ನಾನು ಹೆಂಗಸಾದ ದಿನ….

ಪ್ರತಿ ಸಾರ್ತಿಯಂತೆ ಈ ಸಲವೂ ‘ಸಾಂಗತ್ಯ’ ಸಿನೆಹಬ್ಬದಲ್ಲಿ ಒಳ್ಳೊಳ್ಳೆ ಸಿನೆಮಾಗಳನ್ನ ನೋಡಿದ್ವಿ, ಚರ್ಚೆ ಮಾಡಿದ್ವಿ. ಅವುಗಳಲ್ಲೊಂದು The Day I became Woman ಅನ್ನುವ ಇರಾನಿ ಸಿನೆಮಾ. ನಂಗೆ ಈ ಸಿನೆಮಾ ಬಹಳ ಇಷ್ಟವಾಯ್ತು.  ಅದರ ಮೇಕಿಂಗ್ ಖುಷಿ ಕೊಡ್ತು. ಇದರ ಜತೆ ಪುಟಾಣಿ ಪಾರ್ಟಿ, ಎಲ್ ವಯೋಲಿನೋ, ರೆಡ್ ಬಲೂನ್, ಪೊನೆಟ್ ಮೊದಲಾದ ಚೆಂದದ ಸಿನೆಮಾಗಳನ್ನೂ, ಅಘನಾಶಿನಿ, ದ ಹೋಮ್ ಮೊದಲಾದ ಸಾಕ್ಷ್ಯಚಿತ್ರಗಳನ್ನೂ ನೋಡಿದ್ವಿ.
ಅದೆಲ್ಲ ಇರ್ಲಿ…  ‘ದ ಡೇ…’ ಬಗ್ಗೆ ಅನಿಸಿಕೆ ಬರೆದು ನನ್ನ ಗೆಳೆಯರೊಬ್ಬರಿಗೆ mail ಮಾಡಿದ್ದೆ. ಅವರು ನೇರಾನೇರ ‘ಎಲ್ಲಾದ್ನೂ ನೀವು ಅದೇ ಭಾಮಿನಿ ಷಟ್ಪದಿ ಸ್ಟೈಲಲ್ಲೇ ಹೇಳ್ತೀರಲ್ರೀ… ಫಿಲ್ಮ್ ಬಗ್ಗೆ ಹೇಳುವಾಗ್ಲೂ!’ ಅಂತ ಅಂದರು. ಅವರು ನನ್ನನ್ನ ಹೀಗೆ ಎಚ್ಚರಿಸಿದ್ದಕ್ಕೆ ಋಣಿ, ಆಭಾರಿ…
(ಇದನ್ನ ನೀವು, ನೀವೂ ಹಾಗನ್ನುವ ಮೊದಲೇ ನಾನು ಕೊಡ್ತಿರೋ ಸಮಜಾಯಿಷಿ ಅಂತಲೂ ಅಂದ್ಕೊಳ್ಬಹುದು :)  )
~ ಚಿತ್ರ ಒಂದು~
ದೋಣಿಗೆ ಕಟ್ಟಿದ ಹಾಯಿ, ಅವಳ ದುಪಟ್ಟಾ.
ಗಂಡಸಿನ ದೋಣಿ ಸರಾಗ ಸಾಗಲಿಕ್ಕೆ ಅವಳ ಹಾಯಿ ಬೇಕು.
ಆ ಸಿನೆಮಾ ಶುರುವಾಗೋದೇ ಕರೀ ದುಪಟ್ಟಾ (ಪರ್ದಾ) ದೋಣಿಯ ಹಾಯಿಯಾಗಿ ಪಟಪಟಿಸೋದರಿಂದ. ಅದನ್ನ ಪತರಗುಟ್ಟಿಸುವ ಗಾಳಿಯೇ ಹವಾಳ ಟೆಂಟಿನ ಬಟ್ಟೆಯನ್ನೂ ಪಟಪಟಿಸುತ್ತದೆ. ಮನೆಯ ಮೇಲೆ ಯಾಕೆ ಆ ಹುಡುಗಿಗೆ ಟೆಂಟು ಹಾಕಿಕೊಟ್ಟಿದಾರೆ? ಅವಳು ದೊಡ್ಡವಳಾಗಿಬಿಟ್ಟಿದಾಳಾ?
ಅಮ್ಮ ಹೇಳ್ತಾಳೆ, ‘ಹವಾ, ನೀನಿನ್ನು ಹುಡುಗರೊಟ್ಟಿಗೆ ಆಡಹೋಗಲಿಕ್ಕಿಲ್ಲ. ನೀನು ದೊಡ್ಡವಳಾಗ್ತಿದೀ’.
ಅತ್ತ ಹಸನ ಅವಳಿಗೆ ಐಸ್‌ಕ್ರೀಮಿನ ಆಮಿಷವೊಡ್ಡುತ್ತಿದಾನೆ. ಹುಡುಗಿ ಗೋಗರೀತಿದಾಳೆ. ಅಮ್ಮ, ಅಜ್ಜಿಗೆ ಅವಳಿಗೊಂದು ಪರ್ದಾ ತಯಾರುಮಾಡುವ ಸಡಗರ.
‘ನಾನು ಹುಟ್ಟಿದ್ದು ಮಧ್ಯಾಹ್ನ ತಾನೇ? ದೊಡ್ಡೋಳಾಗಲಿಕ್ಕೆ ಮಧ್ಯಾಹ್ನದವರೆಗೂ ಸಮಯವಿದೆ. ಅಲ್ಲೀವರೆಗೆ ಆಡಿಕೊಂಡು ಬರ್ತೀನಿ’ ಹುಡುಗಿಯ ತರ್ಕ. ಅದಕ್ಕೆ ಹಿರಿಯರ ತಾತ್ಕಾಲಿಕ ಸೋಲು.
ಅಮ್ಮ ಕೈಲೊಂದು ಕಡ್ಡಿಯಿಟ್ಟು ಹೇಳ್ತಾಳೆ. ‘ನೋಡು, ಇದರ ನೆರಳು ಮಾಯವಾಗ್ತದಲ್ಲ, ಆಗ ಮಧ್ಯಾಹ್ನವಾಗ್ತದೆ. ವಾಪಸು ಬಂದ್ಬಿಡಬೇಕು’.
ಹೊರಗೆ ಹೋದ ಪೂರ್ತಿ ಹುಡುಗಿಗೆ ನೆರಳು ಅಳೆಯೋದೇ ಕೆಲಸ. ಹಹ್ಹ್! ಒಂದು ಕಡ್ಡಿ, ಹುಡುಗಿಯೊಬ್ಬಳ ಸ್ವಾತಂತ್ರ್ಯವನ್ನ ನಿರ್ಧರಿಸ್ತಿದೆ!!
ಅಮ್ಮ ಹೊಚ್ಚಿ ಕಳಿಸಿದ ದುಪಟ್ಟಾವನ್ನ ಹುಡುಗರ ದೋಣಿಗೆ ಹಾಯಿ ಮಾಡಲು ಕೊಟ್ಟುಬಿಡ್ತಾಳೆ ಹವಾ. ಹಸನನೊಟ್ಟಿಗೆ ಎಂಜಲು ಮಾಡಿಕೊಂಡು ಲಾಲಿಪಪ್ ಸವಿಯುತ್ತಾಳೆ. ಅಷ್ಟರಲ್ಲಿ ಕಡ್ಡಿ ಕೆಳಗಿನ ನೆರಳು ಮಾಯ.
ಅಮ್ಮ ಬರ್ತಾಳೆ. ಮತ್ತೊಂದು ಉದ್ದದ ಸ್ಕಾರ್ಫ್ ತಲೆಗೆ ಹೊಚ್ಚುತಾಳೆ. ಮಗಳ ಮುಖದಲ್ಲಿ ಅಂಥ ವಿಷಾದವೇನೂ ಇಲ್ಲ. ಮಧ್ಯಾಹ್ನವಾಯ್ತು, ತಾನು ದೊಡ್ದವಳಾಗಿರಬೇಕು ಅನ್ನುವ ಭಾವ. ಅಮ್ಮನ ಜತೆ ಸಮುದ್ರದತ್ತ ಹೊರಡುತ್ತಾಳೆ…
**
~ಚಿತ್ರ ಎರಡು~
ಕುದುರೆಯೇರಿದ ಅಂವ ಅರಚಿಕೊಳ್ತಿದಾನೆ… ‘ಆಹೂ…’
ಅವಳಲ್ಲಿ, ಸೈಕಲ್ ರೇಸಲ್ಲಿ ಎಲ್ಲರನ್ನ ಹಿಂದಿಕ್ಕಿ ಮುಂದೆ ಮುಂದೆ. ಬಂದವ ಅವಳ ಗಂಡ. ಸೈಕಲಿನಿಂದ ಇಳಿದು ಬರುವಂತೆ ತಾಕೀತು ಮಾಡ್ತಾನೆ. ಅವಳು ಕೇಳೋಲ್ಲ. ತಲ್ಲಾಖ್ ಕೊಡ್ತೀನಂತ ಹೆದರಿಸ್ತಾನೆ. ಊಹೂ… ಜಗ್ಗೋದಿಲ್ಲ. ಅವನ ಅಟಾಟೋಪ ಹೆಚ್ಚಿದಂತೆಲ್ಲ ಅವಳು ಮತ್ತಷ್ಟು ಬಲನೂಕಿ ಮುಂದೆ ಸಾಗ್ತಾಳೆ.
ಅದೇ, ಅವನು ಅತ್ತ ಹೋದಾದಮೇಲೆ ಕುದುರೆಯ ಖುರಪುಟದ ಭ್ರಮೆ ಅವಳನ್ನ ಹಿಂದಕ್ಕೆಳೆಯುತ್ತದೆ.
ಮತ್ತೆ ಅವನೊಟ್ಟಿಗೆ ಇಮಾಮ್ ಬರ್ತಾನೆ. ನೀತಿ ಪಾಠ ಹೇಳಿ ಬೆದರಿಸ್ತಾನೆ. ಅವಳ ಅಜ್ಜ, ಅಪ್ಪ… ಎಲ್ಲರೂ ಸೈಕಲ್ ಇಳಿದು ಬರಲು ಹೇಳುವವರೇ.
ಅವರೆಲ್ಲ ನಿಜವಾಗಿಯೂ ಸುತ್ತುವರೆದಾಗ ಆಹೂಗೆ ಎಲ್ಲಿಲ್ಲದ ಆವೇಗ. ಆಗೆಲ್ಲ ಅವಳು ಅವರನ್ನ ಧಿಕ್ಕರಿಸಿ ಮುಂದುವರೆದು ಗೆಲುವಿನಂಚಿಗೆ ಸಾಗುವವಳೇ.
ಅವರಿಲ್ಲದಾಗ… ಅವರ ಬೆದರಿಕೆಯ ಭ್ರಮೆ , ಹಾದಿ ಬದಿ ಹೆಂಗಸರ ಕೆಣಕು ಮಾತುಗಳು ಅವಳನ್ನ ಹಿಂದಕ್ಕೆ ತಳ್ಳುವವು. ಅವನ್ನೆಲ್ಲ ಮೀರಿ ಆಹೂ ಮುಂದಾಗ್ತಾಳೆ.
ಆದರೇನು? ಅವಳ ಅಣ್ಣ ತಮ್ಮಂದಿರು ಅವಳನ್ನ ಅಡ್ಡಗಟ್ಟುತಾರೆ. ಬಲವಂತವಾಗಿ ಸೈಕಲ್ ಕಿತ್ತುಕೊಳ್ತಾರೆ. ಆಹೂ ರೇಸಿನಿಂದ ಹೊರಗುಳೀತಾಳೆ.
**
~ಚಿತ್ರ ಮೂರು~
ಹೂರಾ ಏರೋಪ್ಲೇನಿಂದ ಕೆಳಗಿಳೀತಾಳೆ. ಅವಳ ಹತ್ತೂ ಬೆರಳು ತುಂಬ ಬಟ್ಟೆ ಪಟ್ಟಿಗಳ ಕಟ್ಟು! ಅವೆಲ್ಲ ಅವಳ ಬಯಕೆ ಪಟ್ಟಿಗಳಂತೆ.
ಹುಡುಗನೊಬ್ಬ ತಳ್ಳುಗಾಡಿಯಲ್ಲಿ ಅವಳನ್ನ ಕೂರಿಸ್ಕೊಂಡು ಶಾಪಿಂಗ್ ಮಾಡಿಸ್ತಾನೆ. ಎಲ್ಲ, ಎಲ್ಲ ಆಧುನಿಕ ವಸ್ತುಗಳನ್ನೂ ಕೊಳ್ಳುತ್ತ ಸಾಗುತ್ತಾಳೆ. ಜತೆಗೇ ಬೆರಳು ಕಟ್ಟುಗಳೂ ಕರಗುತ್ತಾ ಕೈ ಖಾಲಿಯಾಗ್ತದೆ. ಆದರೆ, ಒಂದೇ ಒಂದು ಕಟ್ಟೂ ಉಳಿದುಬಿಡ್ತದಲ್ಲಾ?
ಆದರೆ, ಅದೇನೆಂದು ಅವಳಿಗೆ ನೆನಪಾಗೋದೇ ಇಲ್ಲ. ಅವಳಿಗದೇ ಯೋಚನೆ.
ಅವನ್ನೆಲ್ಲ ಸಮುದ್ರ ತೀರಕ್ಕೆ ತಂದು ಬಿಚ್ಚಿಸುತ್ತಾಳೆ. ಎಲ್ಲವನ್ನೂ ಜೋಡಿಸಿಟ್ಟು ನೋಡಿ ಸಂಭ್ರಮಿಸ್ತಾಳೆ. ಅವಳದಲ್ಲಿ ಕೆಲಕಾಲ ಗೋಡೆಗಳಿಲ್ಲದ ಮನೆ. ಮುಪ್ಪಿನ ಹೊತ್ತಲ್ಲಿ ಅದವಳಿಗೆ ಸಿಕ್ಕ ಸ್ವಾತಂತ್ರ್ಯವಾ?
