರೆ ದೇವ್ರು ಶಾಪ ಕೊಡತ್ತೆ ( ಈಗ ಸುಳ್ಳು ಹೇಳಬಾರದು ಅಂತ ಗೊತ್ತಾಗಿದೆ ಅಷ್ಟೇ!)

೨೫. ಹತ್ತರಲ್ಲೊಂದು ಕೋಳಿ ಹೊಟ್ಟೆಯೊಳಗೆ ಚಿನ್ನದ ಮೊಟ್ಟೆ ಇರತ್ತೆ! ( ನಾನೂ ತಮ್ಮನೂ ಕೊಯ್ದು ನೋಡೇ ಬಿಡುವ ಅಂತ ಸ್ಕೆಚ್ ಹಾಕಿ, ಬ್ರಾಹ್ಮಣಿಕೆ ದೆಸೆಯಿಂದ ಸುಮ್ಮನಾಗಿಬಿಟ್ಟಿದ್ವಿ. ಎದುರು ಮನೆ ಸುಬ್ಬ ಧಿಡೀರ್ ಶ್ರೀಮಂತನಾಗಿದ್ದು ಕೋಳಿ ಕೊಯ್ದೇ ಅನ್ನೋದು ನಮ್ಮ ನಂಬಿಕೆ!)

೨೬. ಪಿಚ್ಚರ್ ಹೀರೋ, ಹೀರೋಯಿನ್ನುಗಳೆಲ್ಲ ಗಂಡ- ಹೆಂಡ್ತೀನೇ. (ಭಾಗ್ಯದ ಲಕ್ಷ್ಮಿ ಬಾರಮ್ಮ ಸಹಿತ ನಾಲ್ಕೈದು ಪಿಚ್ಚರ್ ನೋಡಿಕೊಂಡಿದ್ದ ನಂಗೆ ಪಾರ್ವತಮ್ಮ, ರಾಜ್ಕುಮಾರ್ ಹೆಂಡ್ತಿ ಅಂತ ಗೊತ್ತಾದ ತಕ್ಷಣ ಗಾಬರಿಯಾಗಿತ್ತು. ನಾನು ಮಾಧವೀನೇ ಅವರ ಹೆಂಡ್ತಿ ಅಂದ್ಕೊಂಡ್ ಬಿಟ್ಟಿದ್ದೆ!)

೨೭. ಸರ್ದಾರ್ ಜಿ ಗಳನ್ನ ನೋಡಿದರೆ ಅದೃಷ್ಟ!

೨೮. ಬೆಕ್ಕಿನ ಕಣ್ಣೀನ ಬ್ರಾಹ್ಮಣ ಮುದುಕೀರು ಮಾಟ ಮಾಡ್ತಾರೆ!!

೨೯. ಸಿದ್ಧೇಶ್ವರ ಗುಡ್ಡದಕ್ಕಿಂತ ಸ್ವಲ್ಪ ಮೇಲೆ ಹೋದ್ರೆ ಆಕಾಶ ಸಿಗತ್ತೆ

೩೦. ಮೋಡ ಹತ್ತಿ ಹತ್ತಿ ಹಾಗೆ ಇರತ್ತೆ. ಏರೋಪ್ಲೇನಲ್ಲಿ ಹೋಗಿ, ಬಾಗಿಲು ತೆಗೆದು, ಅದ್ರ ಮೇಲೆ ಕೂರಬಹುದು!

೩೧. ಕಾರ್ಟೂನಲ್ಲಿ ಬರೋ ಪಾತ್ರಗಳು ಜೀವಂತ. ಅವೆಲ್ಲ ‘ಡಿಸ್ನಿ ವರ್ಲ್ಡ್’ ಅನ್ನೋ ಪ್ರಪಂಚದಲ್ಲಿರ್ತವೆ. (ಹಾಗೇನೂ ಇಲ್ಲ ಅಂತ ಗೊತ್ತಾದ ಮೇಲೂ ಹಾಗಿಲ್ಲ ಅಂತ ನಂಬೋಕೆ ಬೇಜಾರು)

…. ಹೀಗೇ ಏನೆನೋ….
ಅಂದಹಾಗೆ, ಇವೆಲ್ಲವೂ ಸರಿಸುಮಾರು ನನ್ನ ಐದನೇ ವಯಸ್ಸಿಂದ ಹೈಸ್ಕೂಲಿನವರೆಗೆ ಆಯಾ ಕಾಲ ಘಟ್ಟದಲ್ಲಿ ನಂಬಿಕೊಂಡಿದ್ದ ವಿಷಯಗಳು. ಅವುಗಳನ್ನ ಕ್ರೊನಾಲಜಿಕಲ್ಲಾಗಿ ಹಾಕಿಲ್ಲ ನಾನು. ಬಹುಶಃ ಅದರ ಅಗತ್ಯವೂ ಇಲ್ಲ ಅನ್ನಿಸತ್ತೆ.
ಮತ್ತೊಂದ್ಮಾತು….
ಚಿಕ್ಕಂದಿನಲ್ಲಿ ನೀವೂ ಹೀಗೆಲ್ಲ ಪೆದ್ದುಪೆದ್ದಾಗಿ ನಂಬಿಕೊಂಡಿದ್ದ ಸ್ವಾರಸ್ಯಕರ ಸಂಗತಿಗಳಿದ್ರೆ ನಮ್ಮೊಂದಿಗೆ ಹಂಚ್ಕೊಳ್ಳಿ.

 ~

 

 

 

 

 

 

ಖುಶಿಗೊಂದು ವಿಷಯ

May 13, 2008 at 4:45 am | In ನಿಮ್ಮೊಂದಿಗೆ | 16 Comments

ಎಲ್ಲರಿಗೂ ನಮಸ್ತೇ.

ಇಲ್ಲೊಂದು ಖುಶಿಪಡುವ ವಿಷಯವಿದೆ. ನಿಮ್ಮೊಂದಿಗೆ ಹಂಚಿಕೊಳ್ಳುವಾ ಅನಿಸಿತು. ಆದರೆ… ನಾನೇ ಹೇಳ್ಕೊಳ್ಳೋದೇನು ಚೆನ್ನ ಹೇಳಿ?
ನೀವೇ ನೋಡಿ, ನೀವೇ ಹೇಳಿ.
ಪ್ರತಿಕ್ರಿಯೆಗೆ ಕಾದಿರುತ್ತೇನೆ.

ಪ್ರೀತಿಯಿಂದ,

ವಂದೇ,
ಚೇತನಾ ತೀರ್ಥಹಳ್ಳಿ

ಅಡುಗೆ ಮನೆ ಅನ್ನುವ ನೈಟ್ ಮೇರ್!

May 9, 2008 at 7:18 am | In ಕನವರಿಕೆ | 26 Comments
Tags: , ,

ಮೊನ್ನೆ ತಮ್ಮ ಊರಿಗೆ ಹೋಗಿದ್ದ. ಅಮ್ಮ ಡಬ್ಬಿ ತುಂಬ ಹಲಸಿನ ಕಾಯಿ ಪಲ್ಯ- ಚಪಾತಿ ತುಂಬಿ ಕಳಿಸಿದ್ದರು. ನಾನೇನು ಅಂಥಾ ದೊಡ್ಡ ತಿಂಡಿಪೋತಿಯಲ್ಲದಿದ್ರೂ ಈ ಹಲಸು- ಮಾವುಗಳ ಸುದ್ದಿ ಕೇಳಿದರೆ ಹೊಟ್ಟೆ ಸೊಲ್ಪ ದೊಡ್ಡದಾಗಿಬಿಡುತ್ತೆ. ಹಾಗಂತಲೇ ಅಮ್ಮನಿಗೆ  ಫೋನಲ್ಲೇ ಏನೇನು ಬೇಕೋ ಅದನ್ನೆಲ್ಲ ಹೇಳಿ ಮಾಡಿಕಳಿಸು ಅಂದಿದ್ದೆ. ಆ ಲಿಸ್ಟಲ್ಲಿ ಇನ್ನೂ ಮಳೆಗಾಲ ಶುರುವಾಗಿರದ ಕಾರಣಕ್ಕೆ ಮರಗೆಸದ ಪತ್ರೊಡೆ, ಕಳಲೆ ಬಿಟ್ಟುಹೋದವು :(

cook

ಇತ್ತೀಚೆಗೆ ನನಗೆ ಅನುಮಾನ ಶುರುವಾಗಿಬಿಟ್ಟಿದೆ. ನಾನೇನೂ ಬಕಾಸುರಿಯಾಗ್ತಿದೀನಾ ಅಂತ! ಯಾರೇ ಊರಿಗೆ ಹೊರಟುನಿಂತರೂ ನಂದೊಂದು ಪಟ್ಟಿ ಸಿದ್ಧವಾಗಿಬಿಡುತ್ತೆ!!

 ಪಾಪ ವಿನಾಯಕ ಮೊನ್ನೆ ಊರಿಗೆ ಹೊರಟು ನಿಂತಾಗ ಜೋನಿಬೆಲ್ಲ, ಒಬ್ಬಟ್ಟಿನ ಬೇಡಿಕೆಯಿಟ್ಟಿದ್ದೆ. ಮಿಥುನ್, ಸೂಲಿಬೆಲೆಗೆ ಹೋದಾಗಲೆಲ್ಲ ನನಗೆ ಹಿಡಿಶಾಪ ಹಾಕಿಕೊಂಡೇ ವಾಪಸು ಬರೋದು! ಅವನಮ್ಮ ದೊಡ್ಡ ಬ್ಯಾಗಿನ ತುಂಬ ಟೊಮ್ಯಾಟೋ ಬಾತ್, ಗೊಜ್ಜು, ಸಾಂಬಾರು ಇತ್ಯಾದಿ ತುಂಬಿಕಳಿಸ್ತಾರಲ್ಲ, ಅದಕ್ಕೆ! ಹೋಗಲಿ, ಹಾಗೇ ಸುಮ್ಮನೆ ಫಾರ್ಮಾಲಿಟಿಗಾದರೂ ‘ಬೇಡ ಅಮ್ಮ, ತೊಂದ್ರೆ ತೊಗೊಳ್ಬೇಡಿ’ ಅಂತ ಈ ವರೆಗೆ ಒಮ್ಮೆಯಾದ್ರೂ ನನ್ ಬಾಯಲ್ಲಿ ಬಂದಿದ್ರೆ ಕೇಳಿ!

ಯಾಕೋ ಬೆಂಗಳೂರು ನನ್ನ ಹೆಣ್ತನವನ್ನೇ ಕಸಿದ್ಕೊಂಡುಬಿಟ್ಟಿದೆ ಅನ್ನಿಸತ್ತೆ ಆಗಾಗ. ಇನ್ನೇನು? ಅಡುಗೆ ಮನೆ ಅಂದ್ರೆ ಹಾವು ಮೆಟ್ಟಿದ ಹಾಗೆ ಆಡೋದು ಹೆಣ್ಣು ಮಕ್ಕಳ ಲಕ್ಷಣವಾ ನೀವೇ ಹೇಳಿ? ಹಾ! ಹೆಣ್ಣು ಅಂದ್ರೆ ಅಡುಗೆ ಮನೆ ಮಾತ್ರ ಅನ್ನೋದನ್ನ ನಾನು ಯಾವತ್ತೂ ಒಪ್ಪೋದಿಲ್ಲ, ಆದ್ರೆ, ಹೆಣ್ಣು ಅಂದ್ರೆ ಅಡುಗೆ ಮನೆ ಕೂಡ ಅನ್ನೋದು ನನ್ನ ಪಾಲಿಸಿ. ಬಿಡಿ. ಈ ಬರಹದಲ್ಲಿ ವಾದ ಹೂಡುವ ಮೂಡಿಲ್ಲ!

ಮೊನ್ನೆ ‘ಕಜ್ಜಾಯ’ ಓದುತ್ತಿದ್ದೆ. ಅದರಲ್ಲಿ ಬರುವ ಮೊಸರವಲಕ್ಕಿ ವರ್ಣನೆ ಓದುತ್ತ ಓದುತ್ತ ಆಗಿಂದಾಗ್ಗೆ ಮಾಡಿ ತಿನ್ನಬೇಕನಿಸಿಹೋಗಿತ್ತು. ಏನು ಮಾಡೋದು? ಆ ಹೊತ್ತಿನಲ್ಲಿ ಅವಲಕ್ಕಿ ತರೋದು ಎಲ್ಲಿಂದ? ಯಾವುದೋ ಸಂದಿ ಮೂಲೆಯಲ್ಲಿ ಹುಡುಕಿ ಅದು ಸಿಕ್ಕರೂ ಊಟದೊಟ್ಟಿಗೆ ಮೊಸರು ಖಾಲಿಯಾಗಿಬಿಡ್ತಲ್ಲ! ಹಾಗೆ ಇದ್ದಿದ್ದರೂ ಅಪರಾತ್ರಿ ಹನ್ನೆರಡು ಮೂವತ್ತಕ್ಕೆ ಮೊಸರವಲಕ್ಕಿ ತಿನ್ನಲಿಕ್ಕೆ ನಾನೇನು ಬ್ರಹ್ಮ ಪಿಶಾಚಿಯಾ?
ಹಾಗೆಲ್ಲ ತರ್ಕ ಮಾಡಿ ಬೆಳಗಿನವರೆಗೂ ಟೆಂಪ್ಟೇಶನ್ನು ದಮನ ಮಾಡಿಕೊಂಡು, ಕಜ್ಜಾಯವನ್ನ ಬದಿಗಿಟ್ಟು ಮಲಗಿದೆ. ಇನ್ನು ಬೆಳಗ್ಗೆ ಅಂಗಡಿಗೆ ಹೋಗಿ ಮೊಸರು ತರಬೇಕಾದ ಸೋಮಾರಿತನಕ್ಕೆ ಮೊಸರವಲಕ್ಕಿಯ ಬಯಕೆ ಸಂಪೂರ್ಣ ಇಲ್ಲವಾಗಿಹೋಯಿತು. ಜೊತೆಗೇ, ಆಸೆಯ ನಿರ್ಮೂಲನಕ್ಕೆ ವೈರಾಗ್ಯವೇ ಬೇಕಿಲ್ಲ, ಸೋಮಾರಿತನವೂ ಕೆಲಸಕ್ಕೆ ಬಂದೀತೆಂದು ಜ್ಞಾನೋದಯವಾಯ್ತು!

ಈ ನಡುವೆ ಡಯಟ್ಟಿನ ತೆವಲಿಗೆ ಬಿದ್ದು ಹಸಿ ತರಕಾರಿ, ಕಾಳು ಕಡ್ಡಿ ತಿನ್ನಲಿಕ್ಕೆ ಶುರುಮಾಡಿ ಬದುಕಲಿಕ್ಕೆ ಒಲೆ ಹಚ್ಚಲೇಬೇಕಿಲ್ಲ ಅಂತನ್ನಿಸಲು ಶುರುವಾಗಿದೆ. (ಹಾಗೆ ಬೇರೆಯವರು ಒಲೆ ಹಚ್ಚಿ ಮಾಡಿದ್ದನ್ನ ತಿಂದರೆ ಮೈಗೆ ಹತ್ತೋಲ್ಲ. ನಾಲಿಗೆಗೆ ರುಚಿಹತ್ತಿದರೆ ಸಾಕಲ್ಲ? ಹಾ.. ಹಾಗೆ ಮೈಗೆ ಹತ್ತೋಲ್ಲ ಅಂದ್ರೆ ಒಳ್ಳೇದೇ ಆಯ್ತು, ಡಯಟಿಗೆ ಉಪಕಾರವಾಯ್ತು!) ಅದಕ್ಕೇ, ಈಗ ಅಣ್ಣ-ಅತ್ತಿಗೆ, ತಮ್ಮ ಇವರೆಲ್ಲ ಬರುವ ಮುಂಚೆ ‘ನೀನು ಅಡುಗೆ ಮಾಡ್ತೀ ತಾನೆ? ಅಥವಾ ಮಾಡಿ ತರೋದಾ?’ ಕೇಳಿ ರೇಗಿಸುವ ಹಾಗಾಗಿಬಿಟ್ಟಿದೆ. ಎಷ್ಟೋ ಸರ್ತಿ ಅಣ್ಣ ನೀನು ಅಪ್ಪಟ ಮಹಿಳಾವಾದಿ ಅಂತ ಅಂದ್ಕೊಂಡು ಬಿಟ್ಟಿದೀ ನಿನ್ನ, ಆ ಭ್ರಮೆಯೆ ಅಡುಗೆಮನೆಯಿಂದ ದೂರವಿಟ್ಟಿರೋದು ಅಂತ ಕಿಚಾಯಿಸ್ತಾನೆ. ನಾನೂ ಹೌದಾ? ಅಂತ ಆಕಾಶ (ಅದು ಕಾಣೋಲ್ಲ. ಮಾಡು ಅಡ್ಡ ಬರತ್ತೆ) ನೋಡುತ್ತ ಕುಂತುಬಿಡ್ತೇನೆ.

ಅಂದಹಾಗೆ, ಈಗ ಮೂರು-ನಾಲ್ಕು ವರ್ಷದ ಕೆಳಗಷ್ಟೆ ಇಪ್ಪತ್ತು- ಮೂವತ್ತು ಜನಕ್ಕೆ ಹಳ್ಳಿ ಮನೆಯಲ್ಲಿ ಕಾಫಿ-ತಿಂಡಿ, ಹದಿನೈದಿಪ್ಪತ್ತು ಜನಕ್ಕೆ ಊಟ ಎಲ್ಲ ಮಾಡಿಬಡಿಸಿದ್ದಿದೆ. ದಿನದಿನವೂ ನಾನೇ ನಿಂತು ಈ ಎಲ್ಲ ಕೆಲಸವನ್ನ ಮಾಡಿದೇನೆ. ಈಗ ನನಗೊಬ್ಬಳಿಗೂ ಮಾಡಿಕೊಳ್ಳಲಾಗದ ಮೈಗಳ್ಳತನ ಎಲ್ಲಿಂದ ಬಂತು?

- ಹೀಗೆಲ್ಲ ಯೋಚಿಸ್ತ ‘ನಾನು ಸೋಮಾರಿಯೇನಲ್ಲ’ ಅಂತ ನನ್ನ ಈ ಬಿಹೇವಿಯರಿಗೊಂದು ಸಕಾರಣ ಹುಡುಕುತ್ತಿರುವಾಗ ಗೆಳೆಯನ ಅಮ್ಮ ಕರೆ ಮಾಡಿದರು. “ಮಗ ಹೊರಟಿದಾನೆ ಕಣೇ. ಮಾವಿನ ಕಾಯಿ ಚಿತ್ರಾನ್ನದ ಗೊಜ್ಜು ಕಳಿಸ್ತೀನಿ. ಅನ್ನ ಮಾಡ್ಕೋ ಸಾಕು… ಅಥವಾ ಅದ್ನೂ ಕಳಿಸಲಾ?” ಅಂದರು.
ಆ ವರೆಗೂ ಇವತ್ತಿಗೇನು ಮಾಡಲಿ ಅಂತ ಯೋಚಿಸ್ತಿದ್ದ ನಾನು, ನನ್ನೆಲ್ಲ ಚಿಂತೆ ಬದಿಗೊತ್ತಿ ಅನ್ನ ಮಾಡಿಟ್ಟುಕೊಂಡು ಅಂವ ಬರೋದನ್ನೇ ಕಾಯುತ್ತ ಕುಳಿತುಬಿಟ್ಟೆ!

ಆ ಹಾವ ನೆಗೆತಕ್ಕೆ ಈ ಹಾವು ಸೋತು…

May 5, 2008 at 4:47 am | In ಒಡಲಾಳದ ಹಾಡು | 12 Comments
Tags: , ,

ಎದೆಯಲ್ಲಿ ಮುಖ ಮುಚ್ಚಿ ಮಗುವಾದ ಹುಡುಗಾ
ನಿನ್ನಪ್ಪುಗೆಯಲ್ಲಿ ಯಾಕೋ ಮೈಯ್ಯರಳಲೇ ಇಲ್ಲ ಇವತ್ತು!
ನಿನ್ನುಸಿರ ಬಿಸಿಯಲ್ಲು ಕಾವೇರಲಿಲ್ಲ ಯಾಕೋ?

ಅರೆ ತೆರೆದ ಕಣ್ಣು ಸುಸ್ತಿನ ಮುಸುಗರೆತ
ಕಾಲನ್ನ ಹಾಗೆ ನೋವಿನೊಳಗೆತ್ತೆತ್ತಿ ಬೀಸುತ್ತ
ಹೊರಳುತ್ತ ಮಲಗಿದ ನಿನ್ನ ಚಡಪಡಿಕೆ…
ಹುಡುಗಾ,
ನೀ ಹೀಗೆ ಮುದ್ದಾಗಿ ಮಗುವಂತೆ ಮಲಗಿದ್ದೀ
ನಿನ್ನ ಹಣೆ ಸವರಿ ಹೂಮುತ್ತನೊತ್ತಿದರೆ,
ಬಳಿ ಸೆಳೆದು ಮತ್ತೆ ಕನವರಿಸುತ್ತಿದ್ದೀ
ನಿನ್ನನಪ್ಪಿದ ನನ್ನೊಳಗೆ ತಾಯ್ತನದ ನೂರೆಂಟು ಬಯಕೆ,
ಮಗುವಲ್ಲಿ ಮಗುವಾಗಿ ನೀ ಸೆಳೆಯುತ್ತಿದ್ದೀ

ನಿದ್ದೆಯಲೆ ನೀ ನನ್ನ ತಲೆ ನೇವರಿಸಿದಾಗ
ಸಾವಿರ ದಳ ಕಮಲವರಳಿತು ನೋಡು,
ಒಳಗೆಲ್ಲ ಹದಿನಾರು ಚಕ್ರ ತಿರುಗಿ
ಸಿಂಬೆಯಾಗಿ ಮಲಗಿದ್ದ ಹಾವು ಭುಸುಗುಟ್ಟಿತು
ಆ ಹಾವ ನೆಗೆತಕ್ಕೆ ಈ ಹಾವು ಸೋತು
ಮಡಿಲಲ್ಲಿ ಮಗುವಾಗಿ ನಕ್ಕೆ ನೀನು!

 

ಚಾಟರ್ ಬಾಕ್ಸಿನಲ್ಲಿ ಮೈ ಪರಚಿಕೊಂಡವರು!

May 2, 2008 at 9:20 am | In ವಿಚಾರ | No Comments

ಎಲ್ಲರಿಗೂ ನಮಸ್ತೇ.

ನಿಮಗೆಲ್ಲ ನೆನಪಿರಬಹುದು,
ಈಗೊಂದು ತಿಂಗಳ ಹಿಂದೆ ಟೀನಾಝೋನಿನಲ್ಲಿ ‘ನಾವೇನು ಮಾಡಬಹುದು?’ ಅನ್ನುವ ಲೇಖನವೊಂದು ಪ್ರಕಟವಾಗಿತ್ತು. ಈ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿದ್ದವು. ಹೆಣ್ಣು ಎಷ್ಟೆಲ್ಲ ಮುಂದುವರೆದಿರುವಳೆಂದರೂ ದೈಹಿಕ ಸಾಮರ್ಥ್ಯದ ವಿಷಯದಲ್ಲಿ ಇನ್ನೂ ‘ಅಬಲೆ’ಯಾಗೇ ಇದ್ದಾಳೆ. ಮಕ್ಕಳು ಮರಿ ಹೆತ್ತು… ಇತ್ಯಾದಿ ಬಲವಿದ್ದರೂ ಗಂಡಿನ ಎಗರಾಟವನ್ನ ಸಹಿಸಿಕೊಳ್ಳಲಾರದಷ್ಟು, ಆತನನ್ನು ಎದುರಿಸಲಾರದಷ್ಟು ದುರ್ಬಲಳಾಗಿದ್ದಾಳೆ. ಈ ಕಾರಣಕ್ಕೆ ಹೀಗೆ ದಿನ ನಿತ್ಯ ಜಗತ್ತಿನ ವಿವಿಧ ಭಾಗಗಳಲ್ಲಿ ನೂರುಗಟ್ಟಲೆ ಅತ್ಯಾಚಾರಗಳಾಗ್ತಲೇ ಇವೆ. ಪರಿಸ್ಥಿತಿ ಹೀಗಿರುವಾಗ ನಾವು ಮುಂಜಾಗ್ರತೆಗಾಗಿ ಏನು ಮಾಡಬಹುದು?
- ಟೀನಾ ಎತ್ತಿದ್ದ ಪ್ರಶ್ನೆಯಿದು.

ಆದರೆ ವೆಂಕಟೇಶ್ ಎನ್ನುವ ಒಬ್ಬರು ಇದಕ್ಕೆ ವಿಪರೀತವಾಗಿ ಕಮೆಂಟು ಮಾಡಿದ್ದರು. ಅಸಲಿಗೆ, ಟೀನಾ ಬರೆಯದ ಸಂಗತಿಯನ್ನ ಆರೋಪಿಸಿ, ಸ್ವಲ್ಪ ಕಿರಿಕಿರಿ ಅನಿಸುವಂತೆ ಪ್ರತಿಕ್ರಿಯಿಸಿದ್ದರು. ಇದಕ್ಕೆ ಟೀನಾ ಮತ್ತು ನಾನು ತಿರುಗೇಟು ನೀಡಿದ್ದೆವು.
ಇವೆಲ್ಲ ಆಗಿ ತಿಂಗಲಾಗುತ್ತ ಬಂತು.
ಆದರೇನು? ಈ ಮಹಾಶಯರು ಒಂದು ತಿಂಗಳಾದ ಮೇಲೆ ಇದ್ದಕ್ಕಿದ್ದ ಹಾಗೇ ತೀರ ಕೆಟ್ಟದಾಗಿ ಪ್ರತಿಕ್ರಿಯಿಸಿದ್ದಾರೆ.ಮತ್ತೆ, ಅಲ್ಲಿ ಕೂಡ ಮೂಲ ಲೇಖನಕ್ಕೆ ಅಗತ್ಯವಾದ ಅಂಶಗಳಾಗಲೀ, ನಮ್ಮ ಕಮೆಂಟುಗಳಿಗೆ ಪೂರಕ ಪ್ರತಿಕ್ರಿಯೆಯಾಗಲೀ ಇಲ್ಲ!

ಟೀನಾ ಬ್ಲಾಗಿನಲ್ಲಿ ನೀವು ಅವರ ಪ್ರತಿಕ್ರಿಯೆ ನೋಡಬಹುದು, ಮತ್ತು ಈ ಕುರಿತಂತೆ ನಿಮ್ಮ ಅಭಿಪ್ರಾಯವನ್ನು ದಾಖಲಿಸಬಹುದು.

ನೀವದನ್ನು ಓದಿ, ಮತ್ತು ಪ್ರತಿಕ್ರಿಯಿಸಿ ಅನ್ನುವುದು ನನ್ನ ಮನವಿ.  

ವಂದೇ,
ಚೇತನಾ ತೀರ್ಥಹಳ್ಳಿ

ಹೀಗೊಂದು ರಾತ್ರಿ ಮೈಮೇಲೆ ಜಿರಳೆ ಹತ್ತಿಕೊಂಡು…

April 29, 2008 at 5:38 am | In ಕನವರಿಕೆ | 16 Comments

ಅವನ ನಂತರ ನಾನು ಅತಿಯಾಗಿ ದ್ವೇಷಿಸೋ ಜೀವಿ ಏನಾದರೂ ಇದ್ದರೆ….
ಅದು ಜಿರಳೆ. 
ಹಾಗಂದುಕೊಂಡಿದ್ದೆ. ಊಹೂಂ… ನೆನ್ನೆ ರಾತ್ರಿ ನಿದ್ದೆಗೆಟ್ಟಾಗಿನಿಂದ ಅನಿಸತೊಡಗಿದೆ, ನಾನು ಅವಂಗಿಂತ ಜ್ಜಾಸ್ತಿ ಜಿರಳೆಯನ್ನೇ ದ್ವೇಷಿಸ್ತೇನೆ ಅಂತ!
ಈಗಾಗಲೇ ನನ್ನ ಕೆಲ ಕಥೆ- ಕವಿತೆ- ಲೇಖನಗಳಲ್ಲಿ ಜಿರಳೆ ಬಗೆಗಿನ ಜಿಗುಪ್ಸೆ ನಿಮಗೆ ಗೊತ್ತಾಗಿರಬಹುದು.

ನಿಮಗಿದೊಂದು ಹುಚ್ಚು ಅನಿಸಬಹುದು…
ನಿಮಗೆ ಈ ಸುಟ್ಟ ಬದನೆಕಾಯಿ ಬಣ್ಣದ ಮುಳ್ಳು ಮುಳ್ಳು ಕಾಲಿನ ಉದ್ದ ಮೀಸೆಯ ಠೊಣಪ ಅದೆಷ್ಟೆಲ್ಲ ಕಾಟ ಕೊಡಬಹುದೆಂದು ಗೊತ್ತಿರಲಾರದು. ಈ ಹಾಳು ಜಿರಳೆಗಳಲ್ಲೊಂದು ನಿನ್ನೆ ರಾತ್ರಿ ಏನು ಮಾಡಿತು ಗೊತ್ತಾ?
ಬಿಡಿ. ಹಾಳು ಬಿದ್ದು ಹೋಗಲಿ. ಅದಕ್ಕಿಂತ ಮುಂಚೆ ಅವು ನನ್ನ ಭಾನುವಾರ ನುಂಗಿದ ಕಥೆ ಹೇಳಿಬಿಡ್ತೇನೆ.

hate

ಮೊನ್ನೆ ಭಾನುವಾರ ಹೀಗಾಯ್ತು. ಮೂಲೆಯಲ್ಲಿ ಬಹಳ ದಿನದಿಂದ ಇಟ್ಟಿದ್ದ ಹಾಟ್ ಬಾಕ್ಸನ್ನ ಯಾತಕ್ಕೋ ತೆಗೆಯಬೇಕಾಯ್ತು. ಒಂಚೂರು ಹೀಗೆ ಸರಿಸಿ ಎಳೆಯಬೇಕಂದು ಕೊಂಡು ನೋಡ್ತೇನೆ… ಮಿಳಮಿಳಮಿಳ ಜಿರಳೆ ಸೈನ್ಯ!
ಮೊಟ್ಟೆಯೊಡೆದು ಬಂದ ಸುಮಾರು ಹದಿನೈದಿಪ್ಪತ್ತು ಜಿರಳೆಗಳು ಕರ್ರಗೆ ಮಿರುಗುತ್ತ ಗುಂಪಲ್ಲೆ ಮಿಳಿಗುಟ್ಟುತ್ತ….
ಅಡುಗೆ ಮನೆಯಲ್ಲಿ ಧಡಾರನೆ ಸದ್ದು. ಪಾತ್ರೆ ಪಡಗಗಳನೆಲ್ಲ ಹೊತ್ತಾಕಿ ಓಡಿದ್ದೊಂದು ಗೊತ್ತು.
ಆದರೆ, ಎಷ್ಟು ಹೊತ್ತು? ಜಿರಳೆಗೆ ಹೆದರಿ ಸಂಸಾರ ಮಾಡೋಕಾಗತ್ತಾ? ಸರಿ. ಕಾರ್ಯಾಚರಣೆ ಶುರು ಹಚ್ಚಿದೆ. ಆಗ ಟೈಮು ಒಂಭತ್ತು ಗಂಟೆ.
ದೇವರ ಗೂಡಿನ ಸಂದಿಯಲ್ಲಿ, ತರಕಾರಿ ಬುಟ್ಟಿ ಅಡಿಯಲ್ಲಿ, ಮಿಕ್ಸಿ ಸೈಡಿನಲ್ಲಿ… ಕೈಯಲ್ಲಿ ಪೇಪರ್ ಹಿಡಿದು ಗ್ಲೌಸಿನ ಹಾಗೆ ಮಾಡ್ಕೊಂಡು ಕೈಗೆ ಸಿಕ್ಕವನ್ನೆಲ್ಲ ಹಿಸುಕಿಹಿಸುಕಿ ಹಾಕಿಬಿಟ್ಟೆ.
ಆಮೇಲೆ ನೋಡ್ತೇನೆ… ಸಂದುಗೊಂದುಗಳಲ್ಲೆಲ್ಲ ಜಿರಳೆಮೊಟ್ಟೆಗಳು!
ಸರಿ. ಭ್ರೂಣ ಹತ್ಯೆಯೂ ಸಾಂಗವಾಗಿ ನಡೆಯಿತು.
ಅದ್ಯಾಕೆ ಹಾಗೆ ಪೇಪರ್ರಲ್ಲಿ ಹಿಚುಕಿ… ಹಿಟ್ ಹೊಡೆಯೋದು ಬಿಟ್ಟು…. ಅಂತೆಲ್ಲ ಹದ ಹೇಳುವಿರಲ್ಲವೆ? ಹಾಗೆ ಹೇಳಿದವರು ಬಹಳ ಮಂದಿ!
ಈ ಹಿಟ್ಟಿನ ಸಹವಾಸ ಮಾಡಿದವರಿಗೆ ಗೊತ್ತು! ಕಳೆದ ಸಾರ್ತಿ ಸ್ಪ್ರೇ ಮಾಡಿದಾಗ ಅದು ಹೇಗೋ ಗಂಟಲೊಳಗೆ ತೂರಿ, ಗಂಟಲ ತುಂಬ ಕೆಂಪು ಹುಣ್ಣುಗಳಾಗಿ, ವಾರವಿಡೀ ಖಾಯಿಲೆ ಮಲಗಿ….
ಲಕ್ಷ್ಮಣ ರೇಖೆ? ಆ ಮಟ್ಟಿಗೆ ಜಿರಳೆಗಳೆಲ್ಲ ಸೀತೆಯರೇ!! ದಾಟುವುದು ದೊಡ್ಡ ಸಂಗತಿಯೇ ಅಲ್ಲ ಅವಕ್ಕೆ.
ಜಿರಳೆ ಊದುಕಡ್ಡಿ ನನಗೆ ಅಲರ್ಜಿ. ಕೊನೆಗೆ ಜಿರಳೆ ಬದಲು ನಾನೇ ಸತ್ತು ಶಾಶ್ವತ ಪರಿಹಾರ ಸಿಕ್ಕಿಬಿಡುತ್ತಷ್ಟೆ!
ಬೇಡಪ್ಪಾ! ನನಗೆ ಪರಿಹಾರಕ್ಕಿಂತ ನಿತ್ಯ ಹೋರಾಟವೇ ಇಷ್ಟ!!
ಇರುವ ಇಷ್ಟುದ್ದ ಅಷ್ಟಗಲದ ಮನೆಯ ಅಂಗುಲಂಗುಲದ ಮೇಲೆ ದಾಳಿ ಮಾಡಿ ಸಂಹಾರ ನಡೆಸಿ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಎರಡುಗಂಟೆಯಾಗಿತ್ತು!

ಮಧ್ಯಾಹ್ನ ಹಾಗೇ ಸ್ವಲ್ಪ ಒರಗಿಕೊಂಡವಳಿಗೆ ಹನ್ನೆರಡು ವರ್ಷಗಳ ಹಿಂದೆ ಗೀಚಿದ್ದ ಕವಿತೆ ನೆನಪಾಯ್ತು. ಅದರ ಶಿರೋನಾಮೆ- ‘ಬಯಾಲಜಿ ಲ್ಯಾಬಿನಲ್ಲಿ’.
ಫಸ್ಟ್ ಪಿಯುನಲ್ಲಿರುವಾಗ ನಮಗೆ ಜಿರಳೆ ಕೊಯ್ದು ಅದೇನೇನೋ ಮಾಡುವ ಪ್ರಯೋಗವಿತ್ತು. ಚಕ್ಕರ್ ಹಾಕಿದರೆ ಎಕ್ಸಾಮಲ್ಲಿ ಮಾರ್ಕ್ಸು ಕೊಡೋಲ್ಲ ಅಂತ ಮೊದಲೇ ನಾಗರಾಜರು ಹೇಳಿಬಿಟ್ಟಿದ್ದರಿಂದ ಅಳುತ್ತಳುತ್ತ ಬೆಂಕಿಪೊಟ್ಟಣದಲ್ಲಿ ಜಿರಳೆ ಒಯ್ದಿದ್ದೆ. ಅದನ್ನ ಸೋಪ್ ವಾಟರಿನಲ್ಲಿ ಮುಳುಗಿಸಿ, ಡಿಸೆಕ್ಷನ್ ಟೇಬಲ್ ಮೇಲಿಟ್ಟು, ಮೊಳೆ ಹೊಡೆದು…. ಅಬ್ಬಬ್ಬ!
ನನಗಂತೂ ಜೀವ ಬಾಯಿಗೆ ಬಂದಿತ್ತು. “ನಾನೊಂದು ಪ್ರಾಣಿಯನ್ನ ಕೊಲ್ತಿದೇನೆ!”  ಹಾಗಂತ ತೀರ ಹಿಂಸೆ ಪಡುತ್ತಲೇ ಯಾವುದೋ ತಲೆಯಲ್ಲಿ ಅದನ್ನ ಯದ್ವತದ್ವಾ ಕೊಯ್ದುಬಿಟ್ಟೆ. ಪ್ರಯೋಗ ಹಾಳಾಯಿತು. ಅಷ್ಟರಲ್ಲಿ ಅಟೆಂಡರ್ ‘ಕೊಯ್ಯಲು ಬೇರೆ ಜಿರಳೆ ಇಲ್ಲ’ ಅಂತ ಗೊಣಗಿದ. ನಿಟ್ಟುಸಿರಿಟ್ಟು ಕೈತೊಳೆದು ಹೊರಬಂದೆ.

ಅದೆಲ್ಲ ಆದಮೇಲೆ ಏಸು ಕ್ರಿಸ್ತ, ಮಾರೀಚ ಇತ್ಯಾದಿ ಏನೇನೋ ಕಥೆ ಕಟ್ಟಿ ಕವನ ಬರೆದೆ. ಮಾರನೆ ದಿನ ಲಚ್ಚರರ್ರು ನಿನ್ನ ಪ್ರಯೋಗಕ್ಕಲ್ಲ, ಕವಿತೆಗೆ ಮಾರ್ಕು ಕೊಡ್ತೇನೆ ಅಂತ ಛೇಡಿಸಿದರು!

ನಾನ್ಯಾಕೆ ಇವತ್ತು ಹುಚ್ಚು ಹಿಡಿದವರ ಹಾಗೆ ಹುಡುಹುಡುಕಿ ಜಿರಳೆಗಳನ್ನ ಕೊಂದೆ?
ಓ… ನನ್ನ ಹಾವ ಭಾವ ನೋಡಬೇಕಿತ್ತು ನೀವು ಅವಾಗ! ಅವುಗಳ ಹೆಣದರಾಶಿಯನ್ನ ದೊಡ್ಡ ಪೇಪರಿಗೆ ಹಾಕಿ ಒಲೆಗೆ ತುರುಕಿ ಸುಟ್ಟಾಗ ಪಟ್ಟ ಸುಖ ನೋಡಬೇಕಿತ್ತು ನೀವು!
ಅಷ್ಟಾದರೂ ನನಗೆ ಚೂರು ಕೂಡ ಬೇಜಾರಾಗ್ತಿಲ್ಲವಲ್ಲ ಯಾಕೆ? ನಾನೂ ಹಿಟ್ಲರನಂತೆ ಆಗಿಬಿಟ್ನಾ?
ಹೀಗೆಲ್ಲ ಯೋಚಿಸ್ತಿರುವಾಗ ಸಂಜೆಯಾಗಿತ್ತು. ಬಹಳ ದಿನಗಳಿಂದ ಪೆಂಡಿಂಗ್ ಇದ್ದ ಸ್ನೇಹಿತನ ಭೇಟಿಗೆ ಅವತ್ತು ಸಮಯ ಒದಗಿ, ಜಿರಳೆ ಹತ್ಯಾಕಾಂಡಕ್ಕೆ ತೆರೆಬಿತ್ತು.

ಸರಿ. ಆದದ್ದಾಯ್ತಾ…
ಸೋಮವಾರ ಬೆಳಗ್ಗೆ ಕಸಗುಡಿಸಿದ್ದು ಈ ನನ್ನ ಮೂರು ವರ್ಷದ ಇತಿಹಾಸದಲ್ಲೇ ಇರಲಿಲ್ಲ. ಭಾನುವಾರವಿಡಿ ಮೈಮುರುಕೊಂಡು ಕ್ಲೀನ್ ಮಾಡಿದ್ದಕ್ಕೆ ಅಂದಿನ ಬೆಳಗ್ಗೆ ಕೆಲಸಕ್ಕೆ ರಜೆ!
ಆದರೂ, ಅಡುಗೆ ಮನೆ ಬಾಗಿಲ ಸಂದಿ ಗುಡಿಸಬೇಕಾಯ್ತು. ಯಾಕೆ ಗೊತ್ತಾ?
ಆ ಸಂದಿಯಲ್ಲಿ ಮತ್ತೊಂದು ಗುಂಪು ಜಿರಳೆಮರಿಗಳು ಮಿಳಮಿಳಮಿಳಮಿಳ…..!

ಆಫೀಸಲ್ಲೂ ಅವತ್ತು ನಂಗೆ ಅದೆ ಗುಂಗು.
ಸಂಜೆ ಮನೆಗೆ ಮರಳಿ ಇಡಿ ಮನೆಯನ್ನೊಮ್ಮೆ ಟೆಸ್ಟ್ ಮಾಡಿ ನನ್ನ ಶತ್ರುಗಳಿಲ್ಲ ಅನ್ನೋದನ್ನ ಖಾತ್ರಿಪಡಿಸ್ಕೊಂಡೆ.
ರಾತ್ರಿ ಮಲಗುವ ಹೊತ್ತಿಗೆ ಜಿರಳೆ ಮರೆತುಹೋಗಿತ್ತು. ಮನೆಯೆಲ್ಲ ಕ್ಲೀನುಕ್ಲೀನು… ಏನೋ ನಿಶ್ಚಿಂತೆ!

ಸುಮಾರು ಎರಡು- ಎರಡುವರೆ ಸಮಯವಿರಬಹುದು. ಏನೋ ಗುಳುಗುಳು… ಎಂಥದೋ ಹರಿದಾಡ್ತಿದೆ ಅಲ್ಲಿ…
ಆಲ್ಲೊಂದು ಜಿರಳೆ… !!
ಆ ಜಿರಳೆ ಏನು ಮಾಡ್ತಿತ್ತು ಗೊತ್ತಾ?

ಗಂಡ / ಹೆಂಡತಿ / ಮರಿಯನ್ನ ಕೊಂದವರ ಮೇಲೆ ಹಾವು ಸೇಡು ತೀರಿಸ್ಕೊಳತ್ತಂತೆ ಅಂತ ಕೇಳಿದ್ದೆ.
ಆದ್ರೆ ಜಿರಳೆ ಕೂಡ , ಅದೂ ಹೀಗೆಲ್ಲ……
ಊಹೂಂ. ಖಂಡಿತ ಗೊತ್ತಿರಲಿಲ್ಲ!
ಯಃಕಶ್ಚಿತ್ ಒಂದು ಜಿರಳೆ ಅವತ್ತು ರಾತ್ರಿ  ಇಡೀ ಲೈಟ್ ಹಾಕ್ಕೊಂಡು ಚೇರಿನ ಮೇಲೆ ಕುಂತು ತೂಕಡಿಸುವ ಹಾಗೆ ಮಾಡಿದ್ದು ಹೇಗೆ?
ನಾನು ಹೇಳಲ್ಲ!!

“ನಮಗರ್ಥವಾಗದ ಪೊಲಿಟಿಕ್ಸ್!? “

April 25, 2008 at 6:48 am | In ವಿಚಾರ | 7 Comments

ನಿಮಗೆ ವಿಕ್ರಮಾದಿತ್ಯನ ಸಿಂಹಾಸನದ ಕಥೆ ಗೊತ್ತಾ? ಅದ್ರ ಮೇಲೆ ಕೂರೋಕೆ ನ್ಯಾಯ ನಿಷ್ಠನಾಗಿರೋ ರಾಜನಿಗೆ ಮಾತ್ರ ಅವಕಾಶ ಕೊಡ್ತಿದ್ದವಂತೆ ಸಿಂಹಾಸದ ಮೆಟ್ಟಿಲ ಆಚೀಚೆ ಕೆತ್ತಲ್ಪಟ್ಟಿದ್ದ ಸಾಲಭಂಜಿಕೆಗಳು.
ಅದೇ ವಿಕ್ರಮಾದಿತ್ಯ ಸಿಂಹಾಸನದ ಜಾನಪದೀಯ ವರ್ಷನ್ನಿನಲ್ಲಿ (ಚಿಕ್ಕಂದಿನಲ್ಲಿ ಕೇಳಿದ್ದು)- ಆ ಸಿಂಹಾಸನದ ಮೇಲೆ ಕುಳಿತ ಯಾರೊಬ್ಬರು ಕೂಡ ವಿಕ್ರಮಾದಿತ್ಯನ ಹಾಗೆ ನ್ಯಾಯ ಪರತೆ, ದಕ್ಷತೆಗಳ ಗುಣ ಪಡ್ಕೊಂಡ್ ಬಿಡ್ತಿದ್ರಂತೆ!

ಸಧ್ಯಕ್ಕೆ ನಮ್ಮ ರಾಜಕಾರಣಕ್ಕೆ ಹೊಂದೋದು ಈ ಎರಡನೇ ವರ್ಷನ್ನು.
ಹಾ! ತಡೆಯಿರಿ… ವಿಕ್ರಮಾದಿತ್ಯನ ಸಿಂಹಾಸನದ ಮೆಲೆ ಕುಂತವರೆಲ್ಲ ನ್ಯಾಯಪರರಾಗ್ತಿದ್ರಲ್ಲ, ಇಲ್ಲೀಗ ಅಧಿಕಾರದ ಖುರ್ಚಿಯೇರಿದವರೆಲ್ಲ ಮೊದಲು ಎಷ್ಟೇ ಸುಭಗರಾಗಿದ್ದರೂ ಖುರ್ಚಿಯ ಪ್ರಭಾವದಿಂದ ಭ್ರಷ್ಟರಾಗಿಹೋಗ್ತಾರೆ ಅನ್ನೋದೊಂದೇ ವ್ಯತ್ಯಾಸ.
ಅಲ್ಲಿಗೆ, ಪಾಪ ನಮ್ ರಾಜಕಾರಣಿಗಳದೇನೂ ತಪ್ಪಿಲ್ಲ. ಅದೆಲ್ಲ ಆ ಅಧಿಕಾರದ ಖುರ್ಚಿಯದೇ ಕರಾಮತ್ತು ಅಂತಾಯ್ತು. ನೀವು ಒಪ್ತೀರಾ?

ಮಜಾ ಅನಿಸ್ತಿದೆ. ಟಿಕೇಟಿಗಾಗಿ ಒಬ್ಬೊಬ್ಬ ಆಕಾಂಕ್ಷಿಯೂ ಕೋಟಿಗಟ್ಟಲೆ ದುಡ್ಡು ಸುರೀತಿದಾರೆ ಅನ್ನೋದನ್ನ ಕೇಳಿ. ಸೀಟಿಗೆ ಇಷ್ಟು ಸುರೀತಿದಾರೆ ಅಂದ್ರೆ, ಆಮೇಲೆ ಅವರು ಅದೆಷ್ಟು ಲೂಟಿ ಮಾಡುವ ಹುನ್ನಾರದಲ್ಲಿರಬಹುದು ಹೇಳಿ?
ಆತ್ಮಹತ್ಯೆ ನಾಟಕವೇನು? ಬಸ್ಸು- ಕಾರು ಒಡೆಯೋದೇನು?
ಜನ ಸೇವೆ ಮಾಡಲಿಕ್ಕೆ ಇಷ್ಟೆಲ್ಲ ಉತ್ಸುಕರಾಗಿರ್ತಾರಾ ಇವರುಗಳು?
ಹಾಗೆ ಮಾಡಲೇಬೇಕಂದ್ರೆ ಟಿಕೆಟಿಗೆ, ಎಲೆಕ್ಷನ್ನಿಗೆ ಸುರಿಯೋ ದುಡ್ಡನ್ನೆ ರಾಜಕಾರಣದ ಹೊರ ನಿಂತು ಬಡಬಗ್ಗರ ಸಹಾಯಕ್ಕೆ ಬಳಸಬಹುದಲ್ಲ?

ಚುನಾವಣೆಯಲ್ಲಿ ಗೆದ್ದು ಸತತ ಅಧಿಕಾರದಲ್ಲಿದ್ದಮೇಲೂ ಹರಿದ ಕುರ್ತಾ, ಬಾಡಿಗೆ ಮನೆ ಅಂತಿರುವ ರಾಜಕಾರಣಿಗಳು ಇಲ್ಲವೇ ಇಲ್ಲ ಅಂತಲ್ಲ. ಆ ಕೆಲವೇ ಬೆರಳೆಣಿಕೆ ಮಂದಿಯ ಲಿಸ್ಟು ತಡಕಬೇಡಿ ಮತ್ತೆ!

ಬಿಡಿ, ಇದು ಇವತ್ತು- ನೆನ್ನೆಯ ಮಾತಲ್ಲ, ಲಾಲ್ ಬಹದ್ದೂರರಂಥವರು ಇದ್ದ ಕಾಲಕ್ಕೇ ನೆಹರೂ (ಹಣದ ವಿಷಯದಲ್ಲಿ ನೆಹರೂರನ್ನು ದೂರಲು ಬರುತ್ತದೆಯೇ, ಗೊತ್ತಿಲ್ಲ. ಆದರೆ ವಂಶ ಪಾರಂಪರ್ಯ ರಾಜಕಾರಣ, ಆಸ್ಥಾನದ ತುಂಬ ತಮ್ಮ ಪರಿವಾರದವರಿಗೇ ಅಧಿಕಾರ, ಭ್ರಷ್ಟಾಚಾರದ ಕುಮ್ಮಕ್ಕಿಗೆ ಬುನಾದಿ ಇತ್ಯಾದಿ ದೋಷಗಳಿಗೆ ಅವರೇ ಮೊದಲ ಹೊಣೆ) ಕೃಷ್ಣ ಮೆನನ್ ರಂಥವರೂ ಇದ್ದರು. ಮೊಟ್ಟಮೊದಲ ಹಗರಣವೇ ಸೈನ್ಯಕ್ಕೆ ಜೀಪು ಖರೀದಿಯಲ್ಲಿ ಅವ್ಯವಹಾರದ ಸಂಗತಿಯಾಗಿತ್ತು. ಎಂಥ ನಾಚಿಕೆಗೇಡು?

ಇರಲಿ. ನಾನು ಇವತ್ತಿನ ರಾಜಕಾರಣದ ಬಗ್ಗೆ ಮಾತಾಡ್ತಿದ್ದೆ. ಎಲ್ಲಿ ಏನೇ ಅವ್ಯವಹಾರ ನಡೆದರೂ, “ಅವ್ರು ಪಾಲಿಟಿಕ್ಸ್ ಮಾಡ್ಬಿಟ್ರು ಕಣೋ” ಅಂತಲೋ, “ಎಲ್ಲ ರಾಜಕೀಯ. ನಂಗೆ ಸಿಗಬೇಕಾಗಿದ್ದನ್ನ ಅವರಿಗೆ ಕೊಟ್ರು” ಅಂತಲೋ ಹೇಳೋದನ್ನ ಕೇಳಿದೇವಲ್ವೆ? ಇವತ್ತು ‘ಪಾಲಿಟಿಕ್ಸ್’ ಅನ್ನೋದು ‘ಅನ್ಯಾಯ’ದ ಪರ್‍ಯಾಯ ಪದವಾಗಿ ಬಳಕೆಯಾಗ್ತಿರೋದು ಎಂಥ ದುರಂತ!?

ಹೀಗೆ ಅಧಿಕಾರದ ರಾಜಕೀಯ, ದುಡ್ಡಿಗಾಗಿ ರಾಜಕಾರಣ ಮಾಡೋದ್ರಲ್ಲಿ ಯಾವ ಪಕ್ಷವೂ ಹಿಂದೆ ಬಿದ್ದಿಲ್ಲ. ಬದಲಿಗೆ ಭ್ರಷ್ಟಾಚಾರದಲ್ಲಿ ನಾ ಮುಂದು, ತಾ ಮುಂದು ಅಂತ ಪೈಪೋಟಿ ನಡೆಸ್ತಿವೆ. ಅವುಗಳ ಗದ್ದುಗೆಯಾಟಕ್ಕೆ ಜಾತೀಯತೆಯ ದಾಳ ಬೇರೆ!
ಮತ್ತು, ಹಾಗೆ ಜಾತಿವಾರು ಪ್ರಾಂತ್ಯಗಳಾಗಿ ವಿಂಗಡಿಸಿ ಆಯಾ ಕ್ಷೇತ್ರದಲ್ಲಿ ಪ್ರಬಲವಾಗಿರೋ ಜಾತಿಯ ನಾಯಕರಿಗೇ ಟಿಕೆಟ್ ಕೊಟ್ಟು ಒಡೆಯುವ ಚಾಳಿಯೂ ಮೊದಲ ಚುನಾವಣೆಯೊಟ್ಟಿಗೇ ಶುರುವಾಗಿಬಿಟ್ಟಿತ್ತು. ಅದಕ್ಕೆ ಹೋಲಿಸಿದರೆ ಚುನಾವಣೆಯಲ್ಲಿ ದುಡ್ಡಿನಾಟ ಇತ್ತೀಚಿನದು.
ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳೂ ‘ಕೋಮುವಾದಿ’ಗಳೇ. ‘ಹಿಂದೂ’ ಅನ್ನೋದೊಂದು ‘ಕೋಮು’, ಉಳಿದ ಮತಗಳು ‘ಜಾತ್ಯತೀತ’ ಅಂತೇನಾದರೂ ಇದೆಯಾ? ಇಲ್ಲವಲ್ಲ!?

ಇತ್ತೀಚೆಗೆ ನನಗೆ ತೀರಾ ಕಿರಿಕಿರಿ ಅನಿಸಲಿಕ್ಕೆ ಶುರುವಾಗಿದ್ದು ಬಿಜೆಪಿ ಬಗ್ಗೆ.
ಕೊಂಚ ಆಧ್ಯಾತ್ಮ, ರಾಷ್ಟ್ರ ಅಂತೆಲ್ಲ ಮಾತಾಡುವ ಯಾರನ್ನೂ ‘ಬಿಜೆಪಿ’ ಯವರು ಅಂತ ಮುದ್ರೆ ಒತ್ತುವ ಬಾಲಿಶತನ ನಮ್ಮ ಜನರಲ್ಲಿನ್ನೂ ಇದೆ. ಹೀಗಾಗಿ ಈ ಬಾರಿಯ ಟಿಕೆಟ್ ವಿತರಣೆ ಧಂಧೆ ಶುರುವಾದಾಗ ಕೆಲವು ಗೆಳೆಯರು ನನ್ನ ಕಾಲೆಳೆದರು. ಮೈಲಾರಿಯವರಿಗೆ ಟಿಕೆಟ್ ಕೊಟ್ಟಾಗಲಂತೂ ‘ಬಿಜೆಪಿ ಗೆದ್ದರೆ ಉನ್ನತ ಶಿಕ್ಷಣ ಖಾತೆ ಮೈಲಾರಿಗೆ’ ಅನ್ನುವ ಮೆಸೇಜುಗಳು ಹರಿದಾಡಿಬಿಟ್ಟವು! ಅದಕ್ಕೆ ಸಂಘದ ಆದೇಶವಿದೆ, ಹಿರಿಯ ಮಾಜಿ ರಾಜ್ಯಪಾಲರೊಬ್ಬರ ಬೆಂಬಲವೂ ಇದೆ ಅಂತೆಲ್ಲ ಗೊತ್ತಾದಾಗಲಂತೂ ಸ್ವತಃ ಬಿಜೆಪಿಯ ಗ್ರೌಂಡ್ ಲೆವೆಲ್ ಕಾರ್ಯಕರ್ತರು ‘ಸಂಘ- ದಕ್ಷ, ಸಿದ್ಧಾಂತ ಮರೆತ ಪಕ್ಷ!’ ಅಂತ ಮೆಸೇಜು ಹರಿಬಿಟ್ಟರು.
ನಾನಂತೂ ಸುಮ್ಮಸುಮ್ಮನೆ “ನಾನು ಯಾವ ‘ಪಕ್ಷ’ಪಾತಿಯೂ ಅಲ್ಲ” ಅಂತ ಸಮಜಾಯಿಷಿ ಕೊಡಬೇಕಾಗಿಬಂತು. ಯಾವುದಾದರೂ ರಾಜಕೀಯ ಪಕ್ಷದೊಟ್ಟಿಗೆ ಗುರುತಿಸ್ಕೊಳ್ಳೋದು ಅಷ್ಟು ಅಸಹ್ಯ ತರಿಸುವ ಸಂಗತಿಯಾಗಿಬಿಟ್ಟಿದೆ ಇವತ್ತು!

ಹಾಗೆ ಪ್ರತ್ಯೇಕ ಪ್ರತ್ಯೇಕವಾಗಿ ಒಂದೊಂದೇ ಪಕ್ಷಗಳ ಬಗ್ಗೆ ಹೇಳುತ್ತ ಹೋದರೆ ಇವತ್ತಿಗೆ ಮುಗಿಯೋದಿಲ್ಲ, ಬ್ಲಾಗ್ ಸ್ಪೇಸು ಸಾಕಾಗೋದಿಲ್ಲ. ಸಮಾಜವಾದದ ಮಾತಾಡುವ ಕಮ್ಯುನಿಸ್ಟರು ಕೂಡ ನಂದಿಗ್ರಾಮದಲ್ಲಿ  ಹತ್ಯಾಕಾಂಡ ನಡೆಸಿ ಸಮಾಜವಾದದ ಬಗೆಗಿದ್ದ ಭ್ರಮೆಗಳನ್ನೆಲ್ಲ ಕಳಚಿಹಾಕಿಬಿಟ್ಟರು.
ಈಗೇನೋ ಮಾಯಾವತಿ ದಲಿತ- ಬ್ರಾಹ್ಮಣ ಏಕತೆಯ ಸೂತ್ರದಡಿಯಲ್ಲಿ ಹೊಸ ಬಗೆಯ ರಾಜಕಾರಣ ಶುರು ಮಾಡಿದಾರಂತೆ, ಅವರಿಗೆ ಸಾಮಾಜಿಕ ಕಳಕಳಿ ವಿಪರೀತವಂತೆ… ಇತ್ಯಾದಿ ಕೇಳಿಬರ್ತಿದೆ. ಈ ಹಿಂದೆ ಅವರೂ ಅಧಿಕಾರಕ್ಕಾಗಿ ಬಿಜೆಪಿ ಸಖ್ಯ ಮಾಡಿದ್ದವರಲ್ಲವೆ? ಯಾಕೋ, ‘ಅವರು ಏನಾದರೂ ಸುಧಾರಣೆ ತಂದಮೇಲಷ್ಟೆ ನಂಬಬಹುದು’ ಅನ್ನುವ ಮನಸ್ಥಿತಿ ನನ್ನದು.

ನಾನು ಹೀಗೆಲ್ಲ ಮಾತಾಡ್ತಿರುವಾಗ ಗೆಳತಿಯೊಬ್ಬಳು ಅಂದಳು. “ಇಲ್ಲಿ ಕುಂತು ಹೇಳುವಷ್ಟು ಸುಲಭವಲ್ಲ ರಾಜಕೀಯ. ದೇಶ ಆಳೋದು ಅಂಡ್ರೆ ಹುಡುಗಾಟವಾ? ಏನೇನು ಲೆಕ್ಕಾಚಾರಗಳಿರ್ತವೋ ಅವರದು. ಅದಕ್ಕೇ ನಮಗರ್ಥವಾಗದ ಪೊಲಿಟಿಕ್ಸ್ ಗಳಾಗ್ತವೆ. ನಾವು ಪಕ್ಷದ ಸಿದ್ಧಾಂತ ನೋಡಿ ಓಟ್ ಕೊಡುವಾ”
“ನಮಗರ್ಥವಾಗದ ಪೊಲಿಟಿಕ್ಸ್!? “ನಾನು ನಕ್ಕೆ.
ಅವಳು ಮುಖ ತಿರುಗಿಸಿ ಸುಮ್ಮನಾದಳು.

ಅನುಗೂಂಜಿನ ನೆವದಲ್ಲಿ…

April 23, 2008 at 11:10 am | In Uncategorized | 21 Comments

ನಾನಿಲ್ಲಿ ಎಂಭತ್ತರ ದಶಕದ ಕೆಲವು ಸೀರಿಯಲ್ಲುಗಳ ಬಗ್ಗೆ ಹರಟಿದ್ದೇನೆ. ಸೂತ್ರವಿಲ್ಲದೆ ಸಾಗಿರುವ ಬರಹವಿದು. ಒಂಥರಾ ನಾಸ್ಟಾಲ್ಜಿಯಾ.
ಅಂದಿನ ಸೀರಿಯಲ್ಲುಗಳ ಬಗ್ಗೆ ಗೊತ್ತಿಲ್ಲದವರು, ಇಂದಿನವರು ಇದನ್ನ ಓದಿ ಬಯ್ದುಕೊಳ್ಳಬೇಡಿ. ಬಹುಶಃ ಈ ಲೇಖನದಲ್ಲಿ ನಿಮಗೆ ಏನೂ ಸಿಗಲಾರದು. ಇದೊಂದು ನೆನಪಿನ ಸೆಲೆಬ್ರೇಶನ್ ಅಷ್ಟೇ.
ಆದ್ದರಿಂದ ಇದು ಕಡ್ಡಾಯವಾಗಿ ಆಸಕ್ತರಿಗೆ ಮಾತ್ರ.
ಆದರೂ ಓದುತ್ತೇವೆಂದು ಹೊರಟು ಬೋರು ಹೊಡೆಸಿಕೊಂಡರೆ, ಆಮೇಲೆ ನನ್ನನ್ನ ಮಾತ್ರ ದೂರಬೇಡಿ, ಮೊದಲೇ ಹೇಳ್ಬಿಟ್ಟಿದ್ದೀನಿ!

~

“ಪ್ರೇಮ್ ಓ ಚಂದನ್ ಹೈ, ಜಿಸೇ ಛೂಕರ್ ಕಿಸೀಕೇ ಭಿ ಮಾಥೇ ಪರ್ ಲಗಾವೋ, ಖುದ್ ಕಿ ಉಂಗ್ಲಿಯಾ ಮೆಹೆಕ್ ಉಠ್ ಥೀ ಹೈ”
ಅದೊಂದು ಐತಿಹಾಸಿಕ ತೀರ್ಪು. ಕದ್ದು ಮದುವೆಯಾದ ಯುವ ಜೋಡಿಯ ಮೇಲೆ ಸಂಬಂಧಿಸಿದೋರು ಕೇಸು ಹಾಕಿದಾಗ ಜಡ್ಜು ಹೀಗೆಲ್ಲ ಮಾತಾಡಿ ಪ್ರೇಮಿಗಳ ಪರವಾಗಿ ನಿಲ್ತಾನೆ. ಜನ ಎಲ್ಲ ಉಘೆ ಉಘೇ ಅಂತಾರೆ.
ಮುಂದೊಂದು ದಿನ ಜಡ್ಜಿನ ಮಗಳು ಯಾರದೋ ಪ್ರೇಮದಲ್ಲಿ ಸಿಲುಕಿರೋದು ಗೊತ್ತಾಗತ್ತೆ, ಅಂವ ತಿರುಗಿಬೀಳ್ತಾನೆ. ಚಂದನ್, ಖುಶ್ಬೂ ಎಲ್ಲ ಗಾಯಬ್!
ಆಮೇಲೆ ಆ ಮಗಳು ತನ್ನ ಹುಡುಗನಿಂದ್ಲೂ ಚಕ್ಮಾ ತಿಂದು, ತಾವಿಬ್ಬರೂ ಒಟ್ಗೆ ಡ್ರಾಮ ನೋಡ್ಲಿಕ್ಕೆ ಹೋದಾಗ ಸಿಕ್ಕಿದ್ದ ನಾಯಕನ ಬಳಿ ಸಾರಿ, ಸೇರಿ… ಹೀಗೇ ಸೀರಿಯಲ್ಲು ಮುಂದುವರೆಯೋಹೊತ್ತಿಗೆ….
ನನಗೆ ಎಕ್ಸಾಮೋ, ರಜೆಯೋ ಏನೋ ಅಡ್ದಬಂದು ನಾನು ನೋಡೋದು ಬಿಟ್ಟಿದ್ದೆ.

ಹೌದು. ನಾನು ನೋಡಿದಷ್ಟೂ ಎಪಿಸೋಡುಗಳು ಬಾಯಿ ಪಾಠ ಮಾಡಿದಷ್ಟು ಚೆನ್ನಾಗಿ ನೆನಪಿದೆ. ಅದರಲ್ಲೂ ಮೊದಲ ಎಪಿಸೋಡಿನ ಆ ಡೈಲಾಗು.
ಅದು ದೂರದರ್ಶನದ ಸೀರಿಯಲ್ಲು. ಹೆಸರು ಅನುಗೂಂಜ್. ನನದನ್ನ ನೋಡಿದ್ದು ನಾನು ನಾಲ್ಕನೆಯದೋ ಐದನೆಯದೋ ಕ್ಲಾಸಲ್ಲಿರುವಾಗ. ಹೊಸತಾಗಿ ಕಲಿತಿದ್ದ ಹಿಂದಿಯಲ್ಲಿ ಎಷ್ಟು ಅರ್ಥವಾಗ್ತಿತ್ತೋ, ಅಂತೂ ಕ್ಲಾಸಿಕ್ ಅನ್ನಿಸುವ ಎಲ್ಲವನ್ನೂ ನೋಡಲು ಅಪ್ಪ ಕೊಟ್ಟಿದ್ದ ಸ್ವಾತಂತ್ರ್ಯವನ್ನ ಪೂರ್ತಿಯಾಗಿ ಬಳಸಿಕೊಳ್ತಿದ್ದೆ.
ಆಮೇಲೆ ಆ ಸೀರಿಯಲ್ಲು ಮತ್ತೆ ಪ್ರಸಾರವಾಯ್ತಾ? ಗೊತ್ತಿಲ್ಲ. ಆದ್ರೆ ಸೀರಿಯಲ್ಲಿನ ಗಾಂಭೀರ್ಯ ಮಾತ್ರ ಮನಸಿಂದ ಅಳೀಲಿಲ್ಲ.

ಹಾಗೆ ಅವತ್ತಿನ ದಿನಗಳಲ್ಲಿ ನಾವೆಲ್ಲ ಕೂತು ನೋಡ್ತಿದ್ದ ಸೀರಿಯಲ್ಲುಗಳ ಪಟ್ಟಿ ನಿಮ್ಮೆದುರಿಡುವೆ.
ಎಲ್ಲಿಂದ ಶುರು ಮಾಡಲಿ?
ಗುಲ್ ಗುಲ್ಷನ್ ಗುಲ್ಫಾಮ್? ನೆನಪಿದೆಯಾ ಕಾಶ್ಮೀರದ ಹೌಸ್ ಬೋಟ್ ಸಂಸಾರದ ಕಥೆ? ಆ ಕಸ್ಟ್ಯೂಮುಗಳು, ಕಶ್ಮೀರಿ ಹಾಡು, ಇತ್ಯಾದಿ?
ಓಹ್! ಆಗಿನ್ನೂ ಉಗ್ರಗಾಮಿ ಮುಂತಾದವೆಲ್ಲ ಗೊತ್ತೇ ಇರಲಿಲ್ಲ ನಮಗೆ. ಅಮ್ಮ ಕಾಶ್ಮೀರದಲ್ಲಿ ಹಾಗಂತೆ, ಹೀಗಂತೆ ಅಂತೆಲ್ಲ ಹೇಳುತ್ತ, ಸೀರಿಯಸ್ಸಾಗಿ ಕುಂತು ನೋಡುತ್ತಿದ್ದ ಸೀರಿಯಲ್ಲದು. ಜತೆಗೆ ಪುಟಪುಟಾಣಿ ಕಣ್ಣುಗಳ ನಾವು ಮೂವರು!
ಹಾ! ನಾನು “ನಂಗೂ ಕೋಡುಬಳೆ ಥರದ ಕಿವಿ ರಿಂಗು ಬೇಕು” ಅಂತ ಹಠ ಹಿಡಿದು ಹುಡುಕಿದ್ದು ಈ ಸೀರಿಯಲ್ಲು ನೋಡಿಯೇ!

ಬಹಳ ಚೆಂದದ ಸೀರಿಯಲ್ಲು ಅಂತ ನಾನು ಯಾವಾಗಲೂ ನೆನೆಸಿಕೊಳ್ಳೋದು ‘ಪಚ್ಪನ್ ಕಂಭೇ ಲಾಲ್ ದಿವಾರೇ’ ಅದರ ಹೀರೋ ಈಗ ಸಾಕಷ್ಟು ಅಡ್ವರ್ಟೈಸು- ಸೀರಿಯಲ್ಲುಗಳಲ್ಲೆಲ್ಲ ಬರ್ತಾನೆ, ಹೆಸರು ಮರೆತಿದೆ. ಹೀರೋಇನ್ನು ಮಿತಾ ವಸಿಷ್ಟ. ನಗುವೇ ಕಾಣದ ಆ ಮುಖವೂ ನಂಗೆ ಬಹಳ ಇಷ್ಟ.

ಕಶಿಶ್ ಅನ್ನೋ ಸೀರಿಯಲ್ಲಲ್ಲಿ ಸುಧೇಶ್ ಬೆರ್ರಿ ನಟಿಸಿದ್ದ. ಆಗಿನ ಕಾಲಕ್ಕೆ ರೊಮ್ಯಾಂಟಿಕ್ ಸೀರಿಯಲ್ಲದು. ಆಮೇಲೂ ಅದು ಸೋನಿ ಚಾನೆಲ್ಲಿನಲ್ಲಿ ಬಂತು ಅಂತ ನೆನಪು. ಆದ್ರೆ ನಾನು ಮತ್ತೆ ನೋಡ್ಲಿಲ್ಲ.

ನನ್ನ ಅತ್ಯಂತ ಪ್ರೈಮರಿ ದಿನಗಳಲ್ಲಿ ನೋಡುತ್ತಿದ್ದ ಮತ್ತೊಂದು ಮರೆಯಲಾಗದ ಸೀರಿಯಲ್ಲು- ‘ಮಿ. ಯೋಗಿ’. ತೆಳ್ಳಗಿನ ಹುಡುಗನೊಬ್ಬ ಮದುವೆಗೆ ಹೆಣ್ಣು ಹುಡುಕೋ ಕಥೆಗಳವು. ಎಷ್ಟರ ಮಟ್ಟಿಗೆ ಆ ಸೀರಿಯಲ್ಲು ನಮ್ಮನ್ನ ತಟ್ಟಿತ್ತಂದರೆ, ಹೆಣ್ಣು ಹುಡುಕಿ ಹೈರಾಣಾದ ಗಂಡುಗಳನ್ನ ನಾವು ಈಗಲೂ ಮಿ. ಯೋಗಿ ಅಂತ್ಲೇ ಛೇಡಿಸೋದು!!
ಹಾಗೆ ಇನ್ನೂ ನಮ್ಮ ಮಾತುಗಳಲ್ಲಿ ಹಸಿರಾಗಿರೋದು ‘ಮುಂಗೇರೀ ಲಾಲ್’ ಹಗಲುಗನಸು ಕಾಣೋರೆಲ್ಲ ನಮ್ಮ ಪಾಲಿಗೆ ಈಗಲೂ ಮುಂಗೇರಿಗಳೇ.

ಆಶ್ಚರ್ಯ ದೀಪಕ್ ಅನ್ನೋ ಸೀರಿಯಲ್ಲು ನೋಡಿ ನಾನು- ಅಣ್ಣ ಮಾವನ ಮನೆ ಅಟ್ಟದ ಮೆಲೆ ಸಿಕ್ಕ ಕಂಚಿನ ದೀಪ ಉಜ್ಜಿದ್ದೂ ಉಜ್ಜಿದ್ದೇ…! ಅದರೊಳಗಿಂದ ಜೀನಿ ಬರುವುದೆಂದು ಕಾದಿದ್ದೂ ಕಾದಿದ್ದೇ!!

ಹಾ…! ನಿಮಗೆ ಸ್ಟೋನ್ ಬಾಯ್ ಸೀರಿಯಲ್ಲು ನೋಡಿಕೊಂಡು ನಾವು ಸಿದ್ಧೇಶ್ವರ ಗುಡ್ಡದ ಹತ್ತಿರ ಕಾದ ಕಥೆ ಹೇಳಲೇಬೆಕು…
ಅದರಲ್ಲಿ ಮಾ. ಮಂಜುನಾಥ್ ಕಲ್ಲು ಹುಡುಗನಾಗಿದ್ದು, ಮಕ್ಕಳೆದುರು  ಜೀವ ತಳೆಯೋದು, ಆಟವಾಡೋದು ಇತ್ಯಾದಿ ಫ್ಯಾಂಟಸಿ ಇತ್ತಲ್ಲ, ಅದನ್ನ ನೋಡಿಕೊಂಡ ನಾವು (ಆಗ ಶಿವಮೊಗ್ಗದಲ್ಲಿದ್ವಿ) ತೀರ್ಥಳ್ಳಿಗೆ ಹೋದಾಗ ಹುಣ್ಣಿಮೆ ರಾತ್ರಿ ಹೇಳದೆ ಕೇಳದೆ ಗುಡ್ದದ ಹತ್ರ ಓಡಿಹೋಗಿದ್ವಿ. ಅಲ್ಲಿನ ಹುಲಿ ಬಂಡೆ ಪಕ್ಕದ ಮಾನವಕೃತಿಯ ಕಲ್ಲು ನೋಡುತ್ತ ಇಂವ ಹುಡುಗನಾದಾನು ಅಂತ ಕಾಯುತ್ತ ಕುಳಿತಿದ್ವಿ.
ನಮ್ಮನ್ನ ಹುಡುಕಿ ಬಂದ ಮಾವ, ಅಮ್ಮ, ನಮಗೆ ಸಮಾ ಪೂಜೆ ಮಾಡಿದ್ರು ಆಮೇಲೆ ಅನ್ನೋದನ್ನೆನೂ ಹೇಳ್ಬೇಕಿಲ್ಲ ತಾನೆ?

ಆಗ ‘ಅನ್ ಹೋನಿ’ ಅಂತೊಂದು ಪುನರ್ಜನ್ಮ- ಭೂತ ಇತ್ಯಾದಿ ಕಾನ್ಸೆಪ್ಟಿನ ಸೀರಿಯಲ್ಲು ಬರ್ತಿತ್ತು. ಅದೊಂದು ಹಾರರ್ ಅಂತಲೆ ಪರಿಗಣಿಸಲಾಗ್ತಿತ್ತು. “ರಾಜೀವ್ ಗಾಂಧಿ- ಜನ ಹೆದರ್ತಾರೆ ಅಂತ ಅದನ್ನ ನಿಲ್ಲಿಸೋಕೆ ಹೆಳಿದ್ರಂತೆ… ಆಮೇಲೆ ಸೀರಿಯಲ್ ನವ್ರು ಸ್ವಲ್ಪ ಮೈಲ್ಡಾಗ್ ತೋರಿಸ್ತೀವಿ ಅಂತ ಕೇಳ್ಕೊಂಡ್ರಂತೆ…” ಇತ್ಯಾದಿ ರೂಮರ್ ಗಳನ್ನ ಹುಟ್ಟುಹಾಕಿತ್ತದು. ಈಗ ಹಾಗೆಲ್ಲ ಸೀರಿಯಲ್ಲುಗಳನ್ನ ಗಂಭೀರವಾಗಿ ಪರಿಗಣಿಸಲಿಕ್ಕೆ ಸಾಧ್ಯವಾ? ಹೋಗಲಿ… ಪ್ರಧಾನಿಯೊಬ್ಬರು ಹೀಗೆ ಪ್ರತಿಕ್ರಿಯಿಸಿದರು ಅನ್ನೋದು ರೂಮರಿಗೂ ಅಸಾಧ್ಯ ಅಲ್ವಾ!?

ರಾಮಾಯಣ- ಮಹಾಭಾರತ ಸೀರಿಯಲ್ಲುಗಳ ಬಗ್ಗೆ ನಾನು ಹೇಳೋದು ಏನೂ ಇಲ್ಲ ಬಿಡಿ. ಚಾಣಕ್ಯ, ಭಾರತ್ ಏಕ್ ಖೋಜ್ ಗಳನ್ನೂ ನೀವು ಮರೆತಿರಲಾರಿರಿ. ಅಮ್ಮ ಅಂತೂ ಭರತ್ ಏಕ್ ಖೋಜಿನ ಶೀರ್ಶಿಕೆ ಗೀತೆ- ಉತ್ತರ ಭಾರತೀಯ ಶೈಲಿಯಲ್ಲಿ ಮಂತ್ರ ಪಠಣ ಬರುವಾಗಲೆಲ್ಲ ಹಲ್ಲು ಕಡಿಯುತ್ತ ‘ಯಾರದೋ ತಿಥಿ ಅನ್ನೋ ಹಾಗೆ ಹೇಳ್ತಾರೆ’ ಅಂತಿದ್ದಿದ್ದು ನಂಗೆ ಚೆನ್ನಾಗಿ ನೆನಪಿದೆ!

ಅರೆ, ಈ ಮಧ್ಯೆ ಮೃಗ ನಯನೀ, ಫೂಲ್ ವಂತಿ, ಹಿಸ್ಸಾ ಶಾಂತೀ ಕಾ (ಅದು ‘ಕಿಸ್ಸಾ’ವೋ ‘ಹಿಸ್ಸಾ’ವೋ ಅಂತ ಆಗೆಲ್ಲ ಭಾಳಾ ಕನ್ಫ್ಯೂಸು. ಈಗ್ಲೂ… ಪ್ಲೀಸ್, ಯಾರೂ ಕ್ಲಿಯರ್ ಮಾಡ್ಬೇಡಿ… ಅದು ಹಾಗೇ ಇರ್ಲಿ!), ನುಕ್ಕಡ್, ಸರ್ಕಸ್, ಸ್ಪೇಸಿನ ‘ಸಿಗ್ಮಾ’ ಸೀರಿಯಲ್ಲು ಇವೆಲ್ಲ ಮರೆತುಬಿಟ್ಟೇನು ಮತ್ತೆ!

ಹಾಗೇ, ಪ್ರತಿ ಭಾನುವಾರದ ಸ್ಪೈಡರ್ ಮ್ಯಾನ್, ಡಿಸ್ನಿ ಕಾರ್ಟೂನುಗಳು, ವಿಕ್ರಮ್ ಔರ್ ಬೆತಾಳ್, ದಾದೀ ಮಾ ಕೀ ಕಹಾನಿಯಾ, ಪೋಟ್ಲೀ ಬಾಬಾ ಕೀ, ತೆನಾಲಿ ರಾಮ…. ರಾಮ ರಾಮಾ… ಎಷ್ಟೊಂದಿವೆ!

ಕನ್ನಡದ ಬಗ್ಗೆ ಕೇಳ್ತೀರಾ? ಒಳ್ಳೆ ಸೀರಿಯಲ್ಲುಗಳು ಬರ್ತಿದ್ದ ಕಾಲದಲ್ಲಿ ಶಿವಮೊಗ್ಗಕ್ಕೆ ಕನ್ನಡ ಪ್ರಸಾರ ಇರಲಿಲ್ಲ. ಬೆಂಗಳೂರಿನ ನಮ್ ಅಂಕಲ್ಲು ಕ್ರೇಜಿ ಕರ್ನಲ್ ಅನ್ನು ರೆಕಾರ್ಡ್ ಮಾಡಿಟ್ಕೊಳ್ತಿದ್ರು. ನಾನು ನೋಡಿದ್ದು ಅದೊಂದೇ.

ಇತ್ತೀಚಿನ ವರ್ಷಗಳಲ್ಲಿ ನಾನು ನೋಡಿದ ಚೆಂದದ ಕನ್ನಡ ಸೀರಿಯಲ್ಲುಗಳೆಂದರೆ- ಈ ಟೀವಿಯ ಆರಂಭದ ದಿನಗಳ  ‘ಸರೋಜಿನಿ’, ಆಮೇಲಿನ ‘ಎಲ್ಲೋ ಜೋಗಪ್ಪ ನಿನ್ನರಮನೆ’, ದೂರ ದರ್ಶನದ ಮನ್ವಂತರ . ಕಾಮನ ಬಿಲ್ಲು ಬಗ್ಗೆ ಕೆಳಿರುವೆ. ನೋಡಿಲ್ಲ. ಅದೂ ಕೂಡ ಚೆನ್ನಾಗಿತ್ತಂತೆ.  ಗರ್ವ ಚೆನ್ನಾಗಿ ಬಂತಾದರೂ ಸ್ವಲ್ಪ ಬೋರ್ ಹೊಡೆಸ್ತಿತ್ತು. ಸರೋಜಿನಿ ನೋಡುತ್ತ ನೋಡುತ್ತ ‘ನಂಗೂ ಒಬ್ಬ ಅಂತರಂಗದ ಗೆಳೆಯ ಬೇಕು’ ಅಂತ ಬಿಕ್ಕಿದ್ದು ನೆನಪು.
ಹಾಗೇ ‘ಎಲ್ಲೋ ಜೋಗಪ್ಪ…’ ದ ಟೈಟಲ್ ಸಾಂಗನ್ನ ಹಗಲಿರುಳು ಹಾಡ್ತಿದ್ದುದು….
ಅದರ ನಿರ್ದೆಶಕರು ನಮ್ಮ ಮುಂಗಾರಿನ ಯೋಗರಾಜ ಭಟ್ಟರು.

ಈಗಲೂ ಒಳ್ಳೆ ಸೀರಿಯಲ್ಲುಗಳಿಲ್ಲವೆಂದಲ್ಲ. ಆದರೆ ಅವುಗಳ ಪ್ರಮಾಣ ಕಡಿಮೆ. ಮೊಟ್ಟಮೊದಲ ಮೆಗಾ ಸೀರಿಯಲ್ಲು ‘ಶಾಂತಿ’ ಶುರುವಾಗಿ ಪಾಪ್ಯುಲ್ಲರ್ ಆಗ್ತಿದ್ದ ಹಾಗೆ ಎಳೀಲಿಕ್ಕೆ ಶುರು ಹಚ್ಚಿದ್ರು ನೋಡಿ… ಆಗ ಕ್ವಾಲಿಟಿ ಹಾಳಾಗ್ತಾ ಬಂತು. ಹಿಂದಿಯಲ್ಲಿ ಸ್ವಾಭಿಮಾನ್, ಕನ್ನಡದಲ್ಲಿ ಜನನಿ, ಮನೆತನ ಇವೆಲ್ಲವೂ ಹೀಗೆ ಶುರುವಲ್ಲಿ ಚೆನ್ನಾಗಿ ಬಂದು ಆಮೇಲಾಮೇಲೆ ನಮ್ಮ ಬಿಪಿ ಟೆಸ್ಟ್ ಮಾಡಲು ಶುರುವಿಟ್ಟವು.

ಇರಲಿ… ಯಾಕೆ ಇವತ್ತು ಇದನ್ನೆಲ್ಲ ಹೇಳಿದೆ? ಈ ಪ್ರಶ್ನೆಗೆ ಇಂಥದ್ದೇ ಅನ್ನುವ ಕಾರಣವಿಲ್ಲ. ಯಾಕೋ ಹೀಗೇ “ಪ್ರೇಮ್ ವೋ ಚಂದನ್ ಹೈ….” ನೆನಪಾಗಿತ್ತು. ಅದರ ನೆವದಲ್ಲಿ ಸೀರಿಯಲ್ಲುಗಳ ಸರಮಾಲೆಯೇ ಕಣ್ಮುಂದೆ ಬಂತು. ನನನ್ ಕಾಲದವರು ಸಾಕಷ್ಟು ಜನರಿದ್ದರಲ್ಲ, ಹೇಳ್ಕೊಳ್ಳೋಣ ಅನ್ನಿಸ್ತು, ಅಷ್ಟೇ.

ನಾನು ಹೇಳಲು ಮರೆತ, ನಮ್ಮ ದಿನಗಳ ಸೀರಿಯಲೊಲುಗಳಿದ್ದರೆ ನೀವೂ ನೆನಪಿಸಿಕೊಡಿ ಪ್ಲೀಸ್…

ಅಯ್ಯೋ! ಪ್ರಮಾದ… ಮಾಲ್ಗುಡಿ ಡೇಸನ್ನೇ ಮರೆತುಬಿಟ್ಟಿದ್ದೆ!!

ಭಾನುವಾರ ಅಂದರೆ…

April 21, 2008 at 4:43 am | In ಒಡಲಾಳದ ಹಾಡು | 12 Comments

ಭಾನುವಾರ ಅಂದರೆ
ಬ್ರಶ್ಶು ಮಾಡದ ಬೆಳಗು
ಬೆಡ್ ಕಾಫಿ
ಕ್ಯಾಂಟೀನಿನ ಇಡ್ಲಿ- ಸಾಂಬರಲ್ಲಿ ದಿನ ಕಳೆಯೋದು

ಭಾನುವಾರ ಅಂದರೆ
ಕೆದರಿದ ಬುಕ್ ಶೆಲ್ಫು
ಒಂದೆರಡು ‘ಸೀಡಿ ಸಿನೆಮಾ’
ಬಲೆ- ದೂಳುಗಳ ಗ್ರಾಚಾರ ಬಿಡಿಸೋದು

ಭಾನುವಾರ ಅಂದರೆ
ಮಧ್ಯಾಹ್ನದ ಹಾಸಿಗೆ ಸುಕ್ಕು
ಒಂಚೂರು ಕೋಳಿ ನಿದ್ದೆ
ಸಂಜೆ ಸ್ನಾನದಲಿ ಫ್ರೆಶ್ಶಾಗೋದು

ಭಾನುವಾರ ಅಂದರೆ
ತಪ್ಪೊಪ್ಪಿಗೆಯ ದಿನ
ಕಣ್ಣೆದುರೇ
ಒಂದು ರಜೆಯ ಕೊಲೆಯಾಗೋದು!

Next Page »

Blog at WordPress.com. | Theme: Pool by Borja Fernandez.
Entries and comments feeds.