ಸಿಡಿಲಾಗಲು ಕಾದಿದ್ದೇನೆ…

2009 June 26
by chetana chaitanya

ಮೌನವಾಗಿ ಉಳಿದಿದೇನೆ

ಅಂದ ಮಾತ್ರಕ್ಕೆ

ಶಾಂತವಾಗಿದ್ದೇನೆ ಎಂದಲ್ಲ

ನೂರೊಂದು ನೋವುಗಳ

ಎದೆಗುದಿಯುಕ್ಕಿ ಸಿಡಿಯುವ

ಹೊತ್ತಿಗೆ ಕಾದಿದ್ದೇನೆ.

 

ವಿಷದ ಹನಿ ಹನಿ

ನುಂಗುತ್ತ ಬೆಳೆದಿದ್ದೇನೆ.

ಸಾವಿರ ನಾಲಗೆಯ ನಂಜು ಕೂಡ

ನನ್ನ ನೀಲಿಗಟ್ಟಿಸಲು ಸೋತಿವೆ

ರಣಚೋರಳೆನ್ನ ಬೇಡಿ,

ತಮ್ಮ ಕಣ್ಣುರಿಗೆ ತಾವೇ

ಬೂದಿಯಾಗುವಂತೆ

ಕನ್ನಡಿಗಳನಿರಿಸಿದ್ದೇನೆ.

ಅವರವರನಿಜಬಿಂಬ

ಕಂಡವರು ಸುಟ್ಟುಹೋಗುತ್ತಿದ್ದಾರೆ.

 

ಜಡಿಮಳೆಗೆ ಮುನ್ನ

ಹೆಪ್ಪುಗಟ್ಟುವ ಕತ್ತಲಂತೆ

ಅಮಾಯಕಳಂತೆ ಸುಮ್ಮನೆ-

ಸುಮ್ಮನೇ ಕುಳಿತಿದೇನೆ.

ಅಂದ ಮಾತ್ರಕ್ಕೆ

ಶಾಂತವಾಗಿದ್ದೇನೆ ಎಂದಲ್ಲ

ಸಿಡಿಲಾಗುವ ತವಕದಲ್ಲಿ

ಮಾತನೆಲ್ಲ ಒಟ್ಟುಮಾಡುತಿದ್ದೇನೆ.

ಅದೋ,

ಅವೆರಡು ಮೋಡಗಳು ಢಿಕ್ಕಿಯಿಟ್ಟು

ಯುದ್ಧ ಸಾರುವುದನ್ನೆ ಕಾಯುತ್ತಿದ್ದೇನೆ

ಮತ್ತೆ ಮತ್ತೆ ಕಲರವ!

2009 May 31
by chetana chaitanya
ನಮಸ್ತೆ
ಕನ್ನಡ ಬ್ಲಾಗೊದುಗರಿಗೆಲ್ಲ ಸುಪ್ರೀತ್ ಕೆ.ಎಸ್. ಎನ್ನುವ ಹುಡುಗ ಗೊತ್ತಿರಲಿಕ್ಕೆ ಬೇಕು.
ಈತನ ಸಾರಥ್ಯದಲ್ಲಿ ಬರುತ್ತಿದ್ದ `ಕಲರವ’ ಪತ್ರಿಎ ಬಗ್ಗೆ ಈ ಹಿಂದೆ ಬರೆದಿದ್ದೆ. ಈಗ ಅದು ಕೇವಲ ಅಂತರ್ಜಾಲ ತಾಣದಲ್ಲಿ ಮಾತ್ರ ಲಬ್ಯ ಎಂದು ಹೇಳಲು ವಿಷಾದವು ಕೊನೆಯ ಪಕ್ಷ ಇಲ್ಲಾದರೂ ದೊರೆಯಲಿದೆ ಎಂದು ಹೇಳಲು ಕುಶಿಯು ಆಗುತ್ತಿದೆ.
ಸೂಕ್ಷ್ಮ ಒಳನೋಟಗಳ ಈ ಹುಡುಗನ ಹಾಗು ಅವನ ಗೆಳೆಯರ  ಈ ಪ್ರಯತ್ನಕ್ಕೆ ಪ್ರೀತಿಯ ಹಾರೈಕೆಗಳನ್ನು ಹೇಳಬೇಕಲ್ಲವೇ?
ನಲ್ಮೆ,
ಚೇತನ

ಮೂವತ್ತರ ಹೊಸ್ತಿಲಲ್ಲಿ, ಮೂರು ಚಡಪಡಿಕೆಗಳು…

2009 May 16
by chetana chaitanya

~1~

ಇದೀಗ ಮಧ್ಯಾಹ್ನದ ತಿರುವು
ಹೊತ್ತು ಕಂತುವುದು ಬೇಗ.
ತಲೆಯಲ್ಲಿ ಬೆಳ್ಳಿ
ಮೂಡುವ ಘಳಿಗೆಯೆ ಸಂಜೆ.
ಒಂಟಿ ನಡಿಗೆಯ ದಾರಿ,
ಎಂದೆಂದೂ ಮುಗಿಯದ ದೂರ…
ಓ ದೇವರೇ!
ತಿರುವಿನ ಕೊನೆಯಲ್ಲೇ
ಈ ಊರು ಮುಗಿದುಬಿಡಲಿ!!

~2~

ಸೂರ್ಯನ ಕಾವು ಕುಡಿದುಬಿಡಬೇಕು.
ಮತ್ತೀಗ ಸಂಜೆ
ನರಸತ್ತ ತಣ್ಣನೆ ಚಂದ್ರ-
ನೆನಪು ಬಗೆವ ಗೋರಿಕಲ್ಲು.
ಈಗಲೇ ಬೆವರುತ್ತ ಮಲಗಿಬಿಡಬೇಕು.
ಚಳಿಯಲ್ಲಿ ಒಬ್ಬಂಟಿ,
ನಿದ್ರೆ ಕಳಕೊಳ್ಳುವುದು ಬಹಳ ಇದೆ…
ಚಿಂತೆಗಳನೆಲ್ಲ ಆ ದಿನಕ್ಕೆ
ತೆಗೆದಿರಿಸಬೇಕು.
 
~ 3 ~

ಯಾರೋ ಹೇಳಿ ಹೋಗಿದಾರೆ-
ಮುಸ್ಸಂಜೆ ಹೊತ್ತು
ಬೆಳಕೂ ಇಲ್ಲ, ಕತ್ತಲೂ ಅಲ್ಲ…
ಜೋಪಾನ ಕಣೇ!
 
ಇನ್ನೀಗ ಸರಸರನೆ,
ಕನಸುಗಳ ಗುಡಿಸಿ
ತಿಪ್ಪೆಗೆಸೆಯಬೇಕು.
ನಗುವನೆಲ್ಲ ಕಟ್ಟಿ
ಗಂಟು ಹಾಕಬೇಕು.
ನಿಲುವಿಗೆ ಗಾಂಭೀರ್ಯದ ಬಣ್ಣ,
ಮಾತಿಗೆ ಹೆಣಭಾರದ ತೂಕ!
ಸಂಜೆಗೆ ಮುನ್ನ,
ಮುಖವಾಡ ರೆಡಿಯಾಗಿರಬೇಕು.

ನನ್ನೊಳಗಿನ ಸಿದ್ಧಾರ್ಥ….

2009 April 20
by chetana chaitanya

ತಿಂಗಳಾಯ್ತು ಈ ಅಸಹನೆ ಶುರುವಿಟ್ಟು.
ಖಡಾಖಂಡಿತವಾಗಿ ಹೇಳ್ಬಿಟ್ಟಿದಾರೆ, ಇನ್ನು ‘ಅಪ್ ರೈಸಲ್’ ಪ್ರಶ್ನೆಯೇ ಇಲ್ಲ! ಲೇ ಆಫ್ ಮಾಡದಿರೋದೇ ನಮ್ಮ ಪುಣ್ಯವಂತೆ!!
ಐಟಿ ಸೆಕ್ಟರಿನ ಜತೆ, ಅಮೆರಿಕದ ಜತೆ ಪೈಸಾಪೈಸ ಸಂಬಂಧವಿರದ ಈ ಆಫೀಸಿಗೂ ರಿಸೆಷನ್ನಿನ ರೋಗ ಹರಡಿದೆ. ಇದೊಂಥರಾ ‘ಗೋಕುಲಾಷ್ಟಮಿಗೂ, ಇಮಾಮ್ ಸಾಬರಿಗೂ…’
~
ಬಹಳ ದಿನಗಳೇ ಆಗಿತ್ತು ಹೀಗೆ ಕಾಲ್ನಡಿಗೆಯಲ್ಲಿ ಓಡಾಡದೆ. ಅದರಲ್ಲೂ ಶ್ರೀರಾಮಪುರದಲ್ಲಿ ದಾರಿ ತಪ್ಪಿ ಅಲೆಯದೆ ಮೂರ್ನಾಲ್ಕು ವರ್ಷಗಳೇ ಅಗಿಹೋಗಿತ್ತು.
“ಇಲ್ಲೇ…” “ಇನ್ನೇನು ಬಂದೇಬಿಡ್ತು…” ಅನ್ನುತ್ತಾ, ನಾನೂ ದಾರಿ ತಪ್ಪಿ, ಜತೆಗಿದ್ದವಳನ್ನೂ ತಪ್ಪಿಸುತ್ತಾ ನಡೆದು, ಕೊನೆಗೆ ದೊಡ್ಡ ಗಟಾರದ ಎದುರು ನಿಂತೆ. ಅಲ್ಲಿಂದ ಮುಂದೆ ರಸ್ತೆಯೇ ಇರದುದರಿಂದ ಅಲ್ಲಿ ನಿಲ್ಲಲೇಬೇಕಾಯ್ತು.
ದೊಡ್……ಡ್ಡದಾಗಿ ಬಾಯಿ ಕಳಕೊಂಡು ಮಲಗಿದ್ದ ಗಟಾರದೊಳಗಿಂದ ಜುಳುಜುಳು ನಾದ(!?) ಕೇಳಿಬರುತ್ತಿತ್ತು. ಅದರ ಬಾಜುವಿನಲ್ಲೇ ಒಂದಷ್ಟು ಜೋಪಡಿಗಳು. ತೀರಾ ಸ್ಲಮ್ ಡಾಗಿನ ಕಲ್ಪನೆಗೆ ಹೊಗಬೇಡಿ… ಅದನ್ನ ನಾವಿನ್ನೂ ಫಿಲಮ್ಮಿನಲ್ಲಿ ನೋಡಿದೇವಷ್ಟೆ (ನಿಜವಾಗಿಯೂ ನೋಡಿ ಅರಗಿಸ್ಕೊಳ್ಳುವ ಎದೆಗಾರಿಕೆ ನಮಗಿದೆಯಾ?). ಈ ಇಲ್ಲಿ, ನಾವು ನಮ್ಮ ಕಣ್ಣಾರೆ ಹೊಸತೊಂದು ಜಗತ್ತನ್ನ ನೊಡುತ್ತಿದ್ದೆವು! ಹುಟ್ಟಿದ ಇಷ್ಟೂ ದಿನ ನಾವು ಕಾಣದಿದ್ದ ಹೊಚ್ಚ ಹೊಸ ಲೋಕ…
ಜೋಪಡಿಗಳ ಎದುರು ಚಡ್ಡಿ ಬಿಚ್ಚಿ ಕುಂತ ಮಕ್ಕಳು, ಅಲ್ಲೇ ನೆಲದ ಮೇಲೆ ಗೀಚುತ್ತ ಸುಖಿಸುತ್ತಿವೆ… ಅವುಗಳ ಬದಿಯಲ್ಲೇ ಮಗುವಿಗೆ ಮೊಲೆ ಕುಡಿಸುತ್ತ ಹೆಂಗಸೊಬ್ಬಳು ಕುಂತಿದಾಳೆ. ಅವಳಿಗೆ ಆತುಕೊಂಡು, ಕಜ್ಜಿ- ಕೀವಿನ ನಾಯಿಯೊಂದು ಮಲಗಿದೆ.
ಪಕ್ಕದ ಜೋಪಡಿಯ ಮುದುಕಿ ವಾಂತಿ ಕಕ್ತಿದಾಳೆ. ಅವಳ ಹಿಂದೆ, ಯಾವಾಗಲೋ ಸತ್ತು ನೊಣ ಮುತ್ತಿಕೊಂಡ ಮುದುಕ… ಮಣ್ಣು ಮಾಡಲು ಕೂಲಿಗೆ ಹೋದ ಗಂಡಸರು ಮನೆ ಸೇರಬೇಕು.

ಗಟಾರಕ್ಕೆ ಹಾಕಿರುವ ಉದ್ದ ಚಪ್ಪಡಿಗೊಂದು ಪ್ಲಾಸ್ಟಿಕ್ ಶೀಟು ಕಟ್ಟಿ ಗೂಡಂಗಡಿ ಮಾಡಲಾಗಿದೆ. ಅದರಲ್ಲಿ ಉದ್ದುದ್ದ ನೇತಾಡ್ತಿರುವ ಕೋಳಿ ಮಾಂಸ. ಒಳಗಿನ ಪೆಟ್ಟಿಗೆಯಲ್ಲಿ ಕಳ್ಳ ಸರಾಯಿ!

ಅಗೋ! ಹೆಂಗಸೊಬ್ಬಳು ಬೆನ್ನಿಗೇರಿಸಿದ್ದ ಪ್ಲಾಸ್ಟಿಕ್ ಚೀಲ ಕೆಳಗಿಳಿಸ್ತಿದಾಳೆ. ಅದರೊಳಗೆ, ಆಗ ತಾನೆ ಆಯ್ದು ತಂದ ಚಿಂದಿಯಿದೆ. ಅದನೆಲ್ಲ ನೆಲಕ್ಕೆ ಸುರುವಿ, ‘ಬೇಕಾದ’ ವಸ್ತುಗಳನ್ನ ಹುಡುಕಿಕೊಳ್ಳುವ ತವಕದಲ್ಲಿದಾಳೆ.
~
ಅಕಸ್ಮಾತ್ ಕೈ ಸೋಕಿದ ಗೆಳತಿ ಹೇಳಿದ್ದಳು, ‘ನಿನ್ನ ಕೈ ಎಷ್ಟು ಮೆದು!!’
ಎದ್ದ ಕೂಡಲೆ ಹಾಲು, ಮಲಗುವಾಗ ಸಕ್ಕರೆ- ಮೊಸರು. ಹೊತ್ತು ಹೊತ್ತಿಗೆ ಊಟ, ನಿದ್ರೆ ಬರದಿದ್ದರೆ ಮಾತ್ರೆಯಿದೆ. ಜೊತೆಗೆ, ಚೆಂದಗಾಣಿಸುವ ಬಟ್ಟೆ-ಬರೆ.
ನನ್ನ ಕೈ ಎಷ್ಟು ಮೆದು!!
ಈ ಸ್ಲಮ್ಮಿನ ನಡೂ ಮಧ್ಯದಲ್ಲಿ ನಿಂತವಳಿಗೆ ‘ಕೈ ಮೆದು’ವಿನ ಸಂಗತಿ ನೆನಪಾಗಿದ್ದು ಯಾಕೋ?
ಕೊನೆಗೂ ಅಲೆದಲೆದು ಸ್ಕೂಲು ತಲುಪಿ ಕೆಲಸ ಮುಗಿಸಿದೆವು.

ಮನೆಗೆ ಬಂದು ಗಂಟೆಗಳೇ ಉರುಳಿದರೂ ಕಣ್ತುಂಬ ಅವೇ ಚಿತ್ರಗಳು…
ಮುಖದ ತುಂಬ ಸಿಂಬಳ ಅಂಟಿಕೊಂಡ ಮಕ್ಕಳು; ದೊರಗು ಮೈಯಿನ, ಕನಸು ಗೊತ್ತಿರದ ಹೆಣ್ಣುಗಳು; ದುಡಿದು ಕುಡಿಯುವ ಗಂಡಸರು; ವಾಂತಿಯ ಮುದುಕಿ; ನೊಣ ಮುತ್ತಿದ ಸತ್ತ ಮುದುಕ; ನಾಳಿನ ಮಳೆಯಲ್ಲಿ ಕೊಚ್ಚಿ ಹೋಗಬಹುದಾದ ಅವರೆಲ್ಲ ಜೋಪಡಿಗಳು, ಮಕ್ಕಳು, ಕೀವಿನ ಕಜ್ಜಿ ನಾಯಿ….
ಊಟ ಗಂಟಲಲ್ಲಿ ಇಳಿಯಲಿಲ್ಲ. ಮೆತ್ತನೆ ಹಾಸಿಗೆ ಮೈ ಚುಚ್ಚಿದಂತಾಗಿ ಚಾಪೆ ಹಾಸಿ ಮಲಗಿದೆ. ಸ್ಲಮ್ಮಿನ ಚಿತ್ರಗಳು ಎರಗಿ ಎರಗಿ ನಿದ್ದೆ ಕಸಿದವು.
ಜಗತ್ತು ಅಂದರೆ ಮನೆ, ಆಫೀಸು, ಸಂಬಳ, ಶಾಪಿಂಗು, ಅವನು, ಅವನ ಪ್ರೀತಿ- ಮುನಿಸು….
ಜಗತ್ತು ಅಂದರೆ ಗಟಾರ, ಕಾಯಿಲೆ, ಜೋಪಡಿ ಕೂಡಾ!!

ತಲೆಯ ತುಂಬ ಸಮಾಜ ಸಂರಚನೆಯ ಲೆಕ್ಕಾಚಾರದ ಸೂತ್ರ. ತಿಂಗಳಿನ ಖರ್ಚು- ವೆಚ್ಚದ ಲೆಕ್ಕದ ತಾಳೆ. ಹಸಿದ ಹೊಟ್ಟೆಯ ದಾರುಣ ಕೂಗು…
~
ಸೋಮವಾರದ ಬೆಳಗು.
ಎಂದಿನಂತಿರದ ರಾತ್ರಿಗೆ ತಕ್ಕನಾದ ಬೇರೆಯದೇ ಬೆಳಗು. ಕಣ್ಣು ನಿದ್ದೆಯಿಲ್ಲದೆ ಸೋತಿದೆ. ರಾತ್ರಿಯ ಊಟ ದಕ್ಕದ ಹೊಟ್ಟೆ, ಸ್ನಾನಕ್ಕೆ ಮುನ್ನವೇ ಬ್ರೇಕ್ ಫಾಸ್ಟ್ ಮುಗಿಸಿದೆ.

“ಇವತ್ತೇ ಬೇರೆ ಕಂಪೆನಿಗಳಿಗೆ ಅಪ್ಲಿಕೇಶನ್ ಹಾಕಬೇಕು! ಈಗಿನ ಸಂಬಳ ಹಾಸಲು- ಹೊದೆಯಲು ಸಾಕಷ್ಟೆ!!”- ಅಂದುಕೊಂಡು ವ್ಯಾನಿಟಿ ಹೆಗಲೇರಿಸಿದೆ.

ಯಾಕೋ ಬುದ್ಧ ನಕ್ಕಂತಾಯ್ತು.

ಇರುಳಿಡೀ ನಿದ್ದೆ ಬಿಟ್ಟಿದ್ದರೂ, ನನ್ನೊಳಗಿನ ಸಿದ್ಧಾರ್ಥನಿಗೆ ಎಚ್ಚರವಾಗಿರಲಿಲ್ಲ…

ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…

2009 April 8

ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು!

ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ.
ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ ಹಲವು ಕವಿತೆಗಳನ್ನು ಸೃಜನ್ ಕನ್ನಡಕ್ಕೆ ತಂದಿದ್ದಾರೆ.
ಈ ಯಶೋಧರೆಯಂಥವರು ಎಲ್ಲ ನೆಲದ, ಗಾಳಿಯ, ಜೀವನ ಶೈಲಿಯ ಹೆಣ್ಣುಮಕ್ಕಳನ್ನೂ ಏಕಕಾಲದಲ್ಲಿ, ಬಹುತೇಕ ಏಕರೀತಿಯಲ್ಲಿ ತಟ್ಟುತ್ತಾಳೆಂಬುದು ನನಗೆ ವಿಸ್ಮಯವಾಗಿ ಕಾಡಿದೆ. ಯಾಕೆಂದರೆ, ‘ಪ್ರತಿ ಹೆಣ್ಣೂ ತನ್ನಷ್ಟಕ್ಕೆ ತಾನೊಂದು ದ್ವೀಪ’ ಎನ್ನಲಾಗುತ್ತದೆ. ಹೀಗೆ ಪ್ರತ್ಯೇಕ ಅಸ್ತಿತ್ವದ ನಡುವೆಯೂ ಹೆಣ್ಣುಭಾವದ ಏಕಸೂತ್ರ ವಿಭಿನ್ನ ದೇಶಕಾಲಗಳ ನಮ್ಮನ್ನು ಬೆಸೆಯುತ್ತದೆ, ಪರಸ್ಪರ ಸ್ಪಂದಿಸುವಂತೆ, ಮಿಡಿಯುವಂತೆ ಮಾಡುತ್ತದೆ.

ಜಯಪ್ರಭಾ ಅವರ   ಕವನವನ್ನು ಸೃಜನ್ ಅನುವಾದದ ಮೂಲಕವೂ ಉಳಿದವುಗಳಲ್ಲಿ ೨೨ ಕವಿತೆಗಳನ್ನು ನೆಟ್ಟಿನಲ್ಲಿ ಇಂಗ್ಲೀಶಿನಲ್ಲೂ ಓದಿದೇನೆ. ಉಳಿದಂತೆ, ನನ್ನ ಮಿತಿ ಚಿಕ್ಕದು.

 ಜಯಪ್ರಭಾ ಅವರು ಈವರೆಗೆ ಒಟ್ಟು ಏಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಕೆಲವು ಇಂಗ್ಲಿಶ್, ಹಿಂದೀ ಭಾಷೆಗಳಿಗೆ ಅನುವಾದಗೊಂಡಿವೆ. ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಹಾಗೂ ಎಮ್.ಫಿಲ್ ಪದವಿಗಳನ್ನು ಪಡೆದಿರುವ ಇವರು ಅದಕ್ಕಾಗಿ ಸಂಶೋಧನೆ ನಡೆಸಿದ್ದು ಕೂಡ ಸ್ತ್ರೀಕೇಂದ್ರಿತ ವಿಷಯಗಳ ಕುರಿತೇ. ತಾಯ್ನುಡಿಯ ಮೇಲೆ ಅಪಾರ ಹಿಡಿತವಿರುವ ಜಯಪ್ರಭಾ, ಎರಡು ವರ್ಷ ಅಮೆರಿಕೆಯ ವಿಶ್ವವಿದ್ಯಾಲಯವೊಂದರಲ್ಲಿ ತೆಲುಗು ಭಾಷೆ ಹಾಗು ಸಂಸ್ಕೃತಿ ಕುರಿತು ಅಧ್ಯಾಪನ ನಡೆಸಿದ್ದರು. ೧೯೯೧ರಿಂದೀಚೆಗೆ ಸಂಪೂರ್ಣವಾಗಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಬಯಕೆಯಿಂದ ಶಿಕ್ಷಣಕ್ಷೇತ್ರದ ದುಡಿಮೆಗೆ ವಿದಾಯ ಹೇಳಿದರು.

- ಈ ಎಲ್ಲ ಸಂಗತಿ ತಿಳಿದಿದ್ದು ಸೃಜನ್ ಅವರಿಂದ. ಉಳಿದಂತೆ, ಅಂತರ್ಜಾಲ ತಾಣದ ಮಾಹಿತಿ.
ಓದಬೇಕೆನ್ನುವ ಅದಮ್ಯ ಆಸೆಯ ಹೊರತಾಗಿ ಸಾಹಿತ್ಯ ಕ್ಷೇತ್ರದ ಅಕ್ಷರಮಾಲೆಯೂ ಗೊತ್ತಿಲ್ಲದ ನನಗೆ ಇಂತಹ ಸ್ನೇಹಿತರೇ ಗೈಡ್ ಗಳು ಎಂದರೆ ಅತಿಶಯವಲ್ಲ.

ಇರಲಿ. ಸದ್ಯಕ್ಕೆ,
ಸೃಜನ್ ಅನುವಾದಿಸಿರುವ ಜಯಪ್ರಭಾ ಅವರದೊಂದು ಕವಿತೆಯನ್ನು ಓದಿಕೊಳ್ಳೋಣ…           

ಸೃಜನ್ ತೆಲುಗಿನ ಇತರ ಪ್ರಮುಖ ಕವಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವನ್ನು ಓದುವ ಅವಕಾಶ ಸಿಕ್ಕಿದ್ದು ಸಂತಸ. ಮುಂದೆಂದಾದರೂ ನಿಮ್ಮೊಂದಿಗೆ ಅವನ್ನೂ ಹಂಚಿಕೊಳ್ಳುವೆ.

ಯಶೋಧರೆ ಈ ವ್ಯಥೆ ಏತಕೆ?

ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು, ಯೋಗಿಗಳು
ಆವರಿಸದು ಚಿಂತೆ ಎಂದೂ ಅವರನ್ನು

ಹುಟ್ಟು ಸಾವಿನ ಭಯವಿರುವುದಿಲ್ಲ
ಬೋಧಿ ವೃಕ್ಷದ ಕೆಳಗೆ
ಜ್ಞಾನೋದಯವಾಗುತ್ತದೆಯೆಂದು
ಅವರಿಗೆ ಮೊದಲೇ ಗೊತ್ತಿತ್ತು

ಆ ಅರ್ಧ ರಾತ್ರಿಯ ಅನಂತ ಯಾತ್ರೆಯ ಆರಂಭ
ಗೊತ್ತಿಲ್ಲದ್ದು ನಿನಗೇ ಕಣೇ
ಯಶೋಧರೆ ಈ ವ್ಯಥೆಯೇತಕೆ ಹೇಳೆ?

ಗೋಡೆಗೊರಗಿ ಗವಾಕ್ಷಿ ಕಡೆ
ಕಣ್ಣೀರಿನ ನೋಟವೇಕೆ?
ನಿನಗೆ ಬೆಳಗೆಂದರೆ ಭಯವೇ ಗೆಳತಿ?
ಹೋಗಲಿ ಬಿಡು
ನಿನ್ನ ಕಾಯುವಿಕೆ ವ್ಯರ್ಥವಾಗುವುದಿಲ್ಲ
ಎಂದೋ ಒಂದು ದಿನ ದೀಕ್ಷೆಪಡೆದ ಕಾವಿಧಾರಿಯೊಬ್ಬ
ಭಿಕ್ಷಾಪಾತ್ರೆ ಹಿಡಿದು
ನಿನ್ನ ಮನೆಯೆದುರು ಕೈಚಾಚಿ ಬರುತ್ತಾನೆ

ಶಿಥಿಲ ದೇಹದಿಂದ
ದೀನ ಮೊಗದಿಂದ ನೀನು
ಎದಿರುಗೊಳ್ಳುತ್ತೀಯ

ಯಾವ ಜೀವನವನ್ನು ಭಿಕ್ಷೆ ಹಾಕುತ್ತೀಯೆಂದು
ಅವರ ಮನದಲ್ಲೆಲ್ಲೋ ಒಂದು ಕಡೆ ಇರುತ್ತದೆ ಬಹುಶಃ
ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು ಯೋಗಿಗಳು
ಚಿಂತೆ ಆವರಿಸುವುದಿಲ್ಲ ಅವರನ್ನು
ಹುಟ್ಟು ಸಾವಿನ ಭಯವಿರುವುದಿಲ್ಲ

ಅಷ್ಟಾಂಗ ಮಾರ್ಗದಲ್ಲಿ ನೀನು ಮಾತ್ರ
ಹಾಗೆ ತಾರೆಗಳನ್ನು ನೋಡದಿರು ಯಶೋಧರೆ
ನೀನಿನ್ನು ತ್ಯಾಗಗಳನ್ನೂ ಮಾಡದಿರು ಗೆಳತಿ

ಬಣ್ಣಗಳ ಸುಳಿಯಲ್ಲಿ ಇಲ್ಲವಾದ ಹುಡುಗಿ….

2009 April 6
by chetana chaitanya

‘ಇಲ್ಲ’ವಾಗಿ ಉಳಿಯುವ ಪ್ರಕ್ರಿಯೆ ಬಹಳ ದೊಡ್ಡ ಸಾಧನೆ!
ಪ್ರವಚನ ಕೇಳಿದ್ದಳು ಹುಡುಗಿ.
ಬಾಗಿ ಬಾಗಿ ಬಾಗಿ, ಇಲ್ಲವಾಗುತ್ತ ನಡೆದಳು.
ಕಳೆದು ಉಳಿಯುವ ಸೊನ್ನೆಗೆ ಬೆಲೆಯಿಲ್ಲ-
ಅನ್ನುವುದು ಅವಳಿಗೆ ಗೊತ್ತಿರಲಿಲ್ಲ.
~
ಗೊಂದಲಕ್ಕೆ ಬಿದ್ದಿದ್ದಳು.
ಕನ್ನಡಿಯಲ್ಲಿನ ಬಿಂಬ
ತನ್ನ ಮುಖವೋ? ಮುಖವಾಡವೋ!?
ಸ್ವಂತಿಕೆ ಮರೆತು ಕುಂತವಳಿಗೆ ಆತಂಕ.

ಗಿಡದ ಮರೆಯ ಗೋಸುಂಬೆಯ ಬಣ್ಣ,
ಅಲ್ಲಿದ್ದಷ್ಟು ಕಾಲವೂ ಹಸಿರೇ.
ಹೊತ್ತುಹೊತ್ತಿಗೆ ಬದಲಾಗುವ ಸತ್ಯವನ್ನ
ನೆಚ್ಚಿಕೊಳ್ಳೋದು ಹೇಗೆ?
ತನ್ನ ಮೇಲಿನ ನಂಬಿಕೆಯನ್ನೇ ಕಳೆದು ಕುಂತಳು.

ಬದುಕಲಿಕ್ಕೆ ಬಣ್ಣ ಬದಲಿಸಬೇಕು.
ತಾನೊಂದು ಗೋಸುಂಬೆಯೇ?
ಗೊಂದಲಕ್ಕೆ ಬಿದ್ದಿದ್ದಳು.
~
ಅವಳಾದರೂ ಅವನ ಕಣ್ಣ ಬೊಂಬೆ.
ತನ್ನ ಪ್ರತಿಬಿಂಬ
ಅವಳಲ್ಲಿ ಕಾಣುವ ಹಂಬಲ ಅವನಿಗೆ.
ಆದರೇನು?
ಬಲವನ್ನ ಎಡವಾಗಿ ತೋರುವ ಪ್ರತಿಬಿಂಬ
ಅವನಿಗೆ ಇಷ್ಟವಾಗಲಿಲ್ಲ…
ಹಾಗಂತಲೇ ಅಂವ,
ಕನ್ನಡಿ ಎತ್ತಿಟ್ಟುಬಿಟ್ಟ.

ಅವಳೀಗ
ಬಣ್ಣಗಳನ್ನ ಕಳಕೊಂಡು ಕಪ್ಪಾದಳು
ಅವನ ಕಾಲ ಬಳಿ ಸುಳಿಯುವ ನೆರಳಾದಳು.
~
ನೆರಳಾದರೂ
ಹೊತ್ತುಹೊತ್ತಿಗೆ ಉದ್ದವಾಗಬಹುದೇ ಹಾಗೆ?
ಇದನ್ನವನು ಸಹಿಸಬಹುದು ಹೇಗೆ?
ಊಹೂಂ….
ತನ್ನನ್ನು ಮೀರುವ ನೆರಳೂ ಅವನಿಗೆ ಬೇಕಿಲ್ಲ.
ಹಾಗಂತಲೇ ಅಂವ,
ಕತ್ತಲಲ್ಲಿ ಹೋಗಿ ಕುಂತ.
~
ಕೊನೆಗೂ
ಅವಳು ಕರಗಿ ಇಲ್ಲವಾದಳು,
ಬಣ್ಣಗಳು ಚಪ್ಪಾಳೆ ತಟ್ಟಿ ನಕ್ಕವು…

ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…

2009 March 30

ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯೂನಿಫಾರಮ್ಮಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತು ಹಬ್ಬ ಎಂಬುದರ ಸಾಕ್ಷಿಯಾಗಿತ್ತಷ್ಟೆ. ಯುಗಾದಿಯ ದಿನವನ್ನ ಕಾರಾಗೃಹದಲ್ಲಿರುವ ಸಹೋದರರ ಜೊತೆ ಕಳೆಯಬೇಕು, ದೇಶ ಪ್ರೇಮ ಉದ್ದೀಪಿಸುವ ಗೀತ ಗಾಯನ ನಡೆಸಿಕೊಡಬೇಕು ಎಂದೆಲ್ಲ ಉಮ್ಮೇದಿಯೊಂದಿಗೆ ಹೋಗಿದ್ದ ಜಾಗೋಭಾರತ್ ತಂಡಕ್ಕೆ, ಅಲ್ಲಿ ಎದುರಾದ ವಾತಾವರಣ ಅಷ್ಟೇನೂ ಪ್ರೋತ್ಸಾಹದಾಯಕವಾಗಿರಲಿಲ್ಲ. “ನೋಡೋಣ, ಎಷ್ಟು ಸಾಧ್ಯವೋ ಅಷ್ಟು ಹಾಡಿ ಬರೋಣ. ನಮ್ಮ ಸಂಕಲ್ಪ ನಾವು ನೆರವೇರಿಸುವುದಷ್ಟೆ ನಮ್ಮ ಕೆಲಸ. ಸೆರೆವಾಸಿಗಳು ಅದನ್ನ ಹೇಗೆ ಸ್ವೀಕರಿಸುವರೋ ಚಿಂತೆ ಬೇಡ. ನಾವಂತೂ ‘ದಿ ಬೆಸ್ಟ್’ ಪರ್ಫಾರ್ಮೆನ್ಸ್ ಕೊಡಬೇಕು…” ಅಂತ ತಂಡದ ಉಸ್ತುವಾರಿ ಹೊತ್ತಿದ್ದ ಅಣ್ಣ ಚಕ್ರವರ್ತಿ, ಎಲ್ಲರಲ್ಲೂ ಹುರುಪು ತುಂಬುತ್ತಿದ್ದ.

ಎಷ್ಟು ಜನಕ್ಕೆ ಅವಕಾಶವಿದೆಯೋ? ನಾನೂ ಹೋಗಬಹುದೋ? ಅಂತೆಲ್ಲ ಚಿಂತೆಯಲ್ಲಿದ್ದ ನನಗೆ ಅಂತೂ ಹೊಸ ಥರದ ಯುಗಾದಿಯನ್ನ ಆಚರಿಸುವ ಅವಕಾಶ ಸಿಕ್ಕಿಬಿಟ್ಟಿತು. ಸೆರೆಮನೆಯೆಂದರೆ ಕೈಕೋಳ ತೊಟ್ಟ ಕೆಂಪುಕಣ್ಣಿನ ‘ಕೇಡಿ’ಗಳು ಇರುವರು ಎಂಬ ತೀರ ಬಾಲಿಶ ಊಹೆಯೊಂದಿಗೆ ಅಲ್ಲಿಗೆ ತೆರಳಿದ್ದವಳು ನಾನು. ಆದರೆ, ಹಾಗೇನೂ ಇಲ್ಲದೆ ಬಹುತೇಕರು ಬಣ್ಣಬಣ್ಣದ ಸಾಮಾನ್ಯ ಉಡುಗೆಯಲ್ಲಿ ತಮ್ಮ ಪಾಡಿಗೆ- ನಮ್ಮಂತೆಯೇ ಇದ್ದುದನ್ನು ಕಂಡು ನಾಚಿಕೆಯಾಯ್ತು. ಇನ್ನೂ ಅಚ್ಚರಿಯೆಂಬಂತೆ ಅಲ್ಲಿ ನೀಟಾಗಿ ಬೆಳ್ಳನೆ ಪಂಚೆ ಉಟ್ಟು ಶಿಸ್ತಿನ ಸಾಕಾರದಂತೆ ಓಡಾಡಿಕೊಂಡಿದ್ದವರೂ ಕೆಲವರಿದ್ದರು.

ಜಾಗೋ ಭಾರತ್ ತಂಡ ಕೇಂದ್ರ ಕಾರಾಗೃಹದಲ್ಲಿ ಕಾರ್ಯಕ್ರಮ ನೀಡುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಕೆಲ ವಾರಗಳ ಮುನ್ನ ಪರ್ಮಿಶನ್ನು ಪಡೆಯಲಾಗಿತ್ತು. ಮೊದಲೇ ಚುನಾವಣೆಯ ಕಾವು. ದೇಶಪ್ರೇಮದ ಮಾತಾಡುವ ತಂಡವೆಲ್ಲಾದರೂ ಕ್ಯಾಂಪೇನಿಗೆ ಶುರುವಿಟ್ಟರೆ? ಅಥವಾ ‘ಪೊಲಿಟಿಕಲಿ’ ಸರಿಯಲ್ಲದ ಸತ್ಯಗಳನ್ನ ಬಿಚ್ಚಿಟ್ಟರೆ? ಹಾಗೆಂದೇ ಕಾರ್ಯಕ್ರಮಕ್ಕೆ ಮೊದಲೇ ಚಕ್ರವರ್ತಿಯವರನ್ನ ಕೂರಿಸಿಕೊಂಡು, ಡು/ಡೋಂಟ್ಸ್ ಗಳ ಪಟ್ಟಿ ಕೊಡಲಾಯ್ತು. ನಿಜಕ್ಕೂ ಹೀಗೆ ಚೌಕಟ್ಟಿನಲ್ಲಿ ದೇಶಪ್ರೇಮದ ಕುರಿತು ಮಾತನಾಡುವುದೊಂದು ಸವಾಲಿನ ಕೆಲಸ. ಇನ್ನು ನಮ್ಮ ‘ಬಂಧಿ’ಬಾಂಧವರು “ತೆಗೀರ್ರೀ ನಿಮ್ಮ್ ಗೋಳನ್ನಾ, ಯವ್ದಾರಾ ಪಿಚ್ಚರ್ ಹಾಡು ಹಾಡ್ಸಿ” ಅಂದುಬಿಟ್ಟರೆ? “…..ರೆ” ಅಂತ ಯೋಚಿಸಿ ಮುಗಿಯುವ ಹೊತ್ತಿಗೆ ಅದಾಗಲೆ, ಹೊರಗೆ ನಿಂತ ತಂಡದ ಕೆಲ ಸದಸ್ಯರಿಗೆ ಅದರ ಅನುಭವವೂ ಆಗಿಹೋಯ್ತು. “ನಾವು ದೇಶ ಭಕ್ತಿ ಗೀತೆಗಳನ್ನ ಹಾಡ್ತೀವಿ” ಎಂದುದಕ್ಕೆ ಅಲ್ಲೊಬ್ಬರು, “ಯಾಕೆ? ದುನಿಯಾ ಪಿಚ್ಚರ್ ಹಾಡು ಹಾಡಿ” ಅಂದು ತಣ್ಣೀರೆರಚಿದ್ದರು!

ಇದಿನ್ನೂ ಆರಂಭವಷ್ಟೆ. ಮುಂದೆ ನಡೆದುದನೆಲ್ಲ ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಬಿಡಿ!
~
ಕೇಂದ್ರ ಕಾರಗೃಹದಲ್ಲಿ ಎರಡು ಬ್ಯಾರಕ್ ಗಳು. ಹೆಂಗಸರು, ಗಂಡಸರಿಗೆ ಬೇರೆ ಬೇರೆ. ಒಟ್ಟಿಗೆ ಒಂದೇ ಗ್ರೌಂಡಿನಲ್ಲಿ ಹಾಡುವುದು ಅಂದುಕೊಂಡಿತ್ತು ತಂಡ. ಆದರೆ, ಹೆಂಗಸರನ್ನ ಗಂಡಸರ ಬ್ಯಾರಕ್ ನಲ್ಲಿರುವ ಗ್ರೌಂಡಿಗೆ ಬಿಡುವುದಿಲ್ಲ ಅಂದಾಗ ನಿರಾಶೆ ಪರಮಾವಧಿ ತಲುಪಿತು. ಜೊತೆಗೆ, ಹೆಂಗಸರ ಬ್ಯಾರಕ್ ಗೆ ಗಂಡಸರನ್ನ ಅಲೋ ಮಾಡುವುದಿಲ್ಲ ಎನ್ನುವ ನಿಯಮ ಬೇರೆ!!
ಕೊನೆಗೆ, ಮಹಿಳಾ ‘ಬಂಧಿಭಗಿನಿ’ಯರಿಗೆ ಹಬ್ಬದ ಸೀರೆ ಇತ್ತು ಗೌರವಿಸಲೆಂದು ಬಂದಿದ್ದ ಅಲಸೂರು ರಾಮಕೃಷ್ಣಾಶ್ರಮದ ಶ್ರೀ ತ್ಯಾಗೀಶ್ವರಾನಂದ ಜೀ ಹಾಗೂ ಶ್ರೀ ಪರಮ ಸುಖಾನಂದ ಜೀ ಮತ್ತು ಜಾಗೋ ಭಾರತ್ ತಂಡದ ನಿರೂಪಕ, ಕಲಾವಿದರನ್ನ ಮಾತ್ರ ಅಲ್ಲಿ ಬಿಡಲಾಯ್ತು. ನಾವು ಐವರು ಹೆಣ್ಣುಮಕ್ಕಳಂತೂ ಅಲ್ಲಿಗೆ ಹೋಗಿಯೇ ಹೋದೆವು.

ಮಹಿಳಾ ಬಂಧಿಗಳು ಅಲ್ಲಿದ್ದುದು ಒಟ್ಟು ೨೦೪. ಅವರಲ್ಲಿ ಮರಣದಂಡನೆಗೆ ಗುರಿಯಾಗಿದ್ದವರು ಒಬ್ಬರಿದ್ದರು. ಉಳಿದಂತೆ ಹದಿನಾಲ್ಕು ಮಕ್ಕಳು ತಮ್ಮ ತಾಯಂದಿರೊಟ್ಟಿಗಿದ್ದರು. ನಾವು ಅಲ್ಲಿ ತಲುಪುವ ಹೊತ್ತಿಗೆ ಅವರೆಲ್ಲ ಸಾಲಾಗಿ ನಿಶ್ಶಬ್ದವಾಗಿ (ನಿಜವಾಗ್ಲೂ!) ಕುಳಿತಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಒಳಸೇರಿದ ಮುದುಕಿಯಿಂದ ಹಿಡಿದು, ಆಗತಾನೆ ಲಾಡ್ಜಿನಲ್ಲಿ ಸಿಕ್ಕಿಬಿದ್ದ ಎಳೆವಯಸಿನ ಅಮಾಯಕಿಯವರೆಗೆ ಥರಥರಾವರಿ ಹೆಣ್ಣುಮಕ್ಕಳಿದ್ದರು.
ಅವರು ಅದೆಂಥದೇ ಅಪರಾಧ ಮಾಡಿರಬಹುದು, ಒಂದು ಕ್ಷಣ – ಸರಳುಗಳ ಹಿಂದೆ ಜೀವನ ತಳ್ಳುತ್ತಿರುವ ಅವರನ್ನ ಕಂಡು ಚುರ್ರೆಂದಿತು. ‘ಇಲ್ಲಿಂದ ಹೋದಮೇಲಿನ ಅವರ ಬದುಕು?’ ಯೋಚನೆ ಮಾಡಲಾಗದೆ ಮನಸನ್ನ ಬೇರೆಡೆ ಹರಿಬಿಟ್ಟೆ.

ಆ ವೇಳೆಗೆ ಸ್ವಾಮೀಜಿ ಭಗಿನಿಯರಿಗೆ ನಾಲ್ಕು ಹಿತವಚನ ಹೇಳಿದರು. ಅವರ ಮಾತನ್ನ ಶ್ರದ್ಧೆಯಿಂದ ಕೇಳುತ್ತಿದ್ದ ಹೆಣ್ಣುಮಕ್ಕಳನ್ನ ಕಂಡು ನನಗೆ ಖುಶಿಯಾಯ್ತು. ಆಮೇಲೆ ಗಣೇಶ್ ದೇಸಾಯಿ ಹಾಡಲು ಶುರುವಿಟ್ಟರು. ಹೆಂಗಸರು ತಮಗೆ ಗೊತ್ತಿರುವ ಹಾಡನ್ನು ಒಳಗೊಳಗೆ ಗುನುಗುತ್ತ, ಇಲ್ಲವೇ ಗಟ್ಟಿಯಾಗಿ ದನಿಗೂಡಿಸಿ ಹಾಡುತ್ತ ಕಳೆಕಟ್ಟಿಸಿದರು. ಆಮೇಲಾಮೇಲೆ ಸಂಕೋಚ ಬಿಟ್ಟು ಚಪ್ಪಾಳೆ ತಟ್ಟುತ್ತ ಒಳಗಿನ ಕಟ್ಟುಗಳನೆಲ್ಲ ಬಿಡಿಸಿಕೊಂಡು ಹಗುರಾಗುತ್ತ ಹಾಡಿದರು. ಲೌಕಿಕ ಬುದ್ಧಿಗೆ ಮಾತ್ರ ಎಲ್ಲ ಕಶ್ಮಲಗಳು. ಚೇತನಕ್ಕೆ ಯಾವುದರ ಸೋಂಕು? ದೇಹಕ್ಕೆ ಬಂಧನದ ಬೇಡಿ. ಮನಸ್ಸನ್ನ ಬಂಧಿಸುವವರು ಯಾರು? ಅಲ್ಲಿ ಕುಳಿತು ನೋಡುತ್ತಿದ್ದ ನಾವೆಲ್ಲ ಅವರ ತನ್ಮಯತೆಗೆ ಬೆರಗಾಗಿದ್ದೆವು. ನಿಜಕ್ಕೂ, ಅವರು ಹಾಡುತ್ತಿದ್ದಷ್ಟು ಹೊತ್ತು ಅರಳಿದ ಮುಖದಿಂದ ತಮ್ಮ ಸದ್ಯದ ಸ್ಥಿತಿಯನ್ನು ಮರೆತು ಅದರಲ್ಲಿ ಲೀನವಾಗಿಹೋಗಿದ್ದರು. ಈ ತಲ್ಲೀನತೆ ಎಷ್ಟಿತ್ತೆಂದರೆ, ಹೊರಗೆ ಸ್ವಾಮೀಜಿ ಸೀರೆ ವಿತರಿಸುತ್ತಿದ್ದರೂ ಎದ್ದು ಹೋಗದೆ ಕುಳಿತು ಹಾಡುವಷ್ಟು!!

ಸ್ವಾಮಿ ತ್ಯಾಗೀಶ್ವರಾನಂದರ ಮಾತುಗಳು ಆ ಹೆಣ್ಣುಮಕ್ಕಳನ್ನು ಕಲಕಿದ್ದವು. ಅವರೆಲ್ಲರನ್ನೂ ಶಾರದಾ ಮಾತೆಯ ಅಂಶ ಎಂದೇ ತುಂಬು ಗೌರವದಿಂದ ಮಾತನಾಡಿದ ಸ್ವಾಮೀಜಿಯವರ ಕಾಲು ಮುಟ್ಟಿ ನಮಸ್ಕರಿಸಿದ ಅವರು ಭಾವುಕರಾಗಿಬಿಟ್ಟಿದ್ದರು.
ಅರೆ! ಇದು ಜಾಗೋ ಭಾರತ್ ತಂಡದ ಅಂದಿನ ಕಾರ್ಯಕ್ರಮದ ಮೊದಲ ಯಶಸ್ಸು!!
~
ಈಗ ನಮ್ಮ ನಡಿಗೆ, ಗಂಡಸರ ಬ್ಯಾರಕ್ ಕಡೆಗೆ.
ಅದು ಹೆಂಗಸರ ಬ್ಯಾರಕ್ ನಂತಿಲ್ಲ. ದೊಡ್ಡ ದೊಡ್ಡ ಕಲ್ಲಿನ ಕಟ್ಟಡಗಳು, ಮಧ್ಯದಲ್ಲೊಂದು ವಿಶಾಲವಾದ ಮೈದಾನ. ಅಲ್ಲೊಂದು ಸ್ಟೇಜು ಕೂಡ.
ಸುಮಾರು ಎರಡೂ ಸಾವಿರ ಚಿಲ್ಲರೆ ಬಂಧಿಗಳನ್ನಿಡಬಹುದಾದ ಈ ಕೇಂದ್ರದಲ್ಲೀಗ ೪,೭೩೩ ಖೈದಿಗಳಿದ್ದಾರೆ. ಅವರಲ್ಲಿ ಶೇ.೬೫ರಷ್ಟು ವಿಚಾರಣಾಧೀನ ಖೈದಿಗಳು.

ಇಲ್ಲಿನ ನೋಟ ಮಹಿಳಾ ಬ್ಯಾರಕ್ ಗಿಂತ ಬಹಳ ಭಿನ್ನವಿತ್ತು. ಲೂಸ್ ಮಾದನ ಹಾಗಿರುವವರು, ಜೋಗಿ ಹೇರ್ ಸ್ಟೈಲಿನವರು, ಮೆಂಟಲ್ ಮಂಜನ ಸಂಬಂಧಿಕರು, ಅಜ್ಜಂದಿರು, ಮೀಸೆ ಮೂಡದ ಹೈಕಳು ಇವರೆಲ್ಲರ ನಡುವಲ್ಲಿ ಒಂದಷ್ಟು ವೈಟ್ ಕಾಲರು, ಪಂಚೆಗಳವರು… ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇಷ್ಟಾದರೂ ವೈವಿಧ್ಯವಿರದೆ ಹೋದರೆ ಹೇಗೆ ಅಂದಿರಾ? ಆದರೆ ಇಂಥ ಸಮೂಹವನ್ನ ಹಿಂದೆಂದೂ ಎದುರಿಸದ ತಂಡ ಈಗ ಇವರೆದುರು ಹಾಡಬೇಕಿದೆ, ಮಾತಾಡಬೇಕಿದೆ! ಅದಾಗಲೇ ಪೆಂಡಾಲಿನಲ್ಲಿ ನೆರೆದ ಬಂಧಿಬಂಧುಗಳು ಉಡಾಫೆ ಕಣ್ಣೆಸೆದು ಕಾಯುತ್ತ ನಿಂತಿದ್ದಾರೆ. ಸ್ವಾಮಿ ತ್ಯಾಗೀಶ್ವರಾನಂದರ ಮಾತು ಮುಗಿದಿದೆ. “ಕಳೆದ ಸಾರ್ತಿಗಿಂತ ಈ ಸಾರ್ತಿ ಯುವಕರ ಸಂಖ್ಯೆ ಜಾಸ್ತಿಯಾಗಿದೆ” ಎಂದ ಸ್ವಾಮೀಜಿಯವರ ವಿಷಾದಕ್ಕೆ ಚಪ್ಪಾಳೆ ತಟ್ಟಿ ಬೇಸ್ತು ಬೀಳಿಸಿದ್ದಾರೆ! ಇನ್ನೀಗ ತಂಡದ ಸರದಿ….

ಅಲ್ಲಿ ಕಾರ್ಯಕ್ರಮದ ನಿರೂಪಣೆ ಇತ್ಯಾದಿ ಉಸ್ತುವಾರಿ ಹೊತ್ತು ಗಂಭೀರವಾಗಿ ಓಡಾಡಿಕೊಂಡಿದ್ದ ಸೂರ್ಯ ಎನ್ನುವ ಬಂಧಿ(ನಂಗವರು ಬಂಧಿಯೆಂದು ಗೊತ್ತಾಗಿದ್ದು ಲಾಸ್ಟಿಗೆ!)ಗೆ ಯಾಕೋ ತಳಮಳ. ಅವರು ಅಣ್ಣನ ಬಳಿ ಬಂದು, “ಕಾರ್ಯಕ್ರಮಕ್ಕೆ ಮೊದಲು ನಾಲ್ಕು ಮಾತಾಡಿ ಕೇಳುಗರ ಮನಸನ್ನ ಇತ್ತ ಕರೆತನ್ನಿ” ಅಂತ ಕೇಳಿಕೊಂಡರು. ಸ್ವಾಮೀಜಿಯವರದ್ದೂ ಅದೇ ಅಭಿಮತ. ಕೊನೆಗೆ, ಪೂರ್ವನಿಯೋಜಿತವಲ್ಲದ ಚಕ್ರವರ್ತಿಯ ಪುಟ್ಟ ಬಾಷಣವೂ ನಡೆದುಹೋಯ್ತು. ಐದು ನಿಮಿಷದ ಭಾಷಣಕ್ಕೆ ಎರಡು ಚಪ್ಪಾಳೆ ಬಿದ್ದಿದ್ದೇ, ಎಲ್ಲವೂ ಹಿಡಿತಕ್ಕೆ ಬರುತ್ತಿದೆ ಎನ್ನುವ ಸಮಾಧಾನ ಶುರುವಾಯ್ತು.

ಮೊದಲನೆಯದು ‘ಜಾಗೋ ಭಾರತ್’ ಥೀಮ್ ಸಾಂಗ್. ಎರಡನೆಯದು ‘ಸಾರೇ ಜಹಾಂ ಸೆ ಅಚ್ಚಾ’. ಅಮೇಲೆ ‘ಇದೇನಸಭ್ಯತೆ…?’ ಮುಂದೆ, ‘ಕನ್ನಡ ನಾಡಿನ ವೀರರಮಣಿಯ…’ ನಂತರ ‘ಓ ನನ್ನ ದೇಶ ಬಾಂಧವರೇ..’ ಆಮೇಲೆ ‘ಹೇ ಜವನ ಜನನಿ’ ಹೀಗೇ ಮುಂದುವರೆದು ಒಂದೂವರೆ ಗಂಟೆ ಕಾಲಾವಧಿಯಲ್ಲಿ ಒಟ್ಟು ಹತ್ತು ಹಾಡುಗಳು. ನೋಡನೋಡುತ್ತ ಮೈದಾನ ತುಂಬತೊಡಗಿ, ಕೊನೆಯ ‘ವಂದೇ ಮಾತರಮ್’ ಹಾಡಿನ ವೇಳೆಗೆ ಸ್ಟೇಜಿನ ಮೇಲೂ ಬಂಧಿಗಳು ಹತ್ತಿ ಕುಳಿತುಬಿಟ್ಟಿದ್ದರು!
ಪ್ರತಿ ಹಾಡಿಗೆ ಚಪ್ಪಾಳೆ ತಟ್ಟುತ್ತ ಖುಷಿಯಿಂದ ಕೂಗುತ್ತ, ನಿರೂಪಣೆಯ ಮಾತುಗಳಿಗೆ ಬೆರಗುಗಣ್ಣಾಗುತ್ತ, ತಾವೂ ಅದರ ಜೊತೆ ಉತ್ತರವಾಗಿ ಬೆರೆಯುತ್ತ, ಖುಷಿ ಕಂಡ ವಿಷಯಕ್ಕೆ ಮೆಚ್ಚುಗೆ ಸೂಚಿಸುತ್ತ…..
ಓಹ್! “ಇಂಥದೊಂದು ಯಶಸ್ವೀ ಕಾರ್ಯಕ್ರಮ ಆಗಿರಲೇ ಇಲ್ಲ!” ಹಾಗಂದುಬಿಟ್ಟರು, ಸ್ವತಃ ಜಾಗೋಭಾರತ್ ತಂಡದ ಸದಸ್ಯರು!!
ಇದೇ ಮಾತನ್ನ ಹೇಳಿದ ಮತ್ತಿಬ್ಬರು- ಅಲ್ಲಿನ ಸಿಬ್ಬಂದಿ ಪೋಲಿಸರು ಮತ್ತು ಹನ್ನೊಂದು ವರ್ಷಗಳಿಂದ ಸೆರೆಯಲ್ಲಿರುವ ಒಬ್ಬ ಬಂಧಿ.
“ಏನ್ಸಾರ್, ಒಳ್ಳೆ ಪುಂಗಿ… ಪುಂಗಿ ಊದಿ ಹಾವನ್ನ ಆಡ್ಸೋ ಹಂಗ್ ಆಡ್ಸಿಬಿಟ್ರಿ ನಮ್ಮನ್ನ!” ಅಂದಿದ್ದು, ಉದ್ದಕೆ ಜೋಗಿ ಹೇರ್ ಸ್ಟೈಲಿನ ತರುಣ!!

ಕಾರ್ಯಕ್ರಮ ಮುಗಿದ ನಂತರ ಆಶ್ರಮದವತಿಯಿಂದ ಅಲ್ಲಿದ್ದ ಐದುಸಾವಿರ ಮಂದಿಗೂ ಉಸಲಿ ಮತ್ತು ಲಡ್ಡು ಪ್ರಸಾದ ವಿತರಿಸಲಾಯ್ತು. ‘ಲಡ್ಡುವನ್ನು ನಿಮ್ಮ ಕೋಣೆಗೆ ಕಳಿಸಲಾಗುತ್ತದೆ’ ಎಂದಿದ್ದೇ, ಬಂಧಿಗಳು ಆನಂದದ ಕೂಗು ಹಾಕಿದ್ದು ನಮ್ಮ ಹೊಟ್ಟೆ ತುಂಬುವಂತೆ ಮಾಡಿತು. ಇವುಗಳ ಜೊತೆಗೆ ಆಶ್ರಮದ ಕೆಲವು ಪುಸ್ತಕಗಳನ್ನು ಕೂಡ ಸೆರೆಮನೆಯ ವಾಚನಾಲಯಕ್ಕೆ ಕೊಡಲಾಯ್ತು. ಅಂತೂ ನಮ್ಮ ಯುಗಾದಿ ಆಚರಣೆ ಅತ್ಯಂತ ಅರ್ಥಪೂರ್ಣವಾಗಿ, ಸಂಭ್ರಮದಿಂದ ನೆರವೇರಿತ್ತು.
~
ಜಾಗೋ ಭಾರತ್, ಸಂಸ್ಕಾರ ಭಾರತಿಯ ಒಂದು ಅಂಗಭಾಗ. ಕಲೆ, ಸಂಸ್ಕಾರದ ಮೂಲಕ ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನು ಉದ್ದೀಪಿಸುವುದು ಸಂಸ್ಕಾರ ಭಾರತಿಯ ಧ್ಯೇಯ. ಜಾಗೋಭಾರತ್, ಕಥನ ನಿರೂಪಣೆಯನ್ನೊಳಗೊಂಡ ಗೀತಗಾಯನ ಕಾರ್ಯಕ್ರಮಗಳನ್ನು ನೀಡುತ್ತ, ಸಂಸ್ಕಾರಭಾರತಿಯ ಧ್ಯೇಯದ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಮೂರು ತಿಂಗಳ ಹಿಂದಷ್ಟೆ ಆರಂಭಗೊಂಡ ಈ ತಂಡ, ಅದಾಗಲೇ ರಾಜ್ಯದ ವಿವಿಧೆಡೆ ಹಲವು ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದೆ. ಈ ತಂಡದಲ್ಲಿ ಚಕ್ರವರ್ತಿ ಸೂಲಿಬೆಲೆ (ನಿರೂಪಣೆ), ಗಣೇಶ್ ದೇಸಾಯಿ, ಮಾಲಿನೀ ಕೇಶವಪ್ರಸಾದ್, ಸಿಂಚನಾ ಮೂರ್ತಿ, ಗಣೇಶ್ ಹೆಗಡೆ (ಹಾಡುಗಾರರು) ಇದ್ದಾರಾದರೂ ಇದು ಇಷ್ಟು ಜನರ ತಂಡ ಮಾತ್ರವಲ್ಲ. ರ್‍ಆಷ್ಟ್ರ ಪ್ರೇಮವಿರುವ ಯಾವ ಕಲಾವಿದರಿಗೂ ಈ ತಂಡದಲ್ಲಿ ಅವಕಾಶವಿದೆ. ಹಾಗೆಯೇ ವಾದ್ಯ ಕಲಾವಿದರಿಗೂ ಕೂಡ. ಮೊನ್ನೆಯ ಯುಗಾದಿಯ ಕಾರ್ಯಕ್ರಮದಲ್ಲಿ ಗುರು ಮೂರ್ತಿ ವೈದ್ಯ, ರಾಜೀವ್, ಪ್ರಕಾಶ್ ಹೆಗಡೆ, ವಾದಿ ಮೊದಲಾದವರಿದ್ದರು. ಮೊದಲೇ ಹೇಳಿದಂತೆ, ಇದು ರಾಷ್ಟ್ರ್‍ಆಸಕ್ತರ ತಂಡ. ಈ ಕಾರ್ಯಕ್ರಮಕ್ಕಾಗಿ ಇವರೆಲ್ಲರೂ ತಮ್ಮ ಬೇರೆ ಕಾರ್ಯಗಳನ್ನು ಬದಿಗೊತ್ತಿ ಬರುವವರೇ.

‘ಕಾರಾಗೃಹದಲ್ಲಿ ಯುಗಾದಿ’ ಈ ಆಚರಣೆಯ ಹಿಂದೆ ‘ಸಂಸ್ಕಾರಭಾರತಿ ಚಕ್ರವರ್ತಿ’ ಎಂದು ತಮ್ಮ ಸಂಸ್ಥೆಯೊಂದಿಗೆ ಅಂಟಿಕೊಂಡೇ ಗುರುತಿಸಲ್ಪಡುವ ಚಕ್ರವರ್ತಿ ತಿರುಮಗನ್ ಅವರ ಬೆಂಬಲ, ಮಾರ್ಗದರ್ಶನ, ಪ್ರೋತ್ಸಾಹಗಳು ಅಗಾಧವಾಗಿತ್ತು. ಹೊರಡುವ ಮುನ್ನ, ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಹರ್ಷಾನಂದಜೀ ಹಾಗೂ ಸ್ವಾಮೀ ಸ್ವಾತ್ಮಾರಾಮಾನಂದರ ಆಶೀರ್ವಾದವೂ ದೊರೆತಿತ್ತು. ಚಕ್ರವರ್ತಿಯವರೂ (ತಿರುಮಗನ್) ಸೇರಿದಂತೆ, ರಾಷ್ಟ್ರ ಶಕ್ತಿ ಕೇಂದ್ರದ ಕೆಲ ಯುವಕರು, ಜಾಗೋಭಾರತ್ ತಂಡದವರು ಮತ್ತು ನಾನು ಸೇರಿ ಒಟ್ಟು ಇಪ್ಪತ್ತೈದು ಮಂದಿ ಅಲ್ಲಿದ್ದೆವು. ಗಣೇಶ್ ದೇಸಾಯಿ ಪತ್ನಿ, ಮೂಡಲ ಮನೆ ಇತ್ಯಾದಿ ಧಾರಾವಾಹಿಗಳ ಖ್ಯಾತಿಯ ನಟಿ, ನೃತ್ಯಗಾತಿ ನಮಿತಾ ದೇಸಾಯಿ ವಿಶೇಷವಾಗಿ ಮಹಿಳಾ ಬಂಧಿಗಳ ಸಂಭ್ರಮಕ್ಕೆ ಕಾರಣವಾದರು. ಅವರು ‘ಸೀರಿಯಲ್ ನವ್ರು’ ಅನ್ನುತ್ತ ನಮಿತಾರನ್ನ ಮಾತಾಡಿಸಿ ಸುಖಿಸಿದರು.
~
ಹೀಗೆ, ಆತಂಕದೊಂದಿಗೆ ಆರಂಭಗೊಂಡ ನಮ್ಮ ಯುಗಾದಿ ಅಚರಣೆ, ಸಂತೃಪ್ತಿಯಿಂದ ಕೊನೆಗೊಂಡಿತು. ಆದರೂ,  ಬಂಧಿಗಳ ಭೋಲೆ ಅನ್ನಿಸುವ ಮುಖಗಳು, ಅದರ ಹಿಂದಿರಬಹುದಾದ ಕ್ರೌರ್ಯ, ವಂಚಕತನ, ಯಾರ ಅಪರಾಧಕ್ಕೋ ಶಿಕ್ಷೆಯುಣ್ಣುತ್ತಿರುವ ಅಮಾಯಕರ ಪಾಡು; ಇವೆಲ್ಲದರ ನಡುವೆ, ಕೋಟಿ ಕೋಟಿ ನುಂಗಿಯೂ ಸಾಯುವವರೆಗೆ ಸುಖಜೀವನ ನಡೆಸುವ ‘ದೊಡ್ಡ ಮನುಷ್ಯರ’ ಹಾಳು ನೆನಪು ಮತ್ತು ಕಂಪ್ಯಾರಿಸನ್ನು…. ಇವೇ ಮೊದಲಾದ ಆಲೋಚನೆಗಳು ನನ್ನೊಳಗೆ ಉಳಿದುಹೋದವು….

ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!

2009 February 24

ಇದು ಬಹಳ ತಿಂಗಳುಗಳ ಹಿಂದಿನ ಕಥೆ. ಒಂದಷ್ಟು ಜನ ’ಐ ಯಾಮ್ ಲೀವಿಂಗ್ ಬ್ಯಾಂಗಲೋರ್’ ಅಂತ ಕಮ್ಯುನಿಟಿಗಳನ್ನ ಮಾಡಿಕೊಂಡು ನಮ್ಮೂರಿನ (!?) ಬಗ್ಗೆ ಕಂಪ್ಲೇಂಟುಗಳನ್ನು ಹೇಳುತ್ತ, ಇಲ್ಲಿನ ಜನಗಳನ್ನು ಹೀಯಾಳಿಸುತ್ತ ದೊಡ್ಡ ದೊಡ್ಡ ಪೋಸ್ಟರುಗಳನ್ನು ಹಾಕಿಕೊಂಡು ಗುಲ್ಲು ಮಾಡಿದ್ದರು.

ಹಾಗೆ ಬೆನ್ನು ತಿರುಗಿಸಿ ನಿಂತವರ ಕಡೆ ಕ್ಯಾರೇ ಅನ್ನದೆ ಜನ ಜೀವನ ನಡೆದುಕೊಂಡು ಹೋಯ್ತು ನೋಡಿ, ಎಲ್ಲವೂ ತಣ್ಣಗಾಯ್ತು. ಬೆಂಗಳೂರಂಥಾ ಬೆಂಗಳೂರಲ್ಲೇ ಇವರಿಷ್ಟು ಕ್ಯಾತೆ ತೆಗೀತಾರೆನ್ನುವುದಾದರ ಜಗತ್ತಿನ ಯಾವ ಭಾಗದಲ್ಲಿ ಜೀವನ ಮಾಡಬಲ್ಲರು ಹೇಳಿ!?
ಮ್… ನಾವೂ(ನೂ) ಆಗೀಗ ಬೆಂಗಳೂರಿನ ಕೆಲವು ಕಲ್ಯಾಣಗುಣಗಳ ಬಗ್ಗೆ ಮುನಿದು ಗೊಣಗಾಡೋದಿದೆ. ಆದರೆ ಅದು ಯಾವತ್ತೂ ಬೆಂಗಳೂರಿನೆಡೆಗಿನ ದ್ವೇಷವಾಗಿದ್ದಿಲ್ಲ. ನನ್ನೂರು ಅಂದರೆ ಹುಚ್ಚು ವ್ಯಾಮೋಹ ನಿಜ. ಹಾಗಂತ ಬದುಕು ಕಟ್ಟಿಕೊಟ್ಟ ಊರಿನೆಡೆಗೆ ತಾತ್ಸಾರವೇನೂ ಇಲ್ಲ. ಇನ್ನೂ ಕೆಲವು ಸಾರ್ತಿ, ಶುದ್ಧ ಬೆಂಗಳೂರಿಗರ ಪಾಲಿಗೆ ನಾವು ಏನೂ ಉಳಿಸುತ್ತಿಲ್ಲವಲ್ಲ ಅನ್ನೂ ಗಿಲ್ಟು ಕಾಡೊದೂ ಇದೆ.

ಸಧ್ಯಕ್ಕೆ ನನಗೆ ಬೆಂಗಳೂರಿನ ಸಮಸ್ಯೆ ಅಂತ ಕಾಣ್ತಿರೋದು ಇಲ್ಲಿನ ಟ್ರಾಫಿಕ್ಕು. ಅರ್ಧ ಆಯುಷ್ಯವೇ ರಸ್ತೆಗಳಲ್ಲಿ ಕಳೆದು ಹೋಗುತ್ತೇನೋ ಅನುವಷ್ಟು ಕಿಕ್ಕಿರಿದ ವಾಹನ ದಟ್ಟಣೆ. ಬರಬರುತ್ತ ವಾಹನ ಮತ್ತು ಹೊಗೆಯಿಂದಲೇ ಬೆಂಗಳೂರು ಸ್ಫೋಟಗೊಳ್ಳುತ್ತದೆ ಅನ್ನುವ ಆತಂಕ ಕೆಲವರದಾದರೆ, ಇದಕ್ಕೆ ಪರಿಹಾರವೇ ಇಲ್ಲ ಅನ್ನುವ ಹತಾಶೆ ಕೆಲವರದು.
ಹಾಗಂತ, ಕೈಲಾಗದು ಅಂದುಕೊಂಡು ಕುಳಿತರೆ ಕೆಲಸ ನಡೆಯುತ್ತದೆಯೇ?
ಟ್ರಾಫಿಕ್ ನಿಯಂತ್ರಣಕ್ಕೆ ಸರ್ಕಾರಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲವೆ? ಕೈಗೊಂಡಿದ್ದರೂ ಅವು ಎಷ್ಟರ ಮಟ್ಟಿಗೆ ಸಾಕಾರವಾಗುವಂಥವು? ಇದರಲ್ಲಿ ನಾವು ಹೇಗೆ ಸಹಭಾಗಿಗಳಾಗಬಹುದು? ಇವೆಲ್ಲ ತಿಳಿಯದೆ ಹೋದರೆ ನಮಗೆ ಗೊಣಗಾಡುವ ಅಧಿಕಾರವೂ ಇರುವುದಿಲ್ಲ.

ಅದಕ್ಕೆಂದೇ ಸಮಾಜಮುಖಿ ಆಸಕ್ತಿಯ ಗೆಳೆಯ ರಮೇಶ್ ಬಿ.ವಿ. ಒಂದು ಮೇಲ್ ಕಳಿಸಿಕೊಟ್ಟಿದ್ದರು. ಅದನ್ನು ಹಾಹಾಗೇ ನಿಮ್ಮೆದುರು ಇಡುತ್ತಿದ್ದೇನೆ. ನಾವೆಲ್ಲರೂ ಜೊತೆಯಾಗಿ ನಡೆದಾಗ ಮಾತ್ರ ಪ್ರಗತಿ ಸಾಧ್ಯ ಅಲ್ಲವೆ?  ನಿಮ್ಮೆಲ್ಲರ ಸಹಕಾರ ಕೋರುತ್ತಾ…
ವಂದೇ,
ಚೇತನಾ ತೀರ್ಥಹಳ್ಳಿ.

ಓವರ್ ಟು ಆರ್.ಕೆ.ಮಿಶ್ರಾ…
(ಟಿ.ಓ.ಐ. ಲೀಡ್ ಇಂಡಿಯಾ ವಿಜೇತರು)


Dear Friends,

As you are aware, ABIDe (Agenda for Bengaluru Infrastructure & Development) Task Force, with the  involvement of government, has been constituted to revive and rebuild Bengaluru through a combination of Comprehensive planning, improved municipal services and new investments into infrastructure. ABIDe also owns the task of providing a blue-print for sustainable and orderly development of Bangalore under Bengaluru Vision 2020.

I and Ashwin Mahesh (IIM-B), are entrusted with the task of suggesting solutions to the Traffic and Transport issues of Bangalore – A tough job indeed :) .  Please visit http://abidebengalu ru.in/report/ show/7 to read and give suggestions on our recommendations.

The Transportation team at ABIDe has identified public transport as the most important tool in reducing traffic congestion and chaos on Bangalore roads. Given that metro rail network is still some years away, Bus based public transport system is being promoted with a corridor approach.

To promote public transport and make travel hassle free, 10 major arterial roads (Big-10) have been identified as high density traffic corridors which will be made junction/signal free with dedicated point-to-point Bus Services, both A/C and non-A/C buses, named as Big-10 service.

Priority Bus Lanes, Bus Bays, Paved Footpaths, Safe Pedestrian Crossings, Cycle Lanes (proposed) will also be introduced on these Big-10 routes. We have 3, 6, 12, 18 and 24 month deadlines to accomplish all these Road Infrastructure Improvement objectives on all Big-10 Corridors. Please visit ABIDe website for corridor and other details. - http://www.abideben galuru.in

However, deployment of Big-10 and Hop-on Hop-Off (HoHo) Bus Services has already begun.

Out of 10 Corridors Big-10 Bus Service is already in operation on Hosur Road (Vellara Jn – Electronic City) and HAL Airport Road (Trinity Jn – Whitefield-Hope Farm jn). This is proving to be extremely popular. Next week Bannerghatta Road Big-10 Service will start. In next 2 months all 10 Corridors will have Big-10 Bus Service with a frequency of 5-10 minutes, both A/C and Non-A/C Service.

This service CONVENIENTLY connects with Central Business District (CBD)  HoHo Service (Kendra Sarige) at Vellara Jn on Hosur Rd and Trinity Jn on HAL Airport rd respectively. This makes it extremely convenient for anyone living and commuting on these routes to use this Big-10 Service in conjunction with CBD HoHo service to reach any point in the city including all shopping malls and offices, without the need to take their private vehicles to work or shop.

I have myself used these services and they are extremely convenient and efficient.

Please encourage all your friends and colleagues to use these BUS services. Traffic congestion will reduce only if we stop/reduce taking our cars to work and shop.
No amount of cribbing or road widening is going to help if we keep adding private cars to our roads. Now we have the comfortable and convenient public transport in close proximity to our homes and work places, lets use it and help our city and the environment.

PS: Please share this information with your friends and colleagues. We need to popularize public transport through media, blogs, personal contacts and word of mouth, to save Bangalore from traffic chaos.

RK

ಕನಸು ‘ನೋಡೋಣ’ ಬನ್ನಿ!

2009 February 23
by chetana chaitanya

ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ   ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ ಅವಕಾಶ ಒದಗಿಸಿಕೊಟ್ಟಿದೆ ಸಾಂಗತ್ಯ. ಇನ್ನು ಮುಂದೆಯೂ ಈ ಬಗೆಯ ವಿಭಿನ್ನ ಪ್ರಯೋಗಗಳನ್ನು ಬ್ಲಾಗ್ಲೋಕದಲ್ಲಿ ಮಾಡಲಿದೆ ಈ ಉತ್ಸಾಹಿ ತಂಡ.

ಅದಾಗಲೇ ಚಿತ್ರ ಖಜಾನೆಯಂತಹ ವಿನೂತನ ಪ್ರಯೋಗಕ್ಕೆ ಕೈಹಾಕಿರುವ ಸಾಂಗತ್ಯ, ಸಿನೆಮಾ ಜಗತ್ತಿನ ಎಲ್ಲವನ್ನೂ ಕನ್ನಡದಲ್ಲಿ ಒದಗಿಸಿಕೊಡುವ ಮಹದಾಸೆ ಹೊಂದಿದೆ. ಇದಕ್ಕೆ ಬ್ಲಾಗ್ಗೆಳೆಯರೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹಗಳು ಬೇಕಷ್ಟೆ.

ಇನ್ನೇಕೆ ತಡ, ಕನಸು ನೋಡಲು ಸಾಂಗತ್ಯಕ್ಕೆ ಹೊರಡೋಣ, ಬನ್ನಿ!

ನನ್ನೂರ ದಾರಿಯಲ್ಲಿ ನಡೆದಾಡಿದ ಆ ದಿನ…

2009 February 21
by chetana chaitanya

ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂರ ರೋಡಲ್ಲಿ ಒಟ್ಟಾಗಿ ಓಡಾಡಿದ್ದು! ಅದರದೊಂದು ಖುಷಿ ಖುಷಿ  ಸಂಕಟದ ಅನುಭವ ಹಂಚಿಕೊಳ್ತಿದೇನೆ ನಿಮ್ಮೊಟ್ಟಿಗೆ…

ಊರು, ಉಳಿದಂತೆಲ್ಲ ಹಾಗೇ ಇತ್ತು. ಗದ್ದೆಗಳಲ್ಲಿ ಕಾಂಪ್ಲೆಕ್ಸುಗಳು ಎದ್ದು ನಿಂತಿದ್ದು, ಖಾಲಿ ಹೊಡೆಯುತ್ತ ಬೀಗ ಬಡಚಿಕೊಂಡು ಬಿದ್ದಿದ್ದವು. ಊರಿನ ರೋಡಿನುದ್ದಕ್ಕೂ ನಡೆಯುವ ಖುಷಿಗೆಂದೇ ನಾನು, ಅಪ್ಪಿ ಆಟೋ ಹತ್ತದೆ ಪೇಟೆ ತನಕ ಕಾಲು ಬೀಸುತ್ತ ಹೊರಟಿದ್ದೆವು. “ಇವ್ರೆಲ್ಲ ಹೊಟ್ಟೆಗೆ ಏನು ಮಾಡ್ಕೊಳ್ತಾರೋ?” ಭೂತ ಬಂಗಲೆ ಹಾಗಿನ ಕಾಂಪ್ಲೆಕ್ಸ್ ಗಳನ್ನ ತೋರಿಸಿ ಕೇಳಿದೆ. ಅಂವ ಯಥಾಪ್ರಕಾರ ಮುಖ ಉಜ್ಜಿಕೊಂಡು ಒಣ ನಕ್ಕ.

ಅಪ್ಪಿಗೆ ಬೆಂಗಳೂರಿಗೆ ಬರೋದು ಸುತಾರಾಂ ಇಷ್ಟವಿದ್ದಿಲ್ಲ. “ತೋಟ, ಗದ್ದೆಯಿದ್ದವರು ಹಳ್ಳೀಲಿ ಬದುಕಬಹುದು. ಅದೆಲ್ಲ ಇಲ್ಲದವರು ನಗರಕ್ಕೆ ಗುಳೆ ಏಳಲೇಬೇಕಲ್ಲ? ಇಲ್ಲವಾದರೆ ಹೊಟ್ಟೆಗೇನು ಮಾಡೋದು!?” ಇನ್ನೂ ಏನೇನು ಯೋಚಿಸ್ತಿದ್ದನೋ, ಅಂತೂ ಸುಮಾರು ದೂರ ಸೈಲೆಂಟಾಗೇ ಇದ್ದ.

ಹೋಗುತ್ತ ಹೋಗುತ್ತ ವಾಟರ್ ಟ್ಯಾಂಕಿನ ಎದುರಿನ ಗದ್ದೆ ಸಾಲು ಶುರುವಾಯ್ತು. ರೋಡಿಂದ ಇಳಿಜಾರಲ್ಲಿ ನಡೆದರೆ ಗದ್ದೆ ಬೇಲಿ. ಅಲ್ಲಿ ಪುಟ್ಟ ಪುಟ್ಟ ಕೆಂಪು ಹೂಗಳು. ಅದರಿಂದ ಎದ್ದು ಬಂದ ಉದ್ದುದ್ದ ಹಳದಿ ಕೇಸರಗಳು! ಮುಟ್ಟಲಂತೂ ನುಣುಪು, ನಾಜೂಕು. ಸ್ಕೂಲಿಗೆ ಹೋಗುವಾಗೆಲ್ಲ ಅಪ್ಪಿ ಕೆಳಗಿಳಿದು, ಸಾಹಸ ಮಾಡಿ ಆ ಹೂಗಳನ್ನ ತಂದುಕೊಡ್ತಿದ್ದ. ತುಂಬ ಪ್ರೀತಿಯಿಂದ ಅವನ್ನ ಊಟದ ಬುಟ್ಟಿಯಲ್ಲಿಟ್ಟುಕೊಂಡು ಸ್ಕೂಲಿನ ಆವರಣದಲ್ಲಿದ್ದ ಚರ್ಚಿಗೆ ಒಯ್ಯುತ್ತಿದ್ದೆ. ತಮ್ಮ ಖುಷಿ ಖುಷಿಯಾಗಿರಲಿ ಅಂತ ಕೇಳ್ಕೊಳ್ತಾ ಅಲ್ಲೇ ಬಾಗಿಲಲ್ಲಿ ಹೂಗಳನ್ನಿಟ್ಟು ಬರ್ತಿದ್ದೆ. ನನ್ನೊಟ್ಟಿಗೇ ಅವನಿಗೂ ಅದೆಲ್ಲ ನೆನಪಾಗಿರಬೇಕು. ‘ಕೆಂಪು ಹೂ’ ಅನ್ನುತ್ತ, ಅಲ್ಲೆಲ್ಲೂ ಕಾಣದ ಅವುಗಳಿದ್ದ ಜಾಗ ತೋರಿಸಿ ನಕ್ಕ.

ಹಾಗೇ ಮುಂದೆ ಹೋದರೆ ಇಂದಿರಾನಗರಕ್ಕೆ ಹೋಗುವ ರೋಡು. ಅಲ್ಲೂ ಗದ್ದೆಯಲ್ಲಿ ಒಂದಷ್ಟು ಬಿಲ್ಡಿಂಗುಗಳು, ಮನೆಗಳು, ಹೋಟೆಲು. ನೊಣ ಹೊಡೆಯುತ್ತ ಕೂತಿದ್ದರು ಅದರದರ ಮಾಲೀಕರು. ಎಲ್ಲ ಬದಲಾಗಿದೆ ಅಂದುಕೊಳ್ಳುವ ಹೊತ್ತಿಗೆ ಮೀನು ಗಾಡಿಯ ಹಾರನ್ನು ಕೇಳಿಸಿ ಖುಷಿಯಾದೆ. “ಸಧ್ಯ! ಇದೊಂದು ಹಾಗೇ ಉಳಿದಿದ್ಯಲ್ಲ ಮಹರಾಯ!!” ಅನ್ನುವಾಗ ಮೀನು ಸಾಬರು ಬೆವರೊರೆಸಿಕೊಳ್ಳುತ್ತ ಸೈಕಲ್ ತುಳಿದುಕೊಂಡು ನಮ್ಮನ್ನು ಹಾದು ಹೋದರು.

ನಾವಿಬ್ಬರೂ ಇಷ್ಟಪಟ್ಟೇ ಮನೆಯಿಂದ ನಡೆದು ಹೊರಟಿದ್ದೆವು. ಆದರೀಗ ಯಾಕೋ ಕಾಲು ಸೋತಹಾಗನಿಸುತ್ತಿತ್ತು. ನಡೆದಷ್ಟೂ ದಾರಿ ಉದ್ದವಾಗುತ್ತ ಹೋಗುತ್ತಿದೆ ಅನಿಸತೊಡಗಿತ್ತು. ನಾವು ಐಸ್ ಕ್ಯಾಂಡಿ ಕುಟ್ಟುತ್ತಿದ್ದ ಕಟ್ಟೆ, ಕಲ್ಲು ಹೊಡೆಯುತ್ತಿದ್ದ ಸೀಕಂಚಿ ಮರ, ಗೆಣಸು ಕದಿಯುತ್ತಿದ್ದ ತರಕಾರಿ ಅಂಗಡಿ ಎಲ್ಲವೂ ಅವಾರ್ಡ್ ಪಿಚ್ಚರಿನ ದೃಶ್ಯಗಳಂತೆ ಬೋರು ಹುಟ್ಟಿಸುತ್ತ ಹಾದು ಹೋದವು. ಆ ಹೊತ್ತಿಗೆ ಗದ್ದೆ ಸಾಲು ಮುಗಿದು ಪೇಟೆ ಶುರುವಾಯ್ತು.

‘ಇಲ್ಲೊಂದು ಕೇಬಲ್ ಫ್ಯಾಕ್ಟರಿ ಮಾಡ್ಬೇಕು ಅಂದ್ಕೊಂಡಿದ್ದೆ…’ ಅಪ್ಪಿ ಏನೇನೋ ಹೇಳಿದ. ಅವನ ದನಿಯಲ್ಲಿ ಹತಾಶೆ ಎದ್ದುಕಾಣುತ್ತಿತ್ತು. ‘ಎಲ್ರೂ ಊರು ಬಿಟ್ಟು ಹೋದ್ರೆ ಇಲ್ಲಿರೋರು ಯಾರು? ಹೇಗೋ ಅಡ್ಜಸ್ಟ್ ಮಾಡ್ಕೋಬೇಕು…’ ಅಂತ ಪಾಠ ಹೇಳಿಕೊಂಡ. ಆದರೆ ಅದನ್ನೆಲ್ಲ ಅಂವ ಯಾರಿಗೆ ಹೇಳ್ತಿದಾನೆ? ಯಾಕೆ ಹೇಳ್ತಿದಾನೆ? ತೋಚದೆ ಪೆದ್ದುಪೆದ್ದಾಗಿ ನಕ್ಕೆ.

ಅಗೋ, ಅಲ್ಲಿ ಬೆಂಗಳೂರಿನ ಹಾಗೇ ದೊಡ್ಡ ದೊಡ್ಡ ವಿನೈಲ್ ಪೋಸ್ಟರುಗಳು ಕಟ್ಟಿಕೊಂದಿದ್ದವು. ಮಹಾಶಯರೊಬ್ಬರು ಎರಡೂ ಕೈ ಮುಗಿದು ನಗುವ ಪೋಸು ಕೊಟ್ಟಿದ್ದರು. ಉಳಿದೊಂದಷ್ಟು ಜನ ‘ತಪ್ಪಿಸಿಕೊಂಡಿದ್ದಾರೆ’ ರೀತಿಯಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋದಲ್ಲಿ ಹುದುಗಿಕೊಂಡಿದ್ದರು. ಊರ ಜನರ ಮುಖದಲ್ಲಿ ಕಳೆ ಇರುವಂತೇನೂ ಕಾಣಲಿಲ್ಲ. ಆಟೋ ಸ್ಟ್ಯಾಂಡಿನ ಉದ್ದಕ್ಕೂ ಆಟೋಗಳು ತೂಕಡಿಸ್ತಿದ್ದವು. ಹುಡುಗರು ಅದರೊಳಗೆ ಡೆಕ್ ಹಾಕಿಕೊಂಡು ಹಾಡು ಕೇಳುತ್ತ ಮಲಗಿದ್ದರು. ಯಾಕೋ ಇಡಿಯ ಊರಿಗೂರೇ ನಿಟ್ಟುಸಿರು ಬಿಟ್ಟುಕೊಂಡು ಓಡಾಡುತ್ತಿರುವ ಹಾಗೆ ಅನಿಸಹತ್ತಿತು.

ಅಪ್ಪಿಯ ಕಣ್ಣುಗಳಲ್ಲಿ ಹಣಕಿದೆ. ಒಳಗೆಲ್ಲ ನೀರು ತುಂಬಿಕೊಂಡು ಮೇಲೆ ಮೇಲೆ ಒಣಗಿ ಬರಡಾಗಿಹೋಗಿದ್ದ. ಪೇಟೆಯ ಕೆಲಸಗಳೆಲ್ಲ ಮುಗಿಸಿಕೊಂಡು ವಾಪಸು ಹೊರಟ ಇಬ್ಬರಲ್ಲೂ ನಡೆಯುವ ಹುಮ್ಮಸ್ಸಾಗಲೀ, ಕಾಲನ ನಡೆಯನ್ನ ಅರಗಿಸಿಕೊಳ್ಳುವ ತಾಖತ್ತಾಗಲೀ ಉಳಿದಿರಲಿಲ್ಲ.

ಆಟೋ ಹತ್ತಿ ಕುಳಿತವರ ಮುಖ ನೋಡಿಯೇ ಆಟೋಹುಡುಗನಿಗೆ ನಮ್ಮ ಮನೆ ವಿಳಾಸ ಗೊತ್ತಾಗಿ ಹೋಯ್ತು. ‘ಅರಾಮ್ ಅದೀರೇನ್ರೀ ಭಟ್ರೇ?’ ಅನ್ನುತ್ತ ರೊಂಯ್ಯನೆ ಹಾರಿ ನಮ್ಮನ್ನು ಮನೆ ಮುಟ್ಟಿಸಿದ ಸುಬ್ಬು, ಚಿಕ್ಕವರಿರುವಾಗ ನಮ್ಮ ಜತೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಸ್ ಆಟ ಆಡುತ್ತಿದ್ದ.