ಕೊನೆಗೆ ತೆಪ್ಪದ ಥರದ ದೋಣಿಯಲ್ಲಿ ಅದನೆಲ್ಲ ಹೇರಿಕೊಂಡು ಅವಳು ತೇಲಿಹೋಗ್ತಾಳೆ. ಆ ಕೊನೆಯ ದೃಶ್ಯ ಹೀಗಿದೆ…
ಹೂರಾ ತೆಪ್ಪದ ಮೇಲೆ ಸೋಫಾದಲ್ಲಿ. ಅವಳ ಸುತ್ತ ಮನೆಯ ಎಲ್ಲ ವಸ್ತುಗಳು. ಗೋಡೆಗಳಿಲ್ಲದ, ತೀರಗಳಿಲ್ಲದ ವಿಶಾಲ ಸಮುದ್ರದಲ್ಲಿ, ಮರೆತ ಅದೊಂದು ಬಯಕೆಯ ಕಟ್ಟಿನೊಂದಿಗೆ ಕೈಬೀಸಿ ಹೊರಟಿದಾಳೆ. ಇತ್ತ ಹವಾ ಅವಳಮ್ಮನ ಜತೆ ನಿಂತವಳು ದಿಟ್ಟಿಸಿ ಅದನ್ನೇ ನೋಡ್ತಿದಾಳೆ.
ಹೂರಾ ಹೊರಟುಹೋಗ್ತಾಳೆ.
ಅವಳು ಮರೆತ ಆಸೆ ಯಾವುದು? ಸ್ವಾತಂತ್ರ್ಯದ ಬಯಕೆಯಾ? ಎಲ್ಲ ಸಿಗುವ ಹೊತ್ತಿಗೆ ಅವಳಿಗದು ಮರೆತೇ ಹೋಗಿರ್ತದಾ? ಪಾರದರ್ಶಕ ಟೀಪಾತ್ರೆಯನ್ನ ನಾಚಿಗ್ಗೆಟ್ಟ ಬೆತ್ತಲು ಪಾತ್ರೆ ಅಂತ ಮೂಗುಮುರೀತಾಳಲ್ಲ? ಅವಳಿಗೆ ಆ ಹೊತ್ತಿಗೆ ಸ್ವಾಂತಂತ್ರ್ಯದ, ಒಳಗನ್ನ ತೆರೆದಿಡುವ, ಸ್ವೇಚ್ಛೆಯ ಬಯಕೆ ಸತ್ತು ಹೋಗಿರ್ತದಾ? ಅಥವಾ ಅವಳು ಎಲ್ಲ ಸಿಕ್ಕರೂ ಹಳೆಯ ಕಟ್ಟುಪಾಡುಗಳಿಗೆ ಒಗ್ಗಿದ್ದ ಮನಃಸ್ಥಿತಿಯಿಂದ ಹೊರಬರದವಳಾಗಿರ್ತಾಳಾ?
~~
ಈ ಮೂರೂ ತುಣುಕುಗಳು ‘ದ ಡೇ ಐ ಬಿಕೇಮ್ ವುಮನ್’ ಅನ್ನುವ ಇರಾನಿ ಚಿತ್ರದ್ದು. Marzieh Makhmalbaf (ಮಾರ್ಜಿಯಾ ಮಕ್ಮಲ್ಬಫ್) ಇದರ ನಿರ್ದೇಶಕಿ. (Marzieh Makhmalbaf (dialogue) Mohsen Makhmalbaf (writer)..)
ನಾಟಕದ ಶೈಲಿಯಲ್ಲಿರುವ ಸಿನೆಮಾ ಇದು. ಇಲ್ಲಿ ರೂಪಕಗಳದೇ ಸಾಮ್ರಾಜ್ಯ.
ಕಡ್ಡಿಯ ನೆರಳು ಅಳೀತಾ ಸಿಕ್ಕ ಸ್ವಾತಂತ್ರ್ಯದಲ್ಲೇ ಸುಖ ಸೂರೆ ಮಾಡಹೊರಡುವ ಮುಗ್ಧ ಹುಡುಗಿ…
ಅವಳಿಗಿರೋದು ಅಮ್ಮನ ಮಾತಲ್ಲಿ ನಂಬಿಕೆಯಷ್ಟೆ. ಅಮ್ಮ ಹೇಳ್ತಾಳೆ, ಕಡ್ಡಿಯ ನೆರಳು ಮಾಯವಾಗೋ ಹೊತ್ತು ಮಧ್ಯಾಹ್ನ. ನೀನು ಹೆಂಗಸಾಗ್ತೀ!
ಅದನ್ನ ನೆಚ್ಚಿಕೊಂಡ ಮಗಳಿಗೆ ಅದಷ್ಟೆ ತಲೆಯಲ್ಲಿ. ಅಮ್ಮನ ಮಾತು ಮುರಿಯುವ ಯೋಚನೆಯೇ ಅಲ್ಲಿಲ್ಲ. ಹೆಣ್ಣನ್ನು ಹುಟ್ಟಿದ ನಂತರ ಹೇಗೆ ಹೆಂಗಸನ್ನಾಗಿ ‘ಮಾಡಲಾಗುತ್ತದೆ’ ಅನ್ನುವುದು ಇಲ್ಲಿ ಅದೊಂದೇ ಸರಳ ಸಂಕೇತದ ಮೂಲಕ ಸಮರ್ಥವಾಗಿ ಹೇಳಲ್ಪಟ್ಟಿದೆ. ಇದು ಇರಾನಿಗೆ, ಯಾವುದೋ ಒಂದು ಪಂಥ, ದೇಶ ಕಾಲಕ್ಕೆಮಾತ್ರ ಸೀಮಿತವಾದುದಲ್ಲ. ಇದು ಮೂಲಭೂತವಾದದ ಒಲವಿರುವ ಮನಸುಗಳಿರುವ ಕಡೆಗೆಲ್ಲ ಅನ್ವಯವಾಗುವಂಥದ್ದು.
ಎರಡನೇ ಚಿತ್ರಣದಲ್ಲಿ ನಿಮಗಿದು ಸ್ಪಷ್ಟವಾಗುತ್ತೆ. ನೀವೇನಾದರೂ ಮೊದಲ ತುಣುಕನ್ನ ನೋಡಿ ‘ಇರಾನಿನಲ್ಲಿ ಹೆಂಗಸರ ಪಾಡು ಹೀಗೆ’ ಅಂತ ತೀರ್ಮಾನಿಸಿದರೆ ಪೆದ್ದರಾಗ್ತೀರಿ. ಎರಡನೇ ಚಿತ್ರಣದಲ್ಲಿ ಸೈಕಲ್ ರೇಸಲ್ಲಿ ಪಾಲ್ಗೊಂಡ ಆಹೂ ಹೊರತು ಇನ್ನಾವ ಹೆಣ್ಣುಗಳಿಗೂ ಬೆದರಿಕೆಯ ಸಮಸ್ಯೆಯಿರೋದಿಲ್ಲ. ಅಲ್ಲಿ ಅವಳನ್ನು ಪ್ರಾತಿನಿಧಿಕವಾಗಿ ತೆಗೆದ್ಕೊಂಡಿದಾರೆ ಅನ್ನುವ ಹಾಗೂ ಇಲ್ಲ. ಯಾಕೆಂದರೆ, ಉಳಿದವರಲ್ಲಿ ಇಬ್ಬರು ಅವಳ ಸ್ಥಿತಿಯನ್ನ ಆಡಿಕೊಳ್ತಾರೆ. ಸೋ, ಉಳಿದವರು ಅದರಿಂದ ದೂರವೇ ಇದ್ದಾರೆ.
ವೈಯಕ್ತಿಕವಾಗಿ ನನಗಿಷ್ಟವಾಗಿದ್ದು ಎರಡನೇ ತುಣುಕಿನ ರೂಪಕಗಳು. ಕುದುರೆಯ ಓತದ ಕಾಲುಗಳ ಭ್ರಮೆಯಲ್ಲಿ ಹಿಂಜರಿಯುವ ಆಹೂ… ನಿಜದ ಜನದ ಬೆದರಿಕೆಗೆ ಸೆಡ್ಡು ಹೊಡೆದು ಮುನ್ನುಗುವ ಅವಳು…
ಹೆಣ್ಣು, ಸವಾಲು ಎದುರಾಗೇಬಿಟ್ಟಾಗ ಧೈರ್ಯದಿಂದ ಎದುರಿಸ್ತಾಳೆ. ಆದರೆ ಅವಳಲ್ಲಿನ ಭಯ ಅವಳನ್ನ ಹೈರಾಣು ಮಾಡುತ್ತೆ. ಜನದ ಮಾತು ಕೀಳರಿಮೆ ಮೂಡಿಸುತ್ತೆ. ಸಮುದ್ರ ಈ ಕಥನದ ಹಿನ್ನೆಲೆಯಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ತೆರೆಗಳು ಹಿಂಜರಿಯುತ್ತಲೇ ಮುನ್ನುಗ್ಗುವ ಹಾಗೆ, ಕಡಲಲ್ಲೂ ಉಳಿಯಲಾಗದೆ, ದಡದಲ್ಲೂ ನಿಲ್ಲಲಾಗದೆ ತಳಮಳಿಸುವಂತೆ…
ಇಷ್ಟೆಲ್ಲ ಮಾತಿನ ಅಗತ್ಯವೇ ಬೇಕಿಲ್ಲ. ಸುಮ್ಮನೆ ಈ ಸಿನೆಮಾ ನೊಡಬೇಕು.
ಹಿರಿಯರ ಮಾತಿಗೆ ಕಟ್ಟುಬೀಳುವ ಅರಿಯದ ಹರೆಯದ ಹುಡುಗಿ,
ಅರಿತು, ಕಲಿತು ಮುನ್ನುಗ್ಗಬಯಸಿ ಗೆದ್ದರೂ ಒಡಹುಟ್ಟಿದವರ ದೈಹಿಕ ಬಲಕ್ಕೆ ಸೋಲಲೇ ಬೇಕಾದ ಅನಿವಾರ್ಯತೆ (ಹೆಣ್ಣು ಎಷ್ಟು ಗಟ್ಟಿಗಳಾದರೂ ದೇಹಬಲ ಪ್ರಕೃತಿಯೆಸಗಿದ ಮೋಸವೋ ಅಥವಾ ಇದ್ದೂ ಅವಲದನ್ನು ಪ್ರಯೋಗಿಸದೆ ಸುಮ್ಮನಿರುವಳೋ…)
ಮುದಿ ವಯಸ್ಸಲ್ಲಿ ಸಿಕ್ಕ ಸ್ವಾತಂತ್ರ್ಯವನ್ನ ಭೋಗವಸ್ತುಗಳ ಕೊಳ್ಳುವಿಕೆಯ ಹಳೆಬಯಕೆಯ ಈಡೇರಿಕೆಯಲ್ಲಿ ವಿನಿಯೋಗಿಸುವ, ಆ ಭರದಲ್ಲಿ ನಿಜದೊಂದು ಬಯಕೆಯನ್ನೇ ಮರೆತು ಹೋಗುವ ಎಲ್ಲ ಹೆಣ್ಣುಮಕ್ಕಳ ನಿಜದ ಪಾಡು…
ಇವು ಹೆಣ್ಣಿನ ಮೂರು ಘಟ್ಟಗಳ ಸಂಕೇತಗಳು.
ಒಟ್ಟಾರೆ ಹಿಡಿತವಿಲ್ಲದೆ ಬರೀ ಭಾವುಕಳಾಗಿ ಬರೆದ ಈ ಲೇಖನ ಮುಗಿಸುವ ಮೊದಲೊಮ್ಮೆ ಪ್ರಶ್ನೆ.
ಕೊನೆಯಲ್ಲಿ ಹವಾ ಮತ್ತು ಹೂರಾಳನ್ನು ಮುಖಾಮುಖಿ ತೋರಿಸೋದ್ಯಾಕೆ? ಹಾಗೆ ಬೆಳೆದವಳ ಕೊನೆ ಹೀಗಾಗ್ತದೆ ಅಂತಲಾ? ಹಾಗಾದರೆ ಹೂರಾ ಮರೆತ ಬಯಕೆ ಏನು? ಖುಷಿಖುಷಿಯಾಗಿ ಆಡಿಕೊಂಡು ತನ್ನ ಬದುಕು ಬದುಕಬೇಕು ಅನ್ನೋದಾ?
ಸಿನೆಮಾ ಕಾಡ್ತಲೇ ಇದೆ…
(ಸಾವಿರ ಮಾತುಗಳು, ಭಾವಾತಿರೇಕದ ನಾಟಕಗಳು ಕಟ್ಟಿಕೊಡಲಾಗದ ಎದೆನೋವನ್ನ ಈ ಚಿತ್ರದ ಕೆಲವೇ ರೂಪಕಗಳು ಕೊಟ್ಟಿವೆ, ಯೋಚನೆಗೆ ಹಚ್ಚಿವೆ ಅಂದರೆ ಅದು ಚಿತ್ರದ ಒಳ್ಳೆ ಗುಣವೋ? ಕೆಟ್ಟದ್ದೋ??)

ಇವರನ್ನು ದಯವಿಟ್ಟು ರಾಜಕೀಯಪಕ್ಷಗಳಿಂದ ದೂರವಿಡಿ…

ನೆನ್ನೆ-ಮೊನ್ನೆ ಕೇಳಿಪಟ್ಟೆ, ಸಂಸತ್ತಲ್ಲಿ ‘ಯೂಥ್ ಐಕಾನ್’ ಅಂತ ಸರ್ವಪಕ್ಷಗಳ ಸಮಾನ ಸಮ್ಮತಿಯಿಂದ ವಿವೇಕಾನಂದರ ಹೆಸರನ್ನ ಅಂಗೀಕಾರ ಮಾಡಲಾಯ್ತು ಅಂತ. ಸಖತ್ ಖುಷಿ ಆಯ್ತು. ಸಧ್ಯ! ವಿವೇಕಾನಮ್ದರನ್ನ ಯಾವುದೋ ಪಕ್ಷದ, ಜಾತಿಯ ಐಕಾನ್ ಆಗಿ ಸೀಮಿತಗೊಳಿಸ್ಲಿಲ್ವಲ್ಲ ಅಂತ. ವಿವೇಕಾನಂದರಂಥವರನ್ನು ಇಂವ ನಮ್ಮವ ಅನ್ನೋರೇ ಎಲ್ರೂ. ಅವರ ವ್ಯಕ್ತಿತ್ವ ಅಂಥದ್ದು. ಬಟ್ ಇತ್ತೀಚೆಗೆ ಬಿಜೆಪಿ-ಎಬಿವಿಪಿ ಅವರನ್ನ ಹೈಜಾಕ್ ಮಾಡಿಬಿಟ್ಟಿತ್ತು. ಯಾರಾದ್ರೂ ಸರಿಯೇ. ಈ ವಿಶ್ವಮಾನವನ ಚಿಂತನೆಗಳು ಹರಡೋದಷ್ಟೆ ಇಂಪಾರ್ಟೆಂಟು ಅನ್ನೋದೇನೋ ಸರಿ. ಅವರು ಮಾಡಿದ್ದು ಒಳ್ಳೆ ಕೆಲಸಾನೇ. ಬಟ್, ಉಳ್ದವ್ರು ‘ಅಯ್ಯೋ, ವಿವೇಕಾನಂದ ಕೇಸರಿ ಪಡೆಯವ್ರು’ ಅಂದ್ಕೊಂಡು ದೂರವುಳಿದುಬಿಟ್ರೆ ಅಂತ ನನ್ನ ಚಿಂತೆಯಾಗಿತ್ತು. ಈಗ್ಲೂ ಕೆಲವು ಗೆಳೆಯರು- ಸ್ವಾಮೀಜಿಯನ್ನ ಓದಿಕೊಂಡಿಲ್ಲದೆ ಬರೀ ಪೂರ್ವಾಗ್ರಹವಿಟ್ಕೊಂಡಿರೋರು ಅವರ ಬಗ್ಗೆ ಸುಮ್ನೆ ಕಮೆಂಟ್ ಮಾಡ್ತಾರೆ. 

My Master

ವ್ಯಕ್ತಿಯೊಬ್ಬನನ್ನ ಸುಮ್ಮನೆ ನಮ್ಮ ನಡುವೆ ಇರಲಿಕ್ಕೆ ಬಿಡದೆ ಅವನನ್ನ ದೇವರಾಗಿಸಿದಾಗ್ಲೇ ಹೀಗೆಲ್ಲ ಆಗೋದು. ಆತ ದೇವತೆಯಾಗದೆ ಹೋದರೆ ಕೆಲವ್ರಿಗೆ ಶ್ರದ್ಧೆ ಉಂಟಾಗೋಲ್ಲ. ಮತ್ತೆ ಕೆಲವರಿಗೆ ಆತನ ದೇವಪಟ್ಟವೇ ಶ್ರದ್ಧೆಗೆ ಅಡ್ಡಗಾಲಾಗಿ ನಿಲ್ಲತ್ತೆ. ಕೈಗೆಟುಕದವರಿಂದ ನಮಗೇನು ಅನ್ನುವ ಭಾವ ಹಾಗೆ ಮಾಡಿಸತ್ತೆ. ಖುದ್ದು ಸ್ವಾಮೀಜೀನೇ ಹೇಳಿದ್ರು, ವ್ಯಕ್ತಿಗಳನ್ನ ಮಂದಿರದಲ್ಲಿ ಕೂಡಿಡೋದಲ್ಲ, ಅವರ ವಿಚಾರಗಳನ್ನ ಬೀದಿಗೆ ತರಬೇಕು, ಮನೆಮನೆಗೆ ಹಂಚ್ಬೇಕು ಅಂತ. ನಾವಿಲ್ಲಿ ಖುಷಿ ಬಂದಕಡೆಯೆಲ್ಲ ಕೈಕಟ್ಕೊಂಡು ನಿಂತ ಸ್ವಾಮೀಜಿ ಸ್ಟ್ಯಾಚು ಅನಾವರಣ ಮಾಡಿಸ್ತೇವೆ ವಿನಾ ಅವರ ನೈಜ ಚಿಂತನೆಗಳ ತಂಟೆಗೇ ಹೋಗೋದಿಲ್ಲ. 
ಬೇಜಾರಿನ ವಿಷಯ ಅಂದ್ರೆ, ತುಂಬಾ ಜನ ವಿವೇಕಾನಂದ ಅಂದ್ರೆ ಯಾರೋ ಒಬ್ಬ ದೇವ-ದಿಂಡರ ಸನ್ಯಾಸಿ ಅಂದ್ಕೊಂಡಿರೋದು. ಗೆಳೆಯರೊಬ್ಬರು ಹೇಳೋ ಹಾಗೆ ಅಧ್ಯಾತ್ಮದ ಅಫೀಮು ಹಂಚಿದವರು ಅಂತಾನೂ. ಮತ್ತೊಬ್ಬ ಗೆಳೆಯ ಬರೆದಿರೋ ಹಾಗೆ ‘ಹುಚ್ಚ ಗುರುವಿನ ಒಬ್ಬ ಶಿಷ್ಯ’. ಮತ್ತೆ ಕೆಲವರ ಪಾಲಿಗೆ ಹಿಂದುತ್ವದ ಸಂಕೇತ ಮಾತ್ರ. 
ನೇತಾಜಿ, ಜಗದೀಶ್ಚಂದ್ರ ಬೋಸ್, ಅರಬಿಂದೋ, ತಿಲಕ್, ಗಾಂಧಿ, ನಿವೇದಿತಾ, ರವೀಂದ್ರನಾಥ ಠಾಕೂರ್, ಖೇತ್ರಿ ಮಹರಾಜರಿಂದ ಹಿಡಿದು ಬೇರೆಬೇರೆ ರಂಗಗಳ ದಿಗ್ಗಜರನ್ನು ಪ್ರಭಾವಿಸಿದ ವ್ಯಕ್ತಿಯೊಬ್ಬನ ಅಸ್ತಿತ್ವವನ್ನ ಹೀಗೆ ಸಂಕುಚಿತಗೊಳಿಸ್ತಾ, ನಮನಮಗೆ ಬೇಕಾದಂತೆ ತಿರುಚುತ್ತ ಹೋಗ್ತಿರುವ ನಮಗೆ ಖಂಡಿತ ನಾಚಿಕೆ ಇಲ್ಲ. (ಅಕ್ಷರಶಃ).
ನಮ್ಮ ಕುವೆಂಪು, ಜೀಎಸ್ಸೆಸ್, ನರಸಿಂಹಯ್ಯ ಇತ್ಯಾದಿ ಘನವಂತ ವ್ಯಕ್ತಿಗಳೂ ವಿವೇಕಾನಂದರಿಂದ ಪ್ರಭಾವಿತರೇ. ಅದರಲ್ಲೂ ಕುವೆಂಪು…. ಬಿಡಿ. ಹೇಳಿ ಮುಗಿಯದು.
ನೆನ್ನೆಯಿಂದ ನನ್ನ ಆರ್ಕುಟ್ ಸ್ಟೇಟಸ್ಸಿನಲ್ಲಿ ‘ಯುವದಿನ- ಜನವರಿ ೧೨’ ಅಂತ ಇದೆ. ಒಬ್ಬರು ಆನ್‌ಲೈನಿಗರು  ಹಣಕಿ, ‘ಅದೇನು?’ ಅಂದರು. ಹೇಳಿದೆ. ‘ನೀವು ವಿವೇಕಾನಂದರ ಜಯಂತಿ ಎಲ್ಲ ಸೆಲೆಬ್ರೇಟ್ ಮಾಡ್ತೀರಾ?’ ಅಂತ ಕೇಳೀದರು. ಹೂಂ ಅಂದಿದ್ದಕ್ಕೆ, ‘ವಿಚಿತ್ರವಾಗಿದೀರಿ ಕಣ್ರೀ ನೀವು!’ ಅನ್ನಬೇಕಾ ಪುಣ್ಯಾತ್ಮ!?
ಇದೇ ವಿವೇಕಾನಂದ ನಮ್ಮವರಲ್ಲದೆ ಹೋಗಿದ್ದರೆ, ಆಗ ಅವರ ಜನ್ಮದಿನವನ್ನ ಸೆಲೆಬ್ರೇಟ್ ಮಾಡಿದ್ದರೆ ಖುಷಿಯಾಗುತ್ತೇನೋ ಬಹುಶಃ ಅವರಂಥ ಜನಕ್ಕೆ?
ನನ್ನ ಮಟ್ಟಿಗೆ ಹೇಳೋದಾದ್ರೆ, ನನ್ ಲೈಫಿನ ಪ್ರತಿ ಹೆಜ್ಜೆ ಅವರ ಚಿಂತನೆಗಳಿಂದ ಕಟ್ಟಿಕೊಂಡಿದ್ದು. ಅಲ್ಲಿ ಫೆಮಿನಿಸಮ್ ಇದೆ, ಸೆಕ್ಯುಲರಿಸಮ್ ಇದೆ, ಹ್ಯುಮಾನಿಟಿಯ ಪಾಠವಿದೆ, ಅಧ್ಯಾತ್ಮ… ಹೌದು, ಇದ್ದೇ ಇದೆ. ಬದುಕನ್ನ ಚೆಂದಗೊಳಿಸ್ಕೊಳ್ಳೋದು ಹೇಗೆ ಅನ್ನೋದು ಅಲ್ಲಿ ಸ್ಪಷ್ಟವಾಗಿದೆ. ಅಲ್ಲಿ ನನ್ನ ಎಲ್ಲ ಸಮಸ್ಯೆಗೂ ಉತ್ತರವಿದೆ.
‘ಇನ್ನೊಂದು ಶತಮಾನ ಕಾಲ ನಿಮ್ಮೆಲ್ಲ ದೇವ-ದೇವಿಯರನ್ನ ಸಮುದ್ರಕ್ಕೆಸೆಯಿರಿ… ದೇಶಕ್ಕೆ ಸಮರ್ಪಿಸ್ಕೊಳ್ಳಿ’ ಅನ್ನುವಂಥ ಕರೆ ಕೊಟ್ಟ, ‘ಯಾರು ಮ್ಲೇಚ್ಚ-ಅಸ್ಪೃಶ್ಯ ಎಂದೆಲ್ಲ ಭೇದ ಮಾಡ್ತಾರೋ ಅವರು ಮಾನವ ಜಾತಿಗೆ ಸೇರಿದವರಾಗಿ ಉಳಿಯೋದಿಲ್ಲ’ ಅಂದ, ‘ಭಗವದ್ಗೀತೆ ಪಕ್ಕಕ್ಕಿಟ್ಟು ಫುಟ್ಬಾಲ್ ಆಡಿ, ದೇಹ ಗಟ್ಟಿ ಮಾಡ್ಕೊಳಿ ಮೊದ್ಲು’ ಎಂದು ಗುಡುಗಿದ, ‘ಕಿಟಕಿ ಮುಚ್ಚಿ ಧ್ಯಾನ ಮಾಡೋದರ ಬದಲು, ಬಾಗಿಲು ತೆರೆದು ಹೊರಬನ್ನಿ, ಅಗತ್ಯದಲ್ಲಿರುವವರ ಸೇವೆ ಮಾಡೋದೇ ನಿಜವಾದ ಧರ್ಮ’ ಅಂದ, ‘ಹೆಣ್ಣುಮಕ್ಕಳು ಕ್ರಿಯಾಶೀಲರಾಗದ ಹೊರತು ಭಾರತ ಉದ್ಧಾರವಾಗೋದೇ ಇಲ್ಲ’ ಅಂದು ಗಂಡಸರ ಕಿವಿಹಿಂಡಿದ….
ಉಫ್… ನನ್ನ ವೀರೇಶ, ನರೇನ್, ಬಿಲೆ, ವೀರೇಶಾನಂದ, ವಿವೇಕಾನಂದ… ನನ್ನ ಐಕಾನ್. 
ನಿಮಗೆಲ್ರಿಗೂ ಯುವದಿನದ ಶುಭಾಶಯ.
(* ಗೊತ್ತಿಲ್ಲದವರಿಗೆ- ಜನವರಿ 12 ವಿವೇಕಾನಂದರ ಜನ್ಮ ದಿನಾಂಕ. ಇದನ್ನ ಯುವ ದಿನ ಅಂತ ಆಚರಿಸುವ ರೂಢಿಯಿದೆ)
ನಲ್ಮೆ,
ಚೇತನಾ ತೀರ್ಥಹಳ್ಳಿ

ಸಿನೆಮಾ `ಸಾಂಗತ್ಯ’

ವರ್ಷದ ಹಿಂದಿನ ಮಾತು. ಕುಪ್ಪಳ್ಳಿಗೆ ಹೊರಟಾಗ ನನಗೆ ಗೊತ್ತಿದ್ದುದು ನಾನು ಸಿನೆಮಾ ನೋದಲಿಕ್ಕೆ ಹೋಗ್ತಿದೇನೆ, ಅದೂ ನನ್ನ ಮೆಚ್ಚಿನ ಮಲೆನಾಡಲ್ಲಿ ತಣ್ಣಗೆ ಕುಂತು ನೋಡಲಿದ್ದೇನೆ, ಮತ್ತಿದನ್ನ ನಾವಡ, ಸುಧೀರ್ ಕುಮಾರ್ (ನನ್ನ ಪ್ರೀತಿಯ ಗೆಳತಿ ದೀಪಾಳ ಪತಿಯೂ ಆಗಿರುವ), ಮಧು, ವಾದಿರಾಜ್ ಮೊದಲಾದ ಗೆಳೆಯರು `ಸಾಂಗತ್ಯ ವೇದಿಕೆಯಡಿ ಆಯೋಜಿಸಿದಾರೆ ಅನ್ನುವುದಷ್ಟೆ. ಅಲ್ಲಿ ಹೋಗಿ ಸಿನೆಮಾ ನೊಡಿ ಬರುವುದು ಬಿಟ್ಟು ಬೇರೆ ಏನೂ ನಿರೀಕ್ಷೆ ಇರಲೂ ಇಲ್ಲ, ಅವರು ಅದರ ಹೊರತಾಗಿ ಮತ್ತೇನೋ ಮಾಡಲಿದ್ದಾರೆ ಅನ್ನುವ ನಿರೀಕ್ಷೆಯಂತೂ ಇರಲೇ ಇಲ್ಲ.

ಆದರೆ ಅಲ್ಲಿ ತಲುಪುವ ಹೊತ್ತಿಗಾಗಲೇ ನಾವಡರು ಪ್ರವೀಣ್ ಜತೆ ಸೇರಿಕೊಂಡು ಸಾಂಗತ್ಯ ಹೆಸರಿನ ಬ್ಲಾಗ್ ಒಂದನ್ನು ತೆರೆದಾಗಿತ್ತು. ಅದು ಕೂಡ ಕೊಪ್ಪ ಎಂಬ ಬೆಂಗಳೂರು ದೂರದ ಪುಟ್ಟ ಊರಲ್ಲಿ ಕುಂತು! (ಸಾಂಗತ್ಯ ಬ್ಲಾಗ್: www.saangatya.wordpress.com)

ಈಗ ಸಾಂಗತ್ಯಕ್ಕೆ ವರ್ಷ ತುಂಬಿದ ಹೊತ್ತಲ್ಲಿ ಅವತ್ತಿನ- ಮೊದಲ ಸಿನೆಮೋತ್ಸವದ ನೆನಪು. ನಿಜಕ್ಕೂ ಅದು ಎಲ್ಲ ಥರದಲ್ಲೂ ಯಶಸ್ವೀ ಕಾರ್ಯಕ್ರಮ. ನನ್ನ ನೆಚ್ಚಿನ ಬೆಂಗಾಲಿ ಭಾಷೆಯ ಜುಕ್ತಿ ಟಕೋ…, ಪೋಸ್ಟ್ ಮೆನ್ ಇನ್ ದ್ ಮೌಂಟೆನ್ಸ್, ಎಲ್ ಪೋಸ್ಟಿನೋ ಥರದ ಕ್ಲಾಸಿಕ್‌ಗಳನ್ನ ನೋಡಿ ಸಂವಾದ ನಡೆಸಿದ್ದು ಇನ್ನೂ ಕಣ್ಮುಂದಿದೆ. ಈ ಕಾರ್ಯಕ್ರಮದಲ್ಲೇ ಮೊದಲು ಭೇಟಿಯಾದ ಪರಮೇಶ್ವರ ಗುರುಸ್ವಾಮಿಯವರ ಸಿನೆ ಪ್ರೀತಿ, ಅದನ್ನು ನಮಗೂ ಹಂಚುವ ಆಸಕ್ತಿ, ಅವರು ಪ್ರತಿ ಕೋನವನ್ನೂ ಎಳೆ ಎಳೆಯಾಗಿ ವಿವರಿಸುವ ಬಗೆ ಸಿನೆಮಾ ಅಂದರೆ ಬರೀ ತೆರೆ ಮೇಲೆ ಕುಣಿದಾಡುವ ಚಿತ್ರಗಳಾಚೆಗೂ ಇರುವ ಅದ್ಭುತ ಲೋಕ ಅನ್ನುವುದನ್ನ ಮತ್ತಷ್ಟು ಮನದಟ್ಟುಮಾಡಿಕೊಟ್ಟಿತ್ತು.

ಇರಲಿ. ಸಾಂಗತ್ಯದ ಬಗ್ಗೆ ಹೇಳ್ತಿದ್ದೆ. ನಾನು ಅಂದ್ಕೊಂಡಿದ್ದೆ. ಎಲ್ಲ ಬ್ಲಾಗುಗಳ ಹಾಗೆ ಇದು ಕೂಡ ಯಾವುದಾದ್ರೂ ವಿವಾದಕ್ಕೆ ಸಿಲುಕಿಯೋ, ನಿರ್ವಹಿಸಲಾಗದೆಯೋ, ಸಮಯದ ಕೊರತೆಯಿಂದ್ಲೋ ಅಥವಾ ಆಸಕ್ತಿ ಮುಗಿದೋ ಕುಂಟುತ್ತ ಸಾಗುತ್ತೆ ಅಥವಾ ನಿಲ್ಲುತ್ತೆ ಅಂತ. ಯಾಕೆಂದರೆ, ಒಬ್ಬ ವ್ಯಕ್ತಿಯ ಹೆಸರಿಲ್ಲದ ಯಾವುದೇ ನಿಸ್ವಾರ್ಥ ಅಟೆಂಪ್ಟ್ ಹಾಗೆಲ್ಲ ಬರಖತ್ತಾಗೋದು ಕಷ್ಟ ನೋಡಿ!? ಆದರೆ, ನನ್ನ ಅಚ್ಚರಿಗೆ, ಸಾಂಗತ್ಯಕ್ಕೆ ಬ್ಲಾಗ್ ಲೋಕದಾಚೆಗಿನ ಆಸಕ್ತರೂ ಬರೆಯತೊಡಗಿದರು! ಮತ್ತೆ, ಬೇರೆ ಬೇರೆ ವಲಯಗಳ, ಊರುಗಳ ಸಿನೆಪ್ರಿಯರೆಲ್ಲರೂ ಭೇಟಿಕೊಡತೊದಗಿದ್ದರು!! ಸ್ಲಮ್‌ಡಾಗ್ ಮಿಲೆನಿಯರ್ ಬಗ್ಗೆ ಮೊದಲಬಾರಿಗೆ ನಡೆದ ವ್ಯಾಪಕ ಸಂವಾದವಿರಬಹುದು, ಸಿನೆಮಾ ಹೇಗಿರಬೇಕೆಂಬ ಬಗ್ಗೆಯದಿರಬಹುದು, ಚಿತ್ರವೊಂದು- ನೋಟ ಹಲವು ಥರದ ಸಂವಾದಗಳಿರಬಹುದು, ಎಲ್ಲವೂ ಯಾವ ಅತಿರೇಕವಿಲ್ಲದೆ, ಆರೋಗ್ಯಕರವಾಗಿ ನಡೆದುಕೊಂಡು ಹೋಗಿದ್ದು ಅದರ ಹೆಗ್ಗಳಿಕೆ. ಜೊತೆಗೆ, .ಗು., ಸೃಜನ್ ನಿಯಮಿತ ಅಂಕಣಗಳು, ಬಿ.ಸುರೇಶ್‌ರಂತೆ ಸಿನೆವಲಯದಲ್ಲಿದ್ದವರ ಪ್ರತಿಕ್ರಿಯೆಗಳು, ಇವೆಲ್ಲ ಸಾಂಗತ್ಯಕ್ಕೊಂದು ಶಿಸ್ತು ತಂದುಕೊಟ್ಟವು. ಬಹುಶಃ ಇದನ್ನು ಆರಂಭಿಸಿದವರು ಶುರುಮಾಡುವಾಗ ಇಂಥದೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲವೇನೋ?

ಹಾಗಾದರೆ ಸಾಂಗತ್ಯ ಈ ಒಂದು ವರ್ಷದಲ್ಲಿ ಏನು ಮಾಡಿದೆ? ಬರೀ ಬ್ಲಾಗ್ ಮಾಡಿದ್ದೇ ಹೆಗ್ಗಳಿಕೆಯಾ? ಊಹೂಅದು ಬೇರೆಬೇರೆ ಭಾಗಗಳ ಸಿನೆಪ್ರಿಯರನ್ನು ಒಂದುಗೂಡಿಸಿದೆ. ಪರಸ್ಪರ ಸಂವಾದ- ಬ್ಲಾಗ್ ಆಚೆಯೂ ನಿರಂತರ ನಡೆಯುವಂತೆ ಮಾಡಿದೆ. ಒಳ್ಳೊಳ್ಳೆ ಸಿನೆಮಾ ನೋಡುವಿಕೆ ಸಾಧ್ಯ ಮಾಡಿಕೊಟ್ಟಿದೆ. ನನಗೆ ಗೊತ್ತಿರುವ ಹಾಗೆ, ಮೊದಲ ಸಾರ್ತಿ ಸಿನೆಮೋತ್ಸವಕ್ಕೆ ಹೋಗಿಬಂದ ನಂತರ ಅಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಬೇರೆಬೇರೆ ಭಾಷೆಯ ಕನಿಷ್ಠ ಇಪ್ಪತ್ತು ಸಿನೆಮಾಗಳನ್ನು ನೋಡಲು ಸಾಧ್ಯವಾಗಿದೆ. ನಾನೊಬ್ಬಳೇ ನನ್ನ ಅಭಿರುಚಿಯನ್ನು ಮತ್ತಷ್ಟು ಉತ್ತಮಗೊಳಿಸ್ಕೊಂಡು ಮೂವತ್ತು ಸಿನೆಮಾಗಳನ್ನ ಒಂದು ವರ್ಷದಲ್ಲಿ ನೋದಲು ಸಾಧ್ಯವಾಯ್ತೆಂದರೆ! ಆ ಮೂಲಕ ಅರಿವಿನ ವಿಸ್ತರಣೆ ಸಾಧ್ಯವಾಯ್ತೆಂದರೆಮನರಂಜನೆಯ ಮತ್ತೊಂದು ಮಗ್ಗಲು ಸಿದ್ಧಿಸಿತೆಂದರೆ ಲೆಕ್ಕ ಹಾಕಿಕೊಳ್ಳಿ. …

ಈ ವರೆಗೆ ಸಾಂಗತ್ಯ ಒಟ್ಟು ಎರಡು ಫಿಲ್ಮ್ ಫೆಸ್ಟಿವಲ್ ಗಳನ್ನು ಮಾಡಿದೆ. ಈಗ ಮೂರನೆಯದಕ್ಕೆ ರೆಡಿಯಾಗ್ತಿದೆ (೧೬-೧೭ಕ್ಕೆ, ಕುಪ್ಪಳ್ಳಿಯಲ್ಲಿ). ಇನ್ನೊಂದು ವಿಷಯ, ಅದು ಶೀಘ್ರದಲ್ಲೇ ಸದಭಿರುಚಿಯ, ಅಗಾಧ ಮಾಹಿತಿಯ ಪತ್ರಿಕೆಯನ್ನೂ ಹೊರತರ್ತಿದೆ! ತ್ರೈಮಾಸಿಕ ಎಂದು ಕೇಳಿಪಟ್ಟಿದೇನೆ. ಅದರಲ್ಲಿ ಇರಬಹುದಾದ ಸಂಗತಿಗಳನ್ನ ಸಧ್ಯಕ್ಕೆ ನೀವು ಊಹಿಸಲೂ ಸಾಧ್ಯವಿಲ್ಲವೆಂದು ನಾನು ಬೆಟ್ ಕಟ್ತೇನೆ!

ಬಹುಶಃ ಸ್ವಲ್ಪ ಜಾಸ್ತಿಯೇ ಬರೆದುಬಿಟ್ಟೆ. ಸಾಂಗತ್ಯದ ಮೇಲಿನ ನನ್ನ ಪ್ರೀತಿ ಅಂಥದ್ದು. ಯಾವುದೇ ಆಗಲಿ, ಒಳ್ಳೆಯ ಪ್ರಯತ್ನವನ್ನ ಮೆಚ್ಚದಿರಲು, ಹುರಿದುಂಬಿಸದಿರಲು ಸಾಧ್ಯವಾಗೋಲ್ಲ ನೋಡಿ! ಪತ್ರಿಕೆ ಆರಂಭವಾದ ಮೇಲೆ ಅರಿಕೆ ಹೊತ್ತುಕೊಂಡು ಮತ್ತೆ ಬರ್ತೇನೆ. ಅಲ್ಲೀವರೆಗೂ, ಸಾಂಗತ್ಯದ (ಕನ್ನಡದಲ್ಲಿ ಇದು ವಿಶಿಷ್ಟ ಪ್ರಯತ್ನ) ಯೋಜನೆಗಳಿಗೆ ನನ್ನ ಜತೆ ನೀವೂ ಪ್ರೀತಿಯಿಂದ ವಿಶಸ್ ಹೇಳ್ತೀರಲ್ಲ?

ಥ್ಯಾಂಕ್ಸ್.

2009 ಖುಷಿ, ಬೇಸರ ಮತ್ತು ಗುಟ್ಟು!

ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ…
ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ ಚಾರ್ಜ್ ಆಗತ್ತೇಂತ ಇವತ್ತೇ ಕೆಲವರೆಲ್ಲ ವಿಶಸ್ ಕಳಿಸಿದ್ರು. ಆಗ ಗಾಬರಿಯಾಗೋಯ್ತು, ೨೦೦೯ ಮುಗ್ದೇಬಿಡ್ತಲ್ಲ ಅಂತ. ಈ ಹೊತ್ತಲ್ಲಿ ಒಂದ್ ಸಲ ಹಿಂತಿರುಗಿ ನೋಡಿದಾಗ ಕಂಡ ೨೦೦೯ರ ಖುಷಿ, ಬೇಸರ, ಗುಟ್ಟುಗಳು ಇಲ್ಲಿವೆ. ಜತೆಗೆ ಹೊಸ ವರ್ಷಕ್ಕೆ ನನ್ನ ಸಿಲ್ಲೀಸಿಲ್ಲಿ ರೆಸಲ್ಯೂಷನ್ಸ್ ಕೂಡಾ!

ಖುಷಿ:
೧. ಮಗು ಜೊತೆ ಕಳೆದ ಪೂರ್ತಿ ಒಂದು ತಿಂಗಳು
೨. ಅಣ್ಣನ ಜತೆ ಜಗಳ ಕಡಿಮೆ ಆಡಿದ್ದು.
     ಅವನು ಕೊಡಿಸಿದ ಹೊಸ ಕಂಪ್ಯೂಟರ್.
೩. ಹೊಸ ಗೆಳೆಯರ ಪರಿಚಯ.
     ಹಳೆ ಗೆಳೆಯ(ರಲ್ಲದಿದವರು)ರಲ್ಲಿ ಕೆಲವರು ಕಳಚಿಕೊಂಡಿದ್ದು.
೪. ೪೩ ಪುಸ್ತಕಗಳ ಓದು.
      ೩೧ ಸಿನೆಮಾಗಳನ್ನು ನೋಡಿದ್ದು (ಬೇರೆ ಬೇರೆ ಭಾಷೆಗಳದ್ದು)
೫. ಹೊಸ ಕೆಲಸ.
     ಜೊತೆಗೇ ದೊರೆತಿರುವ ಬೀಎಮ್‌ಟೀಸಿ ಭಾಗ್ಯ!
೬. ಬ್ಲಾಗಲ್ಲಿ ಕಿತ್ತಾಟವಿಲ್ಲದ್ದು
೭. ಸುಮಾರು ಐದು ವರ್ಷಗಳ ನಂತರ ತೀರ್ಥಹಳ್ಳೀಲಿ ಖುಷಿಯಾಗಿ ಒಂದು ವಾರ ಇದ್ದು ಬಂದಿದ್ದು.
೮. ಜಾಗೋ ಭಾರತ್ ಯಶಸ್ಸು.

ಬೇಸರ:
೧. ವರ್ಷಾಂತ್ಯದ ಮೂರು ಸಾವುಗಳು- ನನ್ನ ರಾಘು ಮಾವ, ಅಶ್ವತ್ಥ್, ವಿಷ್ಣುವರ್ಧನ್.
೨. ಉತ್ತರ ಕರ್ನಾಟಕದ ನೆರೆ ಹಾವಳಿ.
೩. ಹದಗೆಡುತ್ತಲೇ ಹೋಗುತ್ತಿರುವ ವಿಕೃತ ರಾಜಕಾರಣ.
೪. ಅಂದುಕೊಂಡ ಹಾಗೆ ‘ಸುತ್ತಾಟ’ ಸಾಧ್ಯವಾಗದೆ ಹೋಗಿದ್ದು.
೫. ನನಗೆ ಬರೀಲಿಕ್ಕೆ ಬರೋದಿಲ್ಲ ಅಂತ ಸಾಬೀತಾಗಿದ್ದು. (ಬರೀಲಿಕ್ಕೆ ಬರೋಲ್ಲ ಅನ್ನೋದು ಬೇಜಾರು. ಸಾಬೀತಾಗಿದ್ದು ಖುಷಿ)

ಗುಟ್ಟು:
೧. ಎಂದಿನಂತೆ, ‘ಅವನು’.

ರೆಸಲ್ಯೂಷನ್:
೧. ಪ್ರತಿದಿನ ಅಡುಗೆ
೨. ವಾರಕ್ಕೊಂದು ಪುಸ್ತಕ, ಸಿನೆಮಾ
೩. ಫೋನ್ ಬಳಕೆಯಲ್ಲಿ ಕಡಿತ
೪. ಚಾಕೊಲೇಟ್‌ಗೆ ಟಾಟಾ
೫. ಕುಡಿತ ಬಿಡೋದು (ಕಾಫಿ)
೬. ಸೇವಿಂಗ್ಸ್ (ಈ ಸಲಾನಾದ್ರೂ… ವಿಶ್ ಮಿ ಪ್ಲೀಸ್)
೭. ಮುಂದಿನ ಮುನ್ನೂರರವತ್ತೈದು ದಿನಗಳಲ್ಲಿ ಒಂದಿನಾನಾದ್ರೂ ಸೀರೆ ಉಡೋದು
೮. ಮಾತಾಡೋಕೆ ಕಲಿಯೋದು… (ಇದ್ ಸ್ವಲ್ಪ ಕಷ್ಟ. ದಿನಕ್ಕೊಂದು ‘ಕೆಸ’ದ ಎಲೆ ತಿನ್ನೋ ಪ್ಲ್ಯಾನ್ ಇದೆ!)

ನಿಮಗೆಲ್ರಿಗೂ ಹೊಸ ವರ್ಷಕ್ಕೆ ನನ್ನ ಶುಭಾಶಯ. ನೀವೂ ಹಾರೈಸಿ ನಂಗೆ ಪ್ಲೀಸ್…

ನಲ್ಮೆ,
ಚೇತನಾ ತೀರ್ಥಹಳ್ಳಿ

‘ಚೈತ್ರೋದಯ’ದ ಕಾಲಕ್ಕೆ ಅಲ್ಲಿ ನಾನು ಮತ್ತು ನೀವು…

ವಾರಾಂತ್ಯದಲ್ಲಿ, ವರ್ಷಾಂತ್ಯದಲ್ಲಿ  ಒಂದು ಒಳ್ಳೆ ಕಾರ್ಯಕ್ರಮ. ಧನುರ್ಮಾಸದ ಬೆಳಗ್ಗೆ  ಕಾವ್ಯದ ಹಣತೆ ಹಚ್ಚಿ ಕಾರ್ತಿಕದ ಸಂಭ್ರಮ, ರವೀಂದ್ರ ಕಲಾಕ್ಷೇತ್ರದಲ್ಲಿ ಚೈತ್ರೋದಯ! ನಾವೆಲ್ಲ ಅಲ್ಲಿ ಸೇರೋಣವಾ?

ಮಗುವಿಗೊಂದು ಪತ್ರ

ನಾನು, ಪ್ರಾಣ್

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ.
ಮುಳ್ಳು ಕಿತ್ತ ನೋವು,
ಮುಳ್ಳು ಕಿತ್ತ ನಿರುಮ್ಮಳ,
ಹಾಗೇ ಇದೆ.

ಕಿವುಡಾಗಲೇಬೇಕಿತ್ತು ನಾನು,
ಕುರುಡಾಗಲೇಬೇಕಿತ್ತು.
ಮೂಕತನವನೆಲ್ಲ ಹುಗಿದು
ಮಾತಾಡಲೇಬೇಕಿತ್ತು.
ಅಬ್ಬರದ ಸಂತೆಯಲಿ ನೀನು
ಅಮ್ಮಾ ಅಂದಿದ್ದು-
ಎದೆಯ ಆಚೆಗೇ ನಿಂತು ಹೋಗಿತ್ತು…

ನಿನ್ನ ಪುಟ್ಟ ಕೈಗಳು ನನ್ನ
ತಡೆಯಲಾಗಲಿಲ್ಲ.
ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ
ಕಣ್ಣುಗಳನ್ನ
ತಪ್ಪಿಸಿಬರಬೇಕಿತ್ತು…

ನಾ ಕಳೆದ ನಿನ್ನ ಬದುಕಿನ ಮೊತ್ತ
ಲೆಕ್ಕವಿಟ್ಟಿದೇನೆ ಮಗೂ,
ನಿನ್ನ ನೋವಿನ ಋಣ
ನನ್ನ ಹೆಗಲ ಮೇಲಿದೆ.

ನೆನಪಿಗೊಂದು ಕಂಬನಿ ಸುರಿದು
ಸಾಗರವಾಯ್ತೆಂದು ಸುಳ್ಳಾಡಲಾರೆ,
ನಿನ್ನ ನೆನೆಯುವ ಧೈರ್ಯ ನನಗಿಲ್ಲವಾಗಿದೆ.

ಮಗೂ,
ಸೋಗು ನಗುವಿನ ನನ್ನ
ಕಣ್ಣುಗಳನೊರೆಸಿ,
ಉತ್ತರ ಗೊತ್ತೆಂದು ಹೇಳುವ ದಿನಕಾಗಿ
ಕಾದಿದ್ದೇನೆ.

ಅದಕೆಂದೇ ಅಕ್ಷರಗಳ ಸಾಲು ಹಾಸಿ,
ಸೇತುವೆ ಕಟ್ಟಿದೇನೆ.
ನಿನ್ನ ಹೆಮ್ಮೆಗೆ ಉಬ್ಬಿ,
ಹಗುರಾಗುವ ದಿನಕಾಗಿ
ಕಾದಿದ್ದೇನೆ ಮಗೂ,
ಮುಳ್ಳು ಕಿತ್ತ ಗಾಯ
ಮಾಯುವುದನ್ನೆ ಕಾಯುತ್ತಿದ್ದೇನೆ…

(ನಾಳೆ, ಅಂದರೆ ೧೯ಕ್ಕೆ ಮಗು ಪ್ರಣವನಿಗೆ ೧೦ ವರ್ಷ ತುಂಬಿಹೋಗತ್ತೆ! ಅದಕ್ಕೇ, ಈ ಹೊತ್ತಲ್ಲಿ, ಪ್ರೀತಿ ಮತ್ತು ನೋವಿನಿಂದ ಈ ಕವಿತೆ, ನನ್ನ ಮಗನಿಗಾಗಿ….)

ಮತಕ್ಕೊಂದು ಬಣ್ಣ! ಅತಿ ಹೆಚ್ಚು ಕಚ್ಚಾಡುವ ಪ್ರಾಣಿಗಳು ಯಾವುವು?

ತೀರ ಇತ್ತೀಚಿನವರೆಗೂ ಅಂದರೆ ದಶಕದ ಹಿಂದಿನವರೆಗೂ ಇವೆಲ್ಲ ಇಷ್ಟು ಹದಗೆಟ್ಟಿರಲಿಲ್ಲ. ಅವರು ಮಾಡ್ತಾರೆ ಅಂತ ಇವ್ರು, ನೋಡ್ಕೊಂಡು ಸುಮ್ನಿರಬೇಕ ಅಂತ ಮತ್ತೊಬ್ರು ಎಲ್ರೂ ಕಾಂಪಿಟೇಷನ್ನಿನ ಮೇಲೆ ಧರ್ಮದ ಹೆಸರಲ್ಲಿ ಅನಾಚಾರ ಮಾಡೋರೇ. ಈ ಕರ್ಮಕಾಂಡಕ್ಕೆ ಹೊಸ ಸೇರ್ಪಡೆ- ಚರ್ಚಲ್ಲಿ ಕನ್ನಡದ ಬಾವುಟ ಹಾರಿಸಿದ್ದಕ್ಕೆ ತಕರಾರು ತೆಗೆದಿರುವ ಘಟನೆ. ಎಂಥ ಅಸಹ್ಯ-ವಿಕೃತ ಮನುಷ್ಯರು!

ವಂದೇ ಮಾತರಂ ಗೀತೆಯನ್ನ ‘ಹಿಂದೂ ದೇವಿಯ ಪೂಜೆ’ ನಾವು ಅದನ್ನ ತಿರಸ್ಕರಿಸ್ತೇವೆ ಅಂತ ಕೆಲವರಂದರು. ನಾಲ್ಕು ಹೆಜ್ಜೆ ಮುಂದೆ ಹೋಗಿ ಶ್ರದ್ಧಾವಂತರ ಮನನೋಯಿಸುವ ಜೋಶಾವೇಶದ  ಮಾತನ್ನೂ ಆಡಿದರು. ಅದಕ್ಕೆ ಸರಿಯಾಗಿ ಮತ್ತೆ ಕೆಲವರು ರೆಹಮಾನರಂಥ ಅದ್ಭುತ ಪ್ರತಿಭೆ ಪ್ರೀತಿಯಿಂದ ಹೆಣೆದ ‘ಮಾ ತುಝೆ ಸಲಾಮ್’ ಅನ್ನು ‘ಮಾ ತುಝೆ ಪ್ರಣಾಮ್’ ಎಂದು ಬದಲಿಸಿ ಹಾಡತೊಡಗಿದರು….. ಇಂಥ ಒಡಕುಗಳೆಲ್ಲ ತೊಲಗಿ, ಪರಸ್ಪರ ಗೌರವ, ಸಹನೆ ಬೆಳೆಯುವ ದಿನ ಬಂದೀತಾ ಅಂತ ಕಾಯ್ತಿದೇನೆ.  ಇಂಥ ‘ಅದಕ್ಕೇ ಹೀಗೆ, ಇದಕ್ಕೇ ಹಾಗೆ’ ಕಚ್ಚಾಟಗಳು ಹೇಸಿಗೆ ಹುಟ್ಟಿಸುತ್ತವೆ ನಿಜಕ್ಕೂ.

ನಿಮಗೆ ವಿಷಯ ಏನು ಅಂತ ಗೊತ್ತಿಲ್ಲದಿದ್ದರೆ, ಹೇಳ್ತೀನಿ ಕೇಳಿ… ನವೆಂಬರ್‌ನಲ್ಲಿ ಕಂಟೋನ್ಮೆಂಟಿನ ಸೈಂಟ್ ಝೇವಿಯರ್ ಚರ್ಚಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ನೆರೆ ಸಂತ್ರಸ್ತರಿಗಾಗಿ ಕಂಬನಿ ಮಿಡಿದು ಪರಿಹಾರ ಸಹಾಯದ ನಿರ್ಣಯವನ್ನೂ ಮಾಡಿದ್ದಾರೆ. ಈ ಮಾನವೀಯ ಕೃತ್ಯಕ್ಕೆ ದೊರೆತ ಬಹುಮಾನ ಏನು ಗೊತ್ತೆ? ಮತಾಂಧ ಕ್ರೈಸ್ತ ಸಂಘಟನೆಯೊಂದರಿಂದ ಚರ್ಚಿನ ಮೇಲೆ ಕಾನೂನು ಕ್ರಮಕ್ಕೆ ಅಹವಾಲು. ಸದರಿ ಚರ್ಚಿನ ಮೇಲೆ ದೂರು ನೀಡಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆಳೆದಿದೆ. ಆ ಮತಾಂಧ ಸಂಘಟನೆ ಹೇಳೋದೇನು ಗೊತ್ತೆ? ಕನ್ನಡ ಬಾವುಟದಲ್ಲಿರುವ ಕೆಂಪು- ಹಳದಿ ಬಣ್ಣಗಳು ಅರಿಷಿಣ -ಕುಂಕುಮ ಸಂಕೇತವಾಗಿದ್ದು, ಹಿಂದೂ ಧರ್ಮದ ಪ್ರತೀಕವಾಗಿದೆ, ಅದನ್ನು ಚರ್ಚಿನ ಆವರಣದಲ್ಲಿ ಹಾರಿಸೋದು ಧರ್ಮಕ್ಕೆ ಅಪಚಾರ ಅಂತ!! ಅದರಿಂದ ಶಾಂತಿ ಭಂಗವೂ ಆಗುತ್ತದಂತೆ!!

ನನಗೇನು ಭಯ ಅಂದರೆ, ಈ ಕೆಲವು ಶಾಂತಿ- ಸೌಹಾರ್ದ ಚಿಂತನೆಗಳ ಜನರಿಗೆ ಇಷ್ಟು ದಿನದಿಂದ ಈ ಥರದ ಐಡಿಯಾ ಹೊಳೆಯದೆ ಇದ್ದು, ಈಗ ಕ್ಯಾತೆ ತೆಗೆಯಲಿಕ್ಕೊಂದು ವಿಷಯ ಸಿಕ್ಕು, ‘ಕನ್ನಡ ಬಾವುಟ ಬದಲಾಗಲಿ’ ಅಭಿಯಾನ ಶುರುವಿಡುತ್ತಾರಾ ಅಂತ….
ಹಾಗೇನೂ ಆಗದಿರಲಿ…. ಎಲ್ಲ ಮತಧರ್ಮಗಳ ಎಲ್ಲ ಮತಾಂಧರಿಗೂ, ಎಲ್ಲ ಸಿದ್ಧಾಂತಗಳ ಸಿದ್ಧಾಂತಾಂಧರಿಗೂ(!?) ಆಯಾ ಮತದ ದೇವರುಗಳು, ಆಯಾ ಸಿದ್ಧಾಂತಗಳ ಮೂಲ ಪುರುಷರು ಸದ್ಬುದ್ಧಿ ಕೊಡಲಿ ಅಂತ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಪ್ರಾರ್ಥಿಸಿಕೊಳ್ತೀನಿ.

ಹಾಗೇನೇ ನಾವು ಕೂಡ ಒಟ್ಟಾರೆಯಾಗಿ ಈಗ ಕೇಸು ಹಾಕಿದವರು ಕ್ರಿಶ್ಚಿಯನ್ನರು ಅಂತ ಕ್ರೈಸ್ತರನ್ನೆಲ್ಲ ದೂರೋದು, ಅವರಿಗೆ ದೇಶಾಭಿಮಾನವೇ ಇರೋಲ್ಲ ಅನ್ನೋದು; ಭಯೋತ್ಪಾದಕರಲ್ಲಿ ಮುಸ್ಲಿಮರ ಮೇಲುಗೈ ಅಂದಮಾತ್ರಕ್ಕೆ ಇಡಿಯ ಮುಸ್ಲಿಮ್ ಜನಾಂಗವನ್ನ ದ್ವೇಷಿಸೋದು- ಅವಮಾನಿಸೋದು; ಹಾಗೇನೇ, ಮಾಲೆಗಾಂವ್ ಸ್ಫೋಟ, ಚರ್ಚಿಗೆ ಕಲ್ಲು, ಪಬ್ ದಾಳಿಗಳನ್ನ ದಾಳ ಮಾಡ್ಕೊಂಡು ಒಟ್ಟಾರೆ ಹಿಂದೂ ಸಂಸ್ಕೃತಿಯ ಬಗಗೇ ಕೇವಲವಾಗಿ ಮಾತಾಡೋದು ಇದನೆಲ್ಲ ಬಿಡ್ಬೇಕು. ಆದರೇನು ಮಾಡೋದು? ಇಂಥದನ್ನೆ ಬಂಡವಾಳ ಮಾಡ್ಕೊಂಡು ಬದುಕು ನಡೆಸ್ತಿರೋರ ಗತಿ ಕೊನೆಗೆ ಏನಾಗಬೇಕು? ಅದಕ್ಕೇನೇ ಜನ ತಮ್ಮ ಪಾಡಿಗೆ ತಾವಿದ್ರೂ ಅವರು ಇಂಥದೆಲ್ಲ ಮಾಡ್ತಲೇ ಇರ್ತಾರೆ. ನಮ್ಮ ಎಚ್ಚರಿಕೇಲಿ ನಾವಿರೋದಷ್ಟೆ ನಾವು ಮಾಡಬಹುದಾದ ಕೈಎಟುಕಿನ ಕೆಲಸ.

ಅಂದ ಹಾಗೆ, ಇದು ಚರ್ಚೆಗಿಲ್ಲ. ನಾನು ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅದನ್ನ ಮಾತ್ರ ಬರೀಬೇಕು ಅಂತ ಇದ್ದೆ. ಸುಮ್ಮನಿರಲಾಗದೆ ಇದೊಂದು ಟಿಪ್ಪಣಿಯಷ್ಟೆ. ಪ್ರತಿ ಹಗಲೂ ಇಡೀ ಜಗತ್ತಲ್ಲೇ ಇಂಥದು ನಡೀತಿರತ್ತಲ್ಲ (ಜಾತಿ ವಿಷಯ ಅಲ್ದಿದ್ರೆ ಜನಾಂಗೀಯ ದ್ವೇಷದ್ದು), ಆ ಥರದ್ದು ಸಿಕ್ಕಾಗ ಮತ್ತೆ ಮಾತಾಡಬಹುದು ಅಂತ…
ಬಟ್ ಅಂಥ ಅವಕಾಶಗಳು ಯಾವತ್ತೂ ಸಿಗದ ಹಾಗೆ ಆಗಲಿ ಅಂತ ನೀವೂ ನನ್ನೊಟ್ಟಿಗೆ ಕೇಳ್ಕೊಳ್ತೀರಲ್ಲ?

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

ನಿಜಘಮದ ಕೇದಗೆ

ಶಿವನ ಮೂಲ ಹುಡುಕುತ್ತ
ಕೆಳಗೆ ವಿಷ್ಣು,
ಮೇಲೆ ಬ್ರಹ್ಮ
ನಡುವೆ ಗುಟ್ಟು ಬಿಚ್ಚಿಟ್ಟ
ಕೇದಗೆಗೆ
ಶಿವನ ತಲೆ ಸೋಕಬಾರದ ಶಾಪ-
ಕ್ಕೆ ಹುಟ್ಟಿದ ಹೆಣ್ಣು ನಾನು
ಹೊಟ್ಟೆಯಲ್ಲಿ
ಗುಟ್ಟು ಬಚ್ಚಿಡಲು ಬರುವುದಿಲ್ಲ

ಹಿತ್ತಿಲ ಬಾಗಿಲಾಚೆ
ಮಲ್ಲಿಗೆ, ಕನಕಾಂಬರ, ತುಂಬೆ
ಪೂಜೆಗೆ ಹತ್ತು ಹೂವು
ಹೆಣೆಯುತ್ತ ಕುಂತವರು
ಕೇದಗೆ ಸೋಂಕಿಗೆ
ಉರಿಯಾಗಿದ್ದಾರೆ
ಮೈ ಮುತ್ತಿದ ಘಮ
ಶಿವನ ಪೂಜೆಗೆ ಅಡ್ಡಿ
‘ಇದು ಬಿಳಿ ಮಲ್ಲಿಗೆಯದೆ’
ಅನ್ನುತ್ತ ಸುಳ್ಳಾಗುತ್ತಿದ್ದಾರೆ…

ಕೇದಗೆ ಇರುವಿನರಿವಿಗೆ
ಜಾಹೀರಾತು ಬೇಕಿಲ್ಲ,

ಎಲೆಹೂವ ಸೆಳೆತಕ್ಕೆ
ಭುಸುಗುಟ್ಟಿವೆ ಹಾವುಗಳೂ,
‘ಶಿವನ ಕೊರಳೊಳಗೆ
ಇಂಥ ಸುಖವಿಲ್ಲ!’

ನಾನು
ನಿಜಘಮದ ಕೇದಗೆ
ಯಾರ ತಲೆ ಕಲುಗಳ
ಚಾಕರಿಯ ಹಂಗೇಕೆ?

‘ಬಿಚ್ಚಿಟ್ಟಷ್ಟೂ ಹಗುರಾಗುತಾರೆ’
ಗರತಿಯರ ನುಡಿಮುತ್ತು.
ನಾನು ಬಿಚ್ಚಿಕೊಳ್ಳುತ್ತೇನೆ,
ಅರಳಿಕೊಂಡು
ಎದೆಭಾರ ಕಳೆಯುತ್ತೇನೆ.
ಗೊತ್ತು,
ಹಗುರಾಗುತ್ತೇನೆ
ನನ್ನೊಳಗೂ
ಮಾನವಂತರ ನೋಟಕ್ಕೂ…

ಚಿಂತೆಯಿಲ್ಲ.

ಮಾತಾಡೆನೆಂಬ ಮುನಿಸು ಮಂದಿಗೆ…

ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?

ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…

ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.

ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?

ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ….

ಅಮ್ಮ ಕಾಲ್ ಮಾಡಿದ್ದಳು.
“ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು.
ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ…

“ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ. ಸಾಯ್ತಾವೆ, ಕೆಲಸವಿಲ್ದ ಈ ಹುಡುಗ್ರು”
“ಎಂತ ಸರಿ ಹೇಳ್ತೀಯೋ ಇಲ್ಲೋ? ಲವ್ ಮ್ಯಾರೇಜ್ ಏನು ಮೊದಲ್ನೆ ಸರ್ತಿ ಆಗ್ತಿದ್ಯ ಊರಲ್ಲಿ?”
“ಮಾರಾಯ್ತಿ, ಎಂಥದೋ ಲವ್ ಜಿಹಾದ್ ಅಂತೆ. ನಿನ್ನೆ ಭಜರಂಗ ದಳದವ್ರು ಭಾಷಣ ಮಾಡಿದ್ರು. ಕರ್ಮ. ಐವತ್ ವರ್ಷದಿಂದ ಇಲ್ಲಿ ಮುಸ್ಲಿಮ್ ಹುಡ್ಗ, ಹಿಂದೂ ಹುಡ್ಗಿ ಮದ್ವೆ ನಡೀತ್ಲೇ ಇದೆ. ಇವತ್ತಿಗೂ ಭಾರತೀಪುರ ಬ್ರಾಹ್ಮಣರ ಹುಡುಗಿ ಮುಸ್ಲಿಮ್ ಮದ್ವೆಯಾಗಿದ್ದೋಳು ಘೋಷ ಹಾಕ್ಕಂಡ್ ಅರಾಮಾಗೇ ಜೀವ್ನ ಮಾಡಿದಾಳೆ. ಅಲ್ಲ, ಇದೆಲ್ಲ ಎಂತ ಅಂತ?”
“ಅಯ್ಯೋ ಭಗವಂತ! ಹುಡ್ಗ ಯಾರು?”
“ಅಯ್ಯೋ ನಾ ನೋಡಿದೀನಿ ಕಣೇ. ಅವನ ಅಪ್ಪ ಅಮ್ಮ ಹುಡ್ಗಿ ಮನೇಗೆ ಮೊದ್ಲೇ ವಾರ್ನ್ ಮಾಡಿದ್ರಂತೆ. ನಿಮ್ ಹುಡ್ಗಿ, ನಮ್ ಹುಡ್ಗ ಸಿಕ್ಕಾಪಟ್ಟೆ ಓಡಾಡ್ತಿದಾರೆ, ಬೇಗ ಮದ್ವೆ ಮಾಡ್ಕೊಳಿ ನಿಮ್ ಕಡೆಗೆ ಕೊಟ್ಟು. ನಾವೂ ಹುಡ್ಗನ್ನ ಹೊರಗೆಲ್ಲಾರೂ ಕಳಿಸ್ತೀವಿ ಅಂತ. ಇವ್ರು ಕೇರ್ ಲೆಸ್ಸಾಗಿದ್ರೋ ಎಂಥದೋ, ಅವ್ರಿಬ್ರೂ ಓಡೋದ್ರು. ಅಲ್ಲೆ, ಯಾವನಾದ್ರೂ ಜಿಹಾದ್ ಮಾಡೋನು ಮೊದ್ಲೇ ಹಾಗೆ ಇನ್‌ಫರ್ಮ್ ಮಾಡ್ತಾನಾ? ಬೆಂಗ್ಳೂರಲ್ಲಿ ಪೋಲಿಸ್ರಿಗೆ ಶರಣಾಗಿ ಪ್ರೊಟೆಕ್ಷನ್ ಕೇಳ್ತಾನಾ? ಒಟ್ನಲ್ಲಿ, ಬೆಂಕಿ ಹಚ್ಚೋ ಕೆಲಸ ಇದು ಅಷ್ಟೇಯ!”
“…………..”
“ ಅವ್ರಿಬ್ರೂ ಪ್ರೀತ್ಸಿ ಮದ್ವೆ ಆಗ್ತಿದಾರಪ್ಪ. ಅವ್ರ ಪಾಡಿಗೆ ಬಿಡಬಾರ್ದ? ಅವಳನ್ನ ವಾಪಸ್ ಕರ್ಕೊಂಡ್ ಬರ್ತಾರಂತೆ. ಆಮೇಲೆ ಇವ್ರಲ್ಲಿ ಯಾರಾದ್ರೂ ಮದ್ವೆ ಮಾಡ್ಕೊಂಡು ಅವ್ಳನ್ನ ಖುಷಿಯಾಗಿ ಬಾಳಿಸೋ ತಾಕತ್ತಿದೆಯಾ? ಪ್ರೀತಿಸ್ಕೊಂಡಿದಾರೆ, ಮದ್ವೆ ಆಗ್ತವೆ. ಕಷ್ಟ ಪಟ್ರೆ ಅವುಗಳ ಹಣೇಬರ. ಭಾರಿ ಈ ಜಾತಿ ಜಾತಿ ಒಳಗೆ ಮದ್ವೆ ಆದ ಹೆಣ್ಮಕ್ಕಳ ಸುಖ ಸೂರೆ ಹೋಗ್ತಿರೋದು ಈಗ”
“……………..”
“ಎಂತ ಲವ್ ಜಿಹಾದು? ಭಾಳಾ ಹಿಂದೆ ಆಗೊಂದ್ಸಾರ್ತಿ ತಾವು ಶ್ರೀಮಂತರು ಅನ್ನೋ ಕಾರಣಕ್ಕೆ ಮುಸ್ಲಿಮ್ ಜನ ತಮ್ ಹುಡ್ಗೀನ ಕೊಡದೆ ಆ ಹುಡುಗನ ಕಥೆ ಮುಗ್ಸಿದ್ರು ಬಿಟ್ರೆ ಬೇರೆ ಎಂತದಾಗಿಲ್ಲ ಈ ಊರಲ್ಲಿ. ಹಂಗೆ ಶ್ರೀಮಂತ್ರು ಬಡವ್ರು ಈ ವಿಷಯಕ್ಕೆ ಹೊಡೆದಾಡೋದು ಇದ್ದಿದ್ದೇ. ಜಾತಿ ಏನು ಮಾಡತ್ತಲ್ಲಿ? ಹೊಸಹೊಸತೆಲ್ಲ ಶುರುವಾಗ್ತಿದೆ ನೊಡು! ಸರ್ಯಾಗಿ ಕಾಪಾಡ್ಕೊಂಡೋಗೋ ಸರ್ಕಾರ ತರ್ಬೇಕು. ಅದೂ ಕರ್ಮವೇ. ಕಾಂಗ್ರೆಸ್ಸು ಯಾರ್ನೂ ಗಲ್ಲಿಗೇ ಹಾಕಲ್ಲ ಅನ್ನತ್ತೆ. ಬೀಜೇಪಿ ಬಂದ್ರೆ ಮತ್ತೊಂಥರ ಕೇಡು. ಬಿಟ್ರೆ ಈ ನಕ್ಸಲೈಟ್ರು ಕಾಟ. ಯಾರ್ನ ಅನುಮಾನಿಸ್ಬೇಕು ಅವ್ರನ್ನ ಅನುಮಾನಿಸಲ್ಲ. ಎಲ್ಲಿ ಬೇಕೋ ಅಲ್ಲಿ ರಕ್ಷಣೆ ಕೊಡಲ್ಲ. ಸಾವು ಮಾರಯ್ತಿ. ಇನ್ನು ನಿಮ್ ಮಕ್ಳು ಮರಿ ಕಾಲಕ್ಕೆ ಏನು ಗತೀನೋ?”
“ಹೋ… ತಡಿ ತಡಿ… ನೀ ಹೇಳಿದ್ದೇನಾದ್ರೂ ಮರ್ತೋದ್ರೆ ಕಷ್ಟ. ಬ್ಲಾಗಿಗೆ ಹಾಕಿ ಬರ್ತೀನಿ”
“ಸರಿ. ನಾನು ನ್ಯೂಸಲ್ಲಿ ಏನೇನು ತೋರಿಸ್ತಾರೆ ನೋಡಿ ಹೇಳ್ತೀನಿ.”
~

ಇದು, ಈಗ ಅಂದರೆ ಎಂಟು ಗಂಟೆ ಸುಮಾರಿಗೆ ನಡೆದ ಸಂಭಾಷಣೆ.
ಅಮ್ಮ ಅರ್ಚಕರ ಮನೆಯ ಹೆಣ್ಣುಮಗಳು. ಓದಿದ್ದು ಎಸ್ಸೆಸ್ಸೆಲ್ಸಿ. ಈಗ ವಯಸ್ಸು ಐವತ್ತು ದಾಟುತ್ತಿದೆ. ಮಡಿ ಮೈಲಿಗೆ ಇಲ್ದಿದ್ರೂ ದೇವರು- ದಿಂಡರು ಮಾಡುವಾಕೆ.
~
ನಮಗೆ ಮತ್ತೊಬ್ಬ ಹಿಟ್ಲರ್ ಬೇಡ. ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ. ನಮಗೆ ತಾಲಿಬಾನಿನಂಥ ವಿಕೃತ ಜನರೂ ಬೇಡ. ನಮಗೆ ನಮ್ಮ ಸಂಸ್ಕೃತಿ ಉಳಿಸ್ಕೊಳೋಕೆ ಗೊತ್ತು.
ಈ ಗಂಡಸರು ಧರ್ಮ ರಕ್ಷಣೆಯ ಭಾರ ಹೆಗಲ ಮೇಲೆ ಹೊತ್ತಂತೆ ಯಾಕಾಡ್ತಾರೋ? ತಾವು ಕೂಗುವುದರಿಂದ ಕಿರುಚುವುದರಿಂದ ಧರ್ಮ ಉಳೀತಿದೆ ಅನ್ನುವ ಭ್ರಾಂತಿ ಅವರು ಬಿಡಲಿ ಮೊದಲು. ಯಾಕೆ ಇವರಿಗೆ ಬೇರೆ ಜಾತಿಯ ಹುಡುಗನ್ನ ಮದುವೆಯಾಗುವ ಹುಡುಗೀರೇ ಕಣ್ಣಿಗೆ ಬೀಳೋದು? ಹೋ… ಹುಡುಗ ಹಾಗೆ ಮದ್ವೆಯಾದ್ರೆ ತಮ್ಮ ಜಾತಿಗೊಂದು ಸಂಖ್ಯೆ ಸೇರಿಕೊಳ್ಳತ್ತೆ ಅಂತಲಾ? ಥೂ! ಕೆಟ್ಟ ಲೆಕ್ಕಾಚಾರ ಅಲ್ವ? ಇದು ಹಿಂದೂ ಗಂಡಸರಿಗೆ ಮಾತ್ರ ಹೇಳ್ತಿರೋದಲ್ಲ. ಎಲ್ಲ ಜಾತಿಯಲ್ಲೂ ಇದು ಹೀಗೇ ಆಗತ್ತೆ. ಮುಸ್ಲಿಮ್, ಕ್ರಿಶ್ಚಿಯನ್ ಹೊರತೇನಲ್ಲ.
ಹ್…
ಇಷ್ಟು ಹೇಳಿದ ಮೇಲೆ ಯಾಕೋ ಏನೂ ಹೇಳಲು ಮನಸಾಗ್ತಿಲ್ಲ. ಇದನ್ನ ಓದಿಕೊಂಡು ನಮನಮಗನಿಸಿದ್ದನ್ನ……