ಮಾತಾಡೆನೆಂಬ ಮುನಿಸು ಮಂದಿಗೆ…

December 8, 2009 at 7:45 am | In ಕವಿತೆಯಂತೆ | Leave a Comment
Tags:

ನನ್ನ ಮನೆಯ ಗೋಡೆಗಳಿಗೆ
ಕಿವಿಗಳನಿರಿಸಿಲ್ಲ
ಮಾತಾಡಲಿ ಯಾರ ಕೂಡ?

ಮಾತೆಂದರೆ ವಾಕರಿಕೆ ಗೆಳೆಯಾ
ಮುತ್ತೆಂದು ಅರಸುತಿದ್ದ
ನೀ ಜತೆಗಿಲ್ಲದೆ…

ಕಾದು ಕಾಯಿಸುವ
ಜೀವವಿರಲುಕ್ಕಿ
ಸುರಿಯುತಿತ್ತು ಮಾತು,
ಸತ್ತ ದಿನಗಳ
ಹೆಣದ ತಂಪಿಗೆ
ಸೆಟೆದು ಬಿದ್ದಿವೆ ಪದಗಳು.

ಮಾತಾಡೆನೆಂಬ ಮುನಿಸು ಮಂದಿಗೆ,
ದನಿಯನೆಲ್ಲಿಂದ
ಬಗೆದು ತರಲಿ ನಾನು?

ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ….

December 3, 2009 at 3:30 pm | In ನಿಮ್ಮೊಂದಿಗೆ | 13 Comments

ಅಮ್ಮ ಕಾಲ್ ಮಾಡಿದ್ದಳು.
“ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು.
ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ…

“ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ. ಸಾಯ್ತಾವೆ, ಕೆಲಸವಿಲ್ದ ಈ ಹುಡುಗ್ರು”
“ಎಂತ ಸರಿ ಹೇಳ್ತೀಯೋ ಇಲ್ಲೋ? ಲವ್ ಮ್ಯಾರೇಜ್ ಏನು ಮೊದಲ್ನೆ ಸರ್ತಿ ಆಗ್ತಿದ್ಯ ಊರಲ್ಲಿ?”
“ಮಾರಾಯ್ತಿ, ಎಂಥದೋ ಲವ್ ಜಿಹಾದ್ ಅಂತೆ. ನಿನ್ನೆ ಭಜರಂಗ ದಳದವ್ರು ಭಾಷಣ ಮಾಡಿದ್ರು. ಕರ್ಮ. ಐವತ್ ವರ್ಷದಿಂದ ಇಲ್ಲಿ ಮುಸ್ಲಿಮ್ ಹುಡ್ಗ, ಹಿಂದೂ ಹುಡ್ಗಿ ಮದ್ವೆ ನಡೀತ್ಲೇ ಇದೆ. ಇವತ್ತಿಗೂ ಭಾರತೀಪುರ ಬ್ರಾಹ್ಮಣರ ಹುಡುಗಿ ಮುಸ್ಲಿಮ್ ಮದ್ವೆಯಾಗಿದ್ದೋಳು ಘೋಷ ಹಾಕ್ಕಂಡ್ ಅರಾಮಾಗೇ ಜೀವ್ನ ಮಾಡಿದಾಳೆ. ಅಲ್ಲ, ಇದೆಲ್ಲ ಎಂತ ಅಂತ?”
“ಅಯ್ಯೋ ಭಗವಂತ! ಹುಡ್ಗ ಯಾರು?”
“ಅಯ್ಯೋ ನಾ ನೋಡಿದೀನಿ ಕಣೇ. ಅವನ ಅಪ್ಪ ಅಮ್ಮ ಹುಡ್ಗಿ ಮನೇಗೆ ಮೊದ್ಲೇ ವಾರ್ನ್ ಮಾಡಿದ್ರಂತೆ. ನಿಮ್ ಹುಡ್ಗಿ, ನಮ್ ಹುಡ್ಗ ಸಿಕ್ಕಾಪಟ್ಟೆ ಓಡಾಡ್ತಿದಾರೆ, ಬೇಗ ಮದ್ವೆ ಮಾಡ್ಕೊಳಿ ನಿಮ್ ಕಡೆಗೆ ಕೊಟ್ಟು. ನಾವೂ ಹುಡ್ಗನ್ನ ಹೊರಗೆಲ್ಲಾರೂ ಕಳಿಸ್ತೀವಿ ಅಂತ. ಇವ್ರು ಕೇರ್ ಲೆಸ್ಸಾಗಿದ್ರೋ ಎಂಥದೋ, ಅವ್ರಿಬ್ರೂ ಓಡೋದ್ರು. ಅಲ್ಲೆ, ಯಾವನಾದ್ರೂ ಜಿಹಾದ್ ಮಾಡೋನು ಮೊದ್ಲೇ ಹಾಗೆ ಇನ್‌ಫರ್ಮ್ ಮಾಡ್ತಾನಾ? ಬೆಂಗ್ಳೂರಲ್ಲಿ ಪೋಲಿಸ್ರಿಗೆ ಶರಣಾಗಿ ಪ್ರೊಟೆಕ್ಷನ್ ಕೇಳ್ತಾನಾ? ಒಟ್ನಲ್ಲಿ, ಬೆಂಕಿ ಹಚ್ಚೋ ಕೆಲಸ ಇದು ಅಷ್ಟೇಯ!”
“…………..”
“ ಅವ್ರಿಬ್ರೂ ಪ್ರೀತ್ಸಿ ಮದ್ವೆ ಆಗ್ತಿದಾರಪ್ಪ. ಅವ್ರ ಪಾಡಿಗೆ ಬಿಡಬಾರ್ದ? ಅವಳನ್ನ ವಾಪಸ್ ಕರ್ಕೊಂಡ್ ಬರ್ತಾರಂತೆ. ಆಮೇಲೆ ಇವ್ರಲ್ಲಿ ಯಾರಾದ್ರೂ ಮದ್ವೆ ಮಾಡ್ಕೊಂಡು ಅವ್ಳನ್ನ ಖುಷಿಯಾಗಿ ಬಾಳಿಸೋ ತಾಕತ್ತಿದೆಯಾ? ಪ್ರೀತಿಸ್ಕೊಂಡಿದಾರೆ, ಮದ್ವೆ ಆಗ್ತವೆ. ಕಷ್ಟ ಪಟ್ರೆ ಅವುಗಳ ಹಣೇಬರ. ಭಾರಿ ಈ ಜಾತಿ ಜಾತಿ ಒಳಗೆ ಮದ್ವೆ ಆದ ಹೆಣ್ಮಕ್ಕಳ ಸುಖ ಸೂರೆ ಹೋಗ್ತಿರೋದು ಈಗ”
“……………..”
“ಎಂತ ಲವ್ ಜಿಹಾದು? ಭಾಳಾ ಹಿಂದೆ ಆಗೊಂದ್ಸಾರ್ತಿ ತಾವು ಶ್ರೀಮಂತರು ಅನ್ನೋ ಕಾರಣಕ್ಕೆ ಮುಸ್ಲಿಮ್ ಜನ ತಮ್ ಹುಡ್ಗೀನ ಕೊಡದೆ ಆ ಹುಡುಗನ ಕಥೆ ಮುಗ್ಸಿದ್ರು ಬಿಟ್ರೆ ಬೇರೆ ಎಂತದಾಗಿಲ್ಲ ಈ ಊರಲ್ಲಿ. ಹಂಗೆ ಶ್ರೀಮಂತ್ರು ಬಡವ್ರು ಈ ವಿಷಯಕ್ಕೆ ಹೊಡೆದಾಡೋದು ಇದ್ದಿದ್ದೇ. ಜಾತಿ ಏನು ಮಾಡತ್ತಲ್ಲಿ? ಹೊಸಹೊಸತೆಲ್ಲ ಶುರುವಾಗ್ತಿದೆ ನೊಡು! ಸರ್ಯಾಗಿ ಕಾಪಾಡ್ಕೊಂಡೋಗೋ ಸರ್ಕಾರ ತರ್ಬೇಕು. ಅದೂ ಕರ್ಮವೇ. ಕಾಂಗ್ರೆಸ್ಸು ಯಾರ್ನೂ ಗಲ್ಲಿಗೇ ಹಾಕಲ್ಲ ಅನ್ನತ್ತೆ. ಬೀಜೇಪಿ ಬಂದ್ರೆ ಮತ್ತೊಂಥರ ಕೇಡು. ಬಿಟ್ರೆ ಈ ನಕ್ಸಲೈಟ್ರು ಕಾಟ. ಯಾರ್ನ ಅನುಮಾನಿಸ್ಬೇಕು ಅವ್ರನ್ನ ಅನುಮಾನಿಸಲ್ಲ. ಎಲ್ಲಿ ಬೇಕೋ ಅಲ್ಲಿ ರಕ್ಷಣೆ ಕೊಡಲ್ಲ. ಸಾವು ಮಾರಯ್ತಿ. ಇನ್ನು ನಿಮ್ ಮಕ್ಳು ಮರಿ ಕಾಲಕ್ಕೆ ಏನು ಗತೀನೋ?”
“ಹೋ… ತಡಿ ತಡಿ… ನೀ ಹೇಳಿದ್ದೇನಾದ್ರೂ ಮರ್ತೋದ್ರೆ ಕಷ್ಟ. ಬ್ಲಾಗಿಗೆ ಹಾಕಿ ಬರ್ತೀನಿ”
“ಸರಿ. ನಾನು ನ್ಯೂಸಲ್ಲಿ ಏನೇನು ತೋರಿಸ್ತಾರೆ ನೋಡಿ ಹೇಳ್ತೀನಿ.”
~

ಇದು, ಈಗ ಅಂದರೆ ಎಂಟು ಗಂಟೆ ಸುಮಾರಿಗೆ ನಡೆದ ಸಂಭಾಷಣೆ.
ಅಮ್ಮ ಅರ್ಚಕರ ಮನೆಯ ಹೆಣ್ಣುಮಗಳು. ಓದಿದ್ದು ಎಸ್ಸೆಸ್ಸೆಲ್ಸಿ. ಈಗ ವಯಸ್ಸು ಐವತ್ತು ದಾಟುತ್ತಿದೆ. ಮಡಿ ಮೈಲಿಗೆ ಇಲ್ದಿದ್ರೂ ದೇವರು- ದಿಂಡರು ಮಾಡುವಾಕೆ.
~
ನಮಗೆ ಮತ್ತೊಬ್ಬ ಹಿಟ್ಲರ್ ಬೇಡ. ನಮ್ಮಲ್ಲಿ ಸತ್ವವಿದ್ದರೆ ಉಳೀತೇವೆ. ಇಲ್ಲವಾದರೆ ಇಲ್ಲವಷ್ಟೆ. ನಮಗೆ ತಾಲಿಬಾನಿನಂಥ ವಿಕೃತ ಜನರೂ ಬೇಡ. ನಮಗೆ ನಮ್ಮ ಸಂಸ್ಕೃತಿ ಉಳಿಸ್ಕೊಳೋಕೆ ಗೊತ್ತು.
ಈ ಗಂಡಸರು ಧರ್ಮ ರಕ್ಷಣೆಯ ಭಾರ ಹೆಗಲ ಮೇಲೆ ಹೊತ್ತಂತೆ ಯಾಕಾಡ್ತಾರೋ? ತಾವು ಕೂಗುವುದರಿಂದ ಕಿರುಚುವುದರಿಂದ ಧರ್ಮ ಉಳೀತಿದೆ ಅನ್ನುವ ಭ್ರಾಂತಿ ಅವರು ಬಿಡಲಿ ಮೊದಲು. ಯಾಕೆ ಇವರಿಗೆ ಬೇರೆ ಜಾತಿಯ ಹುಡುಗನ್ನ ಮದುವೆಯಾಗುವ ಹುಡುಗೀರೇ ಕಣ್ಣಿಗೆ ಬೀಳೋದು? ಹೋ… ಹುಡುಗ ಹಾಗೆ ಮದ್ವೆಯಾದ್ರೆ ತಮ್ಮ ಜಾತಿಗೊಂದು ಸಂಖ್ಯೆ ಸೇರಿಕೊಳ್ಳತ್ತೆ ಅಂತಲಾ? ಥೂ! ಕೆಟ್ಟ ಲೆಕ್ಕಾಚಾರ ಅಲ್ವ? ಇದು ಹಿಂದೂ ಗಂಡಸರಿಗೆ ಮಾತ್ರ ಹೇಳ್ತಿರೋದಲ್ಲ. ಎಲ್ಲ ಜಾತಿಯಲ್ಲೂ ಇದು ಹೀಗೇ ಆಗತ್ತೆ. ಮುಸ್ಲಿಮ್, ಕ್ರಿಶ್ಚಿಯನ್ ಹೊರತೇನಲ್ಲ.
ಹ್…
ಇಷ್ಟು ಹೇಳಿದ ಮೇಲೆ ಯಾಕೋ ಏನೂ ಹೇಳಲು ಮನಸಾಗ್ತಿಲ್ಲ. ಇದನ್ನ ಓದಿಕೊಂಡು ನಮನಮಗನಿಸಿದ್ದನ್ನ……

ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…

November 27, 2009 at 6:35 pm | In ಕವಿತೆಯಂತೆ | 8 Comments
Tags: ,

ಒಮ್ಮೊಮ್ಮೆ ಅನಿಸುತ್ತದೆ
ಸಾವನ್ನ ತಟ್ಟೆಯೊಳಗಿಟ್ಟು
ಚೂರು ಚೂರೆ ಹರಿದು ತಿನ್ನಬೇಕು
ನನಗೆ ಸಾವಿನ ಹಸಿವು…

ಅನಿಸುತ್ತದೆ
ಸಾವನ್ನ ತಬ್ಬಿ ಚುಂಬಿಸಬೇಕು
ತೋಳಲ್ಲಿ ಬಳಸಿ
ಇಂಚಿಂಚು ಕರಗುತ್ತ ಕಳೆದುಹೋಗಬೇಕು

ಒಲ್ಲದ ಮದುವೆಯಂತೆ ಇದು
ಕಟ್ಟಿಕೊಂಡ ಬದುಕು
ಅನಿಸುತ್ತದೆ,
ಕಳ್ಳಾಟವಾಡುತ್ತ
ಸಾವಿನೊಟ್ಟಿಗೆ
ಹಾದರಕ್ಕಿಳಿಯಬೇಕು…

ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.

ಜೋಗತಿ ಹಾಡು

November 23, 2009 at 3:47 pm | In ಕವಿತೆಯಂತೆ | 6 Comments
Tags: ,

ಜೋಗತಿ ಹಾಗೆ ಅಲೆಯುತ್ತೇನೆ.
ವಿಳಾಸ ಕೇಳುವಿರಾದರೆ,
ಮನೆಮನೆಯ ಹೆಣ್ಣುಗಳ ಕಣ್ಣಲ್ಲಿ ಹಣಕಿ.
ಅವರೆದೆಯ ಗುಟ್ಟು ನಾನಾಗಿದ್ದೇನೆ
ಬಯಕೆ ಕಟ್ಟಿಕೊಂಡ ಬಸವಿ-
ಬೀದಿಗಿಳಿದಿದೇನೆ
ರೆಕ್ಕೆ ತೊಟ್ಟಿದೇನೆ
ಹಾರುಹಾದಿಯಲ್ಲೆಲ್ಲೂ ಹೆಜ್ಜೆ ಮೂಡದಂತೆ
ಎಚ್ಚರವಿಟ್ಟಿದೇನೆ.

ಅವರೆಲ್ಲರ-
ಒಳಬೇನೆಯ ಗರತಿಯರೆಲ್ಲರ
ಬಯಕೆಯ ಬೀಜಗಳನ್ನ ಹೊತ್ತಿಕೊಂಡಿದೇನೆ
ಕಳ್ಳಕಾಡಿನಲ್ಲಿ ಉತ್ತು
ಸುಖದುಸಿರು ಬೆಳೆಯಬೇಕಿದೆ.

ಪೇಟೆಯಲ್ಲಿ ಗುಲ್ಲು!
ನನ್ನ ನಾಚಿಗೆಟ್ಟ ಅಪರಾಧಕ್ಕೆ
ಸಜೆ ಕೊಡುತ್ತಿದ್ದಾರೆ,
ಯಾವತ್ತೂ ಕನಸು ಕಾಣದಂತೆ
ಕಣ್ಣು ಕೀಳುವುದಾಗಿ ಹೇಳುತ್ತಿದ್ದಾರೆ!!

ಕಿತ್ತ ಕಣ್ಣುಗಳ ಕವಡೆಯಾಗಿಸಿ
ಕಣಿ ಹೇಳುತ್ತೇನೆ,
ಎದೆಯ ಕದವಿಕ್ಕಿ ಬಿಕ್ಕಿದ
ಹಾಡುಗಳಿಗೆ
ದನಿಯಾಗಿ ಸುರಿಯುತ್ತೇನೆ…
~

ಇದು ನಮ್ಮ ಅಳಿಲುಸೇವೆ, ನೀವೂ ಕೈಜೋಡಿಸ್ತೀರಾ?

November 18, 2009 at 4:02 am | In ನಿಮ್ಮೊಂದಿಗೆ | Leave a Comment
Tags: ,

ಹೌದು.  ತಮ್ಮೆಲ್ಲ ಸ್ವಾರ್ಥ, ಸ್ವಂತದ ತಲೆಬಿಸಿಗಳ ನಡುವೆಯೂ ನೈಸರ್ಗಿಕ ದುರಂತ, ಯುದ್ಧವೇ ಮೊದಲದ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುವ ಮೂಲಕ ನಮ್ಮ ಜನ ತಮ್ಮ ನೈಜ ಸಹೃದಯತೆಯನ್ನು ತೋರಿಸಿಕೊಟ್ಟಿದಾರೆ. ಸುನಾಮಿ ಬಂದೆರಗಿದಾಗ ಇತರ ದೇಶಗಲ ಸಹಾಯವನ್ನು ತಿರಸ್ಕರಿಸುವಷ್ಟು ಮಟ್ಟಿಗೆ ನಮ್ಮವರ ಸಹಾಯ ಕಾಣಿಕಎಗಳು ಹರಿದು ಬಂದಿತ್ತು, ಥೇಟ್ ಸುನಾಮಿಯ ಹಾಗೇ! ಜೊತೆಗೆ, ಅದನೆಲ್ಲ ಹಂಚುವ ಕೈಗಳು ಶುದ್ಧವಾಗಿರಬೇಕೆನ್ನುವುದಷ್ಟೆ ಗಮನಿಸಬೇಕಾದ ಸಂಗತಿ. ಅಂತಹ ಶುದ್ಧ ಹಸ್ತರಿಗೂ ಕಡಿಮೆಯೇನಿಲ್ಲ. ನಾವು ಅಷ್ಟೆಲ್ಲ ನಿರಾಶಾವಾದಿಗಳಾಗಬೇಕಿಲ್ಲ ಅಲ್ಲವೆ?

ಇರಲಿ. ಈಗ ಹೇಳಹೊರಟಿರೋದು ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆ ದುರಂತದ ಬಗ್ಗೆ. ಅದರ ಜತೆಗೇ ಬೆಸೆದುಕೊಂಡ ರಾಜಕೀಯ ದುರಂತ ನಾಟಕದ ನಡುವೆಯೂ ಪರಿಹಾರ ಕಾರ್ಯ ನಡೇಯುತ್ತಿದೆ ಅನ್ನುವುದೇ ಸಮಾಧಾನ. ಇದಕ್ಕೆ ನಾಡಿನ ಹಲವು ಸರ್ಕಾರೇತರ ಸಂಘ ಸಂಸ್ಥೆಗಳ, ವ್ಯಕ್ತಿಗಳ ಕೊಡುಗೆ ಗಮನೀಯ.

ಈ ನಡುವೆ ನಮ್ಮ ಜಾಗೋಭಾರತ್ ತಂಡ ಕೂಡ ತನ್ನ ಅಳಿಲು ಸೇವೆಗೆ ಮುಂದಾಗಿದೆ. ಈ ಬಗ್ಗೆ ತಂಡದ ಸಾರಥಿ, ನನ್ನಣ್ಣ ಚಕ್ರವರ್ತಿ ನಿಮ್ಮೆಲ್ಲರನ್ನು ಕೈಜೋಡಿಸುವಂತೆ ಕೋರುತ್ತಿದ್ದಾನೆ…

ಜಾಗೋ ಭಾರತ್  ಹಾಗೂ ವಿವೇಕ ಹಂಸದ ಮನವಿ…

ಉತ್ತರ ಕರ್ನಾಟಕದ ಬಹುಭಾಗ ನದಿಯಲ್ಲಿ ನೆಂದು, ನೊಂದು ತಿಂಗಳು ಕಳೆದಿದೆ. ಆದರೆ ಅಲ್ಲಿನ ಜನತೆಯ ನೋವು, ಬದುಕಿನ ಅನಿಶ್ಚಿತತೆ ಇನ್ನೂ ಹಾಗೇ ಇದೆ. ಮಕ್ಕಳು ಶಾಲೆಗೆ ಹೋಗಲಾಗದೆ, ಹೋಗಲು ಶಾಲೆಯೇ ಇಲ್ಲದೆ, ಇದ್ದರೂ ಮಕ್ಕಳ ಪುಸ್ತಕ- ಪಾಟಿ ಚೀಲಗಳು ಉಳಿದಿರದೆ ಎಲ್ಲ ಬಗೆಯ ದುರವಸ್ಥೆಗಳೂ ಉಂಟಾಗಿರುವುದು ನಿಮಗೂ ಗೊತ್ತಿದೆ.

ಈಗಾಗಲೇ ನಾಡಿನ ಜನತೆ ಈ ದುರಂತಕ್ಕೆ ವ್ಯಾಪಕವಾಗಿ ಸ್ಪಂದಿಸಿ ಉದಾರ ಮನಸಿನ ದೇಣಿಗೆ ನೀಡುತ್ತ ಸಹಾಯ ಹಸ್ತ ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಾರ್ಯಕ್ರಮಗಳನ್ನು ನೀಡುತ್ತ ನಿಧಿ ಸಂಗ್ರಹ ಮಾಡಿ ಸಂತ್ರಸ್ತರಿಗೆ ಒದಗಿಸುವ ಸತ್ಕಾರ್ಯದಲ್ಲಿ ನಿರತವಾಗಿವೆ.

ಜಾಗೋ ಭಾರತ್ ಕೂಡ ಇಂತಹ ಒಂದು ಕಾರ್ಯಕ್ರಮದ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ರಾಮಕೃಷ್ಣಾಶ್ರಮದ ‘ವಿವೇಕ ಹಂಸ’ ಪತ್ರಿಕಾ ಬಳಗ ಸಹಕಾರ ನೀಡಲು ಮುಂದಾಯಿತು. ಅದರಂತೆ ಈಗ ದಿನಾಂಕ 22.11.2009ರ ಸಂಜೆ 5:30 ರಿಂದ 9:00 ರವರೆಗೆ, ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಜಾಗೋ ಭಾರತ್ ರಾಷ್ಟ್ರ ಕಥನ- ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದಕ್ಕೆ ರೂ.10ರ ಟಿಕೆಟ್ ಇಟ್ಟಿದ್ದು, ಆಸಕ್ತರು ಅದನ್ನು ಕೊಳ್ಳಬಹುದು. ಇಲ್ಲವಾದಲ್ಲಿ ಉಚಿತ ಪ್ರವೇಶವಂತೂ ಇದ್ದೇ ಇದೆ. ನೀವು ನೀಡುವ ಧನ ಸಹಾಯ ಪೂರ್ತಿಯಾಗಿ ಬೆಳಗಾವಿಯ ರಾಮಕೃಷ್ಣ ಮಿಷನ್ ಆಶ್ರಮ ನಡೆಸುತ್ತಿರುವ ಪರಿಹಾರಕಾರ್ಯಕ್ಕೆ ಸೇರುತ್ತದೆ. ಬನ್ನಿ, ನಮ್ಮ ಈ ಅಳಿಲು ಸೇವೆಯಲ್ಲಿ ಕೈಜೋಡಿಸಿ….

~ ಚಕ್ರವರ್ತಿ ಸೂಲಿಬೆಲೆ ಮತ್ತು ಜಾಗೋ ಭಾರತ್ ತಂಡ

ಸೂ: ಕಾರ್ಯಕ್ರಮ ನಡೆಯುವ ಸ್ಥಳದ ವಿಳಾಸ: ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರ; ಡಬಲ್ ರೋಡ್, BEML ಕಾಂಪ್ಲೆಕ್ಸ್, BEML ಲೇ ಔಟ್, 3ನೇ ಹಂತ, ರಾಜರಾಜೇಶ್ವರಿ ನಗರ, ಬೆಂಗಳೂರು.

ಶೋಭಾ ತಲೆದಂಡ- ಎಲ್ಲ ಮುಗಿದ ಮೇಲೆ, ನನ್ನ ನಾಲ್ಕು ಮಾತು…

November 12, 2009 at 5:48 pm | In ನಿಮ್ಮೊಂದಿಗೆ | 7 Comments
Tags:

ರಾಜಕಾರಣದ ಬಗ್ಗೆ ಯಾವತ್ತೂ ಬರೆಯಬಾರದು ಅಂತ ಇದ್ದೆ. ಸುಮ್ಮನಿರಲಾಗಲಿಲ್ಲ. ಬರೆದಿದ್ದನ್ನ ಇಲ್ಲಿ ಪೋಸ್ಟ್ ಮಾಡಬಾರದು ಅಂತಲೂ ಇದ್ದೆ. ಆಗಲೂ ಸುಮ್ಮನಿರಲಾಗಲಿಲ್ಲ. ಶೋಭಾ ತಲೆದಂಡ ಪ್ರಹಸನವನ್ನ ಇಟ್ಟುಕೊಂಡು ನಾಲ್ಕು ಮಾತಾಡುವ ಅನಿಸಿತು. ಗೊತ್ತು, ಇದರಿಂದೇನೂ ಉಪಯೋಗವಿಲ್ಲ!

ಸಿಂಹಾಸನದ ಉಳಿಕೆಗೆ ಪ್ರಾಣಿ, ಪಕ್ಷಿ, ಚಿಕ್ಕ ಮಕ್ಕಳನ್ನು ಬಲಿಕೊಡುತ್ತಿದ್ದುದು ವಾಡಿಕೆ. ಅದೇ ಯಾದಿಯಲ್ಲಿ ಹೆಣ್ಣನ್ನೂ ಸೇರಿಸಿರೋದ್ರಿಂದಲೋ ಏನೋ, ಯಡ್ಯೂರಪ್ಪರ ಪಟ್ಟ ಉಳಿಸಲಿಕ್ಕೆ ಶೋಭಾ ಕರಂದ್ಲಾಜೆಯ ಬಲಿ ನೀಡಿಕೆ ಸಾಂಗವಾಗಿ ನೆರವೇರಿದೆ. ಶುರುವಿನಿಂದಲೂ ‘ಶೋಭಾ ರಾಜೀನಾಮೆ ನೀಡಬೇಕು’ ಎಂದು ಹಾಡಿಕೊಳ್ತಾ ಬಂದಿದ್ದ ಗಣಿಧಣಿ ಅಂಡ್ ಕೋ ಬಳಿ ಸೂಕ್ತ ಕಾರಣಗಳೇ ಇಲ್ಲ. ಈ ವರೆಗೆ ಅಂಥದೊಂದನ್ನೂ ಅವರು ಜನತೆಯ ಎದುರಿಟ್ಟಿಲ್ಲ. ಹೆಣ್ಣೊಬ್ಬಳು (ಅವರ ಪಾಳಯದ ಶಾಂತಾರಂತೆ ಅಲ್ಲದೆ) ಸಕ್ರಿಯ ರಾಜಕಾರಣದಲ್ಲಿ ತೊಡಗಿರುವುದು, ಅಧಿಕಾರದ ಸೂತ್ರ ಹಿಡಿದಿರುವುದು ಅವರ ಪೌರುಷಕ್ಕೆ ಧಕ್ಕೆ ತಂದಿರಬೇಕು. ಅದರ ಹೊರತಾಗಿ ಅವರು ಹೀಗೆ ಹಠ ಹೂಡಿದ್ದಕ್ಕೆ ಬೇರೇನು ಹಿನ್ನೆಲೆಯಿದ್ದೀತು? ಅವರ ಹಾಡಿಗೆ ತಾಳ ಹಾಕಿ, ಚಟುವಟಿಕೆಯ ಮಹಿಳಾ ರಾಜಕಾರಣಿಯೊಬ್ಬಳ ಭವಿಷ್ಯವನ್ನು ಹೊಸಕಿ ಹಾಕಿದ ಇಡಿಯ ಪಕ್ಷದ ವ್ಯವಸ್ಥೆ ಹಾಗೂ ಚಿಂತನೆಗಳ ವಿರುದ್ಧವೂ ನನ್ನ ಧಿಕ್ಕಾರವಿದೆ.

ವರ್ಷಗಳ ಹಿಂದಿನ ರೇಣುಕಾಚಾರ್ಯ ಹಗರಣ ನೆನಪಿಸಿಕೊಳ್ಳಿ. ಹಾದಿಬೀದಿ ರಂಪವಾದಾಗಲೂ ಆ ಮನುಷ್ಯನನ್ನು ಬಿಜೆಪಿಯನ್ನರು ಸಮರ್ಥಿಸಿಕೊಂಡಿದ್ದರು  ಹಾಗೂ ಸಂಘ ಪರಿವಾರ ಕೂಡ ಆತನ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿರಲಿಲ್ಲ . ಅದೇ ಇತ್ತೀಚೆಗೆ ಶ್ರುತಿಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಘಟನೆಯನ್ನೇ ಮುಂದು ಮಾಡಿಕೊಂಡು ‘ಸಂಸ್ಕೃತಿ ಬಾಹಿರ ಸಂಗತಿ’  ಎನ್ನುತ್ತ ರಾಜೀನಾಮೆ ಕೇಳಿದ್ದರು, ಅದೂ  ವಿವೇಚನೆಗೆ ಒಂದೆರಡು ದಿನಗಳ ಕಾಲಾವಕಾಶವನ್ನೂ ತೆಗೆದುಕೊಳ್ಳದೆ!  ಮತ್ತೊಂದು ಗಮನೀಯ ಸಂಗತಿ ಎಂದರೆ, ಕಾಂಗ್ರೆಸ್ಸನ್ನು ಟೀಕಿಸುವಾಗ ಬಹಳಷ್ಟು ಬೀಜೇಪಿಯನ್ನರು ‘ವಿದೇಶೀ ಮಹಿಳೆಯ’ ಅದರಲ್ಲೂ ‘ಮಹಿಳೆಯ’ ಕೈಗೊಂಬೆ ಎಂದೆನ್ನುವುದು. ನನ್ನ ಪ್ರಶ್ನೆ, ರಾಜಕಾರಣಿಗಳಂತಹ ಜವಾಬ್ದಾರಿಯುತ ಮನುಷ್ಯರು ಯಾವುದರ ಕೈಗೊಂಬೆಗಳೂ ಆಗಬಾರದು. ಆಗುವುದೇ ಆದರೆ ಹೆಣ್ಣಿನದಾದರೇನು? ಗಂಡಿನದಾದರೇನು? ತನ್ನ ಇಂತಹ ನಡವಳಿಕೆಗಳಿಂದಲೇ ಬಿಜೆಪಿ, ‘ಬಲಪಂಥ’ಕ್ಕೂ ‘ಪುರುಷ ದಬ್ಬಾಳಿಕೆ’ಯ ಮನಸ್ಥಿತಿಗೂ ಇರುವ ಸಂಬಂಧವನ್ನು ಸ್ಪಷ್ಟಪಡಿಸುತ್ತ ನಡೆದಿದೆ. 

ಶೋಭಾ ವೈಯಕ್ತಿಕ ಜೀವನ ಏನೇ ಇರಬಹುದು. ಮತ್ತೂ ನೇರವಾಗಿ ಹೇಳಬೇಕೆಂದರೆ, ಯಡ್ಯೂರಪ್ಪನವರ ಜತೆ ಆಕೆಯ ಸಂಬಂಧಗಳು ಏನೇ ಇರಬಹುದು. ಬಹುಶಃ ಈ ಒಳಸುಳಿಗಳ ಮುಜುಗರದಿಂದ ಬಚಾವಾಗಲು ಹಾಗೂ ತನ್ನ ‘ಸಂಸ್ಕೃತಿ’ಯ ಹಿರಿಮೆಯನ್ನು ಕಾಯ್ದುಕೊಳ್ಳಲು ಗಣಿಧಣಿಗಳ ಆಟಾಟೋಪವೇ ನೆವವಾಗಿ ಒಟ್ಟಾರೆ ಬಿಜೆಪಿಯ ಸಂಸ್ಕೃತಿ ಕಾವಲು ಪಡೆ ಹಾಗೂ ಸಂಘ ಪರಿವಾರ ಈ ಸಂಚು ನಡೆಸಿ ಶೋಭಾ ತಲೆದಂಡ ಕೇಳಿರಬಹುದೆಂದೇ ನನ್ನ ಗುಮಾನಿ. ಇಷ್ಟಾದರೂ ‘ನಾನು ಸಂಘ ಬೆಳೆಸಿದ ಹೆಣ್ಣುಮಗಳು’ ಎಂದು ಎದೆ ತಟ್ಟಿಕೊಂಡು ಹೇಳುವ ಶೋಭಾ ಬಗ್ಗೆ ಅಚ್ಚರಿಯೆನಿಸುತ್ತದೆ.

ಇತ್ತೀಚೆಗೆ ರಮ್ಯಾ ಪ್ರಕರಣವನ್ನು ಮುಂದಿಟ್ಟುಕೊಂಡು ಪುರುಷ ಪ್ರಧಾನ ವ್ಯವಸ್ಥೆಯ ಧೋರಣೆಯ ಬಗ್ಗೆ ಬರೆದಾಗ ಹೀಗೊಬ್ಬರು ಶೋಭಾ ವಿಷಯವನ್ನು ಎತ್ತಿದ್ದರು. ಬಿಜೆಪಿಯ ಇವತ್ತಿನ ಬಿಕ್ಕಟ್ಟಿಗೆ ಅಂಥದೇ ಮನಸ್ಥಿತಿ ಕಾರಣವೆಂದು ಅಭಿಪ್ರಾಯಪಟ್ಟಿದ್ದರು. ಈ ಮಾತು ಈಗ ಬಹುತೇಕ ಎಲ್ಲರ ಬಾಯಲ್ಲೂ ಕೇಳಿಬರುತ್ತಿದೆ. ಸ್ವಾತಂತ್ರ್ಯ ಬಂದ ೬೦ ವರ್ಷಗಳ ನಂತರವೂ ಹೆಣ್ಣೊಬ್ಬಳು ತನ್ನ ಅರ್ಹತೆ, ಸಾಮರ್ಥ್ಯಗಳಿಂದ ಗಳಿಸಿಕೊಂಡ ಕೀರ್ತಿ ಮತ್ತು ಅಧಿಕಾರಗಳನ್ನು ಪುರುಷನ ಮರ್ಜಿಯಿಲ್ಲದೆ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ದುರಂತವೇ ಸರಿ.

ಸಚಿವ ಸ್ಥಾನ ಸಿಗುವುದೆಂದಾಗ, ‘ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಖಾತೆಯನ್ನೇ ಕೊಡ್ತೀರಿ, ನಂಗೆ ಕೆಪಾಸಿಟಿ ಇದೆ, ಬೇರೆ ಕೊಡೋದಾದ್ರೆ ಕೊಡಿ, ಇಲ್ದಿದ್ರೆ ಬೇಡ’ ಅಂದಿದ್ದ ಶೋಭಾ, ಅಫ್‌ಕೋರ್ಸ್, ರಾಜಕಾರಣಿಯ ಎಲ್ಲ ಬಲಗಳನ್ನೂ ಕೆಲವು ದೌರ್ಬಲ್ಯಗಳನ್ನೂ ಹೊಂದಿರುವ ಹೆಣ್ಣುಮಗಳು. ಆದರೆ, ಕೆಲಸ ಮಾಡುವ ತುಡಿತವಿದ್ದ, ಮಾಡುತ್ತಿದ್ದ ದಿಟ್ಟೆ ಅನ್ನುವುದೂ ನಿಜ. ಇಂಥಾ ಗಟ್ಟಿಗಿತ್ತಿಯನ್ನೇ ಸಲೀಸಾಗಿ ಕಿತ್ತುಹಾಕುವ ಮೂಲಕ ಬಿಜೆಪಿ, ರಾಜಕೀಯವೆಂದರೆ ಹಿಂಜರಿಯುವ ಹೆಣ್ಣುಮಕ್ಕಳ ಆತ್ಮವಿಶ್ವಾಸಕ್ಕೆ ಮತ್ತಷ್ಟು ತಣ್ಣೀರೆರಚಿದೆ. ಆ ಮೂಲಕ, ತನ್ನ ರಾಜಕಾರಣವೇನಿದ್ದರೂ ಪುರುಷರಿಗೆ ಹಾಗೂ ಅವರ ಪ್ರಾಬಲ್ಯವನ್ನೊಪ್ಪುವ ‘ಮಾತೆ’ಯರಿಗೆ ಮಾತ್ರ ಎಂಬ ಸಂದೇಶ ರವಾನಿಸಿದೆ.

SAMSARAದ ಒಳಹೊರಗೆ….

October 30, 2009 at 5:39 pm | In ಸಿನೆಮಾ | 2 Comments
Tags: ,

” What is more important? To satisfy one thousand desires, or to conquer just one?”

“………. There are things we must unlearn inorder to learn………. There are things we must own to renounce them”

 ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.

ಕಾಲಕ್ಕೆ ಸದಾ ಓಡುವ ಕಾಲು.

ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?

ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ-  ” What is more important? To satisfy one thousand desires, or to conquer just one?”

~

samsara-a-review31

ಸನ್ಯಾಸ ವಸ್ತ್ರ ಬಿಚ್ಚಿ, ಬೋಳುತಲೆಯಲ್ಲಿ ಕೂದಲು ಬೆಳೆಸಿ, ಸಂಸಾರಿಗರ ಬಟ್ಟೆ ತೊಟ್ಟು ಹೆಂಡತಿಯನ್ನ ಕಟ್ಟಿಕೊಂಡಿರುತ್ತಾನೆ ಲಾಮಾ ಆಗಿದ್ದ ತಾಶಿ.

ಇದೀಗ ಸಂಸಾರಿಗರ ಬಟ್ಟೆ ಕಳಚುತ್ತಿದಾನೆ, ಅದೇ ಕೊಳದಲ್ಲಿ ಮೀಯುತ್ತಿದಾನೆ. ತಲೆ ಬೋಳಿಸಿಕೊಂಡು ಸನ್ಯಾಸಿಯಾದೆಂದುಕೊಳ್ಳುತಿದಾನೆ. ಅವನು ಮುಖ ನೋಡಿಕೊಳ್ತಿರುವ ಕನ್ನಡಿ ಒಡೆದಿದೆ. ಅದರ ಸಂಕೇತವೇನಿರಬಹುದು? ಹೇಳಿ ವಾಚ್ಯವಾಗಿಸಬಾರದಲ್ಲವ?

~

ನಡು ರಾತ್ರಿಯಲ್ಲಿ ಮಗನ ತಲೆ ನೇವರಿಸಿ, ಮನೆಬಿಟ್ಟು ಸಿದ್ಧಾರ್ಥನಂತೆ ಹೊರಟಿರುತ್ತಾನೆ ತಾಶಿ. ಆದರೆ ಪೇಮಾ ಯಶೋಧರೆಯಂತಲ್ಲ. ಕುದುರೆಯೇರಿ ಅವನೆದುರು ಬಂದೇ ಬರುತ್ತಾಳೆ. ಶತಮಾನಗಳ ಕಾಲದಿಂದ ಎಲ್ಲ ಸ್ತ್ರೀಸಂವೇದನೆಯ ಮನಸುಗಳು ಕೇಳಿದ ‘ಯಶೋಧರೆಯ ಪ್ರಶ್ನೆ’ಗಳನ್ನ ಕೇಳ್ತಾಳೆ.

ಬುದ್ಧನ ಹಾಗಲ್ಲ ತಾಶಿ. (ಬುದ್ಧನಾಗಿ ಅರಗಿಸಿಕೊಳ್ಳುವ ತಾಖತ್ತಿದ್ದರೆ ಮನೆ ಬಿಟ್ಟು ಹೋಗುವ ಎಲ್ಲ ಗಂಡಸರನ್ನೂ ಮಾಫ್ ಮಾಡಿಬಿಡಬಹುದಿತ್ತೇನೋ!?). ಅಂವ ಕಣ್ಣೀರಿಡ್ತಾನೆ. ನಾನೆಲ್ಲಿಗೆ ಸೇರಿದೇನೋ ಅಲ್ಲಿಗೇ ಬರ್ತೇನೆ, ನಿನ್ನ ಜತೆ ಬರ್ತೇನೆ ಅನ್ನುತಾನೆ. ಆದರೆ ಪೇಮಾ?  ‘ಸುಖಪ್ರಯಾಣ’ದ ಗಂಟನ್ನ ಅವನ ಮಡಿಲಿಗೆ ಹಾಕಿ ಹೊರಟುಹೋಗ್ತಾಳೆ.(ನನಗೆ ಸಖತ್ ಖುಷಿಯಾಗಿದ್ದು ಇವಾಗ್ಲೇ! ಅವನ ಬಗ್ಗೆ ಪಾಪ ಅನಿಸ್ತಾದ್ರೂ, ಅದು ಅನುಕಂಪ ಮಾತ್ರ. ಪೇಮಾಳ ಉತ್ತರ ಎಂಥ ದೊಡ್ಡ ಸಂದೇಶ!). ಸರಿ, ಇಂವ ಬಿಕ್ಕಿ ಬಿಕ್ಕಿ ಬಿಕ್ಕಿ…

~

ಸುಮಾರು ವರ್ಷಗಳ ಕೆಳಗೆ… ತಾಶಿ ಮೂರು ವರ್ಷ-ಮೂರು ತಿಂಗಳು-ಮೂರು ವಾರ-ಮೂರು ದಿನ ತಪಸ್ಸು ಮಾಡಿದ ನಂತರ ಬುದ್ಧ ವಿಹಾರಕ್ಕೆ ಒಯ್ಯಲ್ಪಡುತ್ತಿರ್ತಾನಲ್ಲ, ಆಗ ವಿಹಾರದ ಬಳಿಯ ಒಂದು ಬಂಡೆಗಲ್ಲಿನ ಮೇಲೆ ಓದಿರ್ತಾನೆ- “How can one prevent a drop of water from drying up?”

ಈಗ ಉತ್ತರ ಹುಡುಕುವ ಕಾಲ ಸನ್ನಿಹಿತ. ಪ್ರಶ್ನೆಯ ಬೆನ್ನಲ್ಲೆ ಉತ್ತರವಿದೆ. ಅಂದರೆ, ಬಂಡೆಗಲ್ಲಿನ ಹಿಂಭಾಗದಲ್ಲಿ… “By throwing it in to the sea”!

ತಾಶಿಗೆ ಅರ್ಥವಾಯ್ತಾ?

ನಮಗೆ?

ಇಲ್ಲಿ ಎರಡು ಅರ್ಥಗಳಿರಬಹುದು. “ಸಂಸಾರ ಸಾಗರದಲ್ಲಿ ಒಂದಾಗಿಹೋಗುವುದು” ಅಂತಲೂ, “ಪರಮಾರ್ಥದಲ್ಲಿ ಒಂದಾಗುವುದು (ಮೋಕ್ಷ))” ಅಂತಲೂ…

ಕೊನೆಯ ಬಗ್ಗೆ ನಮಗೆ ಸಿಗುವ ಹಿಂಟ್- ಮಾಗಿದ ಎಲೆಗಳ ಮರ (ಇದು ಚಿತ್ರದುದ್ದಕ್ಕೂ ವಿವಿಧ ಋತುಗಳನ್ನು ಸಂಕೇತಿಸುತ್ತ, ಪೂರಕ ಅರ್ಥಗಳನ್ನು ಕೊಡುತ್ತ ನಮಗೆ ಬಹಳ ಕಡೆ ಎದುರಾಗುತ್ತದೆ), ಮತ್ತು ಅವನು ಪ್ರವೇಶಿಸುವ ಮಾಗಿದ ಹಳದಿ ಎಲೆಗಳ ಕಾಡು. ಇದನ್ನು ನಾವು ತಾಶಿಯ ಮಾಗುವಿಕೆಯಾಗೂ ಅರ್ಥೈಸಿಕೊಳ್ಳಬಹುದು ಬೇಕಿದ್ದರೆ.

ಹಾ… ಸಿನೆಮಾದ ಶುರುವಲ್ಲಿ ಹದ್ದೊಂದು ಕುರಿಯ ತಲೆಮೇಲೆ ಕಲ್ಲು ಹೊತ್ತಾಕಿ ಜೀವ ತೆಗೆಯುವ ದೃಶ್ಯವಿದೆ. ತಾಶಿ ಬಂಡೆಗಲ್ಲಿನ ಬರಹವನ್ನೋದಿ ತಲೆ ಎತ್ತಿದಾಗ ಅದೇ ಹದ್ದು ಚಕ್ರಚಕ್ರ ತಿರುಗುತ್ತ ಹಾರಾಡುತ್ತ, ನಮ್ಮಿಂದ ಕಲ್ಲು ಬೀಳುವುದನ್ನೆ ಕಾಯುವ ಹಾಗೆ ಮಾಡುತ್ತದೆ.

but, sorry… ಅಲ್ಲಿಗೆ ಸಿನೆಮಾ ಮುಗಿಯುತ್ತದೆ!

 ಒಂದು ನೀತಿ ಕಥೆಯ ಹಾಗೆ ನೋಡಿ ನಮ್ಮ ಕೆಲಸ ಮುಂದುವರೆಸ್ಕೊಂಡು ಹೋಗಬೇಕಾದಂಥದಲ್ಲವಾ ಇದು? ಅಂದರೆ, ಸೀರಿಯಸ್ಸಾಗಿ ತೊಗೊಳ್ದೆ ನಮ್ಮ ಸಂಸಾರ, ಗೊಂದಲ, ಗೋಜಲು, ಸುಖ- ಸಂತೋಷ….?

~

ಕಣ್ಣಗಲಿಸಿ ಹೀರುವಂಥ ಛಾಯಾಗ್ರಹಣ, ಚೆಂದಚೆಂದದ ಲ್ಯಾಂಡ್‌ಸ್ಕೇಪುಗಳು, ಮುದ್ದು ಮುದ್ದಾದ ತಾಶಿ-ಪೇಮಾ, ಕೂಲ್ ಆಗಿ ನೋಡಿಸಿಕೊಂಡು ಹೋಗುವ ಎರಡು ಗಂಟೆಯ ಸಿನೆಮಾ- ಅದು SAMSARA.

ಈ ಸಿನೆಮಾ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದೆ. ಪೂರ್ವ ಪಶ್ಚಿಮವೆನ್ನದೆ ಎಲ್ಲ ಚಿತ್ರಪ್ರೇಮಿಗಳು ಇದನ್ನ ಮೆಚ್ಚಿಕೊಂಡಿದಾರೆ. ಬೇರೆ ಬೇರೆ ದೇಶಗಳ ಮಂದಿ ಒಂದು ತಂಡವಾಗಿ ಈ ಸಿನೆಮಾ ಮಾಡಿದಾರನ್ನೋದು ಇದರ ಖಾಸಿಯತ್ತುಗಳಲ್ಲೊಂದು.

2001ರ ಈ ಸಿನೆಮಾದ ಭಾಷೆ- ಟಿಬೆಟನ್ / ಲಡಾಖಿ

ನಿರ್ದೇಶಕ- ಪಾನ್ ನಲಿನ್

ಮುಖ್ಯ ಪಾತ್ರದಲ್ಲಿ- ಶಾನ್ ಕು (ತಾಶಿ), ಕ್ರಿಸ್ಟೀ ಚಂಗ್ (ಪೇಮಾ), ನೀಲೇಶಾ ಬಾವೋರಾ (ಸುಜಾತಾ)

~

ಈ SAMSARA ನನ್ನ ಯಾವ ಪರಿ ಹೊಕ್ಕುಕುಂತಿದೆ ಅನ್ನೋದು ಈ ಅಸ್ತವ್ಯಸ್ತ ಬರಹ ನೋಡಿದರೆ ಗೊತ್ತಾಗಬಹುದು. ಯಾವುದಕ್ಕೂ ಇದು, ನೀವು ಕೂಡ ಒಮ್ಮೆ ನೋಡಲೇಬೇಕಾದ ಸಿನೆಮಾ ಅನ್ನೋದು ನನ್ನ ಶಿಫಾರಸು.

 

ನಾವಡರ ಹೊಸ ಸಾಹಸ!

October 30, 2009 at 5:19 pm | In ನಿಮ್ಮೊಂದಿಗೆ | Leave a Comment
Tags: , ,

ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ… ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ.

ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ.

ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: www.chendemaddale.wordpress.com

 

……… ಇದಕ್ಕೆ ಕಾರಣವೇನಿರಬಹುದು?

October 28, 2009 at 3:31 pm | In ನಿಮ್ಮೊಂದಿಗೆ | 4 Comments
Tags: ,

‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ,  “ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ” . ಇದಕ್ಕೆ ಕಾರಣವೇನಿರಬಹುದು? 
ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ.

ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಾಗೂ ಇವಾವುದೂ ಹೆಣ್ಣಿಗೆ ಮಾತ್ರ ಸೀಮಿತವಲ್ಲದ ದೋಷಗಳೆಂಬುದನ್ನು ಮರೆಯಬಾರದು. ಈಗ ನನ್ನ ಅನಿಸಿಕೆಗಳು:

೧. ಹೆಣ್ಣು ತನ್ನ ಪ್ರತಿಯೊಂದಕ್ಕೂ ಗಂಡಸನ್ನೇ ಅವಲಂಬಿಸಬೇಕು ಅಂದುಕೊಂಡು ಆತನನ್ನು ಒಲಿಸಿಕೊಳ್ಳುವ ಯತ್ನವಾಗಿ, ದಬ್ಬಾಳಿಕೆ ಸಹಿಸುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವುದು, ಅದನ್ನೇ ತನ್ನ ಮುಂದಿನ ಪೀಳಿಗೆಗೂ ದಾಟಿಸುತ್ತಿರುವುದು…

೨. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಜತೆಗಾರ ಗಂಡಸಿನ ಇರುವಿಕೆ/ ಇಲ್ಲದಿರುವಿಕೆ, ಆತನೊಂದಿಗಿನ ಬಾಂಧವ್ಯಗಳನ್ನು ಅವಲಂಬಿಸಿರುವುದರಿಂದ, ಅದನ್ನು ಉಳಿಸಿಕೊಳ್ಳುವ ಯತ್ನ….

೩. ಮತ್ತೊಬ್ಬ ಹೆಣ್ಣನ್ನು ಛೀಕರಿಸುವ ಮೂಲಕ ಗಂಡಸಿನ (ಅದು ಗಂಡ, ಮಗ ಯಾರೇ ಆಗಿರಲಿ…) ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದು, ಆತನನ್ನು ಅಂಕೆಯಲ್ಲಿರಿಸಿಕೊಳ್ಳಲು ಬಯಸುವುದು, ತನ್ನ ಅಸುರಕ್ಷತಾಭಾವವನ್ನು ಹೋಗಲಾಡಿಸಿಕೊಳ್ಳಲು ಇತರರ ಗಮನವನ್ನು ಸೆಳೆಯಲಿಕ್ಕೆಂದೇ ಗಯ್ಯಾಳಿತನ ಬೆಳೆಸಿಕೊಳ್ಳುವುದು….

ಪರಿಹಾರವೇನಿರಬಹುದು?

೧. ಆರ್ಥಿಕ ಸುಭದ್ರತೆ
೨. ಹೆಚ್ಚು ಹೆಚ್ಚಾಗಿ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು, ಒಂದು ಸಂಘಟನೆಯಾಗಿ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವುದು
೩. ಭಾವನಾತ್ಮಕವಾಗಿ ಗಂಡಿನ ಮೇಲೆ ಅವಲಂಬಿಸಿದ್ದರೂ ಅದನ್ನು ದೌರ್ಬಲ್ಯವಾಗಿ ಮಾಡಿಕೊಳ್ಳದಿರುವುದು

ಹೀಗೇ ಒಂದಿಷ್ಟು….
ಈಗಲಾದರೂ ನಾವು ನಮ್ಮನ್ನು ಬರೀ ಮನೆವಾಳ್ತೆಗೆ ಸೀಮಿತಗೊಳಿಸಿಕೊಳ್ಳದೆ ಸಮಾಜಕ್ಕೂ ತೆರೆದುಕೊಂಡರೆ, ಸಂಘಟಿತರಾದರೆ, ಬಹುಶಃ ಈ ‘ಹೆಣ್ಣು- ಹೆಣ್ಣಿನ ಶೋಷಣೆ’ ಕಡಿಮೆಯಾಗುತ್ತ ಹೋಗಬಹುದೇನೋ?

ಗೆಳತಿ ಟೀನಾ ಒಮ್ಮೆ ಮಾತನಾಡುವಾಗ ಹೇಳಿದ್ದಳು. ಹೆಣ್ಣು ಸಾಂಸರಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ- ಈ ನಾಲ್ಕೂ ಸ್ತರಗಳಲ್ಲೂ ಶೋಷಣೆಗೊಳಗಾಗ್ತಾಳೆ ಅಂತ. ಅದು ಸರಿಯೆನಿಸಿತು. ನಾವು ಎಲ್ಲೀವರೆಗೂ ಸಂಸಾರವೇ ನಮ್ಮ ಮೊದಲ ಪ್ರಿಫರೆನ್ಸ್ ಅಂದುಕೊಳ್ತೀವೋ ಅಲ್ಲೀವರೆಗೂ ಈ ಶೋಷಣೆ ತಪ್ಪೋದಿಲ್ಲ. ನಾವು ಸಂಸಾರದ ಚೌಕಟ್ಟು ಮೀರಿ ಬೆಳೆದು ಸಮಾಜದ ಹೊಸ್ತಿಲಲ್ಲಿ ನಿಲ್ಬೇಕು. ನಮ್ಮ ಸಾಧ್ಯತೆಗಳನ್ನ ಇತರರಿಗೆ ಮನದಟ್ಟು ಮಾಡಿಸೋ ಮೊದಲು, ನಮ್ಮನ್ನು ನಾವು ಅರಿತುಕೊಳ್ಬೇಕು. ಸ್ನೇಹಿತರೊಬ್ಬರು ನನ್ನ ಯೋಚನೆಗಳ ಬಗ್ಗೆ ಅಭಿಪ್ರಾಯಪಟ್ಟಿರುವಂತೆ ಇದು ‘ರೊಮ್ಯಾಂಟಿಕ್’ ಮಟ್ಟಕ್ಕೆ ನಿಲ್ಲುವಂಥದಲ್ಲ. ಅವರು, ಹೆಣ್ಣು ಸಂಸಾರವನ್ನು, ಸಮಾಜವನ್ನು ಮೀರಬೇಕು, ಮೀರುತ್ತಾಳೆ ಅನ್ನುವ ನನ್ನ ಕಲ್ಪನೆಯನ್ನ ಹಾಗೆಂದಿರುವರು. ಇದು ತಮ್ಮ ಗಂಡು ಯೋಚನೆಯಲ್ಲವೆಂದೂ ಸ್ಪಷ್ಟಪಡಿಸಿದ್ದರು. ಆದರೆ, ಮೊದಲ ಬೇಲಿಯಾದ ಸಂಸಾರದ ನಿರ್ಬಂಧಗಳನ್ನು ಮೀರದೆ ಹೆಣ್ಣು ಮುಂದುವರೆಯೋದು ಹೇಗೆ? ನಾನು ಮೀರುವಿಕೆಯನ್ನು ‘ದ್ರೋಹ’ದ ಅರ್ಥದಲ್ಲಿ ಬಳಸುವುದಿಲ್ಲ. ಇದನ್ನು ಅರಿತುಕೊಂಡರೆ ಸಾಕು.

ಹೀಗೆ ಮೀರುವಿಕೆಯ ಮಾತು ಬಂದಾಗ ಇಸ್ಮತ್‌ರ ಕಥೆ ನೆನಪಾಗುತ್ತೆ. ಅವರದೊಂದು ಕಥೆಯಲ್ಲಿ ನಾಯಕಿ, ಕಪ್ಪುಕೀಳರಿಮೆಯ ಗಂಡ ತಾನೇ ದುಪಟ್ಟಾ ತೆರೆಯಲೆಂದು ಕಾದಿರುತ್ತಾಳೆ. ಅವನಾದರೋ ತನ್ನ ಕೀಳರಿಮೆಯನ್ನು ಮೆಟ್ಟಿನಿಲ್ಲಲು, ಆಕೆಗೇ ಅದನ್ನು ತೆಗೆದು ಮುಖ ತೋರುವಂತೆ ಆದೇಶಿಸುತ್ತಾನೆ. ಹಾಗೆ ಹೆಣ್ಣು ಮೊದಲ ಸಾರ್ತಿ ಗಂಡನಿಗೆ ಮುಖದೋರುವಾಗ ತಾನೇ ದುಪಟ್ಟಾ ತೆಗೆಯೋದು ಲಜ್ಜೆಗೇಡಿತನ ಅನ್ನುತ್ತದೆ ಸಂಪ್ರದಾಯ. ಅದಕ್ಕೇ ಅವಳು ತೆಗೆಯೋದಿಲ್ಲ. ಅವನ ದರ್ಪದ ಒಳಗುಟ್ಟು ಅವಳಿಗೆ ಗೊತ್ತಿದ್ದುದೂ ಅದಕ್ಕೆ ಕಾರಣವಾಗಿದ್ದಿರಬಹುದು. ಹೀಗೆ ಕೊನೆಯವರೆಗೂ ಅವಳು ತನ್ನ ದುಪಟ್ಟಾ ಅವನೆದುರು ತೆರೆಯೋದೇ ಇಲ್ಲ. ಅದಕ್ಕಾಗಿ ತಾನು ಸಂಸಾರ ಸುಖವನ್ನೇ ಕಳಕೊಳ್ಳಬೇಕಾಗಿ ಬಂದಾಗಲೂ ಸಹಾ. ಇಲ್ಲಿ ಇವಳ ಮೀರುವಿಕೆ- ಗಂಡನ ಆದೇಶದ ಮೀರುವಿಕೆ- ಅಂದರೆ ಸಾಮಾಜಿಕ ಕಟ್ಟುಪಾಡಿನ (ಗಂಡನ ಮಾತು ಕೇಳಬೇಕೆನ್ನುವ) ಮೀರುವಿಕೆ, ಸಂಪ್ರದಾಯದ ಚೌಕಟ್ಟಿನೊಳಗೇ ನಡೆದಿದೆ! ಈ ಕಥೆಯಲ್ಲಿ ಅವಳದು ಅತ್ಯಂತ ಡಿಗ್ನಿಫೈಡ್ ಆದ ಪ್ರತಿಭಟನೆ.

ನನ್ನ ಮಾತುಗಳಿಗೂ ಈ ಕಥೆಗೂ ಹೇಗೆ ಲಿಂಕ್ ಮಾಡಿಕೊಳ್ಳುವಿರೋ ಗೊತ್ತಿಲ್ಲ. ನನ್ನ ತಲೆಯೊಳಗಂತೂ ಇವೆಲ್ಲ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಎಳೆ ಹಿಡಿದೆಳೆದರೆ ಎಲ್ಲವೂ ಉರುಳಿ ಬರುತ್ತವೆ.

ಕೊನೆಯ ಮಾತಿನೊಂದಿಗೆ ಮುಗಿಸ್ತೇನೆ…
ಒಟ್ಟಾರೆ, ಎಲ್ಲೀವರೆಗೂ ಹೆಣ್ಣುಗಳು ಗಂಡಸಿನ ಕೃಪಾಪೋಷಣೆಗೆ ಒಳಗಾಗಿ ಬದುಕೋದೇ ತಮ್ಮ ಪರಮ ಧ್ಯೇಯವೆಂದುಕೊಳ್ತಾರೋ ಅಲ್ಲೀವರೆಗೂ ಹೆಣ್ಣಿಂದ ಹೆಣ್ಣಿನ ಶೋಷಣೆ ತಪ್ಪಿದ್ದಲ್ಲ. ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಂಡು ಬದುಕಿ, ಮುಂದಿನ ಪೀಳಿಗೆಗೂ ಅದನ್ನೇ ಕಲಿಸತೊಡಗಿದರೆ ಮಾತ್ರ ಇದೆಲ್ಲ ಪರಿಹಾರವಾಗಬಹುದೇನೋ ಅಂದುಕೊಳ್ತೇನೆ.

 

‘ಜಂಭಗಾತಿ’ ಹುಡುಗಿಯನ್ನ ಎದುರಿಟ್ಟುಕೊಂಡು…

September 24, 2009 at 1:19 pm | In ನಿಮ್ಮೊಂದಿಗೆ | 11 Comments
Tags: ,

ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ….

ಚಿತ್ರ ನಟಿ ರಮ್ಯಾ ನೃತ್ಯ ನಿರ್ದೇಶಕರನ್ನ, ಸ್ಪಾಟಲ್ಲಿದ್ದ ಕೆಲವರನ್ನ ಅವಾಚ್ಯವಾಗಿ ಬಯ್ದು, ಸುದ್ದಿಯಾಗಿ ಕ್ಷಮೆ ಕೇಳಿದ ಘಟನೆ ಇವತ್ತಿಗೆ ಹಳೇಹಪ್ಪಟ್ಟೆನಿಸಬಹುದು. ರಮ್ಯಳೋ, ರಂಜಿತಳೋ, ಯಾವ ನಟಿ, ನಟ, ನಿರ್ದೇಶಕ, ಒಟ್ಟಾರೆ ಮನುಷ್ಯ ಜಾತಿಯ ಜೀವಿಯೋ, ಹಾಗೆಲ್ಲ ಅಸಭ್ಯವಾಗಿ ವರ್ತಿಸೋದು ಶುದ್ಧ ತಪ್ಪು. ಹಾಗೆ ನಡೆದುಕೊಳ್ಳುವ ಯಾರ ಮೇಲೆಯೇ ಆಗಲಿ ನನ್ನ ವಿರೋಧವಂತೂ ಇದ್ದೇ ಇದೆ. ರಮ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಒಟ್ಟಾರೆಯಾಗಿ ರಮ್ಯಳ ವರ್ತನೆಯನ್ನ ಖಂಡಿಸಿಯೇ ಮಾತನ್ನ ಮುಂದುವರೆಸಬೇಕಾಗುತ್ತದೆ. ಮೊದಲೇ ಸ್ಪಷ್ಟಪಡಿಸುವುದೆಂದರೆ, ನಾನಿಲ್ಲಿ ಚರ್ಚಿಸಹೊರಟಿರೋದು ರಮ್ಯಾಳ ಪ್ರಕರಣ ಸುದ್ದಿಯಾದುದರ ಬಗ್ಗೆ. ಮತ್ತು ಆಕೆಯ ಘಮಂಡಿತನಕ್ಕೆ ಸಿಕ್ಕ ಪ್ರತಿಕ್ರಿಯೆಯ ಹಿಂದಿರಬಹುದಾದ ರಾಜಕಾರಣದ ಬಗ್ಗೆ.

ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ.

ನಮ್ಮಲ್ಲಿ ಕೆಲವು ಹಿರಿಯ ನಿರ್ದೇಶಕರುಗಳು, ಗರ್ವಿಷ್ಟ ನಿರ್ದೇಶಕರುಗಳು ತಮ್ಮ ಕೆಳಗಿನ ಉದ್ಯೋಗಿಗಳಿಗೆ ಕಪಾಳಕ್ಕೆ ಹೊಡೆಯುವ, ರೇಗುವ, ವಾಚಾಮಗೋಚರ ಬಯ್ಯುವ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲಿಕ್ಕಾಗಿ ಅಂಕೆತಪ್ಪಿ ಹೀಗೆ ಪ್ರಮಾದಗಳಾಗ್ತವೆ ಅಂತ ಹೇಳಲಾಗ್ತದೆ. ಇದನ್ನ ಕೆಲವೊಮ್ಮೆ ಒಪ್ಪಬಹುದಾದರೂ ನೆತ್ತಿಗೇರಿದ ತಲೆಪ್ರತಿಷ್ಟೆಯಿಂದ ಇಂತಹ ದಬ್ಬಾಳಿಕೆ ನಡೆಸುವವರ ಸಂಖ್ಯೆ ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಆದರೆ ಬಹುತೇಕ ಇಂತಹ ಪ್ರಕರಣಗಳು ಹಾಹಾಗೇ ಸಹಜವೆಂಬಂತೆ ಮುಚ್ಚಿಹೋಗ್ತವೆ. ಹೀರೋ ಪಾತ್ರಧಾರಿಗೆ ಏನೋ ಸರಿ ಕಂಡು ಬರದಿದ್ದಾಗ, ಅಗತ್ಯವಸ್ತು ಪೂರೈಕೆಯಲ್ಲಿ ತಪ್ಪಾಗಿಯೋ, ಮತ್ತೇನು ಅನಾನುಕೂಲವೋ ಆದಾಗ ಆತ ಕೆಂಗಣ್ಣು ಮಾಡಿಕೊಂಡು ಉದುರಿಸುವ ಪ್ರತಿ ಬಯ್ಗುಳ ಅಮೂಲ್ಯ ಮುತ್ತು. ಕಪಾಳಕ್ಕೆ ಹೊಡೆದರೆ ಪರಮ ಪ್ರಸಾದ. ದುಡಿತದ ಮಟ್ಟದಲ್ಲಿ ವರ್ಗ ತಾರತಮ್ಯದ ಬಗ್ಗೆ ಆಗೆಲ್ಲ ಯಾರೂ ಮಾತನಾಡೋದಿಲ್ಲ. ಅದೇ, ಹೀರೋಇನ್ ಪಾತ್ರಧಾರಿ ಹೊಡೆಯೋದಿರಲಿ, ನಾಲ್ಕು ಮಾತು ಗಟ್ಟಿಬಯ್ದರೆ? ಅದು ಆಕೆಯ ಅಹಂಕಾರ, ಶ್ರೀಮಂತಿಕೆಯ ಪೊಗರು, ದಬ್ಬಾಳಿಕೆ ಇತ್ಯಾದಿ ಆಗುತ್ತದೆಯಲ್ಲವೆ? ಈಗ ರಮ್ಯಾಳಿಂದ ಬಯ್ಸಿಕೊಂಡು ಸುದ್ದಿಯಾಗುತ್ತಿರುವ ಮಂದಿಯನ್ನ ಕೇಳುತ್ತೇನೆ ನಾನು, ಈಗ ನಿಮ್ಮ ಆತ್ಮ ಸಮ್ಮಾನಕ್ಕೆ ಪೆಟ್ಟುಬಿದ್ದಿರೋದು ಒಟ್ಟಾರೆ ಒಂದು ವ್ಯಕ್ತಿ ನಿಮ್ಮನ್ನು ದೂಷಿಸಿದ್ದಕ್ಕೋ, ಒಬ್ಬ ಹೆಣ್ಣು ನಿಮ್ಮನ್ನು ದೂಷಿಸಿದಳೆಂತಲೋ ಎಂದು…

ಬಹುಶಃ ಇದು ಎಲ್ಲರಿಗೂ ಗೊತ್ತಿರುವ, ಯಾರೂ ಆಡದೆ ಸುಮ್ಮನಿರುವ ಮಾತು. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಯಾವ ಪರಿ ದುರ್ಬಳಕೆಯಾಗ್ತಾರೆ, ಅವರ ಮಹತ್ವಕಾಂಕ್ಷೆಯನ್ನ ಯಾವೆಲ್ಲ ರೀತಿ ಎನ್ ಕ್ಯಾಶ್ ಮಾಡಿಕೊಳ್ಳಲಾಗತ್ತೆ, ಮುಗ್ಧರಂತೂ ಹೇಗೆ ನಾಶವಾಗಿ ಹೋಗ್ತಾರೆ ಅನ್ನೋದು… ಬಹುಶಃ ಯಾವತ್ತೂ ಹಲ್ಲುಗಿಂಜಿಕೊಂಡು ಅವಕಾಶ ಕೇಳುತ್ತಲೋ, ಅದಕ್ಕಾಗಿ ಯಾರ ಯಾರದೋ ಚೇಲಾಗಿರಿ ಮಾಡ್ತಲೋ ಹಿಂದಲೆಯದ, ಯಾರಿಗೂ ಯಾವತ್ತೂ ಸೊಪ್ಪು ಹಾಕದ ರಮ್ಯಾ ಗಾಂಧೀನಗರದ ಕಣ್ಣಮುಳ್ಳಾಗಿರಬೇಕು. ಅದಕ್ಕೇ ಅಲ್ಲವೆ ಆಕೆ ನಿಂತರೂ ಕುಂತರೂ ಸುದ್ದಿ? ಹೆಣ್ಣೊಬ್ಬಳ ಆತ್ಮವಿಶ್ವಾಸವನ್ನ, ಅದು ತಂದುಕೊಡುವ ಗರ್ವವನ್ನ ಪುರುಷ ಸಮಾಜ ಸಹಿಸೋದು ಕಷ್ಟ. ಇತ್ತಲಾಗಿ ಹೆಣ್ಣುಗಳೂ ತಮಗಿಲ್ಲದ ಆಕೆಯ ಹೆಚ್ಚುಗಾರಿಕೆಯನ್ನ ಕಂಡು ಮೆಚ್ಚೋದು ಕಷ್ಟ. ಅದಕ್ಕೇ ಯಾವಾಗಲೂ ಹೀಗೆ ದಿಟ್ಟೆಯರಾಗಿ ಬದುಕುವ ಹೆಣ್ಣುಮಕ್ಕಳಿಗೆ ಸೋಲು. ಆದರೆ ಈ ಸೋಲು ಮೇಲ್ತೋರಿಕೆಯದಷ್ಟೆ. ವಾಸ್ತವದಲ್ಲದು ಆವರ ಅಸ್ತಿತ್ವದ ಗೆಲುವೇ ಆಗಿರುತ್ತದೆ.

ಆದರೂ ಒಂದು ಖುಷಿಯ ವಿಚಾರ. ಡಿ ಎನ್ ಎ ಯಲ್ಲಿ ಓದಿದ್ದು. ಅಂದ್ರಿತಾ ರೇ, ಪೂಜಾ ಗಾಂಧಿ, ಪ್ರಿಯಾಂಕಾ ಉಪೇಂದ್ರ ಮತ್ತು ಶರ್ಮಿಳಾ ಮಾಂಡ್ರೆ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗ್ತಿರೋದು ಹೌದು ಎಂದು ಹೇಳಲು ಹಿಂಜರಿದಿಲ್ಲ. ಖಂಡಿಸುವ ಮಾತಿರಲಿ, ಹೀಗೆ ತಮಗನಿಸಿದ್ದನ್ನ ಮುಕ್ತವಾಗಿ ಹೇಳಿಕೊಳ್ಳುವ ಮನಸಾದರೂ ಮಾಡಿದರಲ್ಲ ಅನ್ನೋದೇ ಸಮಾಧಾನ. ಎಲ್ಲ ರಂಗದಲ್ಲೂ ಹೆಣ್ಣುಮಕ್ಕಳು ಸಂಘಟಿತರಾಗಿ ತಮ್ಮ ವಿರುದ್ಧ ಯಾರೂ ಪಿಟ್ಟೆನ್ನದಂತೆ ನಿಭಾಯಿಸಿಕೊಳ್ಳುವ ಎದೆಗಾರಿಕೆ ತೋರಿದರಷ್ಟೆ ಇವೆಲ್ಲ ಒಂದು ಹದಕ್ಕೆ ಬಂದೀತು. ಆದರೇನು ಮಾಡೋದು? ‘ಹೆಂಗಸರು ಒಟ್ಟಾಗೋದಿಲ್ಲ’ ಅಂತ ಹೇಳಿಹೇಳಿಯೇ ನಮ್ಮನ್ನು ದ್ವೀಪಗಳಾಗಿಸುವ ಕಾಯಕ ವ್ಯವಸ್ಥಿತವಾಗಿ ನಡೆದೇ ಇದೆ. ಮೌಢ್ಯತೆಯ ತುದಿಯಲ್ಲಿ ನಿಂತಿರುವ ನಾವಂತೂ ಅದನ್ನು ನಂಬಿಯೇ ಕುಳಿತಿದೇವೆ ಅಲ್ಲವೆ?

ಅದ್ಯಾಕೋ ಗೊತ್ತಿಲ್ಲ. ರಮ್ಯಾಳ ಜಂಭದ ಮುಖ ನೋಡುವಾಗ ಖುಷಿಯಾಗತ್ತೆ. ಚೆಲ್ಲುಬಡಿಯುತ್ತಾ ಯಾರನ್ನೋ ಇಂಪ್ರೆಸ್ ಮಾಡಲು ಹೆಣಗಾಡುತ್ತ, ಒಳ್ಳೆತನದ ಪೋಸು ಕೊಡುವ ಹುಡುಗಿಯರಿಗಿಂತ ಈಕೆ ಜಾಸ್ತಿ ಇಷ್ಟವಾಗ್ತಾಳೆ. ಚಿತ್ರರಂಗದ ಪರಿಭಾಷೆಯಲ್ಲಿ ಹೆಣ್ಣುಗಳು ದುರುಪಯೋಗಗೊಳ್ತಾರಲ್ಲ, ಹಾಗೆ ಈಕೆ ಆಗಿಲ್ಲ ಅಂತೇನೋ ಅನಿಸತೊಡಗುತ್ತೆ. ಅವಕಾಶಗಳಿಗಾಗಿ ಯಾವುದಕ್ಕೂ ರಾಜಿಯಾಗದ, ತನ್ನನ್ನು ತಾನು ಇರುವಹಾಗೇ ನಿರೂಪಿಸಿಕೊಳ್ಳಲು ಹಿಂಜರಿಯದ ಆಕೆಯ ಬಗ್ಗೆ ಹೆಮ್ಮೆ ಮೂಡತ್ತೆ. ದಶಕದ ಹಿಂದೆ ಮಾಲಾಶ್ರೀ ತನ್ನ ಹೆಚ್ಚುಗಾರಿಕೆ ಮೆರೆದು ಕಮೆಂಟ್ ಮಾಡಿದಾಗ ಇವತ್ತಿಗೂ ಇಪ್ಪತ್ತರ ಹುಡುಗಿಯರ ಸೊಂಟಬಳಸಿ ಸಿಂಹಾವಲೋಕನ ಮಾಡ್ತಿರುವ ನಟರೊಬ್ಬರು ಆಕೆಯೊಟ್ಟಿಗೆ ಯಾವತ್ತೂ ನಟಿಸೋದೇ ಇಲ್ಲ ಅಂತ ಪ್ರತಿಜ್ಞೆ ಮಾಡಿದ್ದರು. ಆದರೆ ತನ್ನ ಇರುವಿಕೆಯಿಂದಲೇ ಸಿನೆಮಾ ಓಡಿಸುತ್ತಿದ್ದ ಮಾಲಾಶ್ರೀ ನನಗೆ ಕಾಲೇಜು ದಿನಗಳ ಆ ವಯಸ್ಸಿನಲ್ಲಿ ಬಹಳ ಪ್ರಿಯವಾಗಿಬಿಟ್ಟಿದ್ದಳು. ಈಗ ಯಾಕೋ ಅದರ ನೆನಪು… ಹಾಗೇನೇ ನಾಯಕ ನಟನೊಬ್ಬನಿಗೆ ಚಪ್ಪಲಿತೋರಿಸಿ ವಿವಾದ ಎಳೆದುಕೊಂಡ ವಿಜಯಲಕ್ಷ್ಮಿ (ಅದೇ ಹೆಸರು ಅಂದುಕೊಳ್ತೇನೆ, ನಾಗಮಂಡಲ ಹುಡುಗಿಯದು…) ಕೂಡ ಕಣ್ಮುಂದೆ ಬರ್ತಾಳೆ. ಅವಳು ಹಾಗೆ ಮಾಡುವುದಕ್ಕೆ ಹಿನ್ನೆಲೆಯಾಗಿ ಯಾವ ಕಿತಾಪತಿ ನಡೆದಿತ್ತು? ನನಗಂತೂ ಅದು, ಈವರೆಗೆ ಹೆಣ್ಣನ್ನು ಹಲವು ಮಗ್ಗುಲಲ್ಲಿ ಹುರಿದು ಮುಕ್ಕಿ ಚಪ್ಪರಿಸುತ್ತಿರುವ ಚಿತ್ರರಂಗದ ಗಂಡಸುತನಕ್ಕೇ ಆಕೆ ಚಪ್ಪಲಿ ತೋರಿಸಿದಂತೆನಿಸಿತ್ತು. ಹೀಗೆ ತೋರಿಸಿಕೊಳ್ಳುವ ಎಲ್ಲ ಯೋಗ್ಯತೆಯೂ ಅದಕ್ಕಿದೆ ಅಲ್ಲವ?

ಇಂಥಾ ‘ಜಂಭಗಾತಿ’ ಹುಡುಗಿಯರನ್ನ ಎದುರಿಟ್ಟುಕೊಂಡು ಎಲ್ಲ ಹುಡುಗಿಯರಿಗೊಂದು ಕಿವಿಮಾತು. ಅದು ಯಾವುದೇ ಫೀಲ್ಡ್ ಇರಲಿ. ನಮ್ಮನ್ನು ಕೊಟ್ಟುಕೊಂಡು ಪಡೆಯುವ- ರಾಜನ ಕಾಲ್ಕೆಳಗಿನ ಹೂವಿನಂಥ ಬಾಳಿಗಿಂತ, ಯಾರಿಗೂ ಗುರುತಾಗದೆಯೇ ಸುಮ್ಮನೆ ಅರಳಿಕೊಂಡು ಬಿದ್ದುಹೋಗುವ ಕಾಡು ಹೂವಿನಂಥ ಬದುಕು ನಿಜಕ್ಕೂ ಸಾರ್ಥಕ. ಮನದಣಿಯೆ ಬಿರಿದು, ಬಾಳಿ, ಕಳಚಿಕೊಂಡ ತೃಪ್ತಿಯಾದರೂ ಆಗ ನಮ್ಮ ಪಾಲಿಗೆ ಉಳಿದುಕೊಳ್ಳುವುದು.

ಗಂಡು ಪ್ರಾಬಲ್ಯದ ಈ ಜಗತ್ತನ್ನ ಮೆಚ್ಚಿಸೋದಂತೂ ಕಷ್ಟವೇ. ಒಂದೇ ತಪ್ಪಿಗೆ ಇಲ್ಲಿ ‘ಗಂಡು ಮಾಡಿದರೆ’, ‘ಹೆಣ್ಣು ಮಾಡಿದರೆ’ ಎನ್ನುವ ಪಕ್ಷಪಾತಗಳಿವೆ. ಇದು ಬಡವ- ಶ್ರೀಮಂತ, ಮೇಲ್ಜಾತಿ- ಕೆಳ ಜಾತಿಗಳೆಂಬ ಪಕ್ಷಪಾತಗಳಿಗಿಂತಲೂ ಹೆಚ್ಚು ಪ್ರಬಲವಾಗಿ ಚಾಲ್ತಿಯಲ್ಲಿದೆ (ಈ ಹಳೆಯ ಮಾತು ಇವತ್ತಿಗೂ ಎಷ್ಟೊಂದು ಪ್ರಸ್ತುತ!) ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಾಧ್ಯವಾದಷ್ಟೂ ಜೊತೆಯವರಿಗೆ ತೊಂದರೆಯಾಗದ ಹಾಗೆ ಎಚ್ಚರವಹಿಸುತ್ತ, ನಮ್ಮ ಆತ್ಮವಿಶ್ವಾಸವನ್ನೂ, ಹೆಮ್ಮೆಯನ್ನೂ ಕಾಯ್ದುಕೊಂಡು ದಾಪುಗಾಲಿಡುವುದಷ್ಟೆ ನಾವು ಮಾಡಬೇಕಿರುವ ಕೆಲಸ.

ರಮ್ಯಾಳ ಪ್ರಕರಣದಂಥ ಘಟನೆಗಳು ನಡೆದಾಗಲಾದರೂ ನಾವು ಇಂಥದನೆಲ್ಲ ಯೋಚಿಸಬೇಕು ಅಲ್ಲವ?

Next Page »

Blog at WordPress.com. | Theme: Pool by Borja Fernandez.
Entries and comments feeds